Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ಕಲ್ಲಂಗಡಿ: ಗರ್ಭಿಣಿಯರ ಆರೋಗ್ಯಕ್ಕೆ ಪರ್ಫೆಕ್ಟ್ ಹಣ್ಣು
ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಿಯಾಗುವ ಸ್ತ್ರೀಗೆ ಒಂದೆಡೆ ಪುಟ್ಟ ಕಂದಮ್ಮನ ಆಗಮನದ ಸಂತಸ ಒಂದೆಡೆಯಾದರೆ ಇನ್ನೊಂದೆಡೆ ತಾವು ತಿನ್ನುವ ಆಹಾರ ಮಗುವಿಗೇನಾದರೂ ಹಾನಿ ಮಾಡಿದರೆ ಎಂಬ ಭಯ, ಈ ಸಮಯದಲ್ಲಿ ಸಿಕ್ಕ ಸಿಕ್ಕದ್ದನ್ನೆಲ್ಲಾ ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಎಂಬ ಹಿರಿಯರ ಹಿತೋಪದೇಶದ ಜೊತೆಗೆ ದೇಹದ ಆರೈಕೆಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ, ಸುಸ್ತು ಬಳಲಿಕೆ ದೇಹವನ್ನು ಹಿಂಡುತ್ತಿರುತ್ತದೆ. ಗರ್ಭಿಣಿಯರಿಗೆ ಆಹಾರದ ಮೇಲಿನ ಒಲವು ಈ ಸಂದರ್ಭದಲ್ಲಿ ಅಧಿಕವಾಗಿದ್ದರೂ ತುಸು ಹೊತ್ತಿನಲ್ಲೇ ತಿಂದದ್ದೆಲ್ಲಾ ವಾಂತಿಯಾಗಿ ಪುನಃ ಹಸಿವು ಕಾಣಿಸಿಕೊಳ್ಳುತ್ತದೆ.
ಬೇರೆ ಕಾಲಗಳಲ್ಲಿ ತಿನ್ನುವಿಕೆಯ ಮೇಲೆ ನಾವು ಅಷ್ಟೊಂದು ಗಮನ ನೀಡದೇ ಇದ್ದರೂ ಬೇಸಿಗೆಯಲ್ಲಿ ಮಾತ್ರವೇ ಆಹಾರಕ್ಕಿಂತ ಕುಡಿಯುವಿಕೆಯ ಮೇಲೆಯೇ ನಮ್ಮ ಗಮನ ಕೇಂದ್ರೀಕೃತವಾಗಿರುತ್ತದೆ. ಗಂಟೆ ಗಂಟೆಗೊಮ್ಮೆ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತಿರುತ್ತದೆ. ಅದಕ್ಕೆ ನೀರೆಂಬ ಇಂಧವನ್ನು ನಾವು ಪೂರೈಸಲೇಬೇಕಾಗುತ್ತದೆ. ಗರ್ಭಿಣಿ ಸ್ತ್ರೀಯರು ಈ ಸಮಯದಲ್ಲಿ ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿಗಳ ಸೇವನೆಯನ್ನು ಮಾಡಬೇಕಾಗುತ್ತದೆ.
ನೀರಿನಂಶ ಅಧಿಕವಾಗಿರುವ ಹಣ್ಣು ಅಂದಾಗ ಥಟ್ಟನೇ ನೆನಪಾಗುವುದೇ ಕಲ್ಲಂಗಡಿ. ಬಾಯಾರಿಕೆಯನ್ನು ನಿವಾರಣೆ ಮಾಡುವುದರ ಜೊತೆಗೆ ತೂಕ ಇಳಿಕೆಯಲ್ಲೂ ಕಲ್ಲಂಗಡಿ ಅದ್ಭುತ ಕೊಡುಗೆಯನ್ನು ನೀಡುತ್ತದೆ. ಗರ್ಭಿಣಿಯರು ಈ ಹಣ್ಣನ್ನು ಸೇವಿಸಬಹುದೇ ಎಂಬ ಸಂದೇಹವಿದ್ದಲ್ಲಿ ಖಂಡಿತ ಸೇವಿಸಬಹುದು ಎಂದೇ ನಾವು ಸಲಹೆ ನೀಡುತ್ತೇವೆ. ಹಾಗಿದ್ದರೆ ಗರ್ಭಾವಸ್ಥೆಯಲ್ಲಿ ಕಲ್ಲಂಗಡಿ ಹಣ್ಣನ್ನು ಏಕೆ ಸೇವಿಸಬೇಕು ಎಂಬ ಪ್ರಶ್ನೆಗೆ ಉತ್ತರವನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ನಿಮಗೆ ಉತ್ತಮ ಶಕ್ತಿಯನ್ನು ನೀಡಿ ದಿನಪೂರ್ತಿ ಚಟುವಟಿಕೆಯಿಂದಿರಲು ಕಲ್ಲಂಗಡಿ ಸಹಕಾರಿಯಾಗಿದೆ. ಹಾಗಿದ್ದರೆ ಕೆಳಗಿನ ಸ್ಲೈಡರ್ಗಳಲ್ಲಿ ಮತ್ತಷ್ಟು ಮಾಹಿತಿಗಳನ್ನು ಅರಿಯೋಣ..

ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡುತ್ತದೆ
ಕಲ್ಲಂಗಡಿಯನ್ನು ಸೇವಿಸುವುದರಿಂದ ನಿರ್ಜಲೀಕರಣದ ಸಮಸ್ಯೆ ಎದುರಾಗುವುದನ್ನು ತಡೆಯಬಹುದು. ಏಕೆಂದರೆ ಈ ನಿರ್ಜಲೀಕರಣದ ಸಮಸ್ಯೆಯು ಗರ್ಭಾಶಯ ಮತ್ತು ಇನ್ನೂ ಬೆಳವಣಿಗೆಯಾಗದ ಮಗುವಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಅದಕ್ಕಾಗಿ ಕಲ್ಲಂಗಡಿಯನ್ನು ಸೇವಿಸಿದರೆ, ಅದರಿಂದ ಸ್ವಲ್ಪ ನೀರಿನಂಶ ಮತ್ತು ವಿಟಮಿನ್ಗಳು ನಿಮ್ಮ ದೇಹವನ್ನು ಸೇರಿ ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡಬಹುದು.

ವಿಟಮಿನ್ಗಳ ಆಗರ
ವಿಟಮಿನ್ ಎ ಮತ್ತು ಸಿ ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾಗಿದ್ದು ಇತರ ನ್ಯೂಟ್ರೀನ್ ಅಂಶಗಳನ್ನು ಇದು ಒಳಗೊಂಡಿದೆ. ತಾಯಿಗೆ ವಿಟಮಿನ್ ಅಗತ್ಯತೆ ಹೆಚ್ಚು ಬೇಕಾಗಿದ್ದು ಅದರ ಕೊರತೆಯನ್ನು ಕಲ್ಲಂಗಡಿ ಹಣ್ಣು ನೀಗಿಸುತ್ತದೆ. ಆದ್ದರಿಂದ ಕಲ್ಲಂಗಡಿ ಹಣ್ಣನ್ನು ದಿನಕ್ಕೆ ಮೂರು ಬಾರಿ ಅವರು ಸೇವಿಸುತ್ತಿರಬೇಕು.

ಟಾಕ್ಸಿನ್ ನಿವಾರಣೆ
ಬೇಸಿಗೆಯಲ್ಲಿ ಸ್ತ್ರೀಯರು ಕಲ್ಲಂಗಡಿ ಸೇವಿಸಲು ಹಲವಾರು ಕಾರಣಗಳಿವೆ. ಈ ಹಣ್ಣಿನಲ್ಲಿ ಹೇರಳವಾಗಿ ನೀರಿನ ಅಂಶ ಇರುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಇದು ಹೊರಹಾಕುತ್ತದೆ. ಗರ್ಭಿಣಿಯರಿಗೆ ಆಯಾಸವನ್ನು ನೀಗಿಸಲು ಕಲ್ಲಂಗಡಿ ಸಹಕಾರಿಯಾಗಿದೆ.

ಬೆಳಗಿನ ಮಂಕನ್ನು ನಿವಾರಿಸುತ್ತದೆ
ಗರ್ಭಿಣಿಯರಿಗೆ ಬೆಳಗ್ಗೆ ಎದ್ದ ಕೂಡಲೆ ಮಂಕು ಕವಿದಂತೆ ಇರುವುದು ಸಹಜ. ಜೊತೆಗೆ ಬೆಳಗ್ಗೆ ನಾಸಿಯಾ ಮತ್ತು ವಾಂತಿಯಂತಹ ಸಮಸ್ಯೆಗಳು ಸಹ ಅವರನ್ನು ಕಾಡುತ್ತವೆ. ಆದ್ದರಿಂದ ಬೆಳಗ್ಗೆ ಎದ್ದ ಕೂಡಲೆ ಒಂದು ಲೋಟ ತಾಜಾ ಕಲ್ಲಂಗಡಿ ಹಣ್ಣಿನ ರಸವನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಎದೆಯುರಿ ಶಮನ
ಗರ್ಭಾವಸ್ಥೆಯ ಸಂದರ್ಭದಲ್ಲಿ ಹೆಣ್ಣು ಸಾಕಷ್ಟು ಸಂಕಟಗಳನ್ನು ಅನುಭವಿಸುತ್ತಿರುತ್ತಾಳೆ. ಎದೆಯುರಿ ಈ ಸಂದರ್ಭದಲ್ಲಿ ಗರ್ಭಿಣಿಗೆ ಹೆಚ್ಚು ಕಾಣಿಸಿಕೊಳ್ಳುವ ಕಾಯಿಲೆಯಾಗಿದೆ. ಕಲ್ಲಂಗಡಿ ಹಣ್ಣಿನ ಸೇವನೆ ಈ ಸಮಸ್ಯೆಗೆ ಶೀಘ್ರ ಪರಿಹಾರ ಎಂದೆನಿಸಿದೆ.

ಸ್ನಾಯು ಸೆಳೆತಕ್ಕೆ ಪರಿಹಾರ
ಗರ್ಭಾವಸ್ಥೆಯಲ್ಲಿ ಕಂಡುಬರುವ ಇನ್ನೊಂದು ಸಮಸ್ಯೆಯಾಗಿದೆ ಸ್ನಾಯು ಸೆಳೆತ. ಕಲ್ಲಂಗಡಿಯು ತನ್ನಲ್ಲಿ ಹೇರಳವಾಗಿ ಪೊಟಾಶಿಯಮ್ ಮತ್ತು ಮ್ಯಾಗ್ನೇಶಿಯಮ್ ಅಂಶಗಳನ್ನು ಹೊಂದಿರುವುದರಿಂದ ಗರ್ಭಿಣಿಯರಿಗೆ ಮೂರನೇ ತ್ರೈಮಾಸಿಕದಲ್ಲಿ ಉಂಟಾಗುವ ಸ್ನಾಯು ಸೆಳೆತಕ್ಕೆ ಪರಿಹಾರವನ್ನು ನೀಡುತ್ತದೆ.

ಲಿಕೊಪಿನ್ ಕಲ್ಲಂಗಡಿಯಲ್ಲಿ ಹೇರಳವಾಗಿದೆ
ಬೇಸಿಗೆಯಲ್ಲಿ ಗರ್ಭಿಣಿಯರು ಕಲ್ಲಂಗಡಿ ಹಣ್ಣಿನ ಸೇವನೆ ಏಕೆ ಮಾಡಬೇಕು? ಬೆಳಗ್ಗಿನ ವಾಕರಿಕೆ ಮತ್ತು ಸುಸ್ತಿನಿಂದ ನಿಮಗೆ ಆರಾಮವನ್ನು ನೀಡುವ ಲಿಕೊಪೊನ್ ಅಂಶ ಕಲ್ಲಂಗಡಿಯಲ್ಲಿ ಹೇರಳವಾಗಿದೆ. ನಿಮಗೆ ಮತ್ತು ನಿಮ್ಮ ಮಗುವಿಗೆ ಉಂಟಾಗುವ ಹೆಚ್ಚು ರಕ್ತದೊತ್ತಡವನ್ನು ಲಿಕೊಪಿನ್ ದೂರಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಏಕೆ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು ಎಂಬ ಪ್ರಶ್ನೆಗೆ ಉತ್ತರ ದೊರಕಿದೆ ಅಲ್ಲವೇ? ಹಾಗಿದ್ದರೆ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಕಲ್ಲಂಗಡಿ ಸೇವನೆಯನ್ನು ಮಾಡಿ.



Click it and Unblock the Notifications











