For Quick Alerts
ALLOW NOTIFICATIONS  
For Daily Alerts

ನೋವನ್ನು ಶೀಘ್ರ ಶಮನಮಾಡುವ ನೈಸರ್ಗಿಕ ನೋವು ನಿವಾರಕಗಳು

|

ನೋವು ಎಂದರೆ ಯಾವುದೋ ಭಾಗದಲ್ಲಿ ನಮಗೆ ತೊಂದರೆಯಾಗಿದೆ ಎಂದು ಮೆದುಳಿಗೆ ನೀಡುವ ಸೂಚನೆಯಾಗಿದೆ. ಇಂದು ನೋವು ಎದುರಾದರೆ ಸಾಮಾನ್ಯವಾಗಿ ಪ್ಯಾರಾಸೆಟಮಾಲ್ ಎಂಬ ಮಾತ್ರೆಯನ್ನು ನಾವೆಲ್ಲಾ ಯಾವುದೇ ಅಳುಕಿಲ್ಲದೇ ತೆಗೆದುಕೊಂಡು ಬಿಡುತ್ತೇವೆ. ವಾಸ್ತವದಲ್ಲಿ ಇವುಗಳು ಹೇಗೆ ಕೆಲಸ ಮಾಡುತ್ತವೆ ಗೊತ್ತೇ? ಇದರ ಹೆಸರು ನೋವು ನಿವಾರಕ (pain killer) ಎಂದಿದ್ದರೂ ಇದು ವಾಸ್ತವವಾಗಿ ನೋವನ್ನು ಕೊಲ್ಲುವುದಿಲ್ಲ. ಬದಲಿಗೆ ನೋವಿನ ಸಂಕೇತಗಳು ಮೆದುಳಿಗೆ ತಲುಪದಂತೆ ಅಡ್ಡಿಪಡಿಸುತ್ತವೆ ಅಷ್ಟೇ! ಇನ್ನೊಂದು ವಿಧದಲ್ಲಿ ಹೇಳಬಹುದಾದರೆ ಇದೊಂದು ಬಗೆಯ ಅರವಳಿಕೆ (anaesthesia) ಯಂತೆ ಕಾರ್ಯನಿರ್ವಹಿಸುತ್ತದೆ.

Effective Natural Ways To Relieve Pain

ಹಾಗಾಗಿ, ಯಾವುದೇ ಭಾಗದಲ್ಲಿ ನೋವು ಇದೆ ಎಂದಾದರೆ ಮೊದಲಾಗಿ ಈ ನೋವಿನ ಕಾರಣವನ್ನು ವೈದ್ಯರು ಹುಡುಕುತ್ತಾರೆ. ಕೆಲವು ಸೂಚನೆಗಳಿಂದ ಇದಕ್ಕೆ ಕಾರಣ ಸ್ಥೂಲವಾಗಿ ಪರಿಗಣಿಸಲ್ಪಡುತ್ತದೆ. ಇದಕ್ಕೆ ಸೂಕ್ತ ಔಷಧಿಯನ್ನೇ ವೈದ್ಯರು ಕೊಡುತ್ತಾರೆಯೇ ವಿನಃ ನೋವು ನಿವಾರಕವನ್ನೇ ಏಕಾಏಕಿ ಕೊಡಲಾರರು. ಅಗತ್ಯ ಕಂಡುಂಬಂದರೆ ಮಾತ್ರವೇ ನೀಡಬಹುದು. ಹಾಗಾದರೆ, ಈ ಔಷಧಿಗಳು ಇಲ್ಲದಿದ್ದ ಹಿಂದಿನ ಸಮಯದಲ್ಲಿ ನಮ್ಮ ಹಿರಿಯರು ನೋವು ಎದುರಾದರೆ ಏನು ಮಾಡುತ್ತಿದ್ದರು? ಇದಕ್ಕೆ ಸರಳ ಉತ್ತರ, ನೈಸರ್ಗಿಕ ಅವಶ್ಯಕ ತೈಲಗಳು. ಈ ವಿಧಾನಗಳು ಇಂದಿಗೂ ಪ್ರಸ್ತುತವಾಗಿದ್ದು ಕೊಂಚ ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡಪರಿಣಾಮವಿಲ್ಲದೇ ಸೂಕ್ತ ಪರಿಹಾರವನ್ನು ಒದಗಿಸುತ್ತವೆ. ಇವುಗಳ ಬಗ್ಗೆ ಸಂಶೋಧಕರು ಹೆಚ್ಚಿನ ಸಂಶೋಧನೆಯಿಂದ ಹೆಚ್ಚಿನ ಮಾಹಿತಿ ಪಡೆದಿದ್ದು ಇವುಗಳ ಉಪಯೋಗವನ್ನು ಹೇಗೆ ಉತ್ತಮಗೊಳಿಸಬಹುದು ಎಂದು ವಿವರಿಸಿದ್ದಾರೆ. ಇಂದಿನ ಲೇಖನದಲ್ಲಿ ನೋವು ನಿವಾರಣೆಯಲ್ಲಿ ಪ್ರಮುಖವಾಗಿರುವ ವಿಧಾನಗಳ ಮಾಹಿತಿಯನ್ನು ಒದಗಿಸಲಾಗಿದೆ. ಬನ್ನಿ ನೋಡೋಣ:

1. ಪುದಿನಾ ತೈಲ

1. ಪುದಿನಾ ತೈಲ

ಪುದಿನಾದಲ್ಲಿ ಉರಿಯೂತ ನಿವಾರಕ, ಅತಿಸೂಕ್ಷ್ಮಜೀವಿ ನಿವಾರಕ, ನೋವು ನಿವಾರಕ ಗುಣಗಳಿವೆ. ಇದರಲ್ಲಿ ಮುಖ್ಯವಾಗಿರುವ ಪೋಷಕಾಂಶಗಳೆಂದರೆ ಕಾರ್ವಾಕ್ರಾಲ್, ಮೆಂಥಾಲ್ ಮತ್ತು ಲಿಮೋಲೀನ್. ಈ ಎಣ್ಣೆಯು ಪ್ರಬಲವಾಗಿದ್ದು ಚರ್ಮಕ್ಕೆ ಹಚ್ಚಿಕೊಳ್ಳುವ ಮುನ್ನ ಸುರಕ್ಷಿತ ತೈಲದೊಂದಿಗೆ ಮಿಶ್ರಣ ಮಾಡಿ ಹಚ್ಚಿಕೊಳ್ಳಬೇಕು. ವಿಶೇಷವಾಗಿ ನೋವಿನೊಂದಿಗೆ ತುರಿಕೆ ಇದ್ದರೆ ಈ ತೈಲ ಅತ್ಯುತ್ತಮವಾಗಿದೆ. 2015ರ ಸಮೀಕ್ಷೆಯೊಂದರ ಪ್ರಕಾರ ಈ ಎಣ್ಣೆಯನ್ನು ಅತಿ ನೋವಿನ ಸ್ನಾಯುಗಳ ಸೆಡೆತ ಮತ್ತು ಸಂಧಿವಾತದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ನೀಡಿದಾಗ ಇವರ ನೋವು ಸಾಕಷ್ಟು ಮಟ್ಟಿಗೆ ಕಡಿಮೆಯಾಗಿತ್ತು. ಕೆಲವು ಸಂಶೋಧನೆಗಳಲ್ಲಿ ಈ ಎಣ್ಣೆಯನ್ನು ಹಣೆ ಮತ್ತು ಹಣೆಯ ಪಕ್ಕದ ಭಾಗ-temple (ಕನ್ನಡಕದ ಕಡ್ಡಿ ತಾಕುವ ಭಾಗ) ದಲ್ಲಿ ಹಚ್ಚಿಕೊಂಡಾಗ ತಲೆನೋವು ತಕ್ಷಣವೇ ಕಡಿಮೆಯಾಗುತ್ತದೆ. ಆದರೆ ಈ ತೈಲ ಚರ್ಮದೊಳಗೆ ಶೀಘ್ರವಾಗಿ ಇಳಿಯುವ ಗುಣವುಳ್ಳದ್ದಾದುದರಿಂದ ಚರ್ಮದ ಮೇಲೆ ಯಾವುದೇ ಗೀರಿನಷ್ಟು ಗಾಯವಿದ್ದರೂ ಅಲ್ಲಿ ಹಚ್ಚಿಕೊಳ್ಳಬಾರದು. ಏಕೆಂದರೆ ಗಾಯದ ಒಳಗೆ ಹೋದ ಎಣ್ಣೆ ಅಲರ್ಜಿಕಾರಕವಾಗಿ ಪರಿಣಮಿಸಬಹುದು. ಹಾಗಾಗಿ, ಈ ಎಣ್ಣೆ ನಿಮಗೆ ಅಲರ್ಜಿಕಾರಕವೇ ಅಲ್ಲವೇ ಎಂಬುದನ್ನು ಪರೀಕ್ಷಿಸಲು ಮೊಣಕೈ ಹಿಂಭಾಗದಲ್ಲಿ ಕೊಂಚ ಭಾಗಕ್ಕೆ ಸವರಿ ಕೊಂಚ ಹೊತ್ತು ಬಿಟ್ಟು ಪರೀಕ್ಷಿಸಬೇಕು. ಅಲರ್ಜಿ ಇದ್ದರೆ ಇಲ್ಲಿ ಚಿಕ್ಕ ಗುಳ್ಳೆಗಳು ಮೂಡುತ್ತವೆ. ಇದು ಆಗಲಿಲ್ಲವೆಂದರೆ ನಿಮಗಿದು ಸುರಕ್ಷಿತ ಎಂದು ಪರಿಗಣಿಸಬಹುದು. ಆದರೆ ಮಕ್ಕಳಿಗೆ ಈ ಎಣ್ಣೆ ಸೂಕ್ತವಲ್ಲ.

2. ನೀಲಗಿರಿ ಎಣ್ಣೆ

2. ನೀಲಗಿರಿ ಎಣ್ಣೆ

ಭಾರತದಲ್ಲಿ ಬಹಳ ಹಿಂದಿನಿಂದಲೂ ಹಲವಾರು ಬಗೆಯ ನೋವುಗಳಿಗೆ ಹಚ್ಚಲು ನೀಲಗಿರಿ ಎಣ್ಣೆಯನ್ನು ಬಳಸಲಾಗುತ್ತಾ ಬರಲಾಗಿದೆ. ಅಲ್ಲದೇ ಬಾವು ಮತ್ತು ಉರಿಯೂತಕ್ಕೂ ನೀಲಗಿರಿ ಎಣ್ಣೆ ಉತ್ತಮವಾಗಿದೆ. ಅಧ್ಯಯನವೊಂದರಲ್ಲಿ ಬಾದಾಮಿ ಎಣ್ಣೆಯ ಹಬೆಯನ್ನು ಮೂಗಿನಿಂದ ಒಳಗೆಳೆದುಕೊಳ್ಳುವುದಕ್ಕಿಂತಲೂ ನೀಲಗಿರಿ ಎಣ್ಣೆಯ ಹಬೆಯನ್ನು ಎಳೆದುಕೊಂಡಾಗ ಕೆಲವು ಬಗೆಯ ನೋವುಗಳು ಶೀಘ್ರವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ. ಈ ಅಧ್ಯಯನದಲ್ಲಿ ಮಂಡಿಯ ಚಿಪ್ಪಿನ ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೆಲವು ವ್ಯಕ್ತಿಗಳಿಗೆ ಸತತ ಮೂರು ದಿನಗಳವರೆಗೆ ದಿನದಲ್ಲಿ ಅರ್ಧ ಘಂಟೆ ಕಾಲ ನೀಲಗಿರಿ ಎಣ್ಣೆಯ ಹಬೆಯನ್ನು ಸೇವಿಸಲು ಸಲಹೆ ಮಾಡಲಾಗಿತ್ತು ಇವರಿಗೆ ಶೀಘ್ರವೇ ನೋವು ಕಡಿಮೆಯಾಗಿತ್ತು. ಆದರೆ ನೀಲಗಿರಿ ಎಣ್ಣೆ ಮಕ್ಕಳಿಗೆ ಮತ್ತು ಸಾಕುಪ್ರಾಣಿಗಳಿಗೆ ಸೂಕ್ತವಲ್ಲ. ಶ್ವಾಸಕೋಶದ ತೊಂದರೆ ಇರುವವರಿಗೂ ನೀಲಗಿರಿ ಎಣ್ಣೆ ಸೂಕ್ತವಲ್ಲ. ಏಕೆಂದರೆ ಇದು ಅಸ್ತಮಾ ರೋಗವನ್ನು ಉದ್ದೀಪನಗೊಳಿಸಬಹುದು. ಹಾಗಾಗಿ ಈ ಎಣ್ಣೆಯನ್ನು ಮೊದಲು ಸುರಕ್ಷಿತ ಎಣ್ಣೆಯೊಂದಿಗೆ ಬೆರೆಸಿಯೇ ಹಚ್ಚಿಕೊಳ್ಳಬೇಕು. ಅಲ್ಲದೇ ನೀಲಗಿರಿ ಎಣ್ಣೆಯ ಬಾಟಲಿಯನ್ನು ನಾಲ್ಕು ಜನರಿದ್ದ ಕಡೆ ತೆರೆದಿಡಬಾರದು, ಏಕೆಂದರೆ ಕೆಲವರಿಗೆ ಇದು ಅಲರ್ಜಿಕಾರಕವಾಗಿರಬಹುದು. ಅಲ್ಲದೇ ಕುಡಿಯಲೂ ಬಾರದು, ಇದು ಜೀರ್ಣಾಂಗಗಳಿಗೆ ವಿಷಕಾರಿಯಾಗಿದೆ. ಅಲ್ಲದೇ ಚರ್ಮಕ್ಕೆ ಹಚ್ಚಿಕೊಳ್ಳುವ ಮುನ್ನ ಮೊಣಕೈ ಭಾಗಕ್ಕೆ ಹಚ್ಚಿ ಮೊದಲು ಅಲರ್ಜಿಕಾರಕವಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.

3. ಲವಂಗದ ಎಣ್ಣೆ

3. ಲವಂಗದ ಎಣ್ಣೆ

ಯೂಜೀನಿಯಾ ಕ್ಯಾರೋಫಿಲ್ಲಾ ಎಂಬ ಸಸ್ಯದ ಮೊಗ್ಗುಗಳನ್ನು ಒಣಗಿಸಿ ಪಡೆಯುವ ಲವಂಗದಿಂದ ಹಿಂಡಿ ತೆಗೆದ ಲವಂಗದ ಎಣ್ಣೆ ಮೊತ್ತ ಮೊದಲಾಗಿ ಹಲ್ಲು ನೋವಿಗೆ ಶಮನಕಾರಕವಾಗಿ ಹೆಚ್ಚು ಬಳಸಲ್ಪಡುತ್ತದೆ. 2006ರಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಈ ಎಣ್ಣೆ ಹಲ್ಲುನೋವಿನ ನಿವಾರಣೆಗೆ ವೈದ್ಯರು ಬಳಸುವ ಬೆಂಜೋಕೈನ್ ಜೆಲ್ ಎಂಬ ಔಷಧಿಗೆ ಸರಿಸಮನಾದ ಫಲಿತಾಂಶವನ್ನು ಲವಂಗದ ಎಣ್ಣೆ ಒದಗಿಸುತ್ತದೆ. ಹಲ್ಲುಗಳಲ್ಲಿ ಕುಳಿ ಇದ್ದಾಗ ಈ ಕುಳಿಯಲ್ಲಿ ಲವಂಗದ ಚಿಕ್ಕ ಚೂರನ್ನು ಭರ್ತಿ ಮಾಡುವ ಮೂಲಕ ನೋವು ಕಡಿಮೆಯಾಗಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಆದರೆ ಈ ನೋವು ನಿವಾರಕವನ್ನು ಪರಿಪೂರ್ಣವಾದ ಔಷಧಿಯನ್ನಾಗಿಸಲು ಇನ್ನೂ ಸಂಶೋಧನೆಗಳು ಮುಂದುವರೆಯಬೇಕಿವೆ. ಲವಂಗದಲ್ಲಿರುವ ಆಂಟಿ ಆಕ್ಸಿಡೆಂಟ್, ಉರಿಯೂತ ನಿವಾರಕ, ಶಿಲೀಂಧ್ರ ನಿವಾರಕ ಮತ್ತು ವೈರಸ್ ನಿವಾರಕ ಗುಣಗಳು ಆರೋಗ್ಯವನ್ನು ವೃದ್ಧಿಸುತ್ತವೆ ಎಂದು ಸಂಶೋಧಕರು ನಂಬಿದ್ದಾರೆ.

4. ಲ್ಯಾವೆಂಡರ್ ಅವಶ್ಯಕ ತೈಲ

4. ಲ್ಯಾವೆಂಡರ್ ಅವಶ್ಯಕ ತೈಲ

ಬಾಹ್ಯ ನೋವನ್ನು ತಕ್ಷಣವೇ ನಿವಾರಿಸಲು ಈ ತೈಲ ಉಪಯುಕ್ತವಾಗಿದೆ. ನೋವು ನಿವಾರಣೆಯ ಹೊರತಾಗಿ ಸುಖನಿದ್ದೆ ಪಡೆಯಲು ಹಾಗೂ ಉದ್ವೇಗವನ್ನು ನಿವಾರಿಸಲೂ ಈ ತೈಲವನ್ನು ನೂರಾರು ವರ್ಷಗಳಿಂದ ಬಳಸಲಾಗುತ್ತಿದೆ. ಅಧ್ಯಯನವೊಂದರಲ್ಲಿ ಲ್ಯಾವೆಂಡರ್ ಎಣ್ಣೆಯನ್ನು ಮೂಗಿನ ಮೂಲಕ ಒಳಗೆಳೆದುಕೊಂಡಾಗ ಮೈಗ್ರೇನ್ ತಲೆನೋವು ಕಡಿಮೆಯಾಗಿರುವುದು ಕಂಡುಬಂದಿದೆ. ಕೆಲವು ಸಂಶೋಧಕರ ಪ್ರಕಾರ, ಈ ಎಣ್ಣೆಯಲ್ಲಿ ನೋವು ನಿವಾರಕ, ಉರಿಯೂತ ನಿವಾರಕ ಮತ್ತು ಪ್ರಬಲ ಆಂಟಿ ಆಕ್ಸಿಡೆಂಟ್ ಗುಣಗಳಿದ್ದು ಪ್ರಾಣಿಗಳ ಮೇಲಿನ ಪ್ರಯೋಗದಲ್ಲಿ ಪರಿಣಾಮಕಾರಿಯಾಗಿದೆ. ಆದರೆ ಅವಶ್ಯಕ ತೈಲಗಳ ಕುರಿತು ಆಹಾರ ಮತ್ತು ಔಷಧಿ ಪ್ರಾಧಿಕಾರ (The Food and Drug Administration (FDA) ಇದುವರೆಗೆ ಯಾವುದೇ ಖಚಿತ ಮಾನದಂಡಗಳನ್ನು ವಿಧಿಸಿಲ್ಲದ ಕಾರಣ ಇವುಗಳ ಬಳಕೆಯ ಪ್ರಮಾಣ ಮತ್ತು ಅವಧಿಯನ್ನು ತಾವಾಗಿಯೇ ನಿಶ್ಚಯಿಸುವ ಬದಲು ನಿಮ್ಮ ವೈದ್ಯರ ಸಲಹೆಯಂತೆ ಬಳಸುವುದು ಅಗತ್ಯ. ಆದರೆ ಈ ಎಣ್ಣೆಗಳ ಕುರಿತು ವಹಿಸಬೇಕಾದ ಒಂದು ಎಚ್ಚರಿಕೆ ಎಂದರೆ ಇವುಗಳನ್ನು ಕೇವಲ ದೇಹದ ಹೊರಭಾಗಕ್ಕೆ ಮಾತ್ರವೇ ಬಳಸಬಹುದೇ ಹೊರತು ಹೊಟ್ಟೆಗೆ ತೆಗೆದುಕೊಳ್ಳಬಾರದು, ಕಣ್ಣಿಗೂ ಇವು ಉರಿ ತರಿಸುತ್ತವೆ. ಹಾಗಾಗಿ ಚರ್ಮದ ಮೇಲೆ ಹಚ್ಚಿಕೊಳ್ಳಬೇಕಾದರೆ ಇವನ್ನು ಸುರಕ್ಷಿತವಾದ ಇತರ ಎಣ್ಣೆ, ಉದಾಹರಣೆಗೆ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಬಳಸಿ.

5. ರೋಸ್ಮರಿ ಅವಶ್ಯಕ ತೈಲ

5. ರೋಸ್ಮರಿ ಅವಶ್ಯಕ ತೈಲ

ಈ ಎಣ್ಣೆಯನ್ನೂ ನೋವು ಶಮನಕವಾಗಿ ಬಳಸಬಹುದು. ಕೆಲವು ನಂಬಲರ್ಹ ಮೂಲಗಳ ಪ್ರಕಾರ, ರೋಸ್ಮರಿ ಗಿಡದಿಂದ ಪಡೆದ ಪೋಷಕಾಂಶಗಳಿಗೆ ತಲೆನೋವು, ಸ್ನಾಯುಗಳ ನೋವು ಮತ್ತು ಮೂಳೆಗಳ ನೋವನ್ನು ಹಾಗೂ ಸ್ನಾಯುಗಳ ಜೆಡ್ಡು ಹಿಡಿಯುವುದನ್ನು (ಸೆಡೆತ) ನಿವಾರಿಸುವ ಕ್ಷಮತೆ ಇದೆ. ಅಲ್ಲದೇ ಈ ಎಣ್ಣೆ ಉರಿಯೂತ ನಿವಾರಿಸುವ, ಪೆಡಸಾದ ಸ್ನಾಯುಗಳನ್ನು ಸಡಿಲಗೊಳಿಸುವ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುವ ಗುಣವನ್ನೂ ಪಡೆದಿವೆ. ಈ ಎಣ್ಣೆಯೂ ಪ್ರಬಲವಾಗಿದ್ದು ನೇರವಾಗಿ ಹಚ್ಚಿಕೊಂಡರೆ ಉರಿ ತರಿಸುವ ಸಾಧ್ಯತೆ ಇರುವ ಕಾರಣ ಇದನ್ನು ಇತರ ಸುರಕ್ಷಿತ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳಬಹುದು. ಓಪಿಯಂ ಎಂಬ ಮಾದಕ ವಸ್ತುವಿಗೆ ವ್ಯಸನರಾಗಿದ್ದವರು ಈ ವ್ಯಸನದಿಂದ ಹೊರಬಂದಾಗ ಎದುರಿಸುತ್ತಿದ್ದ ನೋವನ್ನು ಈ ಎಣ್ಣೆಯನ್ನು ಹಚ್ಚಿಕೊಂಡಾಗ ಕಡಿಮೆಯಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

6. ಕ್ಯಾಪ್ಸೈಸಿನ್

6. ಕ್ಯಾಪ್ಸೈಸಿನ್

ಕೆಂಪು ಮೆಣಸಿನಲ್ಲಿರುವ ಖಾರಕ್ಕೆ ಇದರಲ್ಲಿರುವ ಕ್ಯಾಪ್ಸೈಸಿನ್ ಎಂಬ ಪೋಷಕಾಂಶ ಕಾರಣ. ಇದು ನಾಲಿಗೆಗೆ ಖಾರವಾಗಿದ್ದರೂ ಸರಿ, ಉತ್ತಮ ನೋವು ನಿವಾರಕವೂ ಆಗಿದೆ. ಈ ಅಂಶವನ್ನು ಚರ್ಮದ ಮೇಲೆ ಹಚ್ಚಿಕೊಂಡಾಗ ಕೊಂಚ ಉರಿ ಮತ್ತು ಸೂಜಿ ಚುಚ್ಚಿದಂತದಹ ಅನುಭವವಾಗಬಹುದು. 2011ರಲ್ಲಿ ಸ್ಟಡಿಸೋರ್ಸ್ ಎಂಬ ತಾಣ ಪ್ರಕಟಿಸಿದ ವರದಿಯ ಪ್ರಕಾರ ನೋವು ಇರುವ ಭಾಗದ ಮೇಲೆ ಕ್ಯಾಪ್ಸೈಸಿನ್ ಅಂಶವನ್ನು ಹೊಂದಿರುವ ಅಂಟುಪಟ್ಟಿಯನ್ನು ಅಂಟಿಸಿಕೊಳ್ಳುವ ಮೂಲಕ ನೋವು ಶೀಘ್ರದಲ್ಲಿ ಗುಣವಾಗುತ್ತದೆ. ಇದೇ ಕಾರಣಕ್ಕೆ ಹಲವಾರು ನೋವು ನಿವಾರಕ ಉತ್ಪನ್ನಗಳಲ್ಲಿ ಕ್ಯಾಪ್ಸೈಸಿನ್ ಅನ್ನು ಬಳಸಲಾಗಿರುತ್ತದೆ. ಆದರೆ ಇದು ಹೇಗೆ ನೋವನ್ನು ನಿವಾರಿಸುತ್ತದೆ ಎಂಬ ವಿಷಯದ ಮೇಲೆ ಇನ್ನೂ ಸಂಶೋಧನೆಗಳು ಮುಂದುವರೆಯುತ್ತಿದ್ದು ಇದರ ವಿವರಗಳು ಇನ್ನಷ್ಟೇ ಬರಬೇಕಿವೆ. ಆದರೆ ತಜ್ಞರ ಪ್ರಕಾರ ನೋವಿನ ಸಂವೇದನೆಯನ್ನು ಗ್ರಹಿಸಿ ಮೆದುಳಿಗೆ ಸಂಕೇತ ರವಾನಿಸುವ nociceptor fibers ಎಂಬ ಸೂಕ್ಷ್ಮ ಎಳೆಗಳು ಚರ್ಮದೊಂದಿಗೆ ಹೊಂದಿರುವ ಸೂಕ್ಷ್ಮಸಂಬಂಧವನ್ನು ಕಡಿಮೆಗೊಳಿಸಿ ಈ ಸಂಕೇತ ಹೋಗದಂತೆ ತಡೆಯುತ್ತದೆ. ಹಾಗಾಗಿ ವಾಸ್ತವದಲ್ಲಿ ನೋವು ಇದ್ದರೂ ಇದರ ಸಂಕೇತಗಳು ಮೆದುಳಿಗೆ ರವಾನೆಯಾಗದ ಕಾರಣ ನೋವು ಗೊತ್ತಾಗುವುದಿಲ್ಲ.

7. ಹಸಿಶುಂಠಿ

7. ಹಸಿಶುಂಠಿ

Zingiber officinale ಎಂಬ ಸಸ್ಯನಾಮವನ್ನು ಹೊಂದಿರುವ ಈ ಗಡ್ಡೆ ನೂರಾರು ವರ್ಷಗಳಿಂದ ಭಾರತದಲ್ಲಿ ನೋವು ನಿವಾರಕವಾಗಿ ಬಳಸಲ್ಪಡುತ್ತಿದೆ. 2015ರಲ್ಲಿ ಟ್ರಸ್ಟೆಡ್ ಸೋರ್ಸ್ ತಾಣದಲ್ಲಿ ಪ್ರಕಟಿಸಿದ ಸಮೀಕ್ಷೆಯ ಪ್ರಕಾರ ವ್ಯಾಯಾಮದ ಅಥವಾ ಓಟದ ಬಳಿಕ ಸ್ನಾಯು ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ಕನಿಷ್ಟ ಸತತ ಐದು ದಿನಗಳ ಕಾಲ ಎರಡು ಗ್ರಾಂ ಶುಂಠಿಯನ್ನು ಸೇವಿಸಲು ನೀಡಿದಾಗ ಇವರ ನೋವು ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ. ಅಲ್ಲದೇ ಶುಂಠಿ ನೋವಿನ ಉಪಶಮನಗೊಳಿಸುವ ಗತಿಯನ್ನು ಹೆಚ್ಚಿಸಲು ಮತ್ತು ವ್ಯಾಯಾಮದಿಂದ ಎದುರಾಗಿದ್ದ ಉರಿಯೂತವನ್ನು ನಿವಾರಿಸಲು ನೆರವಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಶುಂಠಿಯನ್ನು ಮಸಾಲೆಯಾಗಿ ಆಹಾರಪದಾರ್ಥಗಳಲ್ಲಿ ಬಳಸುವ ಜೊತೆಗೇ ನಿತ್ಯದ ಸೇವನೆಯ ಟೀ, ಸ್ಮೂಥಿ ಮೊದಲಾದವುಗಳಲ್ಲಿ ಬೆರೆಸಿ ಸೇವಿಸುವ ಮೂಲಕವೂ ಇದರ ಪ್ರಯೋಜನವನ್ನು ಪಡೆಯಬಹುದು. ಅಲ್ಲದೇ ಶುಂಠಿಯ ಅಂಶವಿರುವ ಹೆಚ್ಚುವರಿ ಔಷಧಿಗಳು ಇಂದು ಲಭ್ಯವಿದ್ದು ಔಷಧಿ ಅಂಗಡಿಯಲ್ಲಿ ಮತ್ತು ಅಂತರ್ಜಾಲದಲ್ಲಿ ಸುಲಭವಾಗಿ ಲಭ್ಯವಿದೆ. ಆದರೆ ಇದಕ್ಕಿಂತಲೂ ತಾಜಾ ಮತ್ತು ಸಾವಯವ ವಿಧಾನದಲ್ಲಿ ಬೆಳೆದ ಶುಂಠಿಯ ಸೇವನೆ ಸುರಕ್ಷಿತ ಮತ್ತು ಉತ್ತಮ. ಆದರೂ ನೀವು ಈಗ ಸೇವಿಸುತ್ತಿರುವ ಔಷಧಿಗಳ ಜೊತೆಗೇ ಶುಂಠಿಯನ್ನು ಹೆಚ್ಚುವರಿಯಾಗಿ ಸೇವಿಸುವ ಕುರಿತು ಸಲಹೆ ಪಡೆಯಿರಿ. ಏಕೆಂದರೆ ಈ ಹೆಚ್ಚುವರಿ ಔಷಧಿಗಳು ತಮ್ಮದೇ ಆದ ಅಡ್ಡ ಪರಿಣಾಮಗಳನ್ನು ಹೊಂದಿದ್ದು ಈಗ ತೆಗೆದುಕೊಳ್ಳುತ್ತಿರುವ ಔಷಧಿಗಳ ಪರಿಣಾಮದ ಮೇಲೆ ಪ್ರಭಾವ ಬೀರಬಹುದು.

8. ಫಿವರ್ ಫ್ಯೂ ( )

8. ಫಿವರ್ ಫ್ಯೂ ( )

ಫೆದರ್ ಫ್ಯೂ ಅಥವಾ ಬ್ಯಾಚೆಲರ್ಸ್ ಬಟನ್ಸ್ ಎಂದೂ ಕರೆಯಲ್ಪಡುವ ಈ ಔಷಧೀಯ ಸಸ್ಯ ಜ್ವರವನ್ನು ಇಳಿಸುವ ಗುಣದಿಂದಾಗಿಯೇ ಈ ಅನ್ವರ್ಥನಾಮವನ್ನು ಪಡೆದಿದೆ. ಜ್ವರದ ಜೊತೆಗೇ ತಲೆನೋವು, ಸಂಧಿವಾತ, ಹಲ್ಲುನೋವು ಮತ್ತು ಹೊಟ್ಟೆನೋವಿನ ನಿವಾರಣೆಗೂ ಇದು ಬಳಕೆಯಾಗುತ್ತದೆ. ಬಾಣಂತಿಯರಲ್ಲಿ ತಾಯಿಹಾಲು ಹೆಚ್ಚಿಸಲೂ ಈ ಗಡ್ಡೆ ಅತ್ಯುತ್ತಮವಾಗಿದೆ. ಇದರಲ್ಲಿರುವ ಪೋಷಕಾಂಶಗಳು ಉರಿಯೂತ ಮತ್ತು ಸ್ನಾಯುಗಳ ಸೆಡೆತವನ್ನು ನಿವಾರಿಸಲು ನೆರವಾಗುತ್ತವೆ. ಕೆಲವು ಸಂಶೋಧಕರ ಪ್ರಕಾರ, ಈ ಗುಣಕ್ಕೆ ಇದರಲ್ಲಿರುವ ಸೆಸ್ಕ್ವಿಟರ್ಪೀನ್ ಲ್ಯಾಕ್ಟೋನ್ಸ್ ಮತ್ತು ಫ್ಲೇವನಾಯ್ಡುಗಳು ಕಾರಣ ಎಂದು ವಿವರಿಸುತ್ತಾರೆ. ಮೈಗ್ರೇನ್ ತಲೆನೋವಿನ ಸಂಶೋಧನೆ ನಡೆಸುವ ಅಮೇರಿಕನ್ ಮೈಗ್ರೇನ್ ಫೌಂಡೇಶನ್ ವಿವರಿಸುವ ಪ್ರಕಾರ ಫಿವರ್ ಫ್ಯೂ ಔಷಧಿ ಮಿಶ್ರ ಪರಿಣಾಮಗಳನ್ನು ನೀಡಿದರೂ ಮೈಗ್ರೇನ್ ತಲೆನೋವನ್ನು ಮರುಕಳಿಸದಂತೆ ಮಾಡುವಲ್ಲಿ ನೆರವು ನೀಡುವುದನ್ನು ಖಚಿತಪಡಿಸಿದೆ. ಈ ಮೂಲಿಕೆಯ ಸೇವನೆಯಿಂದ ಕೆಲವು ಅಡ್ಡಪರಿಣಾಮಗಳೂ ಎದುರಾಗುತ್ತವೆ. ಹೊಟ್ಟೆನೋವು, ವಾಕರಿಕೆ, ವಾಂತಿ ಮತ್ತು ಈಗಾಗಲೇ ಇರುವ ರಕ್ತಸ್ರಾವವನ್ನು ಹೆಚ್ಚಿಸುವುದು. ಹಾಗಾಗಿ ಈ ಮೂಲಿಕೆಯನ್ನು ನೋವು ನಿವಾರಕವಾಗಿ ಬಳಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅಗತ್ಯ.

9. ಅರಿಶಿನ

9. ಅರಿಶಿನ

ಅರಿಶಿನ ಮತ್ತು ಲಿಂಬೆ ಇವೆರಡು ಎಲ್ಲದಕ್ಕೂ ಔಷಧಿ ಎಂದು ನಮ್ಮ ಹಿರಿಯರು ಇದರ ಗುಣಗಳನ್ನು ಕೊಂಡಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಅರಿಶಿನದಲ್ಲಿರುವ ಕುರ್ಕುಮಿನ್ ಅಥವಾ ಕುರ್ಕುಮಾ ಎಂಬ ಪ್ರಬಲ ಪೋಷಕಾಂಶವಾಗಿದ್ದು ಅತ್ಯುತ್ತಮ ನೋವು ನಿವಾರಕವೂ ಆಗಿದೆ. ಟ್ರಸ್ಟೆಡ್ ಸೋರ್ಸ್ ತಾಣದ ಪ್ರಕಾರ, ಇದರ ನೋವು ನಿವಾರಕ ಗುಣ ಖ್ಯಾತ ನೋವು ನಿವಾರಕವಾದ ಇಬುಪ್ರೋಫೆನ್ ನಷ್ಟೇ ಪ್ರಭಾವಶಾಲಿಯಾಗಿದೆ. ಮೊಣಕಾಲಿನ ಚಿಪ್ಪಿನ ಶಸ್ತ್ರಚಿಕಿತ್ಸೆ (knee osteoarthritis) ಪಡೆದ ವ್ಯಕ್ತಿಗಳಿಗೆ ಸತತ ನಾಲ್ಕು ವಾರಗಳ ಕಾಲ ಅರಿಶಿನವನ್ನು ಲೇಪಿಸಿ ಚಿಕಿತ್ಸೆ ನೀಡಿದಾಗ ಇವರ ನೋವು ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೇ ಇದು ಅತ್ಯುತ್ತಮ ಉರಿಯೂತ ನಿವಾರಕವೂ ಆಗಿದ್ದು ಹಲವಾರು ಬಗೆಯ ನೋವುಗಳನ್ನು ಶಮನಗೊಳಿಸುತ್ತದೆ. ಅರಿಶಿನವನ್ನು ಇದರ ನೈಸರ್ಗಿಕ ರೂಪದಲ್ಲಿ ಸೇವಿಸಿದರೆ ಗರಿಷ್ಟ ಪ್ರಯೋಜನವಿದೆ. ಉಳಿದಂತೆ ಇದರ ಪುಡಿಯನ್ನು ನಿತ್ಯದ ಆಹಾರಗಳಲ್ಲಿ ಸೇರಿಸಿ ಸೇವಿಸಬಹುದು ಹಾಗೂ ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ಬೆರೆಸಿಯೂ ಸೇವಿಸಬಹುದು.

10. ಆಕ್ಯುಪಂಕ್ಚರ್

10. ಆಕ್ಯುಪಂಕ್ಚರ್

ನೋವು ನಿವಾರಣೆಗೆ ಇದು ಒಂದು ಪರ್ಯಾಯ ಚಿಕಿತ್ಸೆಯಾಗಿದೆ. ಇತ್ತೀಚಿನ ಸಂಶೋಧನೆಗಳೂ ಇದನ್ನು ಬೆಂಬಲಿಸುತ್ತವೆ. ರಾಷ್ಟ್ರೀಯ ಕ್ಯಾನ್ಸರ್ ವಿದ್ಯಾಲಯ, The National Center for Complementary and Integrative Health (NCCIH) ಪ್ರಕಾರ ಈ ವಿಧಾನ ಈ ಕೆಳಗಿನ ಕೆಲವು ನೋವುಗಳನ್ನು ನಿವಾರಿಸಲು ಉತ್ತಮವಾಗಿದೆ:

ಕೆಳಬೆನ್ನಿನ ನೋವು

ಕುತ್ತಿಗೆ ನೋವು

ಮೊಣಕಾಲ ನೋವು

ಸಂಧಿವಾತ ಇತ್ಯಾದಿ.

ಅಲ್ಲದೇ ಈ ವಿಧಾನದಲ್ಲಿ ಮೈಗ್ರೇನ್ ತಲೆನೋವು ಹಾಗೂ ಮಾನಸಿಕ ಒತ್ತಡದಿಂದ ಎದುರಾಗುವ ತಲೆನೋವನ್ನೂ ನಿವಾರಿಸಬಹುದು. ಸಂಶೋಧನೆಗಳ ಪ್ರಕಾರ ಈ ವಿಧಾನದಿಂದ ಮೂಳೆ-ಸ್ನಾಯುಗಳಿಗೆ ಸಂಬಂಧಿಸಿದ ನೋವುಗಳು, ತಲೆನೋವು ಮತ್ತು ಮೂಳೆಗಳು ಶಿಥಿಲವಾಗುವ ಮೂಲಕ ಎದುರಾಗುವ ಸಂಧಿವಾತ (osteoarthritis) ಮೊದಲಾದವುಗಳನ್ನು ಗುಣಪಡಿಸಲು ಉತ್ತಮವಾಗಿದೆ. ಆದರೆ ಈ ವಿಧಾನ ಇತರ ನೋವುಗಳನ್ನು ನಿವಾರಿಸುವಲ್ಲಿ ಎಷ್ಟು ಮಟ್ಟಿಗೆ ಫಲಕಾರಿ ಎಂಬುದನ್ನು ಸಂಶೋಧನೆಗಳಿಂದ ಇನ್ನಷ್ಟೇ ತಿಳಿದುಬರಬೇಕಾಗಿದೆ. ಆದರೆ ಈಗಾಗಲೇ ಇದರ ಪ್ರಯೋಜನವನ್ನು ಪಡೆದಿರುವವರ ಅನುಭವದ ಪ್ರಕಾರ ಹಲವಾರು ಬಗೆಯ ನೋವುಗಳ ಚಿಕಿತ್ಸೆಗೆ ಈ ವಿಧಾನ ಸೂಕ್ತವಾಗಿದೆ. ಒಂದು ಅಂದಾಜಿನ ಪ್ರಕಾರ, ಈ ವಿಧಾನ ನೂರಕ್ಕೂ ಹೆಚ್ಚು ಬಗೆಯ ನೋವುಗಳನ್ನು ಕಡಿಮೆಗೊಳಿಸುತ್ತದೆ.

11. ಯೋಗಾಭ್ಯಾಸ

11. ಯೋಗಾಭ್ಯಾಸ

ಭಾರತದ ಅತಿ ಪುರಾತನ ವ್ಯಾಯಾಮ ಅಭ್ಯಾಸವಾಗಿರುವ ಯೋಗ ಇಂದು ವಿಶ್ವದಾದ್ಯಂತ ಮನ್ನಣೆಯನ್ನು ಪಡೆಯುತ್ತಿದ್ದು ಕೆಲವಾರು ಬಗೆಯ ನೋವುಗಳನ್ನು ಶಮನಗೊಳಿಸಲು ಚಿಕಿತ್ಸೆಯ ರೂಪದಲ್ಲೂ ಬಳಸಲ್ಪಡುತ್ತಿದೆ. ವಿಶೇಷವಾಗಿ ಬೆನ್ನುನೋವಿನ ಚಿಕಿತ್ಸೆಗೆ ದೇಹವನ್ನು ಸೆಳೆಯುವ ಕೆಲವು ಸರಳ ವ್ಯಾಯಾಮಗಳು ಮತ್ತು ಯೋಗಾಸನಗಳು ನೆರವಾಗುತ್ತವೆ. ಇದರ ಜೊತೆಗೇ ಉಸಿರಾಟವನ್ನು ನಿಯಂತ್ರಿಸುವ ಯೋಗಾಸನಗಳು, ಮನಸ್ಸನ್ನು ನಿರಾಳಗೊಳಿಸುವ ಕ್ರಮಗಳು ಮೊದಲಾದವೆಲ್ಲಾ ನೋವನ್ನು ನಿವಾರಿಸಲು ನೆರವಾಗುತ್ತವೆ ಹಾಗೂ ಉದ್ವೇಗ ಮತ್ತು ಮಾನಸಿಕ ಒತ್ತಡದಿಂದಲೂ ಮುಕ್ತಿ ಒದಗಿಸುತ್ತವೆ. 2013 ರಲ್ಲಿ ಟ್ರಸ್ಟೆಡ್ ಸೋರ್ಸ್ ತಾಣ ಪ್ರಕಟಿಸಿದ ವರದಿಯ ಪ್ರಕಾರ ಯೋಗಾಸನದಿಂದ ಕೆಳಬೆನ್ನಿನ ನೋವು ಶೀಘ್ರವಾಗಿ ಗುಣವಾಗುತ್ತದೆ. NCCIH ಸಹಾ ಯೋಗಾಭ್ಯಾಸದಿಂದ ಕೆಳಬೆನ್ನು, ಕುತ್ತಿಗೆ ನೋವು ಕಡಿಮೆಯಾಗಿರುವುದನ್ನು ಪುಷ್ಟೀಕರಿಸುತ್ತದೆ. ಆದರೆ ತಲೆನೋವು, ಸಂಧಿವಾತ ಅಥವಾ fibromyalgia ಎಂಬ ನೋವುಗಳಿಗೆ ಯೋಗಾಭ್ಯಾಸ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಎಂಬುದನ್ನು ಸ್ಪಷ್ಟಪಡಿಸಲು ಸಾಕ್ಷ್ಯ ಸಾಲದು ಎಂದು ತಿಳಿಸಿದೆ.

12. ಧ್ಯಾನ

12. ಧ್ಯಾನ

ತೀವ್ರಗತಿಯ ನೋವನ್ನು ಅನುಭವಿಸುತ್ತಿರುವ ವ್ಯಕ್ತಿಗಳು ನೈಸರ್ಗಿಕ ಚಿಕಿತ್ಸೆಯ ಅಂಗವಾಗಿ ಧ್ಯಾನವನ್ನು ಅನುಸರಿಸುತ್ತಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ. ಈ ಬಗ್ಗೆ ನಡೆಸಿದ ಪ್ರಾರಂಭಿಕ ಅಧ್ಯಯನಗಳು ಆಶಾವಾದ ಮೂಡಿಸುತ್ತಿವೆ. 2017 ರಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಹಾಗೂ ಟ್ರಸ್ಟೆಡ್ ಸೋರ್ಸ್ ನ ಒಟ್ಟು ಮೂವತ್ತೆಂಟು ಅಧ್ಯಯನಗಳ ಅಂಕಿಅಂಶಗಳ ವಿಶ್ಲೇಷಣೆಯ ಬಳಿಕ ಧ್ಯಾನದಿಂದ ನೋವಿನ ಲಕ್ಷಣಗಳು ಕಡಿಮೆಯಾಗಿರುವುದು, ಖಿನ್ನತೆ ಕಡಿಮೆಯಾಗಿರುವುದು ಹಾಗೂ ಜೀವನಮಟ್ಟ ಉತ್ತಮವಾಗಿರುವುದನ್ನು ಖಚಿತಪಡಿಸಲಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಉತ್ತಮ ಎಂಬುದನ್ನು ಸಂಶೋಧನೆಗಳಿಂದ ಇನ್ನಷ್ಟೇ ತಿಳಿದುಬರಬೇಕಾಗಿದೆ.

ನೈಸರ್ಗಿಕ ವಿಧಾನಗಳ ಪ್ರಯೋಜನಗಳು

ನೈಸರ್ಗಿಕ ವಿಧಾನಗಳ ಪ್ರಯೋಜನಗಳು

ನೋವು ನಿವಾರಕವಾಗಿ ವೈದ್ಯರು ಇಬುಪ್ರೋಫೆನ್ ಅಥವಾ ಅಸೆಟೋಮಿನೋಫೆನ್ ಮೊದಲಾದ ಔಷಧಿಗಳನ್ನು ನೀಡುತ್ತಾರೆ. ಇವುಗಳಿಂದ ಹೆಚ್ಚಿನ ಯಾವುದೇ ತೊಂದರೆ ಇಲ್ಲವಾದರೂ, ಕೆಲವರಿಗೆ ಇವುಗಳ ಅಲ್ಪ ಮಟ್ಟದ ಅಡ್ಡ ಪರಿಣಾಮಗಳೇ ವ್ಯತಿರಿಕ್ತವಾಗಿ ಪ್ರಭಾವ ಬೀರಬಹುದು. ಹಾಗಾಗಿ ಇವರು ನೈಸರ್ಗಿಕ ನೋವು ನಿವಾರಕಗಳನ್ನೇ ಬಳಸುವುದು ಸೂಕ್ತ. ಇವುಗಳಲ್ಲಿ ನೈಸರ್ಗಿಕ ಸಾಮಾಗ್ರಿಗಳ ಸೇವನೆ ಹಾಗೂ ಯೋಗ, ಆಕ್ಯುಪಂಕ್ಚರ್ ಮತ್ತು ಧ್ಯಾನವನ್ನು ಅನುಸರಿಸುವುದೂ ಒಳಗೊಂಡಿರುತ್ತದೆ. 2016 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಅಸೆಟೋಮಿನೋಫೆನ್ ಔಷಧಿಯನ್ನು ದೀರ್ಘಾವಧಿಯಲ್ಲಿ ಸೇವಿಸಿದರೆ, ಇದರ ಅಡ್ಡಪರಿಣಾಮಗಳಿಂದ ಹೃದಯಾಘಾತ, ಜೀರ್ಣಾಂಗಗಳಲ್ಲಿ ರಕ್ತಸ್ರಾವ, ಮೂತ್ರಪಿಂಡಗಳ ಕ್ಷಮತೆ ಕುಂದುವುದು ಮೊದಲಾದ ತೊಂದರೆಗಳು ಕಂಡುಬರುತ್ತವೆ. ಟ್ರಸ್ಟೆಡ್ ಸೋರ್ಸ್ ತಾಣದ ಪ್ರಕಾರ ಸ್ಟೆರಾಯ್ಡ್ ರಹಿತ ಉರಿಯೂತ ನಿವಾರಕಗಳಾದ ಇಬುಪ್ರೊಫೆನ್ ಔಷಧಿಯ ದೀರ್ಘಾವಧಿಯ ಸೇವನೆಯೂ ಹೊಟ್ಟೆಯಲ್ಲಿ ಹುಣ್ಣು ಅಥವಾ ಅಲ್ಸರ್, ಮೂತ್ರಪಿಂಡವ ವೈಫಲ್ಯ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಯೋಗ, ಆಕ್ಯುಪಂಕ್ಚರ್ ಮತ್ತು ಧ್ಯಾನವನ್ನು ಅನುಸರಿಸುವುವ ಮೂಲಕ ವ್ಯಕ್ತಿಯ ಮಾನಸಿಕ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಆದರೆ ನೈಸರ್ಗಿಕ ಔಷಧಿಗಳನ್ನು ದೀರ್ಘಾವಧಿಯಲ್ಲಿ ಸೇವಿಸಿದರೂ ಇದರ ಆಂಟಿ ಆಕ್ಸಿಡೆಂಟ್ ಗುಣಗಳು ದೇಹವನ್ನು ಆರೋಗ್ಯಕರವಾಗಿರಿಸುತ್ತವೆ ಹಾಗೂ ನೋವನ್ನೂ ಶಮನಗೊಳಿಸುತ್ತವೆ.

ವೈದ್ಯರನ್ನು ಯಾವಾಗ ಕಾಣಬೇಕು?

ವೈದ್ಯರನ್ನು ಯಾವಾಗ ಕಾಣಬೇಕು?

ನೈಸರ್ಗಿಕ ನೋವು ನಿವಾರಕಗಳ ಒಂದು ಮುಖ್ಯ ತೊಡಕು ಎಂದರೆ ಇವು ಇತರ ಔಷಧಿಗಳಷ್ಟು ಬೇಗನೇ ಕಾರ್ಯನಿರ್ವಹಿಸದೇ ಇರುವುದು. ಅಲ್ಲದೇ ಕೆಲವು ಬಗೆಯ ನೋವುಗಳಿಗೆ ಯಾವುದೇ ನೈಸರ್ಗಿಕ ನೋವು ನಿವಾರಕ ಲಭ್ಯವೇ ಇರಲಾರದು. ಹಾಗಾಗಿ ಈ ನೋವನ್ನು ಅನುಭವಿಸುವ ರೋಗಿ ವೈದ್ಯರನ್ನು ಕಂಡು ಸೂಕ್ತವಾದ ಚಿಕಿತ್ಸೆಯನ್ನು ಪಡೆಯಬೇಕು. ತೀವ್ರಗತಿಯ ನೋವನ್ನು ಅನುಭವಿಸುತ್ತಿರುವ ವ್ಯಕ್ತಿಗಳು ತಡಮಾಡದೇ ವೈದ್ಯರನ್ನು ಕಂಡು ವಿವರಗಳನ್ನು ನೀಡಬೇಕು. ನೋವಿನ ನಿಜವಾದ ಕಾರಣವನ್ನು ಸ್ಪಷ್ಟಪಡಿಸಿಕೊಂಡ ಬಳಿಕ ವೈದ್ಯರೇ ಸೂಕ್ತ ಚಿಕಿತ್ಸೆಯನ್ನೂ ವಿವರಿಸುತ್ತಾರೆ. ನೋವಿನ ಕಾರಣ ಗೊತ್ತಾದ ಬಳಿಕ ಇದಕ್ಕೆ ಸೂಕ್ತ ನೈಸರ್ಗಿಕ ಚಿಕಿತ್ಸೆ ಲಭ್ಯವಿದ್ದರೆ ಇದನ್ನು ಅನುಸರಿಸಲು ಸಾಧ್ಯವೇ ಎಂದು ವೈದ್ಯರನ್ನು ಕೇಳಿ ಅವರ ಸಲಹೆಯ ಪ್ರಕಾರ ಮುಂದುವರೆಯಬಹುದು. ಹೆಚ್ಚಿನ ಸಂದರ್ಭದಲ್ಲಿ ರೋಗಿಗೆ ಎದುರಾಗುವ ನೋವಿಗೆ ಆ ಭಾಗದಲ್ಲಿಲ್ಲದ ಅಂಗವೂ ಕಾರಣವಾಗಿರಬಹುದು. ಹಾಗಾಗಿ ನೋವಿಗೆ ಕಾರಣ ಇದೇ ಎಂದು ರೋಗಿಯೇ ನಿರ್ಧರಿಸುವ ಬದಲು ವೈದ್ಯರೇ ನಿರ್ಧರಿಸುವುದು ಅಗತ್ಯ.

English summary

Effective Natural Ways To Relieve Pain

In this article, we discuss 12 natural pain relievers and the science behind them. Read on to learn how to manage pain naturally without relying on over-the-counter pain medication
Story first published: Monday, November 25, 2019, 10:47 [IST]
X
Desktop Bottom Promotion