ಏಕಾದಶಿ ನಿಮಿತ್ತ ಇವತ್ತು ಫಲಾಹಾರ

By Staff

Fruit Kick for 7 Jan/2008
ವೈಕುಂಠ ಏಕಾದಶಿ ಸಲುವಾಗಿ ಇವತ್ತು ದಟ್ಸ್ ಕನ್ನಡ ಅಡುಗೆ ಮನೆಯಲ್ಲಿ ಸ್ಟೌವ್ ಹತ್ತಿಸುವುದಿಲ್ಲ. ಏಕಾದಶಿ ದಿನ ಮುಸುರೆ, ಅಂದರೆ ಬೇಯಿಸಿದ ಪದಾರ್ಥ ನಿಷಿದ್ಧವಾದುದರಿಂದ ನಾವು ಯಾವುದೇ ಅಡುಗೆ ರೆಸಿಪಿಗಳನ್ನು ಸೂಚಿಸಿರುವುದಿಲ್ಲ. ತುಂಬಾ ನೇಮ ನಿಷ್ಠೆ ಮಾಡುವವರು ಒಂದು ಉದ್ಧರಣೆ ತೀರ್ಥ ಸೇವಿಸುವುದುಂಟು. ಈಗಿನ ಕಾಲದಲ್ಲಿ ಅಷ್ಟೊಂದು ಜಿಗುಟಾಗಿರಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಇವತ್ತು ಕೇವಲ ಫಲಾಹಾರವನ್ನು ಸೂಚಿಸಲಾಗಿದೆ.

ವಿಟಮಿನ್ ಮತ್ತು ಪೌಷ್ಟಿಕಾಂಶ ಭರಿತ ಫಲಾಹಾರ ಸೇವನೆಯಿಂದ ಹೊಟ್ಟೆಗೆ ತಂಪಾಗುತ್ತದೆ ಮತ್ತು ಆರೋಗ್ಯವೂ ವೃದ್ಧಿಸುತ್ತದೆ. ಹೆಚ್ಚು ಹೆಚ್ಚು ಹಣ್ಣು ತಿನ್ನಿರಿ. ಹಣ್ಣಿನಿಂದ ರಸ, ರಸಾಯನ ತಯಾರಿಸಿ ಮನೆಮಂದಿಯೆಲ್ಲರೂ ಕಡೆಯ ಪಕ್ಷ ಒಂದು ದಿನ ಅಕ್ಕಿ, ಗೋಧಿ, ಬೇಳೆ, ಎಣ್ಣೆ ತರಕಾರಿಗಳಿಂದ ದೂರವಿರಿ. ನಿಮ್ಮ ಕೈಗೆ ಎಟಕುವ , ಸಮೀಪದ ಮಾರುಕಟ್ಟೆಯಲ್ಲಿ ದೊರೆಯುವ ಯಾವುದೇ ಹಣ್ಣು ಆಗಬಹುದು.

ಏಕಾದಶಿ ಕೇವಲ ಧಾರ್ಮಿಕ ಕಟ್ಟುಪಾಡಲ್ಲ. ಎರಡು ವಾರಕ್ಕೊಮ್ಮೆ ಹೊಟ್ಟೆಗೆ ವಿಶ್ರಾಂತಿ ನೀಡುವ ಉಪಾಯವದು. ಕೆಲವರು ಏಕಾದಶಿ ಹೆಸರಲ್ಲಿ ಉಪಾಹಾರಕ್ಕೆ ಮನಸೋಲುವುದುಂಟು. ಉಪ್ಪಿಟ್ಟು, ಅವಲಕ್ಕಿ, ಚಪಾತಿ, ರೊಟ್ಟಿ, ಕೋಸಂಬರಿ, ಕೇಸರಿಭಾತ್, ಆಂಬೊಡೆ, ಮುಂತಾದ ತಿಂಡಿಗಳನ್ನು ಸೇವಿಸಲು ಏಕಾದಶಿ ನೆಪವಾಗಬಾರದು. ಹಾಗೆ ಮಾಡಿದ್ದೇ ಆದರೆ ಅದು ಸುಬ್ಬಮ್ಮನ ಏಕಾದಶಿ ಆಗಿಬಿಡತ್ತೆ.
(ದಟ್ಸ್ ಕನ್ನಡ ಸಲಹೆ)

Story first published: Wednesday, January 7, 2009, 17:59 [IST]
X
Desktop Bottom Promotion