Latest Updates
-
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ
ನೀರಿನ ಪ್ರಾಮುಖ್ಯತೆ: ಈ 10 ಆರೋಗ್ಯಕರ ಮಾಹಿತಿಗಳು ಅಚ್ಚರಿ ಮೂಡಿಸುತ್ತವೆ
ಆರೋಗ್ಯಕ್ಕೆ ನೀರು ಎಷ್ಟು ಮುಖ್ಯವೆಂದು ನಮಗೆಲ್ಲಾ ಗೊತ್ತೇ ಇದೆ. ದಿನಕ್ಕೆ ಕನಿಷ್ಟ ಎಂಟು ಅಥವಾ ಒಂಭತ್ತು ಲೋಟಗಳನ್ನಾದರೂ ಕುಡಿಯಿರಿ ಎಂದು ವೈದ್ಯರು ತಿಳಿಸುತ್ತಾರೆ. ದೇಹಕ್ಕೆ ದಣಿವಾದಾಗ ನೀರು ಕುಡಿದರೆ ಶೀಘ್ರವೇ ದಣಿವಾರಲು ಸಾಧ್ಯವಾಗುತ್ತದೆ ಹಾಗೂ ದೇಹದಿಂದ ಖಿನ್ನತೆ ಮರೆಯಾಗುತ್ತದೆ.
ನಮ್ಮ ದೇಹದ ಬಹುತೇಕ ಎಲ್ಲಾ ಕಾರ್ಯಗಳಿಗೂ ನೀರು ಅಗತ್ಯವಾಗಿ ಬೇಕೇ ಬೇಕು. ಜೀರ್ಣಾಂಗಗಳಿಂದ ಆಹಾರ ಪಚನಗೊಂಡ ಬಳಿಕ ಪೋಷಕಾಂಶಗಳನ್ನು ದೇಹದ ಇತರ ಭಾಗಗಳಿಗೆ ಕೊಂಡೊಯ್ಯುವುದು, ದೇಹದ ತಾಪಮಾನ ಸರಿಸಮವಾಗಿರಿಸುವುದು, ದೇಹದಿಂದ ತ್ಯಾಜ್ಯವನ್ನು ವಿಸರ್ಜಿಸುವುದು, ಪೋಷಕಾಂಶಗಳನ್ನು ಒಡೆಯಲು ಹಾಗೂ ಜೀವಕೋಶಗಳಿಗೆ ತಲುಪಿಸಲು, ಮೂಳೆಗಳ ಸಂದುಗಳಲ್ಲಿ ಜಾರುಕದ ದ್ರವ ಒದಗುವಂತೆ ಮಾಡುವುದು ಇತ್ಯಾದಿಗಳು ನೀರಿನ ಪ್ರಮುಖ ಬಳಕೆಯಾಗಿದೆ. ಬನ್ನಿ, ಆರೋಗ್ಯದ ದೃಷ್ಟಿಯಿಂದ ನೀರಿನ ಮಹತ್ವದ ಹತ್ತು ಅಚ್ಚರಿಯ ಸಂಗತಿಗಳನ್ನು ಅರಿಯೋಣ:

ದೇಹದ ಇತರ ಕಾರ್ಯಗಳಿಗೂ ನೀರು ಅಗತ್ಯವಾಗಿದೆ
ದೇಹದ ಇತರ ಪ್ರಮುಖ ಕಾರ್ಯಗಳಾದ ಆಮ್ಲೀಯತೆ-ಕ್ಷಾರೀಯತೆಯ ಪಿ ಎಚ್ ಮಟ್ಟವನ್ನು ಸಮತೋಲನದಲ್ಲಿರಿಸುವುದು, ಜೀವ ರಾಸಾಯನಿಕ ಕ್ರಿಯೆ, ಉಸಿರಾಟ, ಮಲಬದ್ದತೆಯಾಗದಂತೆ ನೋಡಿಕೊಳ್ಳುವುದು, ಮೂತ್ರಪಿಂಡಗಳು ಸೂಕ್ತವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು, ತ್ವಚೆಯ ಕಾಂತಿ ಹೆಚ್ಚುವಂತೆ ಮಾಡುವುದು ಮೊದಲಾದವುಗಳಿಗೂ ನೀರು ಅಗತ್ಯವಾಗಿದೆ. ನರವ್ಯವಸ್ಥೆಯಲ್ಲಿಯೂ ನೀರು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತಪರಿಚಲನಾ ವ್ಯವಸ್ಥೆ, ಉಸಿರಾಟದ ವ್ಯವಸ್ಥೆ ಹಾಗೂ ವಿಸರ್ಜನಾ ವ್ಯವಸ್ಥೆ, ಎಲ್ಲದರಲ್ಲಿಯೂ ನೀರು ಪ್ರಮುಖವಾಗಿ ಬೇಕಾಗುತ್ತದೆ.

ಮೆದುಳಿನ ಕಾರ್ಯಕ್ಷಮತೆಗೂ ನೀರು ಬೇಕು
ಮೆದುಳಿನ ಬಗ್ಗೆ ನಡೆಸಿದ ಹಲವಾರು ಸಂಶೋಧನೆಗಳಲ್ಲಿ ಒಂದು ವೇಳೆ ದೇಹ ಕೊಂಚವೂ ನಿರ್ಜಲೀಕರಣಕ್ಕೆ ಒಳಗಾದರೆ ಮೆದುಳಿನ ಕಾರ್ಯಕ್ಷಮತೆ ಕುಂದುತ್ತದೆ ಎಂದು ಕಂಡುಕೊಳ್ಳಲಾಗಿದೆ. ನೀರಿನ ಕೊರತೆಯಿಂದ ಮನೋಭಾವವೂ ಬದಲಾಗುತ್ತದೆ ಹಾಗೂ ಏಕಾಗ್ರತೆ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗೂ ತಲೆನೋವು ಹೆಚ್ಚುತ್ತದೆ ಹಾಗೂ ಮರೆಗುಳಿತನ ಹೆಚ್ಚಿಸುತ್ತದೆ ಮತ್ತು ಮೆದುಳಿನ ಕ್ಷಮತೆಯನ್ನು ಕುಂದಿಸುತ್ತದೆ.

ಮೈಗ್ರೇನ್ ಚಿಕಿತ್ಸೆಗೆ ನೀರಿನ ಬಳಕೆ
ನಿರ್ಜಲೀಕರಣದಿಂದ ಮೆದುಳಿಗೆ ಕಡಿಮೆ ರಕ್ತಪ್ರಮಾಣ ಸರಬರಾಜು ಆಗುತ್ತದೆ. ಈ ಕೊರತೆ ತಕ್ಷಣವೇ ಮೈಗ್ರೇನ್ ತಲೆನೋವಿಗೆ ಪ್ರಚೋದನೆ ನೀಡಬಹುದು. ಕೊಂಚ ಹೊತ್ತಿನಲ್ಲಿಯೇ ಇದು ವಿಪರೀತವಾಗಿ ಹೆಚ್ಚಿ ರೋಗಿಗೆ ಅಪಾರವಾದ ತಲೆನೋವು ತರಿಸಬಹುದು. ಒಂದು ವೇಳೆ ತಲೆನೋವು ಪ್ರಾರಂಭವಾಗುತ್ತಿದ್ದಂತೆಯೇ ಸಾಕಷ್ಟು ನೀರು ಕುಡಿದರೆ ತಲೆನೋವು ಉಲ್ಬಣಗೊಳ್ಳದೇ ನಿಧಾನವಾಗಿ ಶಾಂತವಾಗುತ್ತದೆ ಹಾಗೂ ತಲೆ ತಿರುಗುವಿಕೆಯೂ ಇಲ್ಲವಾಗುತ್ತದೆ. ಆದ್ದರಿಂದ ಮುಂದಿನ ಬಾರಿ ತಲೆನೋವು ಪ್ರಾರಂಭವಾಯಿತು ಎಂದಾಕ್ಷಣ ಮಾತ್ರೆಯ ಹಿಂದೆ ಹೋಗದೇ ತಕ್ಷಣವೇ ಒಂದೆರಡು ಲೋಟ ನೀರು ಕುಡಿಯಿರಿ.

ವ್ಯಸನದ ತೂರಾಟದಿಂದ ತಪ್ಪಿಸುತ್ತದೆ
ಅತಿಯಾದ ಮದ್ಯಪಾನದಿಂದ ತೂರಾಟ ಎದುರಾಗಬಹುದು. ಇದು ನಿಮ್ಮ ದೇಹಕ್ಕೆ ಅಹಿತಕರವಾದ ಅನುಭವ ನೀಡುತ್ತದೆ. ಮದ್ಯ ಪ್ರಬಲ ಮೂತ್ರವರ್ಧಕವಾಗಿದ್ದು ದೇಹದಿಂದ ಹೆಚ್ಚೇ ನೀರನ್ನು ಹೊರಹಾಕಲು ಪ್ರಚೋದನೆ ನೀಡುತ್ತದೆ. ಮದ್ಯಪಾನದ ಬಳಿಕ ಅಥವಾ ನಡುವಣ ಸಮಯದಲ್ಲಿ ಸಾಕಷ್ಟು ನೀರು ಕುಡಿಯುವ ಮೂಲಕ ಈ ತೂರಾಟದ ಅನುಭವದಿಂದ ಶೀಘ್ರವೇ ಹೊರಬರಬಹುದು.

ತೂಕ ಇಳಿಸಲು ನೆರವಾಗುತ್ತದೆ
ತೂಕ ಇಳಿಸುವ ಯತ್ನದಲ್ಲಿ ಸಾಕಷ್ಟು ನೀರು ಕುಡಿಯುವ ಮೂಲಕ ನಿಮ್ಮ ತೂಕ ಇಳಿಕೆಯ ಗತಿ ಹೆಚ್ಚುತ್ತದೆ ಎಂದು ನಿಮಗೆ ಗೊತ್ತಿತ್ತೇ? ಹೌದು, ನೀರು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ ಹಾಗೂ ತೃಪ್ತಭಾವನೆಯನ್ನೂ ಹೆಚ್ಚಿಸುತ್ತದೆ. ಊಟಕ್ಕೂ ಅರ್ಧ ಘಂಟೆ ಮುನ್ನ ಒಂದು ಲೋಟ ನೀರು ಕುಡಿಯುವ ಮೂಲಕ ತೂಕ ಇಳಿಕೆಗೆ ಹೆಚ್ಚು ನೆರವಾಗುತ್ತದೆ ಹಾಗೂ ನೀರಿನಲ್ಲಿ ಕ್ಯಾಲೋರಿಗಳೇ ಇಲ್ಲದ ಕಾರಣ ಕಡಿಮೆ ಆಹಾರ ಸೇವನೆಯ ಮೂಲಕ ಕಡಿಮೆ ಕ್ಯಾಲೋರಿಗಳೇ ದೇಹ ಸೇರುತ್ತವೆ.

ಗರ್ಭವತಿಯರಿಗೆ ಅತಿ ಉತ್ತಮ
ಗರ್ಭವತಿಯರು ಇತರರಿಗಿಂತಲೂ ಹೆಚ್ಚು ನೀರು ಕುಡಿಯಬೇಕು. ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ಸೂಕ್ತವಾಗಿ ಆಗಬೇಕಾದರೆ ಹೆಚ್ಚಿನ ನೀರಿನ ಅಗತ್ಯವಿದೆ. ಗರ್ಭಾವಸ್ಥೆಯಲ್ಲಿ ಮೂತ್ರನಾಳದ ಸೋಂಕು ಹಾಗೂ ಮಲಬದ್ದತೆ ಸಾಮಾನ್ಯವಾದ ತೊಂದರೆಯಾಗಿದ್ದು ಗರ್ಭವತಿಯರು ಹೆಚ್ಚು ನೀರು ಕುಡಿಯುವ ಮೂಲಕ ಈ ತೊಂದರೆಗಳಿಗೆ ಒಳಗಾಗದೇ ಇರಲು ಸಾಧ್ಯವಾಗುತ್ತದೆ. ಬಾಣಂತಿಯರೂ ಹೆಚ್ಚು ನೀರು ಕುಡಿಯುವ ಮೂಲಕ ಶೀಘ್ರ ಚೇತರಿಕೆಗೆ ನೆರವಾಗುತ್ತದೆ.

ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸುತ್ತದೆ
ಮೂತ್ರದಲ್ಲಿ ಕಲ್ಲುಗಳಾಗುವ ಲವಣಗಳ ಸಾಂದ್ರತೆ ಹೆಚ್ಚಿದ್ದಾಗ ಮೂತ್ರಪಿಂಡದಲ್ಲಿ ಇವು ಹರಳಿನ ರೂಪ ಪಡೆದು ಇನ್ನಷ್ಟು ಲವಣಗಳನ್ನು ಅಂಟಿಸಿಕೊಳ್ಳುತ್ತಾ ಈ ಹರಳಿನ ಗಾತ್ರ ದೊಡ್ಡದಾಗುತ್ತಾ ಹೋಗುತ್ತದೆ. ಇದೇ ಮೂತ್ರಪಿಂಡದ ಕಲ್ಲು. ನೀರಿನ ಕೊರತೆಯಿಂದಲೇ ಮೂತ್ರದಲ್ಲಿ ಲವಣಗಳ ಪ್ರಮಾಣ ಹೆಚ್ಚಾಗಿ ಇವು ಹರಳುಗಟ್ಟುವಷ್ಟು ಸಾಂದ್ರೀಕೃತಗೊಳ್ಳುತ್ತವೆ. ದಿನಕ್ಕೆ ಹತ್ತು ಲೋಟ ನೀರು ಕುಡಿಯುವ ಮೂಲಕ ಮೂತ್ರದಲ್ಲಿ ಲವಣದ ಸಾಂದ್ರತೆ ಕಡಿಮೆಯಾಗಿ ಮೂತ್ರಪಿಂಡಗಳಲ್ಲಿ ಹರಳುಗಟ್ಟುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಅಲ್ಲದೇ ಹೆಚ್ಚು ಹೆಚ್ಚು ಬಾರಿ ಮೂತ್ರವಿಸರ್ಜಿಸುವ ಮೂಲಕ ಈ ಲವಣಗಳೂ ವಿಸರ್ಜನೆಗೊಳ್ಳುತ್ತವೆ.

ದೇಹದ ತಾಪಮಾನವನ್ನು ಕಾಪಾಡುತ್ತದೆ
ನಮ್ಮ ದೇಹದಲ್ಲಿ ಸುಮಾರು ಅರವತ್ತು ಶೇಖಡಾ ನೀರು ಇದೆ ಹಾಗೂ ಇದು ದೇಹದ ತಾಪಮಾನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇಸಿಗೆಯಲ್ಲಿ ಎದುರಾಗುವ ಬಿಸಿಯಿಂದ ದೇಹವನ್ನು ರಕ್ಷಿಸಲು ಚರ್ಮದ ಸೂಕ್ಷ್ಮರಂಧ್ರಗಳಿಂದ ಬೆವರನ್ನು ಹರಿಸುತ್ತದೆ. ಈ ಬೆವರು ಆವಿಯಾಗುವಾಗ ದೇಹದ ಕೊಂಚ ತಾಪಮಾನವನ್ನು ಕೊಂಡು ಹೋಗುತ್ತದೆ. ಈ ಮೂಲಕ ದೇಹವನ್ನು ತಂಪಾಗಿರಿಸಲು ಸಾಧ್ಯವಾಗುತ್ತದೆ. ಬೆವರಿನ ಮೂಲಕ ಕಳೆದುಕೊಂಡ ನೀರನ್ನು ಮತ್ತೆ ಪಡೆಯಲು ಸಾಕಷ್ಟು ನೀರನ್ನು ಕುಡಿಯುತ್ತಲೇ ಇರಬೇಕು.

ಜೀವ ರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ನಿತ್ಯವೂ ಕನಿಷ್ಟ ಎಂಟು ಲೋಟಗಳಷ್ಟು ನೀರನ್ನು ಕುಡಿಯುವ ಮೂಲಕ ದೇಹದ ಎಲ್ಲಾ ಅಂಗಾಂಶಕ್ಕೆ ಬೇಕಾದ ಆಮ್ಲಜನಕ, ಪೋಷಕಾಂಶಗಳನ್ನು ರಕ್ತ ತಲುಪಿಸಲು ಸಾಧ್ಯವಾಗುತ್ತದೆ. ಅಲ್ಲದೇ ತ್ವಚೆಯ ಹೊರಪದರದ ಸತ್ತ ಜೀವಕೋಶಗಳನ್ನು ನಿವಾರಿಸಲು, ತ್ಯಾಜ್ಯಗಳನ್ನು ವಿಸರ್ಜಿಸಲೂ ನೆರವಾಗುತ್ತದೆ. ಜೀವ ರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಲು ದಿನವಿಡೀ ಸಾಕಷ್ಟು ನೀರನ್ನು ಕುಡಿಯುತ್ತಿರಬೇಕು.

ಸಂಧಿವಾತವನ್ನು ಕಡಿಮೆಗೊಳಿಸುತ್ತದೆ
ಸಂಧಿವಾತ ಅಥವಾ ಮೂಳೆಗಂಟುಗಳಲ್ಲಿ ನೋವು ಎದುರಾಗದಂತೆ ನೋಡಿಕೊಳ್ಳಲು ನೀರಿನ ಪಾತ್ರ ಮಹತ್ತರವಾಗಿದೆ. ನಮ್ಮ ಮೂಳೆಗಳ ಗಂಟುಗಳಲ್ಲಿ ಎರಡು ಮೂಳೆಗಳು ಪರಸ್ಪರ ತಿಕ್ಕುತ್ತಲೇ ಇರುತ್ತವೆ. ಈ ಭಾಗದಲ್ಲಿ ಜಾರುಕದ ಪ್ರಮಾಣ ಕಡಿಮೆಯಾದರೆ ನೀವು ಎದುರಾಗುತ್ತದೆ ಹಾಗೂ ಸಂಧಿವಾತದ ರೂಪ ಪಡೆಯುತ್ತದೆ. ಈ ಸಂದುಗಳಲ್ಲಿ ಸದಾ ಸಾಕಷ್ಟು ಪ್ರಮಾಣದಲ್ಲಿ ಜಾರುಕ ಇರುವಂತೆ ನೋಡಿಕೊಳ್ಳಲು ಸಾಕಷ್ಟು ನೀರು ಕುಡಿಯುತ್ತಿರಬೇಕು. ಈ ಮೂಲಕ ಮೂಳೆಗಳು ಪರಸ್ಪರ ತಿಕ್ಕುವ ಘರ್ಷಣೆ ಕಡಿಮೆಯಾಗುತ್ತದೆ ಹಾಗೂ ಸವೆತ ಕಡಿಮೆಯಾಗಿ ಸಂಧಿವಾತದ ಸಾಧ್ಯತೆಯೂ ಕಡಿಮೆಯಾಗುತ್ತದೆ. ಈ ಕಾರಣಕ್ಕಾದರೂ ಸಾಕಷ್ಟು ನೀರನ್ನು ಕುಡಿಯಲೇಬೇಕು.
ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ. ನಿಮ್ಮ ಅನಿಸಿಕೆಗಳು ನಮಗೆ ಅಮೂಲ್ಯವಾಗಿದ್ದು ನಮ್ಮೊಂದಿಗೆ ದಯವಿಟ್ಟು ಹಂಚಿಕೊಳ್ಳಿ.



Click it and Unblock the Notifications











