Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ಈ ಒಂಬತ್ತು ಬಗೆಯ ದೈಹಿಕ ನೋವುಗಳನ್ನು ಕಡೆಗಣಿಸುವಂತೆಯೇ ಇಲ್ಲ!
ನಮ್ಮ ದೇಹದಲ್ಲಿ ಏನೋ ತೊಂದರೆ ಇದೆ ಎಂಬುದನ್ನು ಮೆದುಳಿಗೆ ಸೂಚಿಸುವ ಸಂಜ್ಞೆಯೇ ನೋವು. ಜೀವವಿರುವ ಎಲ್ಲಾ ಜೀವಿಗಳಿಗೂ ನೋವಿನ ಅನುಭವವಾಗುತ್ತದೆ. ನಮ್ಮೆಲ್ಲರಿಗೂ ಒಂದಲ್ಲಾ ಒಂದು ಬಗೆಯ ದೈಹಿಕ ನೋವು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಹೆಚ್ಚಿನವು ಅಚಾತುರ್ಯದ ಪೆಟ್ಟಿನಿಂದ ಆಗುವ ನೋವುಗಳು, ಬಾಗಿಲಲ್ಲಿ ಬೆರಳು ಸಿಲುಕುವುದು, ನಡೆಯುವಾಗ ಕಾಲ್ಬೆರಳು ಮೇಜಿನ ಕಾಲಿಗೆ ತಾಕುವುದು, ಜಾರಿ ಬೀಳುವುದು, ಅಡುಗೆ ಮನೆಯಲ್ಲಿ ಕತ್ತಿ ತಾಗಿ ಗಾಯವಾಗುವುದು ಇತ್ಯಾದಿಗಳು.
ಕೆಲವು ಆರೋಗ್ಯ ಕೆಟ್ಟಾಗ ಎದುರಾಗುವ ನೋವುಗಳು, ಉದಾಹರಣೆಗೆ ಹೊಟ್ಟೆನೋವು, ತಲೆನೋವು, ಉಳುಕು ಇತ್ಯಾದಿ. ನೋವು ನಿಸರ್ಗ ನೀಡಿರುವ ಒಂದು ವ್ಯವಸ್ಥೆಯಾಗಿದ್ದು ಇದರಿಂದ ದೇಹಕ್ಕೆ ಪೆಟ್ಟಾಗಿರುವುದು ಗೊತ್ತಾಗುತ್ತದೆ. ಹೊರಗಿನ ಗಾಯ, ಪೆಟ್ಟುಗಳು ಕಣ್ಣಿಗೆ ಗೋಚರವಾದರೆ ದೇಹದ ಆಂತರಿಕ ಪೆಟ್ಟು ಗಾಯಗಳು ಅಥವಾ ಅಂಗಾಂಗಗಳ ವೈಫಲ್ಯ ಹೊರನೋಟಕ್ಕೆ ಗೊತ್ತಾಗುವುದೇ ಇಲ್ಲ.'
ದೇಹದ ಒಳಗಿನ ನೋವುಗಳು ಕೆಲವಾರು ಸ್ಥಿತಿಗಳ ಮೂಲಕ ಪ್ರಕಟಗೊಳ್ಳುತ್ತವೆ. ಸೋಂಕಿನಿಂದಾದ ಉರಿಯೂತ, ಕೆಲವು ಕಾಯಿಲೆಗಳಿಂದ ಪ್ರಮುಖ ಅಂಗಕ್ಕೆ ಆಗಿರುವ ಹಾನಿ, ಒಳಾಂಗಣ ಪೆಟ್ಟಿನಿಂದಾದ ಸ್ರಾವ ಇತ್ಯಾದಿಗಳು ಅಪಾರ ನೋವನ್ನು ನೀಡುತ್ತವೆ. ಕೆಲವು ಭಾಗದ ನರಗಳು ಅಥವಾ ಅಂಗಾಂಶಗಳು ಉರಿಯೂತಕ್ಕೆ ಒಳಗಾದರೆ ಅಥವಾ ಸೋಂಕಿಗೆ ಒಳಗಾದರೂ ನೋವು ಅಥವಾ ಭಾರೀ ಉರಿ ಎದುರಾಗುತ್ತದೆ. ಏಕೆಂದರೆ ಉರಿಯೂತ ಎದುರಾಗಿರುವ ಭಾಗದಲ್ಲಿ ರಕ್ತಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ.
ಕೆಲವು ನೋವುಗಳು ಹೀಗಿರುತ್ತವೆ ಎಂದರೆ ಬೇರೇನೂ ಮಾಡಲಿಕ್ಕೆ ಸಾಧ್ಯವಿಲ್ಲದೇ ತಕ್ಷಣವೇ ವೈದ್ಯರ ಬಳಿ ಓಡಲೇಬೇಕಾಗುತ್ತದೆ. ಕೆಲವು ಭಾಗಗಳಲ್ಲಿ ಉಂಟಾಗುವ ನೋವು ಅತಿ ತೀಕ್ಷ್ಣವಲ್ಲದಿದ್ದರೂ ಚಿಕ್ಕದಾಗಿ ಸತತವಾಗಿ ನೋಯುತ್ತಾ ಇರುತ್ತದೆ. ಸಾಮಾನ್ಯವಾಗಿ ಹೆಚ್ಚಿನವರು ಇದನ್ನು ಅಲಕ್ಷಿಸಿ ಬಿಡುತ್ತಾರೆ. ಆದರೆ ಈ ಅಲಕ್ಷ್ಯ ಕೆಲದಿನಗಳ ನಂತರ ದೊಡ್ಡ ಮೊತ್ತವನ್ನೇ ನೀಡಬೇಕಾಗಿ ಬರಬಹುದು. ಇಂತಹ ಒಂಬತ್ತು ಬಗೆಯ ನೋವುಗಳ ಬಗ್ಗೆ ಮಾಹಿತಿಯನ್ನು ಇಂದು ಸಂಗ್ರಹಿಸಿದ್ದು ಈ ನೋವುಗಳ ಮೂಲವನ್ನು ಅರಿತು ತಕ್ಷಣವೇ ಚಿಕಿತ್ಸೆ ಪಡೆಯುವ ಮೂಲಕ ಮುಂದೆ ಇದು ಉಲ್ಬಣಗೊಳ್ಳುವುದನ್ನು ತಡೆಯಬಹುದು....

ಬೆನ್ನು ನೋವು
ಬೆನ್ನು ನೋವು ಕಾಡದೇ ಇರುವ ವ್ಯಕ್ತಿಯೇ ಇಲ್ಲವೆನ್ನಬಹುದು. ಅದರಲ್ಲೂ ನಡುವಯಸ್ಸು ದಾಟಿದ ಬಳಿಕ ಬೆನ್ನಿನ ಸ್ನಾಯುಗಳು ಕೊಂಚ ಶಿಥಿಲವಾಗಿ ಕೆಲವು ಇತರ ಕಾರಣಗಳಿಂದಲೂ ಬೆನ್ನು ನೋವು ಚಿಕ್ಕದಾಗಿ ಕಂಡುಬರಬಹುದು. ನಮ್ಮ ಬೆನ್ನಿನ ಸ್ನಾಯುಗಳು ಶರೀದರ ಮೇಲ್ಭಾಗ ಹಾಗೂ ಕೆಳಭಾಗವನ್ನು ಸೆಳೆದು ಹಿಡಿದಿಡುವ ಕೆಲಸ ಮಾಡುತ್ತದೆ. ಅಲ್ಲದೇ ಬೆನ್ನುಮೂಳೆಯ ಮುಂಭಾಗದಲ್ಲಿ ಅಗತ್ಯ ಅಂಗಗಳಿದ್ದು ಇವುಗಳ ಮುಂದೆ ಶರೀರದ ಭಾರವನ್ನು ಹೊರಬಲ್ಲ ಸ್ನಾಯುಗಳು ಇಲ್ಲದೇ ಇರುವ ಕಾರಣ ಬೆನ್ನಿನ ಸ್ನಾಯುಗಳ ಮೇಲೆ ಸತತವಾಗಿ ಭಾರದ ಒತ್ತಡವಿರುತ್ತದೆ. ಒಂದು ವೇಳೆ ಬೆನ್ನು ನೋವು ಸತತವಾಗಿದ್ದು ಇದರ ಜೊತೆಗೇ ಕಾಲ್ಬೆರಳುಗಳಲ್ಲಿ ಚಿಕ್ಕದಾಗಿ ಸೂಜಿ ಚುಚ್ಚಿದಂತಹ ಅನುಭವವಾಗುತ್ತಿದ್ದರೆ ಇದು ಬೆನ್ನುಮೂಳೆಯ ಕೆಳಗಿನ ಚಪ್ಪಟೆ ಭಾಗಗಳು ತೊಂದರೆಗೊಳಗಾಗಿದೆ ಅಥವಾ ಒಳಗಾಗುವ ಹಂತದಲ್ಲಿದೆ ಎಂದು ತಿಳಿದುಕೊಳ್ಳಬೇಕು. ಈ ನೋವನ್ನು ಹಾಗೂ ಸೂಚನೆಯನ್ನು ಸರ್ವಥಾ ಕಡೆಗಣಿಸದೇ ವೈದ್ಯರ ಸಲಹೆ ಪಡೆಯಬೇಕು.

ಕೆಳದವಡೆಯಲ್ಲಿ ನೋವು
ಕೆಲವೊಮ್ಮೆ ಕೆಳದವಡೆಯಲ್ಲಿ ಮಾತ್ರ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ದೊಡ್ಡದಾಗಿ ಆಕಳಿಸಿದಾಗಲೇ ಈ ನೋವಿನ ಇರುವಿಕೆ ಸ್ಪಷ್ಟವಾಗುತ್ತದೆ. ಹೆಚ್ಚಿನವರು ಯಾವುದೋ ಒತ್ತಡದಿಂದ ಈ ನೋವು ಬಂದಿರಬಹುದು ಎಂದು ಪರಿಗಣಿಸಿ ಈ ನೋವನ್ನು ಅಲಕ್ಷಿಸುತ್ತಾರೆ. ಈ ನೋವಿಗೆ ಮಾನಸಿಕ ಒತ್ತಡದ ಕಾರಣ ನಿಜವೇ ಸರಿ, ಆದರೆ ಈ ಒತ್ತಡ ದವಡೆಯ ಸ್ನಾಯುಗಳನ್ನು ಬಿಗಿಗೊಳಿಸುತ್ತಿರುವ ಕಾರಣವೇ ನೋವು ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಈ ನೋವು ಕಡಿಮೆಯಾಗದೇ ಹಾಗೇ ಉಳಿದುಕೊಂಡಿದ್ದರೆ ಹಾಗೂ ಇದರೊಂದಿಗೆ ಚಿಕ್ಕದಾಗಿ ಎದೆಯಲ್ಲಿಯೂ ನೋವುಕಾಣಿಸಿಕೊಂಡರೆ ಇದು ತೀವ್ರವಾದ ಹೃದಯದ ಕಾಯಿಲೆಯ ಮುನ್ಸೂಚನೆಯಾಗಿದೆ!

ಮಾಸಿಕ ದಿನಗಳ ನೋವು ಅತಿ ಹೆಚ್ಚಾಗಿರುವುದು
ಮಹಿಳೆಯರಿಗೆ ಮಾಸಿಕ ದಿನಗಳ ಮೊದಲ ಒಂದೆರಡು ದಿನಗಳಲ್ಲಿ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು ಸ್ವಾಭಾವಿಕ. ಈ ಸಮಯದಲ್ಲಿ ಗರ್ಭಾಶಯದ ಒಳಗೋಡೆಗಳ ಜೀವಕೋಶಗಳು ಹೊರಹರಿದು ಹೋಗುವ ಮೂಲಕ ಉರಿಯೂತ ಎದುರಾಗುವುದು ಈ ನೋವಿಗೆ ಕಾರಣ. ಉರಿಯೂತ ನಿವಾರಕ ಔಷಧಿಗಳಿಂದ ಈ ನೋವು ಸಾಕಷ್ಟು ಕಡಿಮೆಯಾಗುತ್ತದೆ. ಆದರೆ ಒಂದು ವೇಳೆ ಈ ನೋವು ಅತಿ ಎನಿಸುವಷ್ಟು ತೀವ್ರವಾಗಿದ್ದರೆ ಹಾಗೂ ಉರಿಯೂತ ನಿವಾರಕ ಔಷಧಿಗಳಿಗೂ ಸ್ಪಂದಿಸದೇ ಇದ್ದರೆ ಇದು ಕೆಲವು ಗಂಭೀರ ತೆರನಾದ ಲೈಂಗಿಕ ಕಾಯಿಲೆ (STD) ಅಥವಾ ಗರ್ಭಕೋಶದ ಕ್ಯಾನ್ಸರ್ ನ ಸೂಚನೆಯಾಗಿರಲೂಬಹುದು.

ತೀಕ್ಷ್ಣವಾದ ತಲೆನೋವು
ಹೆಚ್ಚಿನ ಜನರಿಗೆ ಅನುಭವವಾಗುವ ತೀಕ್ಷ್ಣವಾದ ತಲೆನೋವು ಅತ್ಯಂತ ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳು ಹಲವಾರಿವೆ. ದೈನಂದಿನ ಮಾನಸಿಕ ಒತ್ತಡದಿಂದ ಹಿಡಿದು ಕ್ಯಾನ್ಸರ್ ವರೆಗೂ ಈ ಕಾರಣಗಳಿರಬಹುದು. ಆದ್ದರಿಂದ ತಲೆನೋವು ಸತತವಾಗಿ ಕಾಡುತ್ತಿದ್ದರೆ ಇದನ್ನು ಅಲಕ್ಷಿಸಕೂಡದು. ಏಕೆಂದರೆ ಇದಕ್ಕೆ ಕಾರಣವೇನೆಂದು ತಕ್ಷಣಕ್ಕೆ ಕಂಡುಕೊಳ್ಳಲು ಸಾಧ್ಯವಿಲ್ಲ. ಕೇವಲ ಪರೀಕ್ಷೆಗಳಿಂದ ಮಾತ್ರವೇ ಕಂಡುಕೊಳ್ಳಲು ಸಾಧ್ಯ. ಒಂದು ವೇಳೆ ತಲೆಯ ನಡುವಣ ಭಾಗದಲ್ಲಿ ಸೂಜಿಯಲ್ಲಿ ಚುಚ್ಚಿದಂತೆ ಒಂದೇ ಕಡೆ ಕೇಂದ್ರೀಕೃತವಾದ ನೋವಿದ್ದರೆ ಹಾಗೂ ನೋವು ಸತತವಾಗಿದ್ದರೆ ಇದು ಮೆದುಳಿನಲ್ಲಿ ಗಡ್ಡೆಗಳಿರುವ ಸೂಚನೆಯಾಗಿದೆ ಅಥವಾ ಹೃದಯ ತೊಂದರೆಯಲ್ಲಿದೆ ಎಂದು ತಿಳಿಸುತ್ತಿದ್ದಿರಬಹುದು.ಆದ್ದರಿಂದ ತಕ್ಷಣವೇ ವೈದ್ಯಕೀಯ ನೆರವು ಪಡೆದುಕೊಳ್ಳಬೇಕು.

ಕೆಳಹೊಟ್ಟೆಯಲ್ಲಿ ನೋವು
ಇದು ಸಹಾ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ನೋವಾಗಿದೆ. ಒಗ್ಗದ ಆಹಾರ ಸೇವನೆ ಅಥವಾ ಆಹಾರ ಸರಿಯಾಗಿ ಜೀರ್ಣವಾಗದೇ ಇರುವುದು, ಅಪಾನವಾಯು ತುಂಬಿಕೊಳ್ಳುವುದು ಮೊದಲಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಯಿಂದ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಚಿಕ್ಕದಾಗಿ, ಕೆಳಹೊಟ್ಟೆಯ ಬಲಭಾಗದಲ್ಲಿ ನೋವಾಗುತ್ತಿದ್ದು ಕೆಲವು ದಿನಗಳಿಂದ ಕಾಡುತ್ತಿದ್ದರೆ ಹಾಗೂ ವಿಶೇಷವಾಗಿ ಬೆಳಗ್ಗಿನ ಹೊತ್ತು, ಮಲವಿಸರ್ಜನೆಗೂ ಮುನ್ನ ಹೆಚ್ಚಾಗಿದ್ದರೆ ಇದು ಕರುಳುವಾಲ ಅಥವಾ ಅಪೆಂಡಿಸೈಟಿಸ್ ನ ತೊಂದರೆ ಇರಬಹುದು. ಇದನ್ನು ವೈದ್ಯರು ಸ್ಕ್ಯಾನ್ ಪರೀಕ್ಷೆಯ ಮೂಲಕ ದೃಢೀಕರಿಸುತ್ತಾರೆ. ಈ ನೋವು ಚಿಕ್ಕದೇ ಎಂದು ಅಲಕ್ಷಿಸುವ ಮೂಲಕ ಮುಂದೆ ಈ ಭಾಗ ಒಡೆದು ಭಾರೀ ಅನಾಹುತಕ್ಕೆ ಕಾರಣವಾಗಬಹುದು.

ಪಾದಗಳಲ್ಲಿ ನೋವು
ಒಂದು ವೇಳೆ ನೀವು ತುಂಬಾ ನಡೆಯುವ ವ್ಯಕ್ತಿಯಾಗಿದ್ದರೆ ಅಥವಾ ನಿಮ್ಮ ಉದ್ಯೋಗದಲ್ಲಿ ದಿನವಿಡೀ ನಡೆಯಲೇಬೇಕಾಗಿದ್ದರೆ ಆಗಾಗ ದಣಿವಿನ ಕಾರಣ ಪಾದಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಆಗಾಗ ಪಾದಗಳಲ್ಲಿ ಸಂವೇದನೆಯೂ ಇಲ್ಲವಾಗಬಹುದು. ದಣಿವಾರಿದ ಬಳಿಕ ಈ ನೋವು ಕಡಿಮೆಯಾಗುತ್ತದೆ ಹಾಗೂ ಸಂವೇದನೆ ಪುನಃ ಸರಿಯಾಗುತ್ತದೆ. ಆದರೆ ಒಂದು ವೇಳೆ ದಣಿವಿಲ್ಲದೇ ಇದ್ದಾಗಲೂ ಪಾದಗಳಲ್ಲಿ ಆಗಾಗ ನೋವು ಕಾಣಿಸಿಕೊಂಡರೆ ಹಾಗೂ ಪಾದ ಮತ್ತು ಕಾಲುಗಳಲ್ಲಿ ಸಂವೇದನೆ ಇಲ್ಲದೇ ಇದ್ದರೆ ಇದು ಮಧುಮೇಹದ ಅಥವಾ ಮಧುಮೇಹದ ನರರೋಗದ (diabetic neuropathy) ಸೂಚನೆಯಾಗಿರಬಹುದು. ಆದ್ದರಿಂದ ಈ ಸೂಚನೆಯನ್ನು ಅಲಕ್ಷಿಸಿದರೆ ಬೇಗನೇ ಪ್ರಾರಂಭಿಸಬೇಕಾಗಿದ್ದ ಚಿಕಿತ್ಸೆಯೂ ತಡವಾಗಿ ಪರಿಸ್ಥಿತಿ ಉಲ್ಬಣಗೊಳ್ಳಬಹುದು.

ನಡುಬೆನ್ನಿನಲ್ಲಿ ನೋವು
ಒಂದು ವೇಳೆ ಕೈ ತಲುಪಲಾಗದ ಬೆನ್ನಿನ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಹಾಗೂ ಇದು ಸತತವಾಗಿದ್ದರೆ ಹಾಗೂ ಈ ಭಾಗದಲ್ಲಿ ಯಾವುದೇ ಗಾಯ ಅಥವಾ ಪೆಟ್ಟು ಸಹಾ ಆಗಿಲ್ಲದಿದ್ದರೆ ಇದು ಮೂತ್ರಪಿಂಡಗಳ ಸೋಂಕಿನ ಸೂಚನೆಯಾಗಿರುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ಈ ನೋವಿನೊಂದಿಗೆ ಆಗಾಗ, ಬಿಟ್ಟು ಬಿಟ್ಟು ಜ್ವರ ಬರುತ್ತಿದ್ದರೆ ಈ ಸೋಂಕು ಇರುವುದು ಬಹುತೇಕ ಖಚಿತವಾಗುತ್ತದೆ. ಮೂತ್ರಪಿಂಡಗಳ ಸೋಂಕಿಗೆ ತಕ್ಷಣವೇ ಚಿಕಿತ್ಸೆ ಅಗತ್ಯ. ತಡವಾದರೆ ಅಥವಾ ಚಿಕಿತ್ಸೆ ಪಡೆಯದೇ ಹೋದರೆ ಭಾರೀ ಅನಾಹುತವಾಗಬಹುದು. ಆದ್ದರಿಂದ ಈ ನೋವು ಎಷ್ಟೇ ಚಿಕ್ಕದೆನಿಸಿದರೂ ಸರಿ, ವೈದ್ಯರಲ್ಲಿ ತಕ್ಷಣ ಪರೀಕ್ಷೆಗೆ ಒಳಪಡಬೇಕು.

ಮೀನಖಂಡದಲ್ಲಿ ನೋವು
ಒಂದು ವೇಳೆ ಮೀನಖಂಡದ ಸ್ನಾಯುಗಳಲ್ಲಿ ವ್ಯಾಯಾಮ ಮಾಡದೇ ಇದ್ದರೂ, ಹೆಚ್ಚು ನಡೆಯದೇ ಇದ್ದರೂ ಅಪಾರವಾದ ನೋವು ಕಂಡುಬಂದರೆ ಅಥವಾ ಚಿಕ್ಕದಾಗಿ ಚಿಟಿಕೆ ಹೊಡೆದಂತೆ ನೋವಾಗುತ್ತಿದ್ದರೆ ಇದು ನಿಮ್ಮ ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ ಹಾಗೂ ಮೂಳೆಗಳು ಗಾಳಿಗುಳ್ಳೆಗಳಿಂದ ತುಂಬಿ ಟೊಳ್ಳಾಗಿರುವ osteoporosis ಎಂಬ ತೊಂದರೆಗೆ ಒಳಗಾಗಿರುವ ಸಾಧ್ಯತೆಯನ್ನು ಪ್ರಕಟಿಸುತ್ತದೆ. ಸಾಮಾನ್ಯವಾಗಿ ಕ್ಯಾಲ್ಸಿಯಂ ಕೊರತೆ ಮೂಳೆಗಳಿಗೆ ಅಂಟಿಕೊಂಡಿರುವ ಸ್ನಾಯುಗಳನ್ನು ಮೊದಲು ಆವರಿಸುತ್ತದೆ ಎಂದು ಕೆಲವು ಅಧ್ಯಯನಗಳಲ್ಲಿ ತಿಳಿದುಬಂದಿದೆ.

ವೃಷಣಗಳಲ್ಲಿ ನೋವು
ಒಂದು ವೇಳೆ ಪುರುಷರಿಗೆ ತಮ್ಮ ವೃಷಣಗಳಲ್ಲಿ ತೀಕ್ಷ್ಣವಾದ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಅಥವಾ ವೃಷಣಗಳ ಹಿಂಭಾಗದಲ್ಲಿ ನೋವು ಇದ್ದರೆ ಅಥವಾ ಮಿಲನ ಅಥವಾ ಸ್ವಮೈಥುನದ ಸಮಯದಲ್ಲಿ ನೋವು ಕಾಣಿಸಿಕೊಂಡರೆ ಇದು ಲೈಂಗಿಕ ಕಾಯಿಲೆಗಳ ಸೂಚನೆಯಾಗಿರಬಹುದು ಅಥವಾ ವೃಷಣಗಳ ಕ್ಯಾನ್ಸರ್ ಆವರಿಸಿರುವ ಸೂಚನೆಯೂ ಆಗಿರಬಹುದು. ಈ ನೋವು ಕಂಡುಬಂದ ತಕ್ಷಣ ಲೈಂಗಿಕ ರೋಗ ಹಾಗೂ ವೃಷಣಗಳ ಕ್ಯಾನ್ಸರ್ ಗಳಿಗಾಗಿ ಸೂಕ್ತ ಪರೀಕ್ಷೆಗಳಿಗೆ ಒಳಗಾಗಬೇಕು.
ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.



Click it and Unblock the Notifications











