Just In
- 4 min ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- 36 min ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- 55 min ago ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- 1 hr ago 2024 ಏಪ್ರಿಲ್ ತಿಂಗಳ ರಾಶಿಫಲ: 12 ರಾಶಿಗಳ ವೃತ್ತಿ, ಆರ್ಥಿಕ, ಸಂಬಂಧ, ಆರೋಗ್ಯ ಭವಿಷ್ಯ
Don't Miss
- Movies Bhagyalakshmi: ಕನ್ನಿಕಾ ಮೇಡಂ ಚಿನ್ನಾಭರಣ ಕದ್ದರಾ? ಆಕೆ ಅಹಂ ಇಳಿಸಲು ಮಾಡಿದ ಐಡಿಯಾ?
- News 140 ಕೋಟಿ ಜನ ನಿಮ್ಮನ್ನು ತಿರಸ್ಕರಿಸಿರುವುದರಲ್ಲಿ ಅಚ್ಚರಿ ಏನಿಲ್ಲ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಟೀಕೆ
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಸಿಡಿಟಿ ಸಮಸ್ಯೆ ಇದೆಯೇ? ಇಲ್ಲಿದೆ ನೋಡಿ 11 ಪವರ್ಫುಲ್ ಪವರ್ಫುಲ್ ಮನೆ ಔಷಧಿಗಳು
ಹೊಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಆಮ್ಲದ ಉತ್ಪಾದನೆಯಿಂದ ಆಸಿಡಿಟಿ (ಪಿತ್ತ) ಅಥವಾ ಆಮ್ಲ ಪಿತ್ತ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಾವು ಸೇವಿಸಿದ ಆಹಾರವು ಹೊಟ್ಟೆಯಲ್ಲಿ ಆಮ್ಲೀಯವಾಗಿ ಪರಿವರ್ತನೆ ಹೊಂದಿ ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಈ ಆಮ್ಲದ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾಗಿ ಅಸಿಡಿಟಿಗೆ ಕಾರಣವಾಗುತ್ತದೆ. ಇದೊಂದು ಸಾಮಾನ್ಯ ರೋಗವಾಗಿದ್ದರೂ ಬೇಗ ಚಿಕಿತ್ಸೆ ಪಡೆಯದಿದ್ದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತದೆ. ಪಿತ್ತ ಹೆಚ್ಚಾದಾಗ ಎದೆಯಲ್ಲಿ ಉರಿ, ಉದ್ವೇಗ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಅನ್ನನಾಳದ ಕೋಶದ ವೈಫಲ್ಯತೆಯಿಂದ ಆಮ್ಲವು ಅನ್ನನಾಳಕ್ಕೆ ಹೋಗದಂತೆ ತಡೆ ಉಂಟಾಗುವುದರಿಂದ ಅಸಿಡಿಟಿ ಹೆಚ್ಚಾಗುತ್ತದೆ.
ಅಸಿಡಿಟಿಗೆ ನಾವು ಸೇವಿಸುವ ಆಹಾರವೂ ಕಾರಣವಾಗುತ್ತದೆ. ಜಂಕ್ ಫುಡ್ ತಿನ್ನುವುದು, ಸಾಕಷ್ಟು ನೀರು ಕುಡಿಯದಿರುವುದು ಮತ್ತು ತಿನ್ನುವಾಗ ಆಹಾರವನ್ನು ಸರಿಯಾಗಿ ಜಗಿಯದಿರುವುದು ಸಹ ಪಿತ್ತಕ್ಕೆ ಕಾರಣವಾಗುತ್ತವೆ. ಅಲ್ಲದೆ ಅತಿ ಮಸಾಲೆ, ಖಾರದ ಆಹಾರ ಸೇವಿಸುವುದು, ನಿಯಮಿತವಾಗಿ ಊಟ ಮಾಡದಿರುವುದರಿಂದಲೂ ಪಿತ್ತ ಹೆಚ್ಚಾಗುತ್ತದೆ. ಇನ್ನು ಧೂಮಪಾನ ಹಾಗೂ ಅಲ್ಕೊಹಾಲ್ ಸೇವನೆಗಳು ಕೂಡ ಪಿತ್ತದ ಪ್ರಮಾಣ ಅತಿಯಾಗಿ ಹೆಚ್ಚಾಗಲು ಕಾರಣವಾಗುತ್ತವೆ.
ಅಸಿಡಿಟಿ ಶಮನಕ್ಕೆ ಸಾಮಾನ್ಯವಾಗಿ ಆಂಟಾಸಿಡ್ಗಳನ್ನು ಬಳಸಲಾಗುತ್ತದೆ. ಆದರೆ ಮನೆಯಲ್ಲಿಯೇ ಕೆಲ ವಿಧಾನಗಳ ಮೂಲಕ ಪಿತ್ತವನ್ನು ಪರಿಣಾಮಕಾರಿಯಾಗಿ ಶಮನ ಮಾಡಬಹುದಾಗಿದೆ. ಇದರಿಂದ ಆಗಾಗ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಪಾರಾಗಬಹುದು. ಔಷಧಗಳಿಗಿಂತ ಮನೆ ಮದ್ದುಗಳಿಂದಲೇ ಅಸಿಡಿಟಿ ಶಮನ ಮಾಡಿಕೊಳ್ಳಲು ಬಯಸುವಿರಾದರೆ ಕೆಲ ಪ್ರಮುಖ ಪಿತ್ತ ನಿವಾರಕ ವಿಧಾನಗಳು ಹೀಗಿವೆ.
1.ಜೀರಿಗೆ ಸೇವನೆ
ಒಂದು ಲೋಟ ನೀರಿಗೆ ಒಂದು ಟೇಬಲ್ ಚಮಚದಷ್ಟು ಜೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಸೋಸಿ ಆರಲು ಬಿಡಿ. ಈ ದ್ರಾವಣ ತಣ್ಣಗಾದ ನಂತರ ಕುಡಿದರೆ ಪಿತ್ತ ಶಮನವಾಗುವುದು. ಸ್ವಲ್ಪ ಪ್ರಮಾಣದ ಹುರಿದ ಜೀರಿಗೆಯನ್ನು ಅರೆದು ಒಂದು ಲೋಟ ನೀರಿಗೆ ಬೆರೆಸಿ ಊಟವಾದ ನಂತರ ಕುಡಿಯುವುದರಿಂದ ಸಹ ಪಿತ್ತದ ಸಮಸ್ಯೆಯಿಂದ ಪಾರಾಗಬಹುದು. ಜೀರ್ಣ ಸಮಸ್ಯೆ ನಿವಾರಣೆಗೆ ಹಾಗೂ ಆಮ್ಲದ ಹೆಚ್ಚಾಗುವಿಕೆ ತಡೆಗೆ ಜೀರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಅಸಿಡಿಟಿ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆ ನೋವು ಶಮನಕ್ಕೆ ಜೀರಿಗೆ ಉಪಯುಕ್ತವಾಗಿದೆ. ಅಲ್ಲದೆ ಹೊಟ್ಟೆಯ ಆಲ್ಸರ್ ನಿವಾರಣೆಗೂ ಜೀರಿಗೆ ಸಹಕಾರಿಯಾಗಿದೆ.
2.ಪುದೀನಾ ಎಲೆ
ಕೆಲ ಪುದೀನಾ ಎಲೆಗಳನ್ನು ಸಣ್ಣದಾಗಿ ಹೆಚ್ಚಿ ಒಂದು ಲೋಟ ನೀರಿಗೆ ಹಾಕಿ. ಇದನ್ನು ಕುದಿಸಿ ಆರಿಸಿದ ನಂತರ ಕುಡಿಯಬೇಕು. ಪುದೀನಾ ಚ್ಯೂಯಿಂಗ್ ಗಮ್ ತಿನ್ನುವುದು ಸಹ ಉಪಯುಕ್ತವಾಗಿದೆ. ಪಿತ್ತ ನಿವಾರಣೆಯಲ್ಲಿ ಪುದೀನಾ ಪ್ರಮುಖ ಪಾತ್ರ ವಹಿಸುತ್ತದೆ. ಪುದೀನಾ ಅಜೀರ್ಣತೆಯನ್ನು ನಿವಾರಿಸಿ, ದೇಹಕ್ಕೆ ತಂಪು ನೀಡುವ ಗುಣವನ್ನು ಹೊಂದಿದೆ. ಅಸಿಡಿಟಿ ಆದಾಗ ಉಂಟಾಗುವ ಉರಿಯ ಅನುಭವ ಹಾಗೂ ನೋವು ನಿವಾರಕನಾಗಿ ಪುದೀನಾ ಕೆಲಸ ಮಾಡುತ್ತದೆ.
3.ಮಜ್ಜಿಗೆ
ಪ್ರತಿದಿನ ಮಜ್ಜಿಗೆ ಕುಡಿಯುವುದು ಆರೋಗ್ಯಕ್ಕೆ ಹಿತಕರವಾಗಿದೆ. ಒಂಚೂರು ಕರಿ ಮೆಣಸಿನ ಪುಡಿಯನ್ನು ಮಜ್ಜಿಗೆಗೆ ಸೇರಿಸಿ ಕುಡಿಯುವುದು ಪಿತ್ತ ನಿವಾರಣೆಗೆ ಪರಿಣಾಮಕಾರಿಯಾಗಿದೆ. ಒಂದು ಲೋಟ ಮಜ್ಜಿಗೆಗೆ ಒಂದು ಚಮಚೆ ಮೆಂತ್ಯ ಕಾಳಿನ ಪೇಸ್ಟ್ ಸೇರಿಸಿ ಕುಡಿಯುವುದು ಸಹ ಒಳ್ಳೆಯ ಔಷಧಿಯಾಗಿದೆ. ಪಿತ್ತವನ್ನು ಶೀಘ್ರವಾಗಿ ನಿವಾರಣೆ ಮಾಡುವ ಗುಣ ಮಜ್ಜಿಗೆಗೆ ಇದೆ. ಮಜ್ಜಿಗೆ ನೈಸರ್ಗಿಕ ಅಂಟಾಸಿಡ್ ಆಗಿ ಕೆಲಸ ಮಾಡುತ್ತದೆ. ಜೊತೆಗೆ ಹೊಟ್ಟೆಯಲ್ಲಿ ಅಧಿಕವಾಗಿ ಉತ್ಪನ್ನವಾಗುವ ಆಮ್ಲವನ್ನು ಸಮತೋಲನಗೊಳಿಸಲು ಮಜ್ಜಿಗೆ ಸೇವನೆ ಹಿತಕಾರಿಯಾಗಿದೆ.
4.ದಾಲ್ಚಿನ್ನಿ
ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ ಇದಕ್ಕೆ ಒಂದು ಟೇಬಲ್ ಚಮಚದಷ್ಟು ದಾಲ್ಚಿನ್ನಿ ಸೇರಿಸಿ. ದಾಲ್ಚಿನ್ನಿ ತನ್ನ ರಸ ಬಿಟ್ಟ ನಂತರ ಈ ನೀರನ್ನು ಕುಡಿಯಿರಿ. ಇದು ತಕ್ಷಣ ಪಿತ್ತದ ಸಮಸ್ಯೆಯಿಂದ ಉಪಶಮನ ನೀಡುತ್ತದೆ. ಇನ್ನು ದಿನನಿತ್ಯದ ಆಹಾರದಲ್ಲಿ ದಾಲ್ಚಿನ್ನಿ ಉಪಯೋಗಿಸುವುದು ಕೂಡ ಒಳ್ಳೆಯ ಕ್ರಮವಾಗಿದೆ. ಜೀರ್ಣಶಕ್ತಿಯನ್ನು ಉತ್ತಮಗೊಳಿಸಿ ಹೊಟ್ಟೆಯನ್ನು ಶಾಂತಗೊಳಿಸುವ ಗುಣವನ್ನು ದಾಲ್ಚಿನ್ನಿ ಹೊಂದಿದೆ. ದಾಲ್ಚಿನ್ನಿಯು ನೈಸರ್ಗಿಕ ಅಂಟಾಸಿಡ್ ಆಗಿದ್ದು, ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆಯನ್ನು ಸಹ ಇದು ನಿವಾರಿಸುತ್ತದೆ.
5.ಶುಂಠಿ
ಕೆಲ ಶುಂಠಿ ಚೂರುಗಳನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಈ ದ್ರಾವಣವನ್ನು ಸೇವಿಸಿ. ಒಂದಿಷ್ಟು ಶುಂಠಿಯನ್ನು ಚೆನ್ನಾಗಿ ಅರೆದು ಇದರ ರಸ ತೆಗೆದು ಸೇವಿಸುವುದು ಕೂಡ ಪರಿಣಾಮಕಾರಿಯಾಗಿದೆ. ಶುಂಠಿಯ ಈ ರಸ ತೀರಾ ಘಾಟು ಅನಿಸಿದರೆ ಇದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಕುಡಿಯಬಹುದು. ಶುಂಠಿಯು ಅನೇಕ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆ. ಅಜೀರ್ಣತೆ, ಗಂಟಲು ಕೆರೆತ ಹಾಗೂ ತಲೆನೋವು ನಿವಾರಣೆಗೂ ಶುಂಠಿ ಪ್ರಯೋಜನಕಾರಿಯಾಗಿದೆ. ಇದು ಉರಿಯೂತವನ್ನು ನಿವಾರಿಸುವ ಗುಣವನ್ನು ಹೊಂದಿದ್ದು, ಜೀರ್ಣ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಹೊಟ್ಟೆಯಲ್ಲಿ ಲೋಳೆಯ ಸ್ರವಿಸುವಿಕೆಯನ್ನು ಹೆಚ್ಚಿಸುವ ಶುಂಠಿಯು ಒಟ್ಟಾರೆಯಾಗಿ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ.
6.ಸೇಬಿನ ರಸದ ವಿನೆಗರ್
ಒಂದು ಲೋಟ ನೀರಿಗೆ ಎರಡು ಟೀ ಚಮಚದಷ್ಟು ಸೇಬಿನ ರಸದ ವಿನೆಗರ್ ಸೇರಿಸಿ ಕುಡಿಯುವುದರಿಂದ ಅಸಿಡಿಟಿ ಶಮನವಾಗುವುದು. ಇದಕ್ಕೆ ಒಂದು ಚಮಚೆ ಜೇನು ತುಪ್ಪ ಸೇರಿಸುವುದರಿಂದ ಇದನ್ನು ರುಚಿಯಾಗಿಸಬಹುದು. ವಿನೆಗರ್ ಕೂಡ ಒಂದು ಆಸಿಡ್ ಆಗಿರುವುದರಿಂದ ಆಸಿಡಿಟಿ ನಿವಾರಣೆಗೆ ಇದರ ಬಳಕೆ ಸೂಕ್ತವಲ್ಲ ಎಂಬುದು ನಿಜವಾದರೂ, ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಕಡಿಮೆಯಾದಾಗ ಈ ವಿಧಾನ ಉಪಯೋಗಿಸುವುದು ಪ್ರಯೋಜನಕಾರಿಯಾಗಿದೆ. ಹೊಟ್ಟೆಯಲ್ಲಿನ ಆಸಿಡ್ ಮೇಲಕ್ಕೇರದಂತೆ ವಿನೆಗರ್ ತಡೆಯುವುದರಿಂದ ಎದೆಯಲ್ಲಿನ ಉರಿಯೂತ ಕಡಿಮೆಯಾಗುತ್ತದೆ.
7.ಲವಂಗ
ಈಗಾಗಲೇ ಹೇಳಿದಂತೆ ಕೆಲ ಸಂದರ್ಭಗಳಲ್ಲಿ ಹೊಟ್ಟೆಯಲ್ಲಿ ಕಡಿಮೆ ಪ್ರಮಾಣದ ಆಮ್ಲ ಉತ್ಪಾದನೆಯಿಂದಲೂ ಅಸಿಡಿಟಿ ಉಂಟಾಗುತ್ತದೆ. ಇಂಥ ಸಂದರ್ಭಗಳಲ್ಲಿ ಆಮ್ಲೀಯತೆಯನ್ನು ಹೆಚ್ಚಿಸಿ ಗ್ಯಾಸ್ ಅನ್ನು ಹೊರಹಾಕುವ ಮೂಲಕ ಅಸಿಡಿಟಿ ಸಮಸ್ಯೆ ನಿವಾರಣೆಗೆ ಲವಂಗ ಉಪಯುಕ್ತವಾಗಿದೆ. ಬಾಯಲ್ಲಿ ಲವಂಗವನ್ನಿಟ್ಟುಕೊಂಡು ಅದು ರಸ ಬಿಡುವವರೆಗೂ ಚೆನ್ನಾಗಿ ಜಗಿಯಬೇಕು. ಇದರಿಂದಲೂ ಪಿತ್ತವನ್ನು ನಿವಾರಿಸಬಹುದು. ಸಮಪ್ರಮಾಣದಲ್ಲಿ ಲವಂಗ ಹಾಗೂ ಏಲಕ್ಕಿ ಪುಡಿಯನ್ನು ಮಿಕ್ಸ್ ಮಾಡಿ ಸೇವಿಸುವುದು ಸಹ ಒಳ್ಳೆಯದು. ಇದು ಪಿತ್ತಶಮನ ಮಾಡುವುದಲ್ಲದೆ, ಬಾಯಲ್ಲಿನ ದುರ್ಗಂಧವನ್ನು ಸಹ ನಿವಾರಿಸುತ್ತದೆ.
8.ಬಾಳೆ ಹಣ್ಣು
ಹಣ್ಣಾದ ಬಾಳೆ ಹಣ್ಣು ತಿನ್ನುವುದು ಪಿತ್ತ ನಿವಾರಣೆಗೆ ಉಪಯುಕ್ತವಾಗಿದೆ. ಅತಿಯಾದ ಅಸಿಡಿಟಿಯಿಂದ ನೀವು ಬಳಲುತ್ತಿದ್ದಲ್ಲಿ, ಚೆನ್ನಾಗಿ ಕಳಿತ ಬಾಳೆ ಹಣ್ಣು ಸೇವಿಸಿ. ಪ್ರತಿ ದಿನ ಬಾಳೆ ಹಣ್ಣು ತಿನ್ನುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಅಂಟಾಸಿಡ್ ಗುಣಗಳಿಂದ ತುಂಬಿರುವ ಬಾಳೆಹಣ್ಣು ನೈಸರ್ಗಿಕವಾಗಿ ಪಿತ್ತ ಶಮನ ಮಾಡುವ ಗುಣಗಳನ್ನು ಹೊಂದಿದೆ. ದೇಹಕ್ಕೆ ಅತಿ ಅವಶ್ಯವಾಗಿರುವ ಪೊಟ್ಯಾಶಿಯಂ ಖನಿಜವನ್ನು ಹೇರಳವಾಗಿ ಹೊಂದಿರುವ ಬಾಳೆ ಹಣ್ಣು ಹೊಟ್ಟೆಯಲ್ಲಿನ ಆಮ್ಲದ ಪ್ರಮಾಣವನ್ನು ಸಮತೋಲಿತವಾಗಿಸಲು ಸಹಕಾರಿಯಾಗಿದೆ.
9.ಬಡೆಸೋಪು ಅಥವಾ ಸೌಂಫ್
ಊಟವಾದ ನಂತರ ಒಂಚೂರು ಸೌಂಫ್ ಬಾಯಿಗೆ ಹಾಕಿಕೊಳ್ಳುವುದು ಬಹುಕಾಲದಿಂದ ನಡೆದು ಬಂದ ಪದ್ಧತಿಯಾಗಿದೆ. ಜೀರ್ಣಶಕ್ತಿ ಹೆಚ್ಚಳಕ್ಕೆ ಸೌಂಫ್ ಉಪಯುಕ್ತವಾಗಿದೆ. ಒಂದು ಕಪ್ ನೀರಿಗೆ ಒಂಚೂರು ಸೌಂಫ್ ಸೇರಿಸಿ ಕುದಿಸಬೇಕು. ನಂತರ ಇದನ್ನು ಸೋಸಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ನಿವಾರಣೆಯಾಗುವುದು. ಸೌಂಫ್ನಲ್ಲಿರುವ ಒಂದು ವಿಶಿಷ್ಟ ರೀತಿಯ ಎಣ್ಣೆಯು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಹೊಟ್ಟೆಯುಬ್ಬರವನ್ನು ನಿವಾರಿಸುತ್ತದೆ. ಪಿತ್ತ ಹೆಚ್ಚಾದಾಗ ಉಂಟಾಗುವ ಉರಿಯ ಅನುಭವವನ್ನು ಸೌಂಫ್ ಕಡಿಮೆ ಮಾಡುತ್ತದೆ.
10.ಎಳೆನೀರು
ತಾಜಾ ತೆಂಗಿನ ಎಳೆನೀರು ಸೇವನೆ ಅಸಿಡಿಟಿ ನಿವಾರಣೆಗೆ ಉತ್ತಮ ಔಷಧಿಯಾಗಿದೆ. ಹೊಟ್ಟೆಯಲ್ಲಿ ಲೋಳೆ ಪ್ರಮಾಣವನ್ನು ಹೆಚ್ಚಿಸಿ ಪಿತ್ತವನ್ನು ಇದು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಎಳೆನೀರು ಸೇವಿಸುವುದರಿಂದ ಆಗಾಗ ಪಿತ್ತವಾಗುವುದು ಕಡಿಮೆಯಾಗುತ್ತದೆ.
11.ಗುಡ್ಡದ ನೆಲ್ಲಿಕಾಯಿ ಅಥವಾ ನೆಲ್ಲಿಕಾಯಿ ಪುಡಿ
ಒಂದು ಲೋಟ ನೀರಿಗೆ ಒಂದು ಟೇಬಲ್ ಚಮಚೆ ಗುಡ್ಡದ ನೆಲ್ಲಿಕಾಯಿ ಅಥವಾ ಸಾದಾ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಸೇವಿಸುವುದು ಪಿತ್ತ ಶಮನಕ್ಕೆ ಸಹಕಾರಿಯಾಗಿದೆ. ದಿನಕ್ಕೆರಡು ಬಾರಿ ಈ ರಸ ಸೇವಿಸುವುದರಿಂದ ಶೀಘ್ರ ಪರಿಣಾಮ ಲಭಿಸುತ್ತದೆ. ವಿಟಮಿನ್ ಸಿ ಗುಣ ಹೇರಳವಾಗಿರುವ ನೆಲ್ಲಿಕಾಯಿ ಅನ್ನನಾಳದ ಸಮಸ್ಯೆಗಳನ್ನು ನಿವಾರಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
12.ಜಂಕ್ ಫುಡ್ ಆದಷ್ಟು ಕಡಿಮೆ ಮಾಡಿ
ಅಸಿಡಿಟಿ ಸಮಸ್ಯೆಗೆ ಬಹುತೇಕ ಸಂದರ್ಭಗಳಲ್ಲಿ ನಾವು ಸೇವಿಸುವ ಆಹಾರವೇ ಕಾರಣವಾಗಿರುತ್ತದೆ. ಹೀಗಾಗಿ ಜಂಕ್ ಫುಡ್ ಆದಷ್ಟು ಕಡಿಮೆ ಮಾಡಿ ಸಾತ್ವಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಆಗಾಗ ಆಸಿಡಿಟಿ ಆಗುವುದರಿಂದ ತಪ್ಪಿಸಿಕೊಳ್ಳಬಹುದು. ಹಾಗೆಯೇ ನಿಯಮಿತವಾಗಿ ಆಹಾರ ಸೇವನೆ ಕೂಡ ಆರೋಗ್ಯಕ್ಕೆ ಅತಿ ಅಗತ್ಯವಾಗಿದೆ. ಆದರೂ ಅಸಿಡಿಟಿ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮೇಲೆ ತಿಳಿಸಿದ ಮನೆ ಮದ್ದುಗಳನ್ನು ಬಳಸಿ ನೈಸರ್ಗಿಕವಾಗಿಯೇ ಪಿತ್ತ ಶಮನ ಮಾಡಿಕೊಳ್ಳಲು ಪ್ರಯತ್ನಿಸಬಹುದು.