Just In
- 11 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 12 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
- 12 hrs ago ದಿನ ಭವಿಷ್ಯ: ಈ ದಿನ 12 ರಾಶಿಗಳಲ್ಲಿ ಈ ರಾಶಿಗಳಿಗೆ ಅದ್ಭುತ ದಿನ
- 14 hrs ago ಗುರು ಸಂಚಾರ 2024: ಮೇ ರಿಂದ 12 ತಿಂಗಳು ಧನು ರಾಶಿಯವರು ಖರ್ಚು ಬಗ್ಗೆ ಜಾಗ್ರತೆ, ಇನ್ನು ಹೇಗೆಲ್ಲಾ ಪ್ರಭಾವ ಬೀರಲಿದೆ?
Don't Miss
- News China Floods: ಚೀನಾದಲ್ಲಿ ಭೀಕರ ಪ್ರವಾಹ- ಮಳೆಗೆ ಬೆದರಿದ ಡ್ರ್ಯಾಗನ್
- Finance ಬೆಂಗಳೂರಿನಲ್ಲಿ ಈ ಜಾಗದಲ್ಲಿ ಸೈಟು ಖರೀದಿಸಬೇಡಿ: BDAಯಿಂದ 279 ಅಕ್ರಮ ಬಡಾವಣೆ ಪತ್ತೆ
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Automobiles ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- Movies ಈ ಬಾಲಿವುಡ್ ನಟ-ನಟಿಯರು ಭಾರತದಲ್ಲಿ ಯಾಕೆ ಮತ ಚಲಾಯಿಸಲ್ಲ; ಕಾರಣವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗರ್ಭಾವಸ್ಥೆಯಲ್ಲಿ ಕಂದು ರಕ್ತ ಸ್ರಾವದಿಂದ ಅಪಾಯವಿದೆಯೇ?
ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಕೆಲವೊಮ್ಮೆ ರಕ್ತ ಸ್ರಾವಗಳು ಕಾಣಬರುವುದು ಸಾಮಾನ್ಯವಾಗಿದೆ. ಸುಮಾರು ಎರಡನೆಯ ತ್ರೈಮಾಸಿಕದ ಬಳಿಕ ಕೆಲವೊಮ್ಮೆ ಕಂದು (ಬ್ರೌನ್) ಬಣ್ಣದ ಸ್ರಾವ ಕಂಡುಬರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಇದು ಹಳೆಯ ರಕ್ತ ಸಹಜಸ್ರಾವದೊಂದಿಗೆ ಮಿಶ್ರಣಗೊಂಡಾಗ ಒದಗುವ ಬಣ್ಣವಾಗಿದೆ. ಈ ರಕ್ತ ಗರ್ಭಾಶಯದ ಬೆಳವಣಿಗೆಯ ಹಂತದಲ್ಲಿ ಸ್ರವಿಸಿರುವ ರಕ್ತವಾಗಿರಬಹುದು ಅಥವಾ ಗರ್ಭಕಂಠದ ಬಳಿ ಸ್ರವಿಸಿರುವ ರಕ್ತವೂ ಆಗಿರಬಹುದು. ಹಿಂದಿನ ದಿನಗಳಲ್ಲಿ ಸ್ರವಿಸಿದ್ದ ಈ ರಕ್ತ ಆಗ ಸ್ರವಿಸದೇ ಕೆಲದಿನಗಳ ಬಳಿಕ ಸ್ರವಿಸಿರುವ ಕಾರಣದಿಂದ ಕಂದು ಬಣ್ಣ ಪಡೆದಿರಬಹುದು. ಆದರೂ, ಯಾವುದಕ್ಕೂ ವೈದ್ಯರಿಗೆ ತೋರಿಸಿ ಸಲಹೆ ಪಡೆಯುವುದು ಒಳ್ಳೆಯದು. ಈ ಬಗ್ಗೆ ಇನ್ನಷ್ಟು ಅಮೂಲ್ಯ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಗರ್ಭಾವಸ್ಥೆಯಲ್ಲಿ ಎದುರಾಗುವ ಕಂದುಸ್ರಾವಕ್ಕೆ ಕಾರಣಗಳೇನು?
ಇದು ಕೆಲವೊಮ್ಮೆ ಗರ್ಭವತಿಯ ದೇಹದಲ್ಲಿ ಇದುವರೆಗೆ ವ್ಯಕ್ತವಾಗದ ಸ್ಥಿತಿಯ ಕಾರಣದಿಂದಾಗಿ ಎದುರಾಗುವ ನೈಸರ್ಗಿಕ ಬದಲಾವಣೆಯ ಮೂಲಕ ಕಾಣಿಸಿಕೊಳ್ಳಬಹುದು.
ನೈಸರ್ಗಿಕ ಕಾರಣಗಳು
ಗರ್ಭಕಂಠದ ಜೀವಕೋಶಗಳಲ್ಲಿ ಬದಲಾವಣೆ: ಗರ್ಭಾವಸ್ಥೆಯಲ್ಲಿ ಗರ್ಭಕಂಠದ ಜೀವಕೋಶಗಳೂ ರಸದೂತಗಳ ಪ್ರಭಾವದಿಂದ ಹಲವಾರು ಬದಲಾವಣೆಗೆ ಒಳಪಡುತ್ತವೆ. ಈ ಸಮಯದಲ್ಲಿ ಇವು ತೀರಾ ಸೂಕ್ಷ್ಮಸಂವೇದಿ ಮತ್ತು ನಾಜೂಕಾಗುತ್ತವೆ. ಈ ಭಾಗದಲ್ಲಿ ಲೈಂಗಿಕ ಘರ್ಷಣೆ ಅಥವಾ ವೈದ್ಯಕೀಯ ತಪಾಸಣೆಗಾಗಿ ಬಳಸುವ ಉಪಕರಣಗಳ ತಗಲುವಿಕೆಯಿಂದ ಈ ಭಾಗ ಉರಿಯೂತಕ್ಕೆ ಒಳಗಾಗಬಹುದು ಹಾಗೂ ನಸು ಕಂದು ಬಣ್ಣದ ಸ್ರಾವಕ್ಕೆ ಕಾರಣವಾಗಬಹುದು.
ಅಳವಡಿಕೆ: ಒಂದು ವೇಳೆ ಗರ್ಭಾವಸ್ಥೆಯ ಪ್ರಾರಂಭದ ದಿನಗಳಲ್ಲಿ ಇದು ಕಾಣಿಸಿಕೊಂಡರೆ, ವಿಶೇಷವಾಗಿ ಗರ್ಭಧಾರಣೆಯಾದ ಒಂಭತ್ತನೆಯ ದಿನಗಳ ಆಸುಪಾಸಿನಲ್ಲಿ ಕಾಣಿಸಿಕೊಂಡರೆ ಇದು ಗರ್ಭಕೋಶದಲ್ಲಿ ಭ್ರೂಣದ ಅಳವಡಿಕೆಯ ಲಕ್ಷಣವೆಂದು ಪರಿಗಣಿಸಬಹುದು. ಸಾಮಾನ್ಯವಾಗಿ ಇದು ಆರರಿಂದ ಹನ್ನೆರಡು ದಿನಗಳವರೆಗೆ ಯಾವುದೇ ದಿನ ಕಾಣಿಸಿಕೊಳ್ಳಬಹುದು. ಫಲಿತಗೊಂಡ ಅಂಡಾಣು ಈಗ ಗರ್ಭಕೋಶದ ಒಳಪದರದ ಮಾಸುವಿನಲ್ಲಿ (ಪ್ಲಾಸೆಂಟಾ) ಹುದುಗಿ ಕುಳಿತುಕೊಳ್ಳುತ್ತದೆ. ಈ ಹಂತದಲ್ಲಿ ಕೊಂಚ ಪ್ರಮಾಣದ ರಕ್ತಸ್ರಾವವೂ ಎದುರಾಗಬಹುದು. ಕೆಲವು ದಿನಗಳ ಬಳಿಕ ಈ ಬಣ್ಣ ನಿಧಾನವಾಗಿ ಕಂದುಬಣ್ಣಕ್ಕೆ ತಿರುಗುತ್ತದೆ.
ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆ
ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆಯೇ ಲೋಳೆಲೋಳೆಯಾದ ಸ್ರಾವ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಗರ್ಭಕಂಠದ ಬಳಿ ಉಂಟಾಗಿದ್ದ ಸ್ನಿಗ್ಧ ದ್ರವ ಮತ್ತು ಸತ್ತ ಜೀವಕೋಶಗಳ ಮಿಶ್ರಣವಾಗಿದೆ. ಗರ್ಭಾವಸ್ಥೆ ಪ್ರಾರಂಭವಾದ ದಿನದಿಂದಲೂ ಈ ಸ್ನಿಗ್ಧ ದ್ರವ ಗರ್ಭಕಂಠವನ್ನು ಮುಚ್ಚಿರುತ್ತದೆ ಹಾಗೂ ಈ ಮೂಲಕ ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಸ್ಸು ಗರ್ಭಕೋಶದೊಳಗೆ ಬರದಂತೆ ತಡೆಯುತ್ತದೆ. ಇದೇ ಕಾರಣಕ್ಕೆ, ಈಗ ತಾನೇ ಹುಟ್ಟಿದ ಮಗು ಯಾವುದೇ ಸೋಂಕು ತಗಲದ ಅತಿ ಶುಭ್ರ ಜೀವಿಯಾಗಿದೆ. ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆಯೇ ಗರ್ಭಕಂಠ ಶಿಥಿಲವಾಗತೊಡಗುತ್ತದೆ ಹಾಗೂ ಇದುವರೆಗೆ ಇದನ್ನು ಮುಚ್ಚಿದ್ದ ಈ ಸ್ನಿಗ್ಧ ದ್ರವದ ಮುಚ್ಚಳ ಈಗ ತೆರೆಯಲ್ಪಟ್ಟು ಕರಗಿ ಗಾಢ ಕಂದು ಅಥವಾ ಗಾಢ ಕೆಂಪು ಬಣ್ಣದ ಸ್ರಾವದ ರೂಪದಲ್ಲಿ ಹೊರಹೋಗುತ್ತದೆ. ವಾಸ್ತವವಾಗಿ ಇದು ಹೆರಿಗೆಯ ದಿನ ಹತ್ತಿರ ಬಂದಿದೆ ಎಂದು ಸೂಚಿಸುವ ಸೂಚನೆಯಾಗಿದ್ದು ವೈದ್ಯರು ಈ ಮೂಲಕ ಹೆರಿಗೆಯ ನಿಖರ ದಿನಾಂಕವನ್ನು ತಿಳಿಸಬಲ್ಲರು.
ಈ ಸ್ಥಿತಿ ಎದುರಾದರೆ ವೈದ್ಯರ ಬಳಿ ಯಾವಾಗ ತೆರಳಬೇಕು?
ಗರ್ಭಪಾತದ ಸಾಧ್ಯತೆ: ಮೊದಲ ಕೆಲವು ವಾರಗಳಲ್ಲಿ ಅಲ್ಪ ಪ್ರಮಾಣದ ಕಂದು ಸ್ರಾವ ಸಾಮಾನ್ಯವಾಗಿದೆ. ಇದು ಖೋರಿಯಾನ್ (chorion) ಅಥವಾ ಭ್ರೂಣವನ್ನು ಸುತ್ತುವರೆದಿರುವ ಪದರಗಳಲ್ಲಿ ಅತಿ ಕೊನೆಯ ಪದರದಲ್ಲಿ ಎದುರಾಗಿರುವ ಸ್ರಾವದಿಂದ ಕಂಡುಬರುತ್ತದೆ. ಕೆಲವೊಮ್ಮೆ ಕಂದು ಸ್ರಾವ ಗರ್ಭಪಾತದ ಸೂಚನೆಯಾಗಿರಬಹುದು. ಹಾಗಾಗಿ, ಯಾವುದೇ ಪ್ರಮಾಣದಲ್ಲಿ ಕಂದು ಸ್ರಾವ ಎದುರಾಗಲಿ, ವೈದ್ಯರಲ್ಲಿ ಸಲಹೆ ಪಡೆಯುವುದು ಅಗತ್ಯವಾಗಿದೆ. ಒಂದು ವೇಳೆ ಈ ಸ್ರಾವದ ಜೊತೆಗೆ ಹೊಟ್ಟೆನೋವು ಅಥವಾ ಸೆಡೆತ ಕಂಡುಬಂದರೆ ತಡಮಾಡದೇ ವೈದ್ಯರ ಬಳಿ ತೆರಳಬೇಕು.
ಭ್ರೂಣದ ಸಾವು (Missed abortion)
ಒಂದು ವೇಳೆ ಭ್ರೂಣ ಬೆಳವಣಿಗೆ ಪಡೆಯದೇ ಗರ್ಭಕೋಶದ ಒಳಗೇ ಸಾವನ್ನಪ್ಪಿದ್ದರೆ, ಗರ್ಭಾವಸ್ಥೆಯ ಬೆಳವಣಿಗೆಗಳು ನಿಂತು ಹೋಗುತ್ತವೆ. ಆದರೆ ಇದು ಹೊರಗೆ ಬಾರದೇ ಕೆಲ ಸಮಯ ಗರ್ಭಕೋಶದಲ್ಲಿಯೇ ಇರುತ್ತದೆ. ಅಲ್ಲಿಯವರೆಗೂ ಕಂದು ಬಣ್ಣದ ಸ್ರಾವ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಗರ್ಭದಲ್ಲಿರುವ ಭ್ರೂಣ ಸತ್ತಿರುವ ಸೂಚನೆಯಾಗಿಯೂ ಈ ಸ್ರಾವ ಕಂಡುಬರಬಹುದು.
ಗೊಂಚಲ ಗರ್ಭ (Molar pregnancy)
ಕೆಲವು ಕ್ರೋಮೋಸೋಮ್ ಗಳ ಅಸಮತೋಲನದ ಕಾರಣದಿಂದ ಗರ್ಭಾವಸ್ಥೆ ಎದುರಾಗಿದ್ದರೆ ಇದರಿಂದಾಗಿ ಗರ್ಭಕೋಶದ ಮಾಸು ಅಥವಾ ಪ್ಲಾಸೆಂಟಾದ ಒಳಪದರದಲ್ಲಿ ಅತಿ ಹೆಚ್ಚಿನ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ (trophoblastic epithelium of the placenta). ಇದು ನೋಡಲಿಕ್ಕೆ ದ್ರಾಕ್ಷಿಗೊಂಚಲಿನಂತಿರುತ್ತದೆ. ಪರಿಣಾಮವಾಗಿ ತಾಜಾ ರಕ್ತಸ್ರಾವ ಮತ್ತು ಆಗಾಗ ಕಂದು ಸ್ರಾವವಾಗುತ್ತಾ ಇರುತ್ತದೆ. ಈ ಸ್ಥಿತಿ ಎದುರಾಗಿದ್ದರೆ ವೈದ್ಯಕೀಯ ನೆರವು ಪಡೆಯುವುದು ಅಗತ್ಯವಾಗಿದೆ.
ಗರ್ಭಕೋಶದ ಹೊರಗೆ ಆಶ್ರಯ ಪಡೆಯುವ ಅಂಡಾಣು (Ectopic pregnancy)
ಅಂಡಾಣು ವೀರ್ಯಾಣುಗಳ ಮಿಲನ ಗರ್ಭನಾಳದಲ್ಲಿ ನಡೆದು ಫಲಿತಗೊಂಡ ಅಂಡಾಣು ಬಳಿಕ ಗರ್ಭಕೋಶದೊಳಗೆ ಸಾಗಿ ಒಳಪದರದಲ್ಲಿ ಹುದುಗಿಕೊಳ್ಳಬೇಕು. ಇದು ಸಾಮಾನ್ಯವಾದ ಕ್ರಮ. ಆದರೆ ಒಂದು ವೇಳೆ ಫಲಿತ ಅಂಡಾಣು ಗರ್ಭಕೋಶದ ಒಳಹೋಗಲು ವಿಫಲವಾಗಿ ಹೊರಗೇ ಉಳಿದುಕೊಂಡರೆ, ಅಂದರೆ ಫೆಲೋಪ್ಪಿಯನ್ ನಾಳ ಅಥವಾ ಹೊಟ್ಟೆಯ ಇತರ ಭಾಗದಲ್ಲಿ ಉಳಿದುಕೊಂಡರೆ, ಗರ್ಭಕೋಶಕ್ಕೆ ಅಂಡಾಣುವಿಲ್ಲದೇ ಇತರ ಕೆಲಸಗಳನ್ನು ಮಾಡುವಂತೆ ರಸದೂತಗಳು ನೀಡುವ ಸೂಚನೆಯಿಂದಾಗಿ ಖಾಲಿಯಿದ್ದೇ ಇದಕ್ಕೆ ಸ್ಪಂದಿಸಬೇಕಾಗುತ್ತದೆ. ಪರಿಣಾಮವಾಗಿ ಮಧ್ಯಮ ಪ್ರಮಾಣದಿಂದ ಅತಿ ಹೆಚ್ಚು ಪ್ರಮಾಣದ ರಕ್ತಸ್ರಾವ ಎದುರಾಗುತ್ತದೆ.
ಮಾಸುವಿನ ಏರುಪೇರುಗಳು: ಗರ್ಭಾಶಯದ ಒಳಪದರವಾದ ಮಾಸು ಅಥವಾ ಪ್ಪಾಸೆಂಟಾ ಅತಿ ವಿಶಿಷ್ಟವಾದ ಪದರವಾಗಿದ್ದು ಗರ್ಭಾವಸ್ಥೆಯ ಎಲ್ಲಾ ಹಂತಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲ, ಹೆರಿಗೆಯ ಬಳಿಕ ಇದು ಸಹಾ ಕಳಚಿಕೊಂಡು ದೇಹದಿಂದ ವಿಸರ್ಜನೆಗೊಳ್ಳುತ್ತದೆ. ಒಂದು ವೇಳೆ ಈ ಮಾಸು ಗರ್ಭಕಂಠದ ತೆರೆದ ಭಾಗವನ್ನು ಮುಚ್ಚುವಷ್ಟು ಒಳಗಿನಿಂದ ಬೆಳೆದರೆ ಈ ದಾರಿಯನ್ನೇ ಮುಚ್ಚಿಬಿಡುತ್ತದೆ. ಈ ಸ್ಥಿತಿಗೆ placenta previa ಎನ್ನುತ್ತಾರೆ. ಒಂದು ವೇಳೆ ಇದು ಹೆರಿಗೆಯಾಗುವ ಮುನ್ನವೇ ಗರ್ಭಕೋಶದ ಒಳಪದರದಿಂದ ಕಳಚಿಕೊಂಡರೆ (ಇದಕ್ಕೆ placental abruption ಎಂದು ಕರೆಯುತ್ತಾರೆ) ಕಂದುಬಣ್ಣದ ಸ್ರಾವ ಎದುರಾಗಬಹುದು. ಇವೆರಡೂ ಸ್ಥಿತಿಗಳು ಗಂಭೀರ ಸ್ಥಿತಿಗಳಾಗಿದ್ದು ಸಾಮಾನ್ಯದಿಂದ ಭಾರೀ ಪ್ರಮಾಣದ ಸ್ರಾವ ಎದುರಾಗಬಹುದು. ಈ ಸ್ಥಿತಿಗಳಿಗೆ ತುರ್ತಾದ ವೈದ್ಯಕೀಯ ನೆರವಿನ ಅಗತ್ಯವಿದೆ.
ಲೈಂಗಿಕವಾಗಿ ಹರಡುವ ರೋಗಗಳು: ಒಂದು ವೇಳೆ ಯೋನಿಯ ಒಳಭಾಗ ಅಥವಾ ಗರ್ಭಕಂಠದಲ್ಲಿ ಸೋಂಕು ಎದುರಾದರೆ ಇದರಿಂದಲೂ ಕಂದು ಬಣ್ಣದ ಸ್ರಾವ ಕಾಣಿಸಿಕೊಳ್ಳಬಹುದು. ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾ ಅಥವಾ ವೈರಸ್ಸುಗಳನ್ನು ಆಧರಿಸಿ ಒಳಭಾಗದಲ್ಲಿ ಬೆಂಕಿ ಬಿದ್ದಂತೆ ಉರಿಯುವುದು, ಯೋನಿಭಾಗದಲ್ಲಿ ಕೆಟ್ಟ ವಾಸನೆ ಮತ್ತು ಅಸಾಧ್ಯ ತುರಿಕೆ ಎದುರಾಗುತ್ತದೆ.
ಸಾಮಾನ್ಯವಾಗಿ ಸಹಜ ಸ್ರಾವವನ್ನು ನಿರೀಕ್ಷಿಸುತ್ತಿದ್ದ ಗರ್ಭಿಣಿಗೆ ಏಕಾಏಕಿ ಕಂದು ಸ್ರಾವ ಎದುರಾದರೆ ಆತಂಕ ಎದುರಾಗುವುದು ಸಾಮಾನ್ಯ. ಇದು ಗರ್ಭಾಪಾತ ಅಥವಾ ಗರ್ಭಾವಸ್ಥೆಯಲ್ಲಿನ ಇತರ ತೊಂದರೆಗಳ ಸೂಚನೆಯೂ ಆಗಿರಬಹುದು. ಆದರೆ ಏಕಾಏಕಿ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಒಳಗಾಗುವಷ್ಟೇನೂ ಈ ತೊಂದರೆ ಗಂಭೀರವಲ್ಲ. ಹಾಗಾಗಿ ಈ ಸ್ಥಿತಿ ಎದುರಾದರೆ ಗಾಬರಿ ಬೀಳದಿರಿ ಅಥವಾ ನೀವಾಗಿಯೇ ಯಾವುದೇ ನಿರ್ಣಯಕ್ಕೆ ಬರದಿರಿ. ಬದಲಿಗೆ ಆದಷ್ಟೂ ಬೇಗನೇ ವೈದ್ಯರ ಬಳಿ ತೆರಳಿ ಸೂಕ್ತ ಪರೀಕ್ಷೆಗಳ ಮೂಲಕ ಈ ಸ್ಥಿತಿಗೆ ಏನು ಕಾರಣ ಎಂದು ತಿಳಿದುಕೊಳ್ಳಿ. ಸರಿಯಾದ ಕಾರಣ ತಿಳಿದ ಬಳಿಕ ಇದಕ್ಕೆ ಪರಿಹಾರ ಮತ್ತು ಸೂಕ್ತ ಚಿಕಿತ್ಸೆಯನ್ನು ವೈದ್ಯರೇ ಸೂಚಿಸುತ್ತಾರೆ. ಈ ಚಿಕಿತ್ಸೆಗಳನ್ನು ಸರಿಯಾಗಿ ಅನುಸರಿಸುವ ಮೂಲಕ ಈ ಸ್ರಾವ ಇಲ್ಲವಾಗುವುದರ ಜೊತೆಗೇ ಗರ್ಭಾವಸ್ಥೆಯನ್ನು ದುಗುಡ ದುಮ್ಮಾನವಿಲ್ಲದೇ ಕಳೆಯಬಹುದು.