Just In
Don't Miss
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- News ಬೆಂಗಳೂರಿನಲ್ಲಿ ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದೆರಡು ದಿನಗಳಲ್ಲಿ ಮಲಬದ್ಧತೆ ಸಮಸ್ಯೆ ನಿಯಂತ್ರಿಸುವ ಅಡುಗೆಮನೆಯ ಸಾಮಾಗ್ರಿಗಳು
ಮಲಬದ್ಧತೆ ಯಾವುದೇ ವಯಸ್ಸಿನಲ್ಲಿಯೂ ಯಾವುದೇ ಸಮಯದಲ್ಲಿಯೂ ಎದುರಾಗಬಹುದಾದ ತೊಂದರೆಯಾಗಿದ್ದು ಹಲವು ಬಾರಿ ಮುಜುಗರಕ್ಕೂ ಕಾರಣವಾಗುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಇಪ್ಪತ್ತು ಶೇಖಡಾ ವ್ಯಕ್ತಿಗಳಿಗೆ ಈ ತೊಂದರೆ ಇದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಸರಳವಾಗಿ ಉತ್ತರಿಸಬೇಕೆಂದರೆ ಬದಲಾದ ಜೀವನಕ್ರಮ, ಒಗ್ಗದ ಆಹಾರಸೇವನೆ ಹಾಗೂ ಬಲವಂತವಾಗಿ ಮಲವಿಸರ್ಜನೆಯನ್ನು ತಡೆಹಿಡಿಯುವುದು ಮೊದಲಾದ ಕಾರಣಗಳನ್ನು ನೀಡಬಹುದು.
ಸಾಮಾನ್ಯ ಮಲಬದ್ಧತೆ ಅತಿ ಎನಿಸುವಷ್ಟು ತೊಂದರೆ ನೀಡದೇ ಇದ್ದರೂ ಅತಿಯಾದ ಮಲಬದ್ಧತೆ ಯ ತೊಂದರೆ ಇರುವವರಿಗೆ ಇದು ಸಹಿಸಲಸಾಧ್ಯವಾಗಿದ್ದು ಇದನ್ನು ನಿವಾರಿಸಲು ಇವರು ಪ್ರಯತ್ನಿಸದ ಮಾತ್ರೆ ಇಲ್ಲ ಅನುಸರಿಸದ ಕ್ರಮ ಇಲ್ಲ ಎನ್ನುವಂತಾಗಿರುತ್ತದೆ. ಆದರೆ ಮಲಬದ್ಧತೆ ಯನ್ನು ನಿವಾರಿಸಲು ಸೂಕ್ತವಾದ ಔಷಧಿಗಳು ನಮ್ಮ ಮನೆಯ ಅಡುಗೆಮನೆಯಲ್ಲಿಯೇ ಇರಬೇಕಾದರೆ ಇವನ್ನು ಪ್ರಯತ್ನಿಸದೇ ಅಪಾಯಕಾರಿ ಕ್ರಮಗಳನ್ನು ಅನುಸರಿಸುವುದು ತಪ್ಪಾಗುತ್ತದೆ. ಬನ್ನಿ, ಮಲಬದ್ಧತೆ ಯನ್ನು ಸಮರ್ಥವಾಗಿ ನಿವಾರಿಸುವ ಕ್ಷಮತೆಯುಳ್ಳ ಆರು ಪ್ರಮುಖ ಮನೆಮದ್ದುಗಳನ್ನು ಇಂದು ಅರಿಯೋಣ...
ನಿಮ್ಮ ಆಹಾರದಲ್ಲಿ ಆರೋಗ್ಯಕರ ಕೊಬ್ಬನ್ನು ಹೆಚ್ಚಿಸಿ
ನಾವು ತಿಳಿದಿರುವಂತೆ ಕೊಬ್ಬು ಅನಾರೋಗ್ಯಕರವಲ್ಲ, ನಮ್ಮ ಆರೋಗ್ಯಕ್ಕೆ ಕೊಬ್ಬು ಸಹಾ ಅವಶ್ಯಕ. ಆದರೆ ಆಗಾಧ ಸಂಗ್ರಹವೇ ತೊಂದರೆ. ಹಾಗಾಗಿ ಆರೋಗ್ಯಕರ ಕೊಬ್ಬು ನಮಗೆ ಆಹಾರದ ಮೂಲಕ ಲಭಿಸುತ್ತಿರಬೇಕು. ಆಲಿವ್ ಎಣ್ಣೆ, ಹರಳೆಣ್ಣೆಗಳು ನಮ್ಮ ದೇಹಕ್ಕೆ ಅತ್ಯುತ್ತಮವಾದ ಕೊಬ್ಬಿನಾಂಶವನ್ನು ಹೊಂದಿವೆ. ಅಂತೆಯೇ ಎಣ್ಣೆಯುಕ್ತ ಒಣಫಲಗಳೂ ಈ ನಿಟ್ಟಿನಲ್ಲಿ ಉತ್ತಮ ಆಯ್ಕೆಯಾಗಿವೆ. ಈ ಎಣ್ಣೆಗಳಲ್ಲಿರುವ ಕೊಬ್ಬಿನ ಅಂಶ ನಮ್ಮ ಕರುಳುಗಳಲ್ಲಿ ಆಹಾರ ಸುಲಭವಾಗಿ ಚಲಿಸಲು ನೆರವಾಗುತ್ತದೆ ಹಾಗೂ ವಿಸರ್ಜನಾ ಕಾರ್ಯವೂ ಹೆಚ್ಚಿನ ಒತ್ತಡವಿಲ್ಲದೇ ನೆರವೇರಲು ನೆರವಾಗುತ್ತವೆ.
ಪುದಿನಾ ಅಥವಾ ಶುಂಠಿಯ ಟೀ
ಮಲಬದ್ಧತೆ ಸುಲಭವಾಗಿ ಹತೋಟಿಗೆ ಬರದೇ ಇದ್ದರೆ ಈ ವಿಧಾನವನ್ನು ಪ್ರಯತ್ನಿಸಿ. ಇದೊಂದು ಅತಿ ಸುಲಭವಾದ ಮನೆಮದ್ದಾಗಿದ್ದು ಕೊಂಚ ಪುದಿನಾ ಎಲೆಗಳು ಅಥವಾ ಹಸಿಶುಂಠಿಯ ತುಂಡೊಂದನ್ನು ಟೀ ಯೊಂದಿಗೆ ಕುದಿಸಿ ಹಾಲಿಲ್ಲದೇ ಕೊಂಚವೇ ಬೆಲ್ಲದೊಂದಿಗೆ ಸೇವಿಸಿ. ಇವೆರಡರಲ್ಲಿಯೂ ಪ್ರಬಲ ಕಿಣ್ವಗಳಿದ್ದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತವೆ. ವಿಶೇಷವಾಗಿ ಹಸಿಶುಂಠಿಯ ಸೇವನೆಯಿಂದ ಜಠರದಲ್ಲಿ ಎದುರಾದ ಉರಿ ಶಮನಗೊಳ್ಳುತ್ತದೆ. ಉತ್ತಮ ಪರಿಣಾಮಕ್ಕಾಗಿ ಈ ಟೀಯನ್ನು ಊಟಕ್ಕೂ ಮೊದಲು ಮತ್ತು ಊಟದ ನಂತರ ಒಂದೊಂದು ಲೋಟ ಕುಡಿಯುವ ಮೂಲಕ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ಹಾಗೂ ಮಲಬದ್ಧತೆ ಯೂ ಇಲ್ಲವಾಗಲು ಸಾಧ್ಯವಾಗುತ್ತದೆ.
Most Read: ಬೆಳಿಗ್ಗೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ-'ಆಹಾರ ಪಥ್ಯೆ' ಹೀಗಿರಲಿ
ಅಡುಗೆ ಸೋಡಾ
ನಮ್ಮ ದೇಹದ ಎಲ್ಲಾ ಕಾರ್ಯಗಳು ಸರಿಯಾಗಿ ನೆರವೇರುವಲ್ಲಿ ನಮ್ಮ ಜಠರದ ಪ್ರಬಲ ಆಮ್ಲಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಡುಗೆ ಸೋಡಾ ಅಥವಾ ಸೋಡಿಯಂ ಬೈಕಾರ್ಬೋನೇಟ್ ನಮ್ಮ ಜಠರದ ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿದಾಗ (ಅಂದರೆ ಪ್ರತ್ಯಾಮ್ಲ ಮತ್ತು ಆಮ್ಲಗಳು ಬೆರೆತಾಗ) ಇದರ ಪರಿಣಾಮವಾಗಿ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರು ಉತ್ಪತ್ತಿಯಾಗುತ್ತದೆ. ಕಾರ್ಬನ್ ಡೈ ಆಕ್ಸೈಡ್ ಬಾಯಿಯ ಮೂಲಕ ಹೊರಹೋದರೆ ನೀರು ಜೀರ್ಣಕ್ರಿಯೆಗೆ ನೆರವಾಗುತ್ತದೆ ಹಾಗೂ ಈ ಮೂಲಕ ಕರುಳುಗಳು ಸ್ವಚ್ಛವಾಗಿರಲು ಹಾಗೂ ಕರುಳಿನಲ್ಲಿ ಆಹಾರ ಸುಲಭವಾಗಿ ಚಲಿಸಲು ಸಾಧ್ಯವಾಗುತ್ತದೆ.
ಲಿಂಬೆ ನೀರು
ಲಿಂಬೆಯ ಜಾತಿಯ ಫಲಗಳಲ್ಲಿ ಸಿಟ್ರಸ್ ಆಮ್ಲ ಪ್ರಮುಖವಾಗಿರುವ ಅಂಶವಾಗಿದೆ ಹಾಗೂ ಇವುಗಳಲ್ಲಿ ವಿವಿಧ ವಿಟಮಿನ್ನುಗಳು ಹಾಗೂ ಖನಿಜಗಳಿದ್ದು ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. ಈ ಫಲಗಳಲ್ಲಿರುವ ವಿಟಮಿನ್ ಸಿ ಜೀರ್ಣಕ್ರಿಯೆಗೆ ನೆರವಾಗುತ್ತದೆ ಹಾಗೂ ಜೀರ್ಣಾಂಗಗಳ ಕಾರ್ಯನಿರ್ವಹಣೆಗೆ ಸಹಕರಿಸುತ್ತದೆ. ಇದಕ್ಕಾಗಿ ಊಟದ ಬಳಿಕ ಒಂದು ದೊಡ್ಡ ಲೋಟ ನೀರಿಗೆ ಈಗತಾನೇ ಕತ್ತರಿಸಿದ ಲಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯಿರಿ. ಆರೋಗ್ಯ ಉತ್ತಮವಾಗಿರಲು ಈ ಅಭ್ಯಾಸವನ್ನು ನಿತ್ಯವೂ ಅನುಸರಿಸಿ.
ಎಳ್ಳು
ಸಾಮಾನ್ಯವಾಗಿ ತಿನಿಸಿನ ರೂಪದಲ್ಲಿಯೇ ಸೇವಿಸಲ್ಪಡುವ ಎಳ್ಳು ಬಿಳಿ ಮತ್ತು ಕಪ್ಪು ಎಂಬ ವಿಧಗಳಲ್ಲಿ ದೊರಕುತ್ತವೆ. ಆದರೆ ಕಪ್ಪು ಎಳ್ಳು ಹೆಚ್ಚು ಆರೋಗ್ಯಕರವಾಗಿದೆ. ಇವುಗಳ ಗಾತ್ರ ಪುಟ್ಟದಿದ್ದರೂ ಇವುಗಳಲ್ಲಿರುವ ಪೋಷಕಾಂಶಗಳ ಪಟ್ಟಿ ದೊಡ್ಡದಿದೆ. ಪ್ರಮುಖವಾಗಿ ಎಳ್ಳಿನಲ್ಲಿರುವ ಎಣ್ಣೆಯಂಶ ನಮ್ಮ ದೇಹಕ್ಕೆ ಅತಿ ಉತ್ತಮವಾಗಿದೆ. ಈ ಎಣ್ಣೆ ಜೀರ್ಣಾಂಗದಲ್ಲಿರುವ ಆಹಾರವನ್ನು ಸಡಿಲಗೊಳಿಸಿ ಸುಲಭವಾಗಿ ಮುಂದುವರೆಯಲು ನೆರವಾಗುವ ಮೂಲಕ ಮಲಬದ್ಧತೆ ಯ ತೊಂದರೆಯಿಂದ ರಕ್ಷಿಸುತ್ತವೆ.
ನಾರುಭರಿತ ಆಹಾರ
ಮುಂದಿನ ಬಾರಿ ನಿಮಗೆ ಮಲಬದ್ಧತೆ ಎದುರಾದರೆ ಹಿಂದಿನ ಒಂದೆರಡು ದಿನಗಳ ಆಹಾರಗಳನ್ನು ಪರಿಶೀಲಿಸಿ. ಒಂದು ವೇಳೆ ಮೈದಾ ಆಧಾರಿತ ಅಥವಾ ನಾರಿನಂಶವಿಲ್ಲದ ಆಹಾರ ಸೇವನೆಯಾಗಿದ್ದರೆ ಮಲಬದ್ಧತೆ ಗೆ ಇದೇ ಪ್ರಮುಖ ಕಾರಣ ಎಂದು ತಿಳಿದುಕೊಳ್ಳಬಹುದು. ಹಾಗಾಗಿ ತಕ್ಷಣದಿಂದಲೇ ನಾರಿನಂಶ ಹೆಚ್ಚಿರುವ ಆಹಾರಗಳಾದ ಹಸಿರು ಎಲೆಗಳು, ಹಸಿಯಾಗಿ ತಿನ್ನಬಹುದಾದ ತರಕಾರಿ ಮೊದಲಾದವುಗಳನ್ನು ಸೇವಿಸತೊಡಗಬೇಕು. ನಮ್ಮ ಜೀರ್ಣವ್ಯವಸ್ಥೆಗೆ ಈ ನಾರು ಸಹಾ ಅವಶ್ಯಕ. ಇದರಿಂದ ಜೀರ್ಣಾಂಗಗಳಲ್ಲಿ ಆಹಾರ ಮುಂದುವರೆಯಲು ಹಾಗೂ ಆಹಾರವನ್ನು ಜೀರ್ಣಿಸಿಕೊಂಡು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ ಮತ್ತು ತ್ಯಾಜ್ಯವೂ ಸುಲಭವಾಗಿ ಹೊರಹೋಗಲು ಸಾಧ್ಯವಾಗುವ ಮೂಲಕ ಮಲಬದ್ಧತೆ ಯ ತೊಂದರೆ ಇಲ್ಲವಾಗುತ್ತದೆ. ಇಡಿಯ ಧಾನ್ಯದಿಂದ ತಯಾರಿಸಿದ ಖಾದ್ಯಗಳು, ಒಣಫಲಗಳು, ಓಟ್ಸ್ ರವೆ ಹಾಗೂ ದ್ವಿದಳ ಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಲಬದ್ಧತೆ ಯನ್ನು ದೂರವಿರಿಸಬಹುದು.
Most Read: ಮಲಬದ್ಧತೆ ಸಮಸ್ಯೆ: ನಿಮಗೆ ತಿಳಿಯದೇ ಇರುವ ಕೆಲವು ಅಚ್ಚರಿಯ ಕಾರಣಗಳು
ಪ್ರೂನ್ ಹಣ್ಣು
ಕೊಂಚ ದೊಡ್ಡ ಒಣದ್ರಾಕ್ಷಿಯಂತೆ ತೋರುವ ಪ್ರೂನ್ಸ್ ಹಣ್ಣಿನಲ್ಲಿ ಮಲಬದ್ಧತೆ ಗೆ ತಕ್ಕ ಪರಿಹಾರವಿದೆ. ಇದೇ ಕಾರಣಕ್ಕೆ ಇವನ್ನು ನೈಸರ್ಗಿಕ ಮಲಬದ್ಧತೆ ನಿವಾರಕ ಎಂದೂ ಕರೆಯುತ್ತಾರೆ. ಈ ಹಣ್ಣಿಗೆ ಹುಳಿಮಿಶ್ರಿತ ರುಚಿ ಬರಲು ಇದರಲ್ಲಿರುವ ಸಕ್ಕರೆಯ ಆಲ್ಕೋಹಾಲ್ ಕಾರಣ ಹಾಗೂ ಇವುಗಳಲ್ಲಿ ಅತ್ಯುತ್ತಮ ವಿರೇಚಕ ಗುಣಗಳಿವೆ. ಪರಿಣಾಮವಾಗಿ ಮಲಬದ್ಧತೆ ಯ ತೊಂದರೆಗೆ ಒಳಗಾಗಿದ್ದ ಜೀರ್ಣಾಂಗಗಳಿಗೆ ಆರಾಮ ದೊರಕುತ್ತದೆ.
ಜೋನಿಬೆಲ್ಲ
ಜೋನಿಬೆಲ್ಲ ಎಂದು ಕರೆಯಲಾಗುವ ನೀರುಬೆಲ್ಲ ವರ್ಷವಿಡೀ ಸೇವಿಸಬಹುದಾದ ಅತ್ಯುತ್ತಮ ಅಹಾರ ಅಥವಾ ಸುಪರ್ ಫುಡ್ ಎಂಬ ಶ್ರೇಣಿಯಲ್ಲಿ ಸ್ಥಾನ ಪಡೆಯುತ್ತದೆ. ಇದರಲ್ಲಿ ಕನಿಷ್ಟ ಪ್ರಮಾಣದ ಸಕ್ಕರೆಯ ಸಾಂದ್ರತೆ ಇದೆ ಹಾಗೂ ಅಧಿಕ ಪ್ರಮಾಣದಲ್ಲಿ ವಿವಿಧ ವಿಟಮಿನ್ನುಗಳು ಹಾಗೂ ಖನಿಜಗಳಾದ ಮೆಗ್ನೇಶಿಯಂ ಇದ್ದು ಇವು ಕಿಣ್ವಗಳನ್ನು ಒಡೆದು ದೇಹದ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತವೆ ಹಾಗೂ ತನ್ಮೂಲಕ ವಿಸರ್ಜನಾ ಕ್ರಿಯೆಯನ್ನೂ ಸುಲಭಗೊಳಿಸುತ್ತವೆ.