Just In
Don't Miss
- Automobiles ಹಣದ ವಿಚಾರವಾಗಿ ಜಗಳ: ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಕಾರಿಗೆ ಬೆಂಕಿಯಿಟ್ಟ ಸ್ನೇಹಿತರು
- Movies Suhana Khan:ಮಗಳಿಗಾಗಿ 200 ಕೋಟಿ ಎತ್ತಿದ್ದ ಶಾರುಖ್ ಖಾನ್; ಸುಹಾನಾ ಖಾನ್ಗಾಗಿ 'ಕಿಂಗ್' ಕಸರತ್ತು
- Finance ಈ ಬಾರಿಯ ನೈಋತ್ಯ ಮಾನ್ಸೂನ್ ಮಳೆ ಹೇಗಿರುತ್ತದೆ? ಇಲ್ಲಿದೆ ಹವಾಮಾನ ಇಲಾಖೆ ಮಾಹಿತಿ
- News ದಾವಣಗೆರೆ: ₹50,000 ಗಡಿ ದಾಟಿದ ಕ್ವಿಂಟಾಲ್ ಅಡಿಕೆ ಧಾರಣೆ.!, ಮುಂದಿನ ವಾರ ₹60,000 ಮುಟ್ಟುತ್ತಾ?
- Sports IND vs BAN: ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ; ಶ್ರೇಯಾಂಕಾ ಪಾಟೀಲ್ಗೆ ಸ್ಥಾನ
- Technology Vivo: ವಿವೋ V30e ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ಸೋನಿ IMX882 OIS ಕ್ಯಾಮೆರಾ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತಿಯಾಗಿ ಹರಳೆಣ್ಣೆ ಸೇವನೆ ಮಾಡಿದರೇ ಅಡ್ಡಪರಿಣಾಮಗಳೇ ಹೆಚ್ಚು
ಹರಳೆಣ್ಣೆ ಕುಡಿದವರಂತೆ ಮುಖ ಮಾಡುವುದು ಎಂಬುದೊಂದು ಕನ್ನಡದ ನಾಣ್ಣುಡಿಯಾಗಿದೆ. ಹರಳೆಣ್ಣೆ ಅತಿ ಕಹಿಯಾಗಿದ್ದು ಕೆಲವು ತೊಂದರೆಗಳಿಗೆ ಹಿಂದೆಲ್ಲಾ ಹರಳೆಣ್ಣೆ ಕುಡಿಸುತ್ತಿದ್ದರು. ಆಗ ಇಷ್ಟವಿಲ್ಲದ ಮತ್ತು ಕಹಿಯಾದ ಈ ಎಣ್ಣೆಯನ್ನು ಸೇವಿಸುವಾಗ ರೋಗಿಯ ಮುಖ ಗಂಟಿಕ್ಕುತ್ತಿತ್ತು, ಹಾಗಾಗಿ ಇಷ್ಟವಿಲ್ಲದ ಕೆಲಸ ಮಾಡಬೇಕಾದಾಗ ಮುಖ ಸಿಂಡರಿಸಿಕೊಳ್ಳುವವರನ್ನು ಹೀಗೆ ಕರೆಯಲಾಗುತ್ತದೆ.
ಹಿಂದೆಲ್ಲಾ ಹರಳೆಣ್ಣೆ ಎಂದರೆ ರಾಜ್ಯದ ಅಭಿವೃದ್ದಿಯ ಸಂಕೇತವಾಗಿತ್ತು. ಏಕೆಂದರೆ ಅಂದಿನ ದಿನಗಳಲ್ಲಿ ವಿದ್ಯುತ್ ಇಲ್ಲದಿದ್ದಾಗ ಹರಳೆಣ್ಣೆಯ ದೀಪಗಳು ಹೆಚ್ಚು ಹೊತ್ತು ಉರಿಯುತ್ತಿದ್ದವು ಹಾಗೂ ಪ್ರಮುಖ ಸ್ಥಳಗಳಲ್ಲಿ ದೊಂದಿಯಲ್ಲಿ ಉರಿಸಲಾಗುತ್ತಿತ್ತು. ಅಂತೆಯೇ, ಆರೋಗ್ಯ ಸಂಬಂಧಿ ತೊಂದರೆಗಳಾದ ಹೊಟ್ಟೆಯ ತೊಂದರೆ, ಕೂದಲ ಪೋಷಣೆ, ಚರ್ಮರೋಗಗಳಿಗೆ ಚಿಕಿತ್ಸೆ ಮೊದಲಾದವುಗಳಿಗೂ ಬಳಸಲಾಗುತ್ತಿತ್ತು. ಅದರಲ್ಲೂ ಹರಳೆಣ್ಣೆ ಅತ್ಯುತ್ತಮವಾದ ವಿರೇಚಕವಾದುದರಿಂದ ಮಲಬದ್ದತೆಯಾದರೆ ಹರಳೆಣ್ಣೆ ಕುಡಿಯಲು ಸಲಹೆ ಮಾಡಲಾಗುತ್ತಿತ್ತು.
ಆದರೆ ಈಗ ಈ ಎಣ್ಣೆಯನ್ನು ಹೀಗೆ ಕುಡಿದರೆ ಆರೋಗ್ಯಕ್ಕೆ ಏನೂ ತೊಂದರೆಯಾಗುವುದಿಲ್ಲವೇ ಎಂಬ ಕಾಳಜಿಯೂ ವ್ಯಕ್ತವಾಗುತ್ತಿದೆ. ಏಕೆಂದರೆ ಇದರ ಸೇವನೆಯಿಂದ ಕರುಳು ಸಂಬಂಧಿ ಮತ್ತು ನರಸಂಬಂಧಿ ತೊಂದರೆಗಳಿಗೆ ಸಂಬಂಧವಿರುವುದನ್ನು ಕಂಡುಕೊಳ್ಳಲಾಗಿದೆ. ಹಾಗಾದರೆ ಇದುವರೆಗೆ ನಮ್ಮ ಹಿರಿಯರು ನಡೆಸಿಕೊಂಡು ಬಂದ ಕ್ರಮ ತಪ್ಪೇ? ಬನ್ನಿ, ನಿಜವಾದ ಕಾರಣಗಳು ಮತ್ತು ಇತರ ಅಮೂಲ್ಯ ಮಾಹಿತಿಯನ್ನು ಅರಿಯೋಣ:
ಸಾಮಾನ್ಯ ಚಿಕ್ಕ ಲಿಂಬೆಯ ಗಾತ್ರದ, ಮುಳ್ಳುಮುಳ್ಳಾದ ಹರಳಿನ ಕಾಯಿಗಳಿಂದ (Ricinus communis) ಈ ಎಣ್ಣೆಯನ್ನು ಹಿಂಡಿ ತೆಗೆಯಲಾಗುತ್ತದೆ. ಜಗತ್ತಿನಲ್ಲಿ ಹರಳೆಣ್ಣೆಯ ಉಪಯೋಗವನ್ನು ಈಜಿಪ್ಶಿಯನ್ನರು ಪ್ರಾರಂಭಿಸಿದರು ಎಂದು ನಂಬಲಾಗಿದೆ. ಹರಳೆಣ್ಣೆಯನ್ನು ಹಿಂದಿನ ಕಾಲದಲ್ಲಿ ಕೇವಲ ರಸ್ತೆದೀಪಗಳಿಗೆ ಮಾತ್ರವಲ್ಲ, ಬಾಗಿಲುಗಳ ಬಿಜಾಗರಿ, ರಥ, ಗಾಡಿಗಳ ಗಾಲಿಗಳಿಗೆ ಜಾರುವಂತಾಗಲು ಮೊದಲಾದವುಗಳಿಗೆ ಉಪಯೋಗಿಸಲಾಗುತ್ತಿತ್ತು. ಇವೆಲ್ಲಾ ಈಗ ಇಲ್ಲವಾಗಿದ್ದರೂ ಈ ಎಣ್ಣೆಯನ್ನು ಕೆಲವಾರು ಪ್ರಸಾದನಗಳು, ಔಷಧಿಗಳು, ಮಸಾಜ್ ಮಾಡುವ ಎಣ್ಣೆಗಳಲ್ಲಿ ಬಳಸಲಾಗುತ್ತದೆ. ಇದರ ಕೆಲವಾರು ಔಷಧೀಯ ಗುಣಗಳ ಕಾರಣದಿಂದ ಕೆಲವು ಔಷಧಿಗಳಲ್ಲಿ ಪ್ರಮುಖ ಅಂಶವನ್ನಾಗಿ ಪರಿಗಣಿಸಲಾಗುತ್ತದೆ. ಈ ಎಣ್ಣೆಯಲ್ಲಿ 90% ರಷ್ಟು ಭಾಗ ರೈಸಿನೋಲಿಕ್ ಆಮ್ಲವಿದೆ. ಇದೇ ಗುಣಪಡಿಸುವ ಗುಣವುಳ್ಳ ಪೋಷಕಾಂಶವಾಗಿದೆ. ಆದರೆ ಇತ್ತೀಚೆಗೆ ಕೆಲವಾರು ಅಧ್ಯಯನಗಳ ಮೂಲಕ ಹರಳೆಣ್ಣೆ ನಮ್ಮ ಹಿರಿಯರು ಕಂಡುಕೊಂಡಷ್ಟು ಸುರಕ್ಷಿತವಲ್ಲ, ಇದಕ್ಕೂ ಕೆಲವಾರು ಅಡ್ಡ ಪರಿಣಾಮಗಳಿವೆ ಎಂದು ತಿಳಿಯಲಾಗಿದೆ. ಇವು ಯಾವ ಅಡ್ಡಪರಿಣಾಮಗಳು, ಇದರಿಂದೇನು ತೊಂದರೆ ಎಂಬುದನ್ನು ನೋಡೋಣ.
ಹರಳೆಣ್ಣೆ ಅಡ್ಡಪರಿಣಾಮವನ್ನು ಹೇಗೆ ಉಂಟುಮಾಡುತ್ತದೆ?
ವಿರೇಚಕವಾಗಿ ಬಳಸುವುದಾದರೆ ಇದು ಸುರಕ್ಷಿತ ಅಥವಾ GRAS (Generally Recognized As Safe) ಎಂದು ಆಹಾರ ಮತ್ತು ಔಷಧಿ ಪ್ರಾಧಿಕಾರ (Food and Drug Administration (FDA) ಈ ಎಣ್ಣೆಗೆ ಅನುಮೋದನೆ ನೀಡಿದೆ. ಈ ಎಣ್ಣೆ ಜಠರದಲ್ಲಿ ಜೀರ್ಣವಾಗುವುದಿಲ್ಲ. ಬದಲಿಗೆ ಸಣ್ಣ ಕರುಳಿನಲ್ಲಿ ಜೀರ್ಣಗೊಂಡು ಇದರಲ್ಲಿರುವ ರೈಸಿನೋಲಿಕ್ ಆಮ್ಲ ಮತ್ತು ಇತರ ಪೋಷಕಾಂಶಗಳು ಹೀರಲ್ಪಡುತ್ತವೆ. ವಾಸ್ತವದಲ್ಲಿ, ಈ ರೈಸಿನೋಲಿಕ್ ಆಮ್ಲ ಪ್ರತ್ಯೇಕವಾಗಿದ್ದರೆ ಇದು ವಿಷವಸ್ತುವಾಗಿದೆ. ಆದರೆ National Toxicology Program ಎಂಬ ಸಂಸ್ಥೆಯಲ್ಲಿ ನಡೆಸಿದ ಪ್ರಯೋಗದ ಪ್ರಕಾರ ಈ ಆಮ್ಲ 10% ಕ್ಕೂ ಕಡಿಮೆ ಪ್ರಾಬಲ್ಯದಲ್ಲಿದ್ದಾಗ ಇಲಿಗಳ ಮೇಲೆ ಇವುಗಳಿಂದ ಯಾವುದೇ ತೊಂದರೆಯಾಗಿರಲಿಲ್ಲ ಎಂದು ತಿಳಿಸಿದೆ. ಮಾನವರ ಮೇಲೆ ನಡೆಸಿದ ಪ್ರಯೋಗಗಳೂ ಸರಿಸುಮಾರು ಇದೇ ಬಗೆಯ ಫಲಿತಾಂಶ ಒದಗಿಸಿವೆ. ಆದರೆ ಹರಳೆಣ್ಣೆಯನ್ನು ತಿಳಿಗೊಳಿಸದೇ ಹಾಗೇ ಸೇವಿಸಿದಾಗ ಮಾತ್ರ ಇದರ ಅಡ್ಡ ಪರಿಣಾಮಗಳು ಕಂಡುಬಂದಿವೆ. ಈ ರೈಸಿನೋಲಿಕ್ ಆಮ್ಲ ತಾನಾಗಿಯೇ ಸ್ವತಃ ವಿಷವಲ್ಲದಿದ್ದರೂ ಇತರ ಅಪಾಯಕಾರಿ ರಾಸಾಯನಿಕಗಳು ಚರ್ಮದ ಮೂಲಕ ದೇಹವನ್ನು ಪ್ರವೇಶಿಸುವಂತೆ ಮಾಡುವ ಮೂಲಕ ಪರೋಕ್ಷ ವಿಷವಾಗಿದೆ. ಇದರ ಪರಿಣಾಮವಾಗಿ ಚರ್ಮದಲ್ಲಿ ಉರಿ ಮತ್ತು ಕರುಳುಗಳಲ್ಲಿ ತೊಂದರೆ ಕಂಡುಬರಬಹುದು.
ಹರಳೆಣ್ಣೆಯನ್ನು ಹಾಗೇ ಸೇವಿಸಿದಾಗ ಎದುರಾಗಬಹುದಾದ ಅಡ್ಡಪರಿಣಾಮಗಳು ಹೀಗಿವೆ
1. ವಾಕರಿಕೆ
ಹರಳೆಣ್ಣೆಯ ಪ್ರಮಾಣ ಹೆಚ್ಚಾದರೆ ವಾಕರಿಕೆ ಉಂಟಾಗುತ್ತದೆ. ಇದರಿಂದ ಪರಿಹಾರ ಪಡೆಯುವುದೂ ಸುಲಭವಾಗಿದೆ. ಆದರೆ ಇದರ ಅಡ್ಡಪರಿಣಾಮಗಳು ಉಲ್ಬಣಗೊಂಡರೆ ಮಾತ್ರ ತೀವ್ರತರದ ನಿರ್ಜಲೀಕರಣ ಮತ್ತು ದೇಹದಲ್ಲಿ ಎಲೆಕ್ಟ್ರೋಲೈಟುಗಳ ಅಸಮತೋಲನ ಎದುರಾಗುತ್ತದೆ. ಹರಳೆಣ್ಣೆಯನ್ನು ವಿಕಿರಣಶಾಸ್ತ್ರ ಮತ್ತು ಕರುಳುಗಳ ಒಳಗಿನ ಪರೀಕ್ಷೆ ನಡೆಸುವಾಗ ಉಪಕರಣಗಳಿಗೆ ಹಚ್ಚಲೂ ಬಳಸಲಾಗುತ್ತದೆ. ಹೆಚ್ಚಿನ ರೋಗಿಗಳಿಗೆ ಹರಳೆಣ್ಣೆಯ ವಾಸನೆಯಾಗಲೀ, ರುಚಿಯಾಗಲೀ ಹಿಡಿಸುವುದಿಲ್ಲ. ಇರಾನ್ ನಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಹರಳೆಣ್ಣೆ ಸೇವಿಸಿದವರಲ್ಲಿ ವಾಕರಿಕೆ, ವಾಂತಿ ಹೊಟ್ಟೆ ತುಂಬಿದಂತಿರುವುದು ಮತ್ತು ಸ್ನಾಯುಗಳ ಸೆಡೆತ ಕಂಡುಬಂದಿದೆ.
2. ಚರ್ಮ ಕೆಂಪಗಾಗುವುದು
ಪ್ರಯೋಗಕ್ಕೆ ಒಳಗಾಗಿರುವ ಪ್ರಾಣಿಯ ದೇಹಕ್ಕೆ ಹರಳೆಣ್ಣೆಯನ್ನು ಹಚ್ಚಿದ ಬಳಿಕ ಕೊಂಚ ಉರಿಯಾಗುವುದನ್ನು ಕಂಡುಕೊಳ್ಳಲಾಗಿದೆ. ಅಲ್ಲದೇ ಈ ಎಣ್ಣೆ ಕೊಂಚ ಅಲರ್ಜಿಕಾರಕವೂ ಆಗಿದ್ದು ಹಚ್ಚಿದ ಭಾಗದಲ್ಲಿ ಚರ್ಮ ಕೆಂಪಗಾಗುವಂತೆ ಮಾಡುತ್ತದೆ (erythema) ಮತ್ತು ಕೆಲವೊಮ್ಮೆ ಚಿಕ್ಕ ಗುಳ್ಳೆಗಳೂ ಮೂಡಬಹುದು. ಮಾನವರ ಮೇಲೆ ನಡೆಸಿದ ಅಧ್ಯಯನಗಳಲ್ಲಿ ಹರಳೆಣ್ಣೆ ಹಚ್ಚಿದವರಿಗೆ ಚರ್ಮದಲ್ಲಿ ಕೆಂಪಗಾಗುವುದು ಮತ್ತು ಉರಿ ಕಂಡುಬಂದಿರಲಿಲ್ಲ. ಆದರೆ ಈಗಾಗಲೇ ಚರ್ಮದಲ್ಲಿ ಯಾವುದೋ ಕಾಯಿಲೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದವರಿಗೆ ಮಾತ್ರ ಈ ಎಣ್ಣೆಯಲ್ಲಿರುವ ರೈಸಿನೋಲಿಕ್ ಆಮ್ಲ ಈ ಕಾಯಿಲೆಗಳನ್ನು ಉಲ್ಬಣಗೊಳಿಸಲು ಕಾರಣವಾಗಬಹುದು.
3. ಸ್ನಾಯುಗಳ ಸೆಡೆತ
ಹರಳೆಣ್ಣೆ ಉತ್ತಮ ವಿರೇಚಕವೇನೋ ಹೌದು. ಆದರೆ, ಇದರ ಪ್ರಮಾಣ ಕೊಂಚ ಹೆಚ್ಚಾದರೂ ಇದರಿಂದ ಸ್ನಾಯುಸೆಡೆತ ಮತ್ತು ಸ್ನಾಯುಗಳು ದುರ್ಬಲಗೊಳ್ಳುವುದು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಕರುಳುಗಳ ಸೆಡೆತ ಮತ್ತು ಖಾಲಿ ಹೊಟ್ಟೆಗೇನಾದರೂ ಹೋದರೆ ಹೊಟ್ಟೆಯಲ್ಲಿ ನೋವು ಸಹಾ ಕಾಣಿಸಿಕೊಳ್ಳಬಹುದು. ಇದೇ ಕಾರಣಕ್ಕೆ ಮಾಸಿಕ ದಿನಗಳಲ್ಲಿರುವ ಮಹಿಳೆಯರಿಗೆ ಮತ್ತು ಗರ್ಭಿಣಿಯರಿಗೆ ಹರಳೆಣ್ಣೆಯನ್ನು ವಿರೇಚಕವಾಗಿ ಬಳಸದಂತೆ ಸಲಹೆ ಮಾಡಲಾಗುತ್ತದೆ. ಅಲ್ಲದೇ ಕೆಲವು ಮಹಿಳೆಯರಲ್ಲಿ ಇದು ಗರ್ಭಕೋಶದ ಸಂಕುಚನಗೊಳ್ಳುವಿಕೆಗೂ ಕಾರಣವಾಗಬಹುದು. ಹಾಗಾಗಿ, ಹರಳೆಣ್ಣೆಯನ್ನು ವಿರೇಚಕದ ರೂಪದಲ್ಲಿ ಸೇವಿಸುವಂತೆ ವೈದ್ಯರು ಸಲಹೆ ನೀಡಿದ ಹೊರತಾಗಿ, ತಾವಾಗಿಯೇ ಹರಳೆಣ್ಣೆ ಸೇವಿಸಬಾರದು. ಅಲ್ಲದೇ ಹರಳೆಣ್ಣೆ ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು ಎಂಬುದೂ ಪ್ರಮುಖ ಅಂಶವಾಗಿದ್ದು ಕೇವಲ ತಜ್ಞರು ಮಾತ್ರವೇ ರೋಗಿಯ ಆರೋಗ್ಯವನ್ನು ಪರಿಶೀಲಿಸಿ ಅಗತ್ಯ ಪ್ರಮಾಣವನ್ನು ಸೂಚಿಸಬಹುದು. ಸೂಕ್ತ ಮಾಹಿತಿಯಿಲ್ಲದೇ ಸ್ವತಃ ತೆಗೆದುಕೊಳ್ಳುವುದು ಅಪಾಯಕರ!
4. ತಲೆಸುತ್ತುವಿಕೆ
ಹರಳೆಣ್ಣೆಯ ಪ್ರಮಾಣ ಹೆಚ್ಚಾದರೆ ಎದುರಾಗುವ ತೊಂದರೆಗಳಲ್ಲಿ ತಲೆಸುತ್ತುವಿಕೆಯೂ ಒಂದು. ಉಳಿದಂತೆ ಪ್ರಜ್ಞೆ ತಪ್ಪುವುದು, ಉಸಿರು ತೆಗೆದುಕೊಳ್ಳಲು ಕಷ್ಟವಾಗುವುದು ಮತ್ತು ಕೆಲವು ಸಂದರ್ಭಗಳಲ್ಲಿ ಭ್ರಮಾಧೀನರಾಗುವುದು ಮೊದಲಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಹರಳೆಣ್ಣೆಯ ಕೆಲವು ಗುಣಗಳಿಂದಾಗಿ ಇದನ್ನು ಔಷಧಿಯ ರೂಪದಲ್ಲಿ ಬಳಸಲಾಗುತ್ತಿದೆ. ಅಂದರೆ ಸ್ತನ, ಶ್ವಾಸಕೋಶ, ಗರ್ಭಕೋಶ ಮತ್ತು ಚರ್ಮದ ಕ್ಯಾನ್ಸರ್ ಇರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಖೀಮೋಥೆರಪಿ ಔಷಧಿಗಳಲ್ಲಿ ಹರಳೆಣ್ಣೆಯಿಂದ ಪ್ರತ್ಯೇಕಿಸಲ್ಪಟ್ಟ ಪೋಷಕಾಂಶಗಳನ್ನು ನೀಡಲಾಗುತ್ತದೆ. ಒಂದು ವೇಳೆ ಈ ಔಷಧಿಗಳಿಂದ ಚರ್ಮದಲ್ಲಿ ಚಿಕ್ಕ ಗುಳ್ಳೆಗಳೇಳುವುದು, ತಲೆಸುತ್ತುವಿಕೆ, ಉಸಿರಾಡಲು ಕಷ್ಟವಾಗುವುದು, ಸುಸ್ತು, ಎದೆನೋವು ಮತ್ತು ಇವುಗಳೊಂದಿಗೆ ಕ್ರಮಬದ್ದವಲ್ಲದ ಹೃದಯದ ಬಡಿತವೂ ಎದುರಾದರೆ ತಕ್ಷಣ ವೈದ್ಯರಿಗೆ ತಿಳಿಸಬೇಕು. ಈ ತೊಂದರೆಗಳು ಇದೆ ಎಂದು ತಿಳಿದ ಬಳಿಕವೂ ಈ ಅಂಶಗಳನ್ನು ಏಕಾಗಿ ಈ ಔಷಧಿಗಳಲ್ಲಿ ಬಳಸಲಾಗುತ್ತಿದೆ ಎಂಬ ಪ್ರಶ್ನೆಗೆ ಸೂಕ್ತ ವಿವರಣೆಯನ್ನು ನೀಡಲಾಗಿಲ್ಲ.
5. ನವಜಾತ ಶಿಶುಗಳಿಗೆ ಮತ್ತು ಮಕ್ಕಳಿಗೆ ಮಾರಕ!
ಹಿಂದಿನ ದಿನಗಲಲ್ಲಿ ಸಾಮಾನ್ಯವಾಗಿ ಭಾರತದಲ್ಲಿ ಹುಟ್ಟಿದ ಎರಡನೆಯ ಅಥವಾ ಮೂರನೆಯ ದಿನದಲ್ಲಿಯೇ ಮಗುವಿಗೆ ಹರಳೆಣ್ಣೆಯನ್ನು ನೀಡಲಾಗುತ್ತಿತ್ತು. ಆದರೆ ಇದರಿಂದ ತೀವ್ರ ಆಂತರಿಕ ಸ್ರಾವ, ಕರುಳುಗಳಲ್ಲಿ ಗಾಯ, ಅತಿಸಾರ, ನ್ಯುಮೋನಿಯಾ ಮತ್ತು ಅಪೌಷ್ಠಿಕತೆ ಎದುರಾಗುತ್ತಿತ್ತು. ಹಿಂದಿನಿಂದಲೂ ನಡೆದ ಪದ್ದತಿ ಎಂದು ನಂಬಿರುವ ವ್ಯಕ್ತಿಗಳು ಇದರ ಪರಿಣಾಮದ ಅರಿವಿಲ್ಲದೇ ನವಜಾತ ಶಿಶು, ಚಿಕ್ಕ ಮಕ್ಕಳು, ಬಾಣಂತಿಯರು, ಹಾಲೂಡಿಸುತ್ತಿರುವ ತಾಯಂದಿರಿಗೆ ಸೇವಿಸಲು ನೀಡಿದಾಗ ಯಾವುದಾದರೂ ತೊಂದರೆ ಎದುರಾದರೆ ತಕ್ಷಣ ವೈದ್ಯರನ್ನು ಕಾಣಬೇಕು. ಏಕೆಂದರೆ ಹರಳೆಣ್ಣೆ ಅತಿ ಚಿಕ್ಕ ಪ್ರಮಾಣದಲ್ಲಿದ್ದರೆ ಮಾತ್ರವೇ ಆರೋಗ್ಯಕ್ಕೆ ಪೂರಕವೇ ಹೊರತು ಕೊಂಚ ಹೆಚ್ಚಿದರೂ ಮಾರಕವಾಗಿದೆ. ಹಾಗಾಗಿ, ವೈದ್ಯರು ಹರಳೆಣ್ಣೆಯನ್ನು ಹಾಗೇ ಸೇವಿಸಲು ಸಲಹೆ ಮಾಡುವ ಬದಲು ಇವುಗಳ ಸಿದ್ಧ ರೂಪದ ಮಾತ್ರೆಗಳನ್ನು ಸೇವಿಸಲು ನೀಡುತ್ತಾರೆ. ಈಗ ಈ ಮಾತ್ರೆಗಳು ಜಿಲಾಟಿನ್ ನಲ್ಲಿ ತುಂಬಿಸಲ್ಪಟ್ಟ ರೂಪದಲ್ಲಿ ಸಿಗುತ್ತಿದ್ದು ಕೇವಲ ವೈದ್ಯರ ಸಲಹೆಯ ಮೇರೆಗೆ ಮಾತ್ರವೇ ಔಷಧಿ ಅಂಗಡಿಯಲ್ಲಿ ನೀಡಲಾಗುತ್ತದೆ. ಈ ಮಾತ್ರೆಗಳನ್ನೂ ವೈದ್ಯರು ಸಲಹೆ ಮಾಡಿದ ಪ್ರಮಾಣದಲ್ಲಿ ಮಾತ್ರವೇ ಸೇವಿಸಬೇಕೇ ಹೊರತು ಇವುಗಳ ಪ್ರಮಾಣ ಹೆಚ್ಚಿದರೂ ಹರಳೆಣ್ಣೆಯನ್ನು ನೇರವಾಗಿ ಕುಡಿಯುವ ಅಡ್ಡಪರಿಣಾಮಗಳೇ ಎದುರಾಗಬಹುದು.
ಹರಳೆಣ್ಣೆ ಸೇವಿಸುವ ಮುನ್ನ ಯಾವೆಲ್ಲಾ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು?
* ಒಂದು ವೇಳೆ ಯಾವುದೇ ಸಸ್ಯಜನ್ಯ ಎಣ್ಣೆ ನಿಮಗೆ ಅಲರ್ಜಿಕಾರಕವಾಗಿದ್ದರೆ ಹರಳೆಣ್ಣೆಯನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರಿಗೆ ಈ ಬಗ್ಗೆ ಮುಂಚಿತವಾಗಿ ತಿಳಿಸಬೇಕು.
* ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ನಿಮ್ಮ ಆರೋಗ್ಯದ ವಿವರಗಳನ್ನು ಒದಗಿಸಬೇಕು. ವಿಶೇಷವಾಗಿ ಹೃದಯ, ಮೆದುಳು, ಶ್ವಾಸಕೋಶ ಮತ್ತಿತರ ಪ್ರಮುಖ ಅಂಗಗಳ ತೊಂದರೆಗಳಿದ್ದರೆ ಸೂಕ್ತ ವಿವರಗಳನ್ನು ಸಲ್ಲಿಸಬೇಕು.
* ಹರಳೆಣ್ಣೆಯನ್ನು ಹಗಲಿನ ಹೊತ್ತಿನಲ್ಲಿ ಸೇವಿಸುವುದು ಒಳ್ಳೆಯದಲ್ಲ. ಏಕೆಂದರೆ ಇದರ ಪರಿಣಾಮಗಳು ಸೇವನೆಯ ಎರಡರಿಂದ ಆರು ಘಂಟೆಗಳ ಬಳಿಕವೇ ಕಾಣಿಸತೊಡಗುತ್ತವೆ.
ಹರಳೆಣ್ಣೆಯನ್ನು ಯಾವ ಪ್ರಮಾಣದಲ್ಲಿ ಸೇವಿಸಿದರೆ ಸುರಕ್ಷಿತವಾಗಿದೆ?
* ಹನ್ನೆರಡು ವರ್ಷಕ್ಕೂ ಮೀರಿದ ವ್ಯಕ್ತಿಗಳಿಗೆ ದಿನದ ಅವಧಿಯಲ್ಲಿ ಒಂದರಿಂದ ನಾಲ್ಕು ದೊಡ್ಡ ಚಮಚ (15-60 ಮಿಲಿ ಲೀಟರ್) ನಷ್ಟು ಪ್ರಮಾಣ ಸುರಕ್ಷಿತ ಎಂದು ಪರಿಗಣಿಸಲಾಗಿದೆ.
* ಎರಡರಿಂದ ಹನ್ನೆರಡು ವರ್ಷ ವಯಸ್ಸಿನ ಮಕ್ಕಳಿಗೆ ಒಂದರಿಂದ ಮೂರು ಚಿಕ್ಕ ಚಮಚ (5-15 ಮಿಲಿ ಲೀಟರ್) ನಷ್ಟು ಪ್ರಮಾಣ ಸುರಕ್ಷಿತ ಎಂದು ಪರಿಗಣಿಸಲಾಗಿದೆ.
* ಎರಡು ವರ್ಷಕ್ಕೂ ಕಿರಿಯ ಮಕ್ಕಳಿಗೆ ಹರಳೆಣ್ಣೆಯಾಗಲೀ, ಇವುಗಳಿಂದ ತಯಾರಿಸಲ್ಪಟ್ಟ ಹೆಚ್ಚುವರಿ ಔಷಧಿಗಳನ್ನಾಗಲೀ ನೀಡಲೇಬಾರದು. ಈ ಎಚ್ಚರಿಕೆಯನ್ನು ಮೀರಿ ಹರಳೆಣ್ಣೆ ಕುಡಿಸಲೇಬೇಕಾದ ಇತರ ಅನಿವಾರ್ಯ ಸಂದರ್ಭವಿದ್ದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.