ಸೀಬೆ ಎಲೆಯಲ್ಲಿದೆ ಸೀಮಾತೀತ ಆರೋಗ್ಯ ಗುಣಗಳು

By Jaya subramanya

ಹಣ್ಣುಗಳು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುವ ಶಕ್ತಿ ಮೂಲವಾಗಿ ಹಣ್ಣುಗಳನ್ನು ಕಾಣಲಾಗುತ್ತದೆ. ನೀವು ಇತರೆ ಯಾವುದೇ ಆಹಾರಗಳನ್ನು ತಿಂದರೂ ಕೂಡ ನಿಮ್ಮ ಆಹಾರದ ಪಟ್ಟಿಯಲ್ಲಿ ಹಣ್ಣುಗಳು ಇರಲೇ ಬೇಕು. ಅಷ್ಟೊಂದು ಮಹತ್ವಪೂರ್ಣ ಅಂಶಗಳನ್ನು ಹಣ್ಣುಗಳು ನಮ್ಮ ದೇಹಕ್ಕೆ ಪೂರೈಸುತ್ತವೆ. ವೈದ್ಯರನ್ನು ದೂರವಿಡಲು ಸೇಬು ತಿನ್ನಿ, ಹೊಟ್ಟೆಯ ಸಮಸ್ಯೆಗಳಿಗೆ ಬಾಳೆಹಣ್ಣಿನ ಚಮತ್ಕಾರ, ತ್ವಚೆಯ ಕಾಂತಿ ವೃದ್ಧಿಸಲು ದಾಳಿಂಬೆ ಸಹಕಾರಿ ಇಂತಹ ಹಣ್ಣುಗಳ ಮಹತ್ವವನ್ನು ನೀವು ಅರಿತಿರಬಹುದು. ಅದಕ್ಕಾಗಿಯೇ ದೇಹದಲ್ಲಿ ನಿಶ್ಯಕ್ತಿಯ ಸಮಸ್ಯೆಯುಂಟಾದಾಗ ವೈದ್ಯರುಗಳು ಶಿಫಾರಸು ಮಾಡುವುದೇ ಹಣ್ಣುಗಳನ್ನಾಗಿದೆ.

ಬರಿಯ ಹಣ್ಣುಗಳು ಮಾತ್ರವಲ್ಲದೆ ಅವುಗಳ ಎಲೆಗಳೂ ಕೆಲವೊಂದು ಔಷಧೀಯ ಅಂಶಗಳನ್ನು ಒಳಗೊಂಡಿವೆ ಎಂಬುದು ನಿಮಗೆ ಗೊತ್ತೇ? ಹಣ್ಣುಗಳಲ್ಲಿರುವಂತೆಯೇ ಅದಕ್ಕೂ ಮಿಗಿಲಾದ ಪ್ರಯೋಜನಕಾರಿ ಅಂಶಗಳನ್ನು ಅವುಗಳ ಎಲೆಗಳೂ ಒಳಗೊಂಡಿವೆ. ತನ್ನ ಹಣ್ಣು ಮತ್ತು ಎಲೆಗಳ ಔಷಧೀಯ ಗುಣಗಳಿಂದ ಪ್ರಸಿದ್ಧವಾಗಿರುವುದೇ ಸೀಬೆಯಾಗಿದೆ. ಭಾರತದಲ್ಲಿ ಹೆಚ್ಚು ಸುಲಭವಾಗಿ ದೊರೆಯುವ ಮತ್ತು ಜನಪ್ರಿಯ ಎಂದೇ ಪ್ರಸಿದ್ಧವಾಗಿರುವ ಸೀಬೆ ರೋಗನಿರೋಧಕ ಶಕ್ತಿಯನ್ನು ಒಳಗೊಂಡಿದೆ ಮತ್ತು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಂಡಿದೆ. ಇನ್ನು ಸೀಬೆ ಎಲೆಗಳೂ ಕೂಡ ಔಷಧೀಯ ಅಂಶಗಳನ್ನು ಹೊಂದಿರುವುದು ನಮ್ಮಲ್ಲಿ ಹಲವರಿಗೆ ಗೊತ್ತಿಲ್ಲ. ಸೀಬೆ ಎಲೆಗಳನ್ನು ಜ್ವರಕ್ಕಾಗಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದು ಇದು ಉರಿಯೂತವನ್ನು ನಿವಾರಿಸುವುದರ ಜೊತೆಗೆ ಮಧುಮೇಹವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ಹತೋಟಿಗೆ ತರುತ್ತದೆ.

Guava leaf remedy to control diabetes and blood cholesterol level

ಅದರಲ್ಲೂ ಊಟದ ನಂತರ ಈ ಸೀಬೆ ಎಲೆ ಹಾಕಿ ಬೇಯಿಸಿದ ನೀರನ್ನು ಸೇವಿಸುವುದರಿಂದ ಮಧುಮೇಹದ ಇತರ ಲಕ್ಷಣಗಳಾದ ಹೈಪರ್ಗ್ಲೆಸೀಮಿಯಾ, ಹೈಪರ್‌ ಇನ್ಸುಲೇಮಿಯಾ, ಇನ್ಸುಲಿನ್ ಪ್ರತಿರೋಧ ಮತ್ತು ಅಧಿಕ ಕೊಬ್ಬಿನ ಮಟ್ಟವನ್ನು ನಿಯಂತ್ರಣಕ್ಕೆ ಬರುತ್ತದೆ. ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವುದಲ್ಲದೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲೂ ಇದು ಸಹಕಾರಿಯಾಗಿದೆ. ಅಂತೆಯೇ ಹೈಪರ್‌ಕೊಲೆಸ್ಟ್ರಾಲಿಮಯಾದಿಂದ ಬಳಲುವವರಿಗೂ ಇದು ಪರಿಣಾಮಕಾರಿ ಎಂದೆನಿಸಿದೆ.

ಸೀಬೆ ಎಲೆಗಳು ಏಂಟಿ ಹೈಪರ್ ಲಿಪಿಡಿಮಿಕ್ ಅಂಶವನ್ನು ಒಳಗೊಂಡಿದ್ದು ಸೀರಮ್ ಫಾಸ್ಫೋಲಿಪಿಡ್, ಸೀರಮ್ ಟ್ರೈಗ್ಲಿಸರೈಡ್ ಹಾಗೂ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆ ಮಾಡುತ್ತದೆ. ಜಪಾನ್ ನಲ್ಲಿರುವ ಯಾಕುಲ್ಟ್ ಕೇಂದ್ರ ವಿದ್ಯಾಲಯ(Yakult Central Institute)ದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ದೇಹದಲ್ಲಿ alpha-glucosidease enzyme ಎಂಬ ಪೋಷಕಾಂಶದ ಚಟುವಟಿಕೆಯನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಈ ಕಾರ್ಯವನ್ನು ಪೇರಳೆ ಎಲೆಯ ಮಿಶ್ರಣ ಉತ್ತಮವಾಗಿ ನಿರ್ವಹಿಸುತ್ತದೆ. ಅಷ್ಟೇ ಅಲ್ಲ, ಸಕ್ಕರೆಯ ಇತರ ಪ್ರಾಕಾರಗಳಾದ ಸುಕ್ರೋಸ್ ಮತ್ತು ಮಾಲ್ಟೋಸ್ ಗಳನ್ನು ದೇಹವು ಹೀರಿಕೊಳ್ಳದಂತೆ ತಡೆಯುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಇಳಿಕೆಯಾಗಿ ಇನ್ಸುಲಿನ್ ಪ್ರಮಾಣದಲ್ಲಿ ಏರಿಕೆ ಮಾಡದೆಯೇ ಮಧುಮೇಹ ಹತೋಟಿಗೆ ಬರುತ್ತದೆ.

ಯಾವುದೇ ಅಡ್ಡಪರಿಣಾಮಗಳಿಲ್ಲ
ಸೀಬೆಯ ಎಲೆಯು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ. ಸೀಬೆ ಎಲೆಗಳ ರಸವನ್ನು ಸೇವಿಸುವುದು ಮಧುಮೇಹ ನಿಯಂತ್ರಿಸುವ ಔಷಧವಾಗಿದ್ದು, ಇದು ಸುರಕ್ಷಿತ ವಿಧಾನ ಎಂದೆನಿಸಿದೆ. ವಿಷವನ್ನು ಹೊರಹಾಕುವ ಗುಣವನ್ನು ಸೀಬೆ ಎಲೆಯು ಪಡೆದುಕೊಂಡಿದ್ದು ಮಧುಮೇಹ ನಿಯಂತ್ರಕ ಅಂತೆಯೇ ಅಧಿಕ ಕೊಬ್ಬು ನಿವಾರಕದಂತೆ ಕೂಡ ಕಾರ್ಯನಿರ್ವಹಿಸುತ್ತದೆ.

ಸೀಬೆ ಎಲೆಯ ಸಾರವನ್ನು ತಯಾರಿಸುವುದು ಹೇಗೆ
ನೀರಿನಲ್ಲಿ ಚೆನ್ನಾಗಿ ಸೀಬೆ ಎಲೆಯನ್ನು ತೊಳೆದುಕೊಳ್ಳಿ ಮತ್ತು ಅದರಲ್ಲಿರುವ ಕೊಳೆ ಧೂಳನ್ನು ನಿವಾರಿಸಿಕೊಂಡು, ಒಂದು ಲೀಟರಿನಲ್ಲಿ ಎಂಟು ಪೇರಳೆ ಎಲೆಗಳನ್ನು ಜಜ್ಜಿ ಬೇಯಿಸಬೇಕು. ಸುಮಾರು ಐದು ನಿಮಿಷ ಕುದಿದ ಬಳಿಕ ತಣಿಯಲು ಬಿಟ್ಟು ಈ ನೀರನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು. ಖಾಲಿಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು.

ಆರಿಸಿ ತಣಿಸಿ ಸೇವಿಸಿ
ಇದೊಂದು ನೈಸರ್ಗಿಕ ಔಷಧವಾಗಿ ಪರಿಗಣಿತವಾಗಿದ್ದು, ಎಲ್ಲರಿಗೂ ಪರಿಣಾಮಕಾರಿ ಎಂದೆನಿಸಿದೆ. ಈ ಔಷಧವನ್ನು ಸೇವಿಸುವ ಮುನ್ನ ವೈದ್ಯರನ್ನು ಕಾಣುವುದು ಮುಖ್ಯವಾಗಿದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Thursday, March 17, 2016, 23:12 [IST]
X
Desktop Bottom Promotion