Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಸಾಬೂದಾಣಿ ಖಿಚಡಿ : ಇದು ಏಕಾದಶಿ ಪರಿಹಾರ

* ಸುಬ್ಬಣ್ಣ, ನೆಲಮಂಗಲ
ಏಕಾದಶಿ ಬಂತೆಂದರೆ ನನಗೆ ಕುತ್ತಿಗೆಗೆ ಬಂದು ಕುಂತುಕೊಳ್ಳುತ್ತದೆ. ಅಂದರೆ, ನನ್ನಂಥ ಭಾರೀ ಅಲ್ಲದಿದ್ದರೂ ಸಾಧಾರಣ ತಿಂಡಿಪೋತನಿಗೆ ಈ ಏಕಾದಶಿ ತಿಂಡಿಗಳನ್ನು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಹದಿನೈದು ದಿನಗಳಿಗೊಮ್ಮೆ ಉಪವಾಸ ಮಾಡಬೇಕೇನೋ ನಿಜ. ಆದ್ರೆ, ಯಾರು ಮಾಡ್ತಾರೆ ಹೇಳಿ? ಬೆಳೆಯುವ ಹುಡುಗರು, ಯುವಕರು, ಮುದುಕರಿಗೆ ನಿಶ್ಚಕ್ರ ಉಪವಾಸ (ದಿನಪೂರ್ತಿ ಏನೂ ತಿನ್ನದೆನೆ, ನೀರು ಕೂಡ ಕುಡಿಯದೆ ಕಳೆಯುವುದು, ಮರುದಿನ ದ್ವಾದಶಿ ಪಾರಣಿಯ ತನಕ) ಮಾಡಲಂತೂ ಸಾಧ್ಯವಿಲ್ಲ, ಮಾಡಲೂಬಾರದು. ಗ್ಯಾಸು ಹಾಳು ಮೂಳು ನೂರಾಯೆಂಟು ತಾಪತ್ರಯ. ಏಕಾದಶಿಯಂದು ಅನ್ನ, ಹೊಟೇಲೂಟ ಮುಟ್ಟುವ ಹಾಗಿಲ್ಲ. ಬೆಳಿಗ್ಗೆ ಚಪಾತಿ, ರಾತ್ರಿ ಉಪ್ಪಿಟ್ಟು ಕಟ್ಟಿಟ್ಟ 'ಬುತ್ತಿ'!
ಏನ್ಮಾಡ್ತೀರಾ? ಅಕ್ಕಪಕ್ಕದ ಮನೆಯಿಂದ ಘಮ್ಮನೆ ಮಸಾಲೆ ದೋಸೆ ಹುಯ್ದಿದ್ದೋ, ಮತ್ಯಾವ್ದೋ ತಿಂಡಿಗೆ ಒಗ್ಗರಣೆ ಹಾಕಿದ್ದೋ ವಾಸನೆ ಬಂದ್ರೆ ಸಾಕು ಮೂಗಲ್ಲ ಬಾಯಿ ಚಟಪಟ ಮಾಡಲು ಪ್ರಾರಂಭಿಸುತ್ತದೆ, ಹೆಚ್ಚಾಗಿ ಏಕಾದಶಿಯಂದೇ. ಮನೇಲಿ ಏನು ತಿನ್ನಬಾರದೆಂದು ಕಟ್ಟುನಿಟ್ಟು ಮಾಡಿರುತ್ತಾರೋ ಅದನ್ನೇ ತಿನ್ನಬೇಕೆಂಬ ಹಪಾಹಪಿ ಶುರುವಾಗುತ್ತದೆ. ಕದ್ದುಮುಚ್ಚಿ ತಿಂದು ಸಿಗ್ಹಾಕ್ಕೊಂಡ್ರಂತೂ ಮುಗಿದೇ ಹೋಯ್ತು. ಸುಮ್ಮನೆ ಯಾಕೆ ಮನೆಯವರಿಗೆಲ್ಲಾ ಬೇಜಾರೆಂದು ಪಾಲಿಗೆ ಬಂದದ್ದು ಪಂಚಾಮೃತ ಅಂತ ಇಂಥ ಏಕಾದಶಿಗಳಿಗೆ ಒಗ್ಗಿಕೊಂಡಿದ್ದೇನೆ.
ಆದ್ರೆ, ಕಂಡಿಷನ್ನೂ ಹಾಕಿದ್ದೇನೆ. ಅದೇನೆಂದ್ರೆ - ಬೆಳಿಗ್ಗೆ ಚಪಾತಿ, ರಾತ್ರಿ ಉಪ್ಪಿಟ್ಟು ಆಗಲೇಬಾರದು, ವೈಸ್ ವರ್ಸಾ ಕೂಡ. ರಾತ್ರಿ ಮೊಸರವಲಕ್ಕಿ, ಬೆಲ್ಲ ಹೆರೆದು ಹಾಲಿನಲ್ಲಿ ಮಿಕ್ಸ್ ಮಾಡಿದ ರುಚಿಕಟ್ಟಾದ ಅವಲಕ್ಕಿಯಾದರೂ ಪರವಾಗಿಲ್ಲ ಉಪ್ಪಿಟ್ಟು ಮಾತ್ರ ಆಗಲೇಬಾರದು. ನಮ್ಮನೇಲಿ ಮೊದಲಿನಿಂದಲೂ ಎರಡು ಬಗೆಯ ತಿಂಡಿ ಏಕಾದಶಿಯ ಬೆಳಿಗ್ಗೆ ಆಗಲೇಬೇಕು. ಒಂದು, ನಮ್ಮಂಥ ಹುಡುಗರಿಗೆ ಒಗ್ಗರಣೆ ಅವಲಕ್ಕಿ ಮತ್ತು ದೊಡ್ಡವರಿಗೆಲ್ಲ ಸಾಬುದಾಣಿ ಖಿಚಡಿ. ಮೊದಲಿನಿಂದಲೂ ಅಷ್ಟೇ, ಸಾಬೂದಾಣಿ ಖಿಚಡಿಯೆಂದರೆ ಅಷ್ಟಕ್ಕಷ್ಟೇ. ಅವರು ಆ ತಿಂಡಿಯನ್ನು ಖಿಚಡಿ ಅಂತ ಕರೀತಿದ್ದುದಕ್ಕೋ, ಮನೆಯಲ್ಲಿ ಮಾಡುತ್ತಿದ್ದ ರೀತಿಗೋ ಬಾಯಿರುಚಿ ನೋಡಿ ಅವಲಕ್ಕಿಗೆ ಬಾಯಿಹಾಕುತ್ತಿದ್ದೆ. ಆದರೆ, ಇತ್ತೀಚೆಗೆ ಸಾಬೂದಾಣಿ ಖಿಚಡಿ ಭಾರೀ ಇಷ್ಟವಾಗಲು ಪ್ರಾರಂಭವಾಗಿದೆ. ಉಪ್ಪಿಟ್ಟು ಅವಾಯ್ಡ್ ಮಾಡಿದ ಹಾಗೂ ಆಯಿತು ಬಾಯಿರುಚಿಗೆ ವೆರೈಟಿ ಸಿಕ್ಕಹಾಗೂ ಆಯಿತು.
ಆರೋಗ್ಯದ ವಿಷಯಕ್ಕೆ ಬಂದರೆ, ರವೆ ಉಪ್ಪಿಟ್ಟಿಗಿಂತ ಸಾಬೂದಾಣಿ ಖಿಚಡಿ ಅಥವಾ ಸಾಬೂದಾಣಿ ಉಪ್ಪಿಟ್ಟು ಎಷ್ಟೋ ಪಾಲು ಉತ್ತಮ. ಖಾಯಿಲೆ ಬಂದಾಗಲೆಲ್ಲ ಸಾಬೂದಾಣಿ ಗಂಜಿ ಮಾಡಿ ಕುಡಿದಿರಬಹುದು. ಹಾಗಂತ, ಸಾಬೂದಾಣಿ ಖಿಚಡಿ ಖಾಯಿಲೆ ಬಂದವರಿಗೆ ಮಾಡುವಂಥದ್ದೇನಲ್ಲ. ಇದನ್ನು ಯಾರು ಬೇಕಾದರೂ ತಿನ್ನಬಹುದು. ಒಂದು ಸಾರಿ ಹೊಟ್ಟೆಗೆ ಬಿದ್ದರಂತೂ ಮುಗಿಯಿತು ರಾತ್ರಿ ತನಕ ಹೊಟ್ಟೆ ಬೇರೇನನ್ನೂ ಕೇಳುವುದಿಲ್ಲ. ಮಾಡುವ ರೀತಿ ಮಾತ್ರ ಪರ್ಫೆಕ್ಟಾಗಿರಬೇಕು. ಹೀಗಿದೆ ನೋಡಿ ಖಿಚಡಿ ಮಾಡುವ ರೀತಿ.
ಬೇಕಾಗುವ ಸಾಮಗ್ರಿಗಳು:
1) ಸಾಬೂದಾಣಿ ಅಲಿಯಾಸ್ ಸಾಬೂದಾಣಾ ಅಲಿಯಾಸ್ ಸಬ್ಬಕ್ಕಿ ಒಬ್ಬರಿಗೊಂದು ಮುಟ್ಟಿಗೆಯಷ್ಟು
2) ಹಸಿಮಣಸಿನಕಾಯಿ, ಕೊತ್ತಂಬರಿ, ತುರಿದ ಹಸಿ ಕೊಬ್ಬರಿ, ಹಸಿ ಶುಂಠಿ
3) ಸಣ್ಣಗೆ ಹೆಚ್ಚಿಕೊಂಡ ಆಲೂಗೆಡ್ಡೆ ಅಥವಾ ಗಜ್ಜರಿ ಅಥವಾ ಎರಡೂ
4) ಶೇಂಗಾ ಪುಡಿ ಅರ್ಥಾತ್ ಕಡಲೆಕಾಯಿ ಪುಡಿ
ಮಾಡುವ ವಿಧಾನ:
ಇದು ದಿಢೀರ್ ಅಂತ ಮಾಡುವ ತಿಂಡಿಯಲ್ಲ. ಮಾಡಿ ಮುಗಿಸಿ ಬಾಯಿಗೆ ಇಟ್ಟುಕೊಳ್ಳುವರೆಗೆ ಸ್ವಲ್ಪ ತಾಳ್ಮೆ ಬೇಕು. ಖಿಚಡಿ ಮಾಡುವ ಒಂದು ಗಂಟೆ ಮೊದಲು ಸಾಬೂದಾಣಿಯನ್ನು ನೀರಿನಲ್ಲಿ ನೆನೆಸಿ ಇಡಬೇಕು. ಇದು ತುಂಬಾ ಅಗತ್ಯ. ಮುಂದಿನದೆಲ್ಲ ಒಗ್ಗರಣೆ ಅವಲಕ್ಕಿ ಮಾಡುವ ವಿಧಾನವೇ. ಒಗ್ಗರೆಣೆಗೆ ಹೆಚ್ಚಿಟ್ಟುಕೊಂಡ ಹಸಿಮಣಸಿನಕಾಯಿ, ಹಸಿ ಶುಂಠಿ, ಆಲೂಗೆಡ್ಡೆ, ಗಜ್ಜರಿ (ಕ್ಯಾರೆಟ್) ಹಾಕಿ ಚೆನ್ನಾಗಿ ತಾಳಿಸಿಕೊಳ್ಳಬೇಕು. ನಂತರ ನೆನೆಸಿಟ್ಟ ಸಾಬೂದಾಣಿಯನ್ನು ಒಗ್ಗರೆಣೆಗೆ ಹಾಕಿ ಚೆನ್ನಾಗಿ ಬೇಯಿಸಬೇಕು. ಅದಕ್ಕೆ ಶೇಂಗಾ ಪುಡಿ ಉದುರಿಸುತ್ತಲೇ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಾಡಿಸಬೇಕು. ಅಲ್ಲಿಗೆ ಸಾಬೂದಾಣಿ ಖಿಚಡಿ ತೈಯಾರ್. ನಿಂಬೆಹಣ್ಣು ಹಿಂಡಿ ಹತ್ತು ನಿಮಿಷ ಹಾಗೇ ಮುಚ್ಚಳ ಮುಚ್ಚಿಟ್ಟು ನಂತರ ತಿನ್ನುವ ಮೊದಲು ಅದರ ಮೇಲೆ ಹಸಿ ಕಾಯಿತುರಿ ಮತ್ತು ಕೊತ್ತಂಬರಿ ಹಾಕಿ ಸವಿಯಬಹುದು.



Click it and Unblock the Notifications