Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮುಜುಗರ ತರಿಸುವ ತುರಿಕೆಯ ಸಮಸ್ಯೆಗೆ, ಒಂದಿಷ್ಟು ಸರಳ ಪರಿಹಾರಗಳು...
ನಾಲ್ಕು ಜನರೆದುರು ಇದ್ದಾಗ ಪುರುಷರಿಗೂ ಮಹಿಳೆಯರಿಗೂ ಅತೀವ ಮುಜುಗರ ತರಿಸುವ ಕ್ರಿಯೆಯೆಂದರೆ ಗುಪ್ತಾಂಗಳ ಭಾಗದಲ್ಲಿ ತುರಿಕೆಯುಂಟಾಗುವುದು. ಇದು ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಂದರ್ಭದಲ್ಲಿ ಎದುರಾಗಿಯೇ ಇರುತ್ತದೆ. ನಾಲ್ಕು ಜನರ ನಡುವೆ ಇದ್ದಾಗ ಈ ತುರಿಕೆಗೆ ಶಮನ ಒದಗಿಸಲಾಗದೇ, ತುರಿಕೆಯ ಕಡಿತವನ್ನೂ ತಾಳಲಾರದೇ ಚಡಪಡಿಕೆ ಎದುರಾಗುತ್ತದೆ. ಆಗ ಎದುರಿನವರು ಹೇಳುತ್ತಿರುವ ವಿಷಯವನ್ನು ಗ್ರಹಿಸಲೂ ಸಾಧ್ಯವಾಗದೇ ಇನ್ನಷ್ಟು ಪರೋಕ್ಷ ಮುಜುಗರಕ್ಕೂ ಒಳಗಾಗಬಹುದು.
ನಿಮ್ಮ ಬೆರಳು ಎಲ್ಲಿ ತಲುಪುವುದಿಲ್ಲವೋ, ಆ ಭಾಗದಲ್ಲಿಯೇ ಹೆಚ್ಚು ಕಡಿತವಾಗುವುದೊಂದು ಸೋಜಿಗ. ಅಷ್ಟಕ್ಕೂ ತುರಿಕೆ ಏಕಾಗಿ ಬರುತ್ತದೆ? ಅದರಲ್ಲೂ ಖಾಸಗಿ ಭಾಗಗಳ ಸಂದುಗಳಲ್ಲಿಯೇ ಹೆಚ್ಚು ಕಡಿತವೇಕೆ? ಇದಕ್ಕೆ ಈ ಭಾಗದಲ್ಲಿ ಇದ್ದಿರುವ ಚಿಕ್ಕ ಬೊಬ್ಬೆಗಳು, ಸೋಂಕು, ಚರ್ಮದ ಕಾಯಿಲೆ, ಕೆಲವು ರಾಸಾಯನಿಕಗಳ ಪ್ರಭಾವ, ಸ್ವಚ್ಛತೆಯ ಕೊರತೆ, ಕೀಟಗಳ ಬಾಧೆ, ಮಹಿಳೆಯರಲ್ಲಾದರೆ ಮುಟ್ಟಿನ ಸಮಯದಲ್ಲಿ ಮೊದಲಾದವು ಕಾರಣವಾಗಿವೆ.
ಕೆಲವೊಮ್ಮೆ ಈ ತುರಿಕೆ ಕಡಿಮೆಯಾಗದೇ ಇದ್ದರೆ ಇದು ಮುಂದುವರೆದು ನೋವಿಗೆ ಬದಲಾಗಬಹುದು ಹಾಗೂ ಈಗ ಚಿಕಿತ್ಸೆ ಕಷ್ಟಕರವೂ ಹೆಚ್ಚು ಸಮಯ ತೆಗೆದುಕೊಳ್ಳುವಂತಹ ಹಂತವನ್ನೂ ತಲುಪುತ್ತದೆ. ಒಂದು ವೇಳೆ ನಿಮಗೂ ತುರಿಕೆಯ ತೊಂದರೆ ಇದ್ದರೆ (ಇದ್ದರೆ ಏನು? ಪ್ರತಿಯೊಬ್ಬರಿಗೂ ಕೊಂಚವಾದರೂ ಇದ್ದೇ ಇರುತ್ತದೆ) ಇದನ್ನು ನಿವಾರಿಸಲು ಕೆಲವು ಸಮರ್ಥ ಮನೆಮದ್ದುಗಳನ್ನು ಸಂಗ್ರಹಿಸಿದ್ದು ಇದರಲ್ಲಿ ಪ್ರಮುಖವಾದ ಹನ್ನೊಂದನ್ನು ಇಂದಿನ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ...

ರೋಸ್ಮರಿ ಎಲೆಗಳು
ಈ ಎಲೆಗಳಿಗೆ ಒಂದಕ್ಕಿಂತ ಹೆಚ್ಚು ಕಾಯಿಲೆಯನ್ನು ಗುಣಪಡಿಸುವ ಕ್ಷಮತೆ ಇದೆ. ತುರಿಕೆಯನ್ನು ಕಡಿಮೆ ಮಾಡಲು ಒಂದು ಹಿಡಿಯಷ್ಟು ಎಲೆಗಳನ್ನು ಕೊಂಚ ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷ ಕುದಿಸಬೇಕು. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಉಗುರುಬೆಚ್ಚನೆಯಷ್ಟು ತಣಿದ ಬಳಿಕ ಈ ನೀರಿನಿಂದ ತುರಿಕೆ ಇರುವ ಭಾಗಕ್ಕೆಲ್ಲಾ ನಿಧಾನವಾಗಿ ಸುರಿವಿಕೊಳ್ಳಿ. ಇದರಿಂದ ತುರಿಕೆಯಿಂದ ತಕ್ಷಣವೇ ಉಪಶಮನ ದೊರಕುತ್ತದೆ.

ಸೇಬಿನ ಶಿರ್ಕಾ (Apple Cider Vinegar)
ಈ ದ್ರಾವಣ ಉತ್ತಮ ಶಿಲೀಂಧ್ರ ನಿವಾರಕವಾಗಿದೆ. ಎರಡು ಚಿಕ್ಕಚಮಚ ಶಿರ್ಕಾವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಈ ನೀರನ್ನು ನಿತ್ಯವೂ ಕುಡಿಯಬೇಕು. ಜೊತೆಗೇ ಒಂದು ಕಪ್ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ದೊಡ್ಡಚಮಚ ಶಿರ್ಕಾ ಬೆರೆಸಿ ಈ ನೀರಿನಿಂದ ತುರಿಕೆಯಾಗುತ್ತಿರುವ ಭಾಗವನ್ನೆಲ್ಲಾ ಹತ್ತಿಯುಂಡೆಯಿಂದ ಒರೆಸಿಕೊಳ್ಳಿ.

ತುಳಸಿ ಎಲೆಗಳು
ಇದರ ಶಿಲೀಂಧ್ರ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಹಾಗೂ ಸೂಕ್ಷ್ಮಜೀವಿ ನಿವಾರಕ ಗುಣ ತುರಿಕೆಯನ್ನೂ ನಿಲ್ಲಿಸಲು ಸಮರ್ಥವಾಗಿವೆ. ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಕೊಂಚ ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಕುದಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಟ್ಟು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರನ್ನು ಕುಡಿಯಿರಿ.

ಬೋರಿಕ್ ಆಮ್ಲ ಅಥವಾ ಬೋರಿಕ್ ಪೌಡರ್
ಈ ಪುಡಿಯಲ್ಲಿಯೂ ಉತ್ತಮ ಶಿಲೀಂಧ್ರ ನಿವಾರಕ ಗುಣವಿದ್ದು ತುರಿಕೆಯನ್ನು ನಿವಾರಿಸಲು ಉತ್ತಮವಾದ ಆಯ್ಕೆಯಾಗಿದೆ. ಕಾಲು ಚಿಕ್ಕಚಮಚ ಬೋರಿಕ್ ಆಮ್ಲವನ್ನು ಒಂದು ಕಪ್ ನೀರಿನಲಿ ಬೆರೆಸಿ ಈ ನೀರನ್ನು ತೋಯಿಸಿದ ಹತ್ತಿಯುಂಡೆಯಿಂದ ತುರಿಕೆ ಇರುವ ಭಾಗವನ್ನೆಲ್ಲ ನೆನೆಸಿ. ಈ ಕ್ರಿಯೆಯನ್ನು ನಿತ್ಯವೂ ಅನುಸರಿಸುವ ಮೂಲಕ ಶೀಘ್ರವೇ ತುರಿಕೆ ಮಾಯವಾಗುತ್ತದೆ.

ಟೀ ಟ್ರೀ ಎಣ್ಣೆ(Tea tree oil)
ಈ ಎಣ್ಣೆಯಲ್ಲಿಯೂ ಪ್ರಬಲವಾದ ಬ್ಯಾಕ್ಟೀರಿಯಾನಿವಾರಕ ಗುಣವಿದ್ದು ವಿಶೇಷವಾಗಿ ಗುಪ್ತಾಂಗಗಳ ತುರಿಕೆಯನ್ನು ತಕ್ಷಣವೇ ಇಲ್ಲವಾಗಿಸುತ್ತದೆ. ನಿಮ್ಮ ನಿತ್ಯದ ಸ್ನಾನದ ನೀರಿನ ತೊಟ್ಟಿ ನಲ್ಲಿ ನಾಲ್ಕರಿಂದ ಆರು ಹನಿ ಈ ಎಣ್ಣೆಯನ್ನು ಬೆರೆಸಿ. ಈ ನೀರಿನಲ್ಲಿ ಸುಮಾರು ಹತ್ತರಿಂದ ಹದಿನೈದು ನಿಮಿಷ ದೇಹವನ್ನು ತೋಯಿಸಿ. ಇದು ಸಾಧ್ಯವಾಗದಿದ್ದರೆ ಎರಡು ದೊಡ್ಡ ಚಮಚ ಲೋಳೆಸರದ ತಿರುಳಿಗೆ ನಾಲ್ಕರಿಂದ ಆರು ಹನಿ ಎಣ್ಣೆ ಬೆರೆಸಿ ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ತುರಿಕೆ ಇರುವ ಭಾಗಕ್ಕೆಲ್ಲಾ ತೆಳುವಾಗಿ ಸವರಿ ಕೊಂಚ ಹೊತ್ತು ಒಣಗಲು ಬಿಡಿ. ಬಳಿಕ ನೀರಿನಿಂದ ತೊಳೆದುಕೊಳ್ಳಿ.

ಕ್ಯಾಮೋಮೈಲ್ ಟೀ
ಕ್ಯಾಮೋಮೈಲ್ ಒಂದು ತೇಜೋಹಾರಿಯಾದ ಮೂಲಿಕೆಯಾಗಿದ್ದು ಇದರ ಬಳಕೆಯಿಂದ ತುರಿಕೆ, ಉರಿ, ಸೂಜಿಯಿಂದ ಚುಚ್ಚಿದಂತಾಗುವುದು ಮೊದಲಾದ ತೊಂದರೆಗಳನ್ನು ನಿವಾರಿಸಬಹುದು. ಇದಕ್ಕಾಗಿ ಒಂದು ಚಿಕ್ಕ ಚಮಚ ಕ್ಯಾಮೋಮೈಲ್ ಮೂಲಿಕೆಯನ್ನು ಎರಡು ಕಪ್ ನೀರಿನಲ್ಲಿ ಸುಮಾರು ಐದು ನಿಮಿಷಗಳ ಕಾಲ ಕುದಿಸಿ. ಬಳಿಕ ಈ ನೀರನ್ನು ಸೋಸಿ ಇದಕ್ಕೆ ನಾಲ್ಕು ತೊಟ್ಟು ಟೀ ಟ್ರೀ ಎಣ್ಣೆಯನ್ನು ಬೆರೆಸಿ. ಈ ನೀರು ತಣಿದ ಬಳಿಕ ಹತ್ತಿಯುಂಡೆಯನ್ನು ಈ ನೀರಿನಲ್ಲಿ ಮುಳುಗಿಸಿ ದಿನಕ್ಕೆರಡು ಬಾರಿ ತುರಿಕೆ ಇರುವ ಭಾಗದಲ್ಲೆಲ್ಲಾ ಒರೆಸಿಕೊಳ್ಳಿ.

ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯನ್ನು ಗುಪ್ತಾಂಗಗಳ ಬಳಿಯ ಚರ್ಮಕ್ಕೆ ಹಚ್ಚಿಕೊಳ್ಳುವ ಮೂಲಕ ಚರ್ಮ ಹೆಚ್ಚಿನ ಆರೈಕೆ ಪಡೆಯುತ್ತದೆ. ಕೊಬ್ಬರಿ ಎಣ್ಣೆಯ ಆರ್ದ್ರತೆ ನೀಡುವ ಗುಣವೇ ಇದಕ್ಕೆ ಕಾರಣ. ವಿಶೇಷವಾಗಿ ಈ ಭಾಗದಲ್ಲಿ ತೇವವಾಗಿದ್ದಾಗ ಎದುರಾಗುವ ಹುದುಗು (ಯೀಸ್ಟ್) ನ ಸೋಂಕಿನಿಂದ ತುರಿಕೆಯುಂಟಾಗಿದ್ದರೆ ಕೊಬ್ಬರಿ ಎಣ್ಣೆ ಈ ತುರಿಕೆಗೆ ಅತ್ಯಂತ ಸಮರ್ಪಕವಾಗಿದೆ. ಕೊಂಚ ಕೊಬ್ಬರಿ ಎಣ್ಣೆಯನ್ನು ತುಸುವೇ ಬಿಸಿಮಾಡಿ ತುರಿಕೆ ಇರುವ ಭಾಗದಲ್ಲೆಲ್ಲಾ ದಿನವೂ ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಬೇಕು. ಇದರ ಜೊತೆಗೇ ಆರು ಕಪ್ ನೀರಿನಲ್ಲಿ ನಾಲ್ಕು ದೊಡ್ಡ ಚಮಚ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಮಿಶ್ರಣ ಮಾಡಿ ಈ ಮಿಶ್ರಣದಿಂದ ತುರಿಕೆ ಇರುವ ಭಾಗಗಳನ್ನೆಲ್ಲಾ ಸ್ವಚ್ಛಗೊಳಿಸಬೇಕು.

ಕಲ್ಲುಪ್ಪು
ಒಂದು ವೇಳೆ ಬ್ಯಾಕ್ಟೀರಿಯಾಗಳ ಸೋಂಕು ಅಥವಾ ಶಿಲೀಂಧ್ರದ ಸೋಂಕಿನಿಂದ ತುರಿಕೆಯುಂಟಾಗಿದ್ದರೆ ಸಮುದ್ರದ ಉಪ್ಪು ಉತ್ತಮ ಆಯ್ಕೆಯಾಗಿದೆ. ಒಂದು ದೊಡ್ಡ ಚಮಚ ಕಲ್ಲುಪ್ಪನ್ನು ಎರಡು ಕಪ್ ನೀರಿನಲ್ಲಿ ಬೆರೆಸಿ ಈ ನೀರಿನಿಂದ ತುರಿಕೆ ಇರುವ ಭಾಗವನ್ನೆಲ್ಲಾ ಚೆನ್ನಾಗಿ ದಿನವೂ ತೊಳೆದುಕೊಳ್ಳಬೇಕು.

ಬೇವಿನ ಎಲೆಗಳು
ಬೇವು ಉತ್ತಮ ಕ್ರಿಮಿನಾಶಕವಾಗಿದ್ದು ನಮ್ಮ ದೇಶದಲ್ಲಿ ಹಲವಾರು ಕಾಯಿಲೆಗಳಿಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಾ ಬರಲಾಗಿದೆ. ಇದರಲ್ಲಿ ಪ್ರಬಲವಾದ ಬ್ಯಾಕ್ಟೀರಿಯಾ ನಿವಾರಕ ಹಾಗೂ ಶಿಲೀಂಧ್ರ ನಿವಾರಕ ಗುಣವೂ ಇದೆ. ಒಂದು ಹಿಡಿಯಷ್ಟು ಬೇವಿನ ಎಲೆಗಳನ್ನು ಕುದಿಸಿದ ನೀರನ್ನು ನಿಮ್ಮ ನಿತ್ಯದ ಸ್ನಾನದ ನೀರಿನಲ್ಲಿ ಬೆರೆಸಿ ಸ್ನಾನ ಮಾಡಬೇಕು. ಇದರ ಜೊತೆಗೇ ನಾಲ್ಕು ಕಪ್ ನೀರಿನಲ್ಲಿ ಒಂದು ಹಿಡಿ ಬೇವಿನ ಎಲೆಗಳನ್ನು ಹತ್ತು ನಿಮಿಷ ಕುದಿಸಿ ಬಳಿಕ ಉರಿ ಆರಿಸಿ ತಣಿಸಿಯಲು ಬಿಡಿ. ಉಗುರುಬೆಚ್ಚಗಾದ ಬಳಿಕ ಹತ್ತಿಯುಂಡೆಯೊಂದರಿಂದ ಈ ನೀರನ್ನು ತೋಯಿಸಿ ತುರಿಕೆ ಇರುವಲ್ಲೆಲ್ಲಾ ಹಚ್ಚಿಕೊಳ್ಳಿ.

ಮೊಸರು
ಇದರಲ್ಲಿ ಆರೋಗ್ಯಸ್ನೇಹಿಯಾದ ಬ್ಯಾಕ್ಟೀರಿಯಾಗಳಿದ್ದು ಇದರ ಶಮನಕಾರಿ ಗುಣದ ಕಾರಣ ಗುಪ್ತಾಂಗಗಳ ತುರಿಕೆ ಕಡಿಮೆ ಮಾಡಲೂ ಉತ್ತಮವಾಗಿದೆ. ಸಕ್ಕರೆ ಬೆರೆಸದ ಅಪ್ಪಟ ಮೊಸರನ್ನು ನಿತ್ಯವೂ ಒಂದು ಹತ್ತಿಯುಂಡೆಯನ್ನು ಬಳಸಿ ತುರಿಕೆ ಇರುವ ಭಾಗವನ್ನೆಲ್ಲಾ ಒರೆಸಿಕೊಳ್ಳುವ ಮೂಲಕ ತುರಿಕೆ ಇರುವ ಸ್ಥಳದಲ್ಲಿಯೂ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳ ಸಮತೋಲನವನ್ನು ಕಾಪಾಡಿಕೊಂಡು ತುರಿಕೆ ಇಲ್ಲವಾಗಿಸಬಹುದು.

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾನಿವಾರಕ ಹಾಗೂ ಪ್ರತಿಜೀವಕ ಗುಣಗಳಿದ್ದು ಇವು ಸತತ ತುರಿಕೆಯಿಂದ ರಕ್ಷಣೆ ಒದಗಿಸುತ್ತವೆ. ಕೊಂಚ ಬೆಳ್ಳುಳ್ಳಿ ಎಣ್ಣೆ ಹಾಗೂ ವಿಟಮಿನ್ ಇ ಎಣ್ಣೆಯನ್ನು ಚೆನ್ನಾಗಿ ಬೆರೆಸಿ ತುರಿಕೆ ಇರುವ ಭಾಗಕ್ಕೆ ತೆಳುವಾಗಿ ಸವರಿಕೊಂಡು ಕೊಂಚ ಹೊತ್ತು ಹಾಗೇ ಬಿಟ್ಟು ಬಳಿಕ ತೊಳೆದುಕೊಳ್ಳಬೇಕು.



Click it and Unblock the Notifications











