For Quick Alerts
ALLOW NOTIFICATIONS  
For Daily Alerts

ಜೀರಿಗೆ ಬೆರೆಸಿದ ಬೆಲ್ಲದ ನೀರು, ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ

By Arshad
|

ಒಂದು ಸುಭಾಷಿತ ಹೀಗೆ ಹೇಳುತ್ತದೆ."ನೀವು ನಿಮ್ಮ ಕುಟುಂಬಕ್ಕೆ ಹಾಗೂ ಜಗತ್ತಿಗೆ ನೀಡಬಹುದಾದ ಅತ್ಯಂತ ದೊಡ್ಡ ಉಡುಗೊರೆ ಎಂದರೆ ಆರೋಗ್ಯವಂತರಾದ ನೀವು"

ಈ ಸುಭಾಷಿತವನ್ನು ಹಿರಿಯರು ಸುಮ್ಮನೇ ಹೇಳಿಲ್ಲ, 'ಆರೋಗ್ಯವೇ ಭಾಗ್ಯ' ಎಂಬ ಕನ್ನಡದ ಗಾದೆಯಂತೆ ನಿಮ್ಮ ಆರೋಗ್ಯ ನಿಮ್ಮ ಕುಟುಂಬ ಹಾಗೂ ಸಮಾಜದ ಆಪ್ತರಲ್ಲಿ ಸಂತೃಪ್ತಿಯ ಭಾವನೆಯನ್ನೂ ಮೂಡಿಸುತ್ತದೆ. ಆರೋಗ್ಯವಂತ ಪ್ರಜೆಗಳಿದ್ದರೆ ತಾನೇ ಜಗತ್ತೂ ಆರೋಗ್ಯಕರವಾಗಿರುವುದು?

ಜಗತ್ತಿನಲ್ಲಿ ಕಾಯಿಲೆಗಳೇ ಇಲ್ಲದಿದ್ದರೆ ಹೇಗಿರುತ್ತಿತ್ತು ಎಂದು ಒಮ್ಮೆ ಊಹಿಸಿ. ಆಸ್ಪತ್ರೆ, ಔಷಧಿ, ವೈದ್ಯರೇ ಇಲ್ಲದೇ, ಇದಕ್ಕಾಗಿ ಹಣವನ್ನು ವ್ಯಯಿಸುವ ಅಗತ್ಯವಿಲ್ಲದೇ ಹೋಗುತ್ತದೆ ಹಾಗೂ ಆರೋಗ್ಯ ನಿಮಿತ್ತ ಬಿಟ್ಟಿದ್ದ ಸಾವಿರಾರು ಕಾರ್ಯಗಳು ಕೈಗೂಡುತ್ತವೆ! ಸಂತಸ ಹಾಗೂ ಉದ್ವೇಗ ಇನ್ನೂ ಹೆಚ್ಚಾಗುತ್ತದೆ. ಆದರೆ ವಾಸ್ತವದಲ್ಲಿ ಹಾಗಿಲ್ಲ. ವೈದ್ಯವಿಜ್ಞಾನ ಸಹಿತ ಇತರ ಎಲ್ಲಾ ರಂಗಗಳಲ್ಲಿಯೂ ತಂತ್ರಜ್ಞಾನ ನಾಗರೀಕತೆಯನ್ನು ನಾಗಾಲೋಟದಲ್ಲಿ ಮುಂದೆ ಕೊಂಡೊಯ್ಯುತ್ತಿದ್ದಂತೆಯೇ ಸೌಲಭ್ಯಗಳು ಹೆಚ್ಚಾಗುತ್ತಿವೆ. ವ್ಯಂಗ್ಯವೆಂದರೆ ನಾಗರೀಕತೆ ತನ್ನೊಂದಿಗೆ ಅನಾಗರೀಕತೆಯನ್ನೂ ಕೊಂಡೊಯ್ಯುತ್ತದೆ ಎಂಬ ಗಾದೆಯ ಪ್ರಕಾರ ಹೊಸ ಹೊಸ ಚಿಕಿತ್ಸೆಗಳು ಲಭ್ಯವಾದಷ್ಟೂ ಹೊಸ ಹೊಸ ಬಗೆಯ ಕಾಯಿಲೆಗಳೂ ಪ್ರಕಟಗೊಳ್ಳುತ್ತಿವೆ ಹಾಗೂ ವಿಶ್ವದ ಒಟ್ಟಾರೆ ಜನರ ಆರೋಗ್ಯ ಕ್ಷೀಣಿಸುತ್ತಿದೆ.

ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

ಹೌದು, ಈ ವಿಷಯವನ್ನು ಹಲವಾರು ಮಾಹಿತಿಗಳು,ಸಮೀಕ್ಷೆಗಳು ಬಹಿರಂಗಪಡಿಸಿದ್ದು ನಮ್ಮ ಪೂರ್ವಜರು ಇಂದು ನಾವಿರುವುದಕ್ಕಿಂತ ಹೆಚ್ಚು ಆರೋಗ್ಯವಂತರಾಗಿದ್ದರು ಎಂದು ತಿಳಿಸಿವೆ. ಇವರು ತಮ್ಮ ಚಿಕಿತ್ಸೆಗಾಗಿ ನೈಸರ್ಗಿಕ ಹಾಗೂ ಗಿಡಮೂಲಿಕೆಗಳನ್ನೇ ಬಳಸುತ್ತಿದ್ದರು. ತಜ್ಞರ ಪ್ರಕಾರ ಇಂದಿನ ಅನಾರೋಗ್ಯಕ್ಕೆ ಇಂದಿನ ದಿನದ ಜೀವನಶೈಲಿ, ಪ್ರದೂಷಿತ ವಾತಾವರಣ, ಹಾಗೂ ಬದಲಾದ ವಾತಾವರಣಗಳು ಪ್ರಮುಖ ಕಾರಣವಾಗಿವೆ. ಅಷ್ಟೇ ಅಲ್ಲ, ಕೆಲಸದ ಒತ್ತಡ, ಸ್ಪರ್ಧೆ, ಆರ್ಥಿಕ ಹೊರೆ ಮೊದಲಾದವೂ ಮಾನಸಿಕವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ತಪ್ಪಾದ ಹಾಗೂ ಅನಾರೋಗ್ಯಕರ ಸಿದ್ಧ ಆಹಾರದ ಮೇಲಿನ ಅವಲಂಬನೆ, ಗಾಳಿ, ಆಹಾರದ ಮೂಲಕ ಸೇವಿಸುವ ಕೀಟನಾಶಕಗಳು, ಸಿದ್ಧ ಆಹಾರಗಳ ತಯಾರಿಕೆಯಲ್ಲಿ ಬಳಸಲಾಗುವ ರುಚಿಕಾರಕಗಳು, ಹಾರ್ಮೋನುಗಳು, ಸೇವಿಸುವ ಗಾಳಿಯಲ್ಲಿ ತೇಲಿಬರುವ ಅಲರ್ಜಿಕಾರಕ ಕಣಗಳು ಸಹಾ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲವು. ಇವೆಲ್ಲಾವೂ ಒಟ್ಟಾರೆಯಾಗಿ ಹಲವಾರು ಕಾಯಿಲೆಗಳನ್ನು ತಂದೊಡ್ಡಬಲ್ಲುದು. ಇದಕ್ಕೆ ವಯಸ್ಸು, ಬಡವ, ಬಲ್ಲಿದನೆಂಬ ವ್ಯತ್ಯಾಸವಿಲ್ಲದೇ ಎಲ್ಲರನ್ನೂ ಆವರಿಸಬಹುದು. ಇಂದು ಕಾಯಿಲೆಗಳ ಚಿಕಿತ್ಸೆಗಾಗಿ ಲಕ್ಷಾಂತರ ಬಗೆಯ ಆಧುನಿಕ ಔಷಧಿಗಳು ಲಭ್ಯವಿದ್ದರೂ ಇವು ಯಾವುವೂ ಅಡ್ಡಪರಿಣಾಮಗಳಿಂದ ಹೊರತಾಗಿಲ್ಲ.

ಮನೆ ಔಷಧಿ: ಈ ಏಳು ಸಮಸ್ಯೆಗೆ ಒಂದೇ ಮದ್ದು...'ಜೀರಿಗೆ ನೀರು'

ಹಾಗಾಗಿ ಅಡ್ಡಪರಿಣಾಮಗಳಿಲ್ಲದ, ಸುರಕ್ಷಿತ ನೈಸರ್ಗಿಕ ಔಷಧಿಗಳೇ ಆರೋಗ್ಯ ಕಾಪಾಡಿಕೊಳ್ಳಲು ಯೋಗ್ಯವಾಗಿವೆ. ಜೀರಿಗೆ ಹಾಗೂ ಬೆಲ್ಲವನ್ನು ಕುದಿಸಿ ತಣಿಸಿದ ನೀರನ್ನು ನಿತ್ಯವೂ ಕುಡಿಯುವ ಮೂಲಕ ದೇಹಕ್ಕೆ ಕೆಲವಾರು ಬಗೆಯ ಪ್ರಯೋಜನಗಳು ದೊರಕುತ್ತವೆ. ಇದರಲ್ಲಿ ಪ್ರಮುಖ ಒಂಭತ್ತನ್ನು ಇಂದು ನೀಡಲಾಗಿದೆ. ಈ ನೀರನ್ನು ತಯಾರಿಸಲು ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಎರಡು ಚಿಕ್ಕ ಚಮಚ ಜೀರಿಗೆ ಹಾಗೂ ಒಮ್ದು ಚಿಕ್ಕ ಚಮಚ ಬೆಲ್ಲವನ್ನು ಬೆರೆಸಿ ಸುಮಾರು ಮೂರು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿ ಬಳಿಕ ತಣಿಸಿ ಸೋಸಿ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಬೇಕು. ಸುಮಾರು ಮುಕ್ಕಾಲು ಘಂಟೆಯ ಬಳಿಕ ಉಪಾಹಾರ ಸೇವಿಸಬೇಕು. ಬನ್ನಿ, ಇದರ ಪ್ರಯೋಜನಗಳನ್ನು ನೋಡೋಣ...

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಜೀರಿಗೆಯಲ್ಲಿ ಉತ್ತಮ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಹಾಗೂ ಕ್ಯೂಮಿನ್ ಎಣ್ಣೆ ಜೀರ್ಣರಸದಲ್ಲಿ ಹೆಚ್ಚಿನ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಜೀರ್ಣಕ್ರಿಯೆ ಸರಾಗವಾಗುವಲ್ಲಿ ಸಹಕರಿಸುತ್ತದೆ. ತನ್ಮೂಲಕ ಆಮ್ಲೀಯತೆ, ಅಜೀರ್ಣತೆ, ವಾಯುಪ್ರಕೋಪ ಮೊದಲಾದ ತೊಂದರೆಗಳನ್ನು ಇಲ್ಲವಾಗಿಸುತ್ತದೆ. ಒಂದು ವೇಳೆ ಊಟ ರುಚಿಸಿತೆಂದು ಕೊಂಚ ಹೆಚ್ಚೇ ಸೇವಿಸಿದರೆ ಊಟದ ಬಳಿಕವೂ ಈ ನೀರನ್ನು ಕುಡಿಯುವ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ಸಾಗಲು ನೆರವಾಗುತ್ತದೆ.

ತೂಕ ಇಳಿಕೆಗೆ ಸಹಕರಿಸುತ್ತದೆ

ತೂಕ ಇಳಿಕೆಗೆ ಸಹಕರಿಸುತ್ತದೆ

ತೂಕ ಇಳಿಸುವುದು ಕಷ್ಟಕರವಾದ ಕೆಲಸವಾಗಿದ್ದು ಇದಕ್ಕೆ ಆಹಾರದಲ್ಲಿ ನಿಯಂತ್ರಣ ಹಾಗೂ ಮನಸ್ಸು ಒಪ್ಪದೇ ಇರುವ ವ್ಯಾಯಾಮಗಳನ್ನೂ ನಿಯಮಿತವಾಗಿ ನಿತ್ಯವೂ ಅನುಸರಿಸಬೇಕಾಗುತ್ತದೆ. ಈ ಕ್ರಮಗಳೊಂದಿಗೇ ಜೀರಿಗೆ-ಬೆಲ್ಲದ ನೀರನ್ನು ಕುಡಿದರೆ ಇದರಲ್ಲಿರುವ ಪೊಟ್ಯಾಶಿಯಂ ಜೀವ ರಾಸಾಯನಿಕ ಕ್ರಿಯೆಯ ಗತಿ ತೀವ್ರಗೊಳಿಸಲು ನೆರವಾಗುತ್ತದೆ ಹಾಗೂ ತೂಕ ಕಳೆದುಕೊಳ್ಳುವ ನಿಮ್ಮ ಪ್ರಯತ್ನಗಳು ಹೆಚ್ಚು ಫಲ ನೀಡುತ್ತವೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ಪ್ರತಿದಿನವೂ ಬೆಳಿಗ್ಗೆ ಪ್ರಥಮ ಆಹಾರವಾಗಿ ಬಿಸಿಯಾದ ಜೀರಿಗೆ-ಬೆಲ್ಲದ ನೀರನ್ನು ಕುಡಿದಾಗ ಮಲಬದ್ದತೆಯ ತೊಂದರೆ ನೀಗಿಸಲು ಸಹಾಯವಾಗುತ್ತದೆ. ಇದರಲಿರುವ ಖನಿಜಗಳು ಹಾಗೂ ನೈಸರ್ಗಿಕ ಪೋಷಕಾಂಶಗಳು ಬಿಸಿನೀರಿನೊಂದಿಗೆ ಹೊಟ್ಟೆಯನ್ನು ಸೇರಿ ಕರುಳುಗಳಿಗೆ ಮುಂದುವರೆದಾಗ ವಿಶೇಷವಾಗಿ ದೊಡ್ಡ ಕರುಳಿನಲ್ಲಿ ಗಟ್ಟಿಯಾಗಿ ಮುಂದುವರೆಯಲು ಕಷ್ಟಕರವಾಗಿದ್ದ ತ್ಯಾಜ್ಯಗಳನ್ನು ಮುಂದೂಡಲು ಕರುಳಿನ ಒಳಗೋಡೆಗಳಲ್ಲಿ ಜಾರುಕದಂತಹ ದ್ರವದಂತೆ ಸಹಕರಿಸುವ ಮೂಲಕ ವಿಸರ್ಜನಾ ಕಾರ್ಯವನ್ನು ಸುಲಭವಾಗಿ ನಿರ್ವಹಿಸಲು ನೆರವಾಗುತ್ತದೆ.

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ನಮ್ಮ ಆಹಾರ ಹಾಗೂ ಉಸಿರಿನ ಮೂಲಕ ದೇಹವನ್ನು ಪ್ರವೇಶಿಸುವ ಕೆಲವಾರು ವಿಷಕಾರಿ ವಸ್ತುಗಳು ರಕವನ್ನು ಸೇರಿ ಕೆಲವಾರು ಅನಾರೋಗ್ಯಗಳಿಗೆ ಕಾರಣವಾಗಬಹುದು. ಬೆಲ್ಲ ಹಾಗೂ ಜೀರಿಗೆಯಲ್ಲಿರುವ ಕೆಲವಾರು ಖನಿಜಗಳು ಈ ವಿಷಕಾರಿ ವಸ್ತುಗಳನ್ನು ರಕ್ತದಿಂದ ಬೇರ್ಪಡಿಸಿ ವಿಸರ್ಜಿಸುವ ಮೂಲಕ ನೈಸರ್ಗಿಕವಾಗಿ ರಕವನ್ನು ಶುದ್ದೀಕರಿಸುವಲ್ಲಿ ನೆರವಾಗುತ್ತವೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಇದರಲ್ಲಿರುವ ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂ ದೇಹದ ಪ್ರತಿ ಜೀವಕೋಶಕ್ಕೂ ಅಗತ್ಯವಾಗಿ ಬೇಕಾಗಿರುವ ಖನಿಜಗಳಾಗಿದ್ದು ಪ್ರತಿ ಜೀವಕೋಶವೂ ತನ್ನ ಮೇಲೆ ಎರಗುವ ಕಾಯಿಲೆಯುಂಟುಮಾಡುವ ಕಣಗಳಿಂದ ತನ್ನನ್ನು ತಾನು ರಕ್ಷಿಸಿಕೊಳುವಷ್ಟು ಬಲಿಷ್ಟವಾಗುತ್ತವೆ. ತನ್ಮೂಲಕ ದೇಹದ ರೋಗ ನಿರೋಧಕ ಶಕ್ತಿ ಅಪಾರವಾಗಿ ಹೆಚ್ಚುತ್ತದೆ.

ಮಾಸಿಕ ದಿನಗಳ ನೋವನ್ನು ಕಡಿಮೆ ಮಾಡುತ್ತದೆ

ಮಾಸಿಕ ದಿನಗಳ ನೋವನ್ನು ಕಡಿಮೆ ಮಾಡುತ್ತದೆ

ವಿಶೇಷವಾಗಿ ಮಹಿಳೆಯರ ಮಾಸಿಕ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ನೋವನ್ನು ಕಡಿಮೆ ಮಾಡಲು ಬೆಲ್ಲ-ಜೀರಿಗೆಯ ನೀರು ಉತ್ತಮವಾಗಿದೆ. ಇದರಲ್ಲಿರುವ ಖನಿಜ ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ರಕ್ತಸಂಚಾರವನ್ನು ಗರ್ಭಾಶಯದ ಭಾಗದಲ್ಲಿ ಒದಗಿಸುವ ಮೂಲಕ ಮಾಸಿಕ ದಿನಗಳಲ್ಲಿ ಎದುರಾಗುವ ಉರಿಯೂತ ಹಾಗೂ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ.

 ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ರಕ್ತನಾಳಗಳು ಕಿರಿದಾದಾಗ ಅಥವಾ ರಕ್ತನಾಳಗಳ ಒಳಗೆ ಜಿಡ್ಡು ತುಂಬಿಕೊಂದು ಒಳಗಿನ ವ್ಯಾಸವನ್ನು ಕಿರಿದಾಗಿಸಿದಾಗ ಈ ಕಿರಿದಾಗಿರುವ ಸ್ಥಳದ ಮೂಲಕ ರಕ್ತವನ್ನು ದೂಡಲು ಹೃದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾಗಿ ಬರುತ್ತದೆ. ಇದನ್ನೇ ಅಧಿಕ ರಕ್ತದೊತ್ತಡ ಎಂದು ಕರೆಯುತ್ತೇವೆ. ಅಧಿಕ ರಕ್ತದೊತ್ತಡ ಹಲವಾರು ಹೃದಯ ಸಂಬಂಧಿತ ರೋಗಗಳಿಗೆ ಮೂಲವಾಗಿದೆ. ಹೃದಯಸ್ತಂಭನವೂ ಎದುರಾಗಬಹುದು. ಜೀರಿಗೆ-ಬೆಲ್ಲದ ನೀರಿನಲ್ಲಿರುವ ಪೊಟ್ಯಾಶಿಯಂ ರಕ್ತದ ಒತ್ತಡವನ್ನು ಕಡಿಮೆ ಮಾಡಲು ನೆರವಾಗುವ ಮೂಲಕ ಈ ತೊಂದರೆಗಳಿಂದಲೂ ರಕ್ಷಿಸುತ್ತದೆ.

ಸಂಧಿವಾತದ ನೋವನ್ನು ಕಡಿಮೆ ಮಾಡುತ್ತದೆ

ಸಂಧಿವಾತದ ನೋವನ್ನು ಕಡಿಮೆ ಮಾಡುತ್ತದೆ

ಸಂಧಿವಾತವನ್ನು ಹಿರಿಯರು, ಕ್ರೀಡಾಪಟುಗಳು ಹಾಗೂ ಭಾರ ಎತ್ತುವ ಕೆಲಸ ಮಾಡುವ ವ್ಯಕ್ತಿಗಳು ಹೆಚ್ಚಾಗಿ ಅನುಭವಿಸುತ್ತಾರೆ. ಮೂಳೆಗಳ ಸಂಧುಗಳಲ್ಲಿ ಎದುರಾಗುವ ಉರಿಯೂತ ಈ ನೋವಿಗೆ ಪ್ರಮುಖ ಕಾರಣ. ಜೀರಿಗೆ-ಬೆಲ್ಲದ ನೀರಿನಲ್ಲಿರುವ ಪೊಟ್ಯಾಶಿಯಂ ಹಾಗೂ ಇತರ ಖನಿಜಗಳು ಮೂಳೆಗಳ ಸಂಧುಗಳ ಭಾಗದಲ್ಲಿ ಹೆಚ್ಚಿನ ರಕ್ತಸಂಚಾರ ನೀಡುವ ಮೂಲಕ ಉರಿಯೂತವನ್ನು ಕಡಿಮೆ ಮಾಡಿ ನೋವನ್ನೂ ಕಡಿಮೆ ಮಾಡಲು ನೆರವಾಗುತ್ತವೆ.

English summary

what-happens-to-your-body-when-you-drink-jeera-jaggery-water

Did you know that jaggery and cumin (jeera) also come with certain properties that are beneficial for our health? Just mix 1 teaspoon of jeera and 1 tablespoon of jaggery to a pan of water. Now, boil the water, with the ingredients in it. Boil for few minutes and collect the mixture in a cup. Your drink is now ready for consumption. You can consume this drink every morning, before breakfast. To learn about how jaggery and jeera water can improve your health, you can read more, below.
Story first published: Saturday, January 13, 2018, 10:21 [IST]
X
Desktop Bottom Promotion