Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಚ್ಚರ! ಇಂತಹ ಹೃದಯಾಘಾತದ ಲಕ್ಷಣಗಳನ್ನು ತಪ್ಪಿಯೂ ನಿರ್ಲಕ್ಷಿಸಬೇಡಿ!
ಹೃದಯಸ್ತಂಭನ ಹಾಗೂ ಹೃದಯಸಂಬಂಧಿ ಕಾಯಿಲೆಗೆಳು ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಕಾರಣವಾಗಿವೆ ಎಂಬ ಮಾಹಿತಿಯನ್ನು ನಾವೆಲ್ಲಾ ಅರಿತೇ ಇದ್ದೇವೆ. ಇಡಿಯ ದೇಹಕ್ಕೆ ರಕ್ತವನ್ನು ಹೃದಯ ಪೂರೈಸಿದರೂ, ಹೃದಯಕ್ಕೇ ರಕ್ತ ಒದಗಿಸುವ ಪ್ರಮುಖ ರಕ್ತನಾಳವಾದ coronary arteryಯಲ್ಲಿಯೇ ರಕ್ತದ ಪರಿಚಲನೆಗೆ ತಡೆ ಇರುವುದು ಹೃದಯ ಸ್ತಂಭನಕ್ಕೆ ಪ್ರಮುಖ ಕಾರಣವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಹೃದಯ ಸ್ತಂಭನದಿಂದ ಚಿಕ್ಕ ವಯಸ್ಸಿನಲ್ಲಿ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಮತ್ತು ಹಠಾತ್ತಾಗಿ ಸಾವು ಸಂಭವಿಸುತ್ತಿದೆ. ಹೃದಯದ ನಾಳಗಳಲ್ಲಿ ತೊಂದರೆ ಇದ್ದರೆ ದೇಹವೇ ಕೆಲವು ಸೂಚನೆಗಳನ್ನು ಸೂಚ್ಯವಾಗಿ ನೀಡುತ್ತದೆ. ಈ ಸೂಚನೆಗಳನ್ನು ಗಮನಿಸಿ ಸೂಕ್ತ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಹಾಗೂ ತಕ್ಷಣ ಅಗತ್ಯವಿರುವ ಚಿಕಿತ್ಸೆಯನ್ನು ಪಡೆದುಕೊಂಡರೆ ಈ ಮಾರಕ ರೋಗದಿಂದ ರಕ್ಷಣೆ ಪಡೆಯಬಹುದು.

ಒಂದು ವೇಳೆ ನಿಮ್ಮ ಆಯಸ್ಸು ಅರವತ್ತು ದಾಟಿದ್ದು ಸ್ಥೂಲಕಾಯ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಅಥವಾ ಅಧಿಕ ರಕ್ತದೊತ್ತಡ ಮೊದಲಾದ ತೊಂದರೆಗಳಿದ್ದರೆ ಹೃದಯಾಘಾತದ ಸಾಧ್ಯತೆಗಳನ್ನು ಈ ಸ್ಥಿತಿಗಳು ಹೆಚ್ಚಿಸುತ್ತವೆ. ಆದ್ದರಿಂದ ಹೃದಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಇಂದಿನ ಲೇಖನದಲ್ಲಿ ಹೃದಯಾಘಾತದ ಮುನ್ಸೂಚನೆಯನ್ನು ನೀಡುವ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಲಾಗಿದ್ದು ಒಂದು ವೇಳೆ ಇವುಗಳಲ್ಲಿ ಯಾವುದಾದರೊಂದನ್ನು ಅನುಭವಿಸಿದ್ದರೂ ತಕ್ಷಣ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಹೃದಯಾಘಾತದ ಪ್ರಮುಖ ಸೂಚನೆಗಳು ಒಂದು ತಿಂಗಳ ಮೊದಲೇ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಸೂಚನೆಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿಯಾಗಬಹುದು....
ಅಸಾಮಾನ್ಯವಾದ ದೈಹಿಕ ಸುಸ್ತು
ಇದು ಅತ್ಯಂತ ಪ್ರಮುಖ ಮುನ್ಸೂಚನೆಯಾಗಿದ್ದು ಹೃದಯಕ್ಕೆ ಸಾಕಷ್ಟು ರಕ್ತಪರಿಚಲನೆ ದೊರಕುತ್ತಿಲ್ಲ ಎಂದು ತಿಳಿಸುತ್ತದೆ. ಪರಿಣಾಮವಾಗಿ ದೇಹವಿಡೀ ಪಸರಿಸುವ ರಕ್ತದ ಪ್ರಮಾಣ ಹಾಗೂ ಸಾಕಷ್ಟು ಒತ್ತಡದಲ್ಲಿ ಲಭ್ಯವಾಗದೇ ಇರುವ ಕಾರಣ ಸುಸ್ತು ಆವರಿಸುತ್ತದೆ. ಈ ಸ್ಥಿತಿ ರಕ್ತನಾಳಗಳ ಒಳಗೆ ಜಿಡ್ಡು ಕಟ್ಟಿಕೊಂಡು ಒಳಗಣ ವಿಸ್ತಾರ ಕಿರಿದಾಗಿರುವುದು, ಶಿಥಿಲಗೊಂಡ ಸ್ನಾಯುಗಳಿಗೆ ಕಾರಣವಾಗುತ್ತದೆ ಹಾಗೂ ಇವು ಹೃದಯಾಘಾತದ ಪ್ರಮುಖ ಮುನ್ಸೂಚನೆಯಾಗಿದೆ.
ಕಣ್ಣು ಮಂಜಾಗುವುದು/ತಲೆ ತಿರುಗುವುದು
ಒಂದು ವೇಳೆ ರಕ್ತಪೂರೈಕೆಯ ಪ್ರಮಾಣದಲ್ಲಿ ಕಡಿಮೆಯಾದರೆ ಸುಸ್ತಾಗುವ ಜೊತೆಗೇ ಕಣ್ಣು ಮಂಜಾಗಿ ತಲೆ ಸಹಾ ತಿರುಗುತ್ತದೆ. ವಿಶೇಷವಾಗಿ ಮೆದುಳಿಗೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ರಕ್ತ ಸಿಗದೇ ಇರುವುದು ಇದಕ್ಕೆ ಕಾರಣವಾಗಿದ್ದು ಈ ಸೂಚನೆ ಸಹಾ ಹೃದಯಾಘಾತದ ಪ್ರಮುಖ ಪೂರ್ವಮುನ್ಸೂಚನೆಯಾಗಿದೆ.
ತಣ್ಣನೆಯ ಬೆವರು
ಸಾಮಾನ್ಯವಾಗಿ ಮೈ ಬಿಸಿಯಾದಾಗಲೇ ದೇಹವನ್ನು ತಣ್ಣಗಾಗಿಸಲು ಬೆವರು ಹರಿಯಲಾರಂಭಿಸುತ್ತದೆ. ಒಂದು ವೇಳೆ ದೇಹ ತಣ್ಣಗಿದ್ದಾಗಲೂ ಬೆವರು ಹರಿಯಲಾರಂಭಿಸಿದರೆ ದೇಹ ಯಾವುದೋ ಒತ್ತಡಕ್ಕೆ ಒಳಗಾಗಿದೆ ಎಂದು ತಿಳಿದುಕೊಳ್ಳಬೇಕು. ಒಂದು ವೇಳೆ ದೇಹದಲ್ಲಿ ಸೂಕ್ತ ಪ್ರಮಾಣದ ರಕ್ತಪ್ರವಾಹವನ್ನು ಪಡೆಯದೇ ಇದ್ದರೆ ದೇಹದಲ್ಲಿ ಶಕ್ತಿಯೇ ಇಲ್ಲದಂತೆ ಹಾಗೂ ತಣ್ಣಗಾದಂತೆ ಅನ್ನಿಸಬಹುದು. ಈ ಸಮಯದಲ್ಲಿ ಬೆವರು ಹರಿಯುವುದು ಸಹಾ ಹೃದಯಾಘಾತದ ಮುನ್ನೆಚ್ಚರಿಕೆಯಾಗಿದೆ.
ಎದೆಯಲ್ಲಿ ನೋವು
ಒಂದು ವೇಳೆ ಎದೆಯ ಎಡಭಾಗದ ಕೊಂಚವೇ ಮೇಲ್ಭಾಗದಲ್ಲಿ ಸೂಜಿಯಲ್ಲಿ ಚುಚ್ಚಿದ ನೋವಿನ ಅನುಭವವಾದರೆ ಹಾಗೂ ಇದರೊಂದಿಗೇ ಕೈ, ಬೆನ್ನು ಮತ್ತು ಭುಜಗಳಲ್ಲಿಯೂ ನೋವಾದರೆ ತಡಮಾಡದೇ ವೈದ್ಯರ ನೆರವು ಪಡೆಯಬೇಕು. ಎದೆಯಲ್ಲಿ ನೋವು ಹಾಗೂ ಎದೆ ಬಿಗಿದಂತಾಗುವುದು ಹೃದಯದಲ್ಲಿ ತೊಂದರೆ ಇರುವ ಸ್ಪಷ್ಟ ಸಂಕೇತವಾಗಿದ್ದು ಇದರ ಪರಿಣಾಮವಾಗಿ ಹೃದಯಾಘಾತವೂ ಎದುರಾಗಬಹುದು.
ಶೀತ ಮತ್ತು ಜ್ವರದ ಲಕ್ಷಣಗಳು
ಹೃದಯಾಘಾತಕ್ಕೆ ಒಳಗಾದ ಬಳಿಕ ತಕ್ಷಣ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಹೆಚ್ಚಿನ ವ್ಯಕ್ತಿಗಳು ಹೃದಯಾಘಾತಕ್ಕೂ ಒಂದು ತಿಂಗಳ ಮುನ್ನ ತಾವು ಶೀತ ಅಥವಾ ಫ್ಲೂ ಜ್ವರದ ಲಕ್ಷಣಗಳನ್ನು ಅನುಭವಿಸಿದೆವು ಎಂದು ತಿಳಿಸಿದ್ದಾರೆ. ಇದು ಸಹಾ ಹೃದಯಾಘಾತದ ಪ್ರಮುಖ ಮುನ್ಸೂಚನೆಯಾಗಿದೆ.
ಉಸಿರು ತೆಗೆದುಕೊಳ್ಳಲು ಕಷ್ಟವಾಗುವುದು
ಹೃದಯಾಘಾತದ ಇದು ಇನ್ನೊಂದು ಪ್ರಮುಖ ಲಕ್ಷಣವಾಗಿದೆ. ಹೃದಯದ ಪೂರ್ಣ ಕ್ಷಮತೆಯಲ್ಲಿ ಕೆಲಸ ಮಾಡಲು ಶ್ವಾಸಕೋಶಗಳೂ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡಬೇಕಾಗಿರುತ್ತದೆ. ಯಾವಾಗ ಹೃದಯದಿಂದ ರಕ್ತಪರಿಚಲನೆ ಕಡಿಮೆಯಾಯಿತೋ, ಶ್ವಾಸಕೋಶಕ್ಕೂ ರಕ್ತಪೂರೈಕೆ ಕಡಿಮೆಯಾಗುತ್ತದೆ ಹಾಗೂ ಪೂರ್ಣಪ್ರಮಾಣದಲ್ಲಿ ಶ್ವಾಸ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಉಸಿರಾಟ ಕಷ್ಟಕರವಾಗುತ್ತದೆ. ಇದು ಸಹಾ ಹೃದಯಾಘಾತದ ಪ್ರಮುಖ ಮುನ್ಸೂಚನೆಯಾಗಿದೆ.
ವಾಕರಿಕೆ, ಅಜೀರ್ಣ, ಹೊಟ್ಟೆಯಲ್ಲಿ ನೋವು ಇತ್ಯಾದಿ
ಹೃದಯಾಘಾತದ ಇತರ ಮುನ್ಸೂಚನೆಗಳಲ್ಲಿ ವಾಕರಿಕೆ, ಅಜೀರ್ಣತೆ, ಎದೆಯುರಿ, ಹೊಟ್ಟೆಯಲ್ಲಿ ಮತ್ತು ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಸೂಚನೆಗಳು ಸಹಾ ಸತತವಾಗಿದ್ದರೆ ಇವುಗಳನ್ನು ಅಲಕ್ಷಿಸದೇ ತಕ್ಷಣ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

