Latest Updates
-
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ
ಒಂದೆರಡು ಚಮಚ, 'ಕೊತ್ತಂಬರಿ ಕಾಳು'-ಹಲವಾರು ಸಮಸ್ಯೆಗಳಿಗೆ ರಾಮಬಾಣ!
ಧನಿಯ ಅಥವಾ ಕೊತ್ತಂಬರಿ ಕಾಳುಗಳನ್ನು ಹೊರತುಪಡಿಸಿದ ಸಾಂಬಾರ ಪದಾರ್ಥಗಳ ಸಂಗ್ರಹ ಅಪೂರ್ಣ. ಈ ಕಾಳುಗಳು ನಸುವಾದ ಲಿಂಬೆಯಂತಹ ರುಚಿಯನ್ನು ಹೊಂದಿದ್ದು ಎಲ್ಲಾ ಕಾಲಗಳಲ್ಲಿಯೂ ನಮ್ಮ ಅಡುಗೆಗಳಲ್ಲಿ ತಪ್ಪದೇ ಬಳಸಲಾಗುತ್ತಿರುವ ಸಾಂಬಾರ ಪರ್ದಾರ್ಥವಾಗಿದೆ. ಆದರೆ ಈ ಪದಾರ್ಥ ಕೇವಲ ಆಹಾರದ ರುಚಿಯನ್ನು ಹೆಚ್ಚಿಸುವ ಹೊರತಾಗಿ ಇನ್ನೂ ಹಲವು ಆರೋಗ್ಯಕರ ಪ್ರಯೋಜನಗಳನ್ನೂ ಹೊಂದಿದೆ. ಈ ಕಾಳುಗಳನ್ನು ಹಾಗೇ ಅಥವಾ ಪುಡಿಯ ರೂಪದಲ್ಲಿ ಬಳಸಲಾಗುತ್ತದೆ ಹಾಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ಬಳಸಬಹುದಾದ ಸಾಂಬಾರ ವಸ್ತುಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ. ಅಷ್ಟೇ ಅಲ್ಲ, ಈ ಬೀಜಗಳನ್ನು ಹಿಂಡಿ ತೆಗೆದ ಅವಶ್ಯಕ ತೈಲವೂ ಲಭ್ಯವಿದೆ. ಬನ್ನಿ, ಈ ಕಾಳುಗಳ ಅದ್ಭುತ ಆರೋಗ್ಯಕರ ಎಂಟು ಪ್ರಯೋಜನಗಳ ಬಗ್ಗೆ ಅರಿಯೋಣ:

ತೂಕ ಇಳಿಸಲು ನೆರವಾಗುತ್ತದೆ
ತೂಕ ಇಳಿಸಲು ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುವ ಹಾಗೂ ಕೊಬ್ಬನ್ನು ಬಳಸಿಕೊಳ್ಳುವ ಆಹಾರಗಳ ಅಗತ್ಯವಿದೆ. ಒಂದು ವೇಳೆ ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ಧನಿಯ ಕಾಳುಗಳು ನಿಮಗೆ ಸೂಕ್ತವಾದ ಆಹಾರವಾಗಲಿವೆ. ಇದಕ್ಕಾಗಿ ಮೂರು ದೊಡ್ಡ ಚಮಚ ಧನಿಯ ಕಾಳುಗಳನ್ನು ಕನಿಷ್ಟ ಮೂರು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಬಳಿಕ ಒಂದು ದೊಡ್ಡ ಲೋಟ ನೀರಿನಲ್ಲಿ ಕುದಿಸಿ ನೀರು ಅರ್ಧದಷ್ಟಾದ ಬಳಿಕ ಉರಿ ಆರಿಸಿ ಈ ನೀರನ್ನು ಸೋಸಬೇಕು. ಈ ನೀರಿನ ಪ್ರತಿ ಅರ್ಧಭಾಗವನ್ನು ಬೆಳಿಗ್ಗೆ ಪ್ರಥಮ ಆಹಾರ ಹಾಗೂ ರಾತ್ರಿಯ ಅಂತಿಮ ಆಹಾರವಾಗಿ ಸೇವಿಸಬೇಕು. ಈ ಮೂಲಕ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವುದು ಮಾತ್ರವಲ್ಲದೇ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಹಾಗೂ ತೂಕವಿಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಫಲ ಸಿಗುತ್ತದೆ.

ಥೈರಾಯ್ಡ್ ಗ್ರಂಥಿಯ ಕ್ಷಮತೆಯನ್ನು ಹೆಚ್ಚಿಸುತ್ತದೆ
ಒಂದು ವೇಳೆ ಥೈರಾಯ್ಡ್ ಗ್ರಂಥಿಯ ಅತಿಕ್ಷಮತೆ (hyperthyroidism) ಅಥವಾ ಕ್ಷಮತೆಯ ಕೊರತೆ (hypothyroidism) ಇದ್ದರೆ ಧನಿಯ ಕಾಳುಗಳನ್ನು ಈಗಿನಿಂದಲೇ ಸೇವಿಸಲು ಆರಂಭಿಸಿ. ಈ ಮೂಲಕ ರಸದೂತಗಳ ಸ್ರಾವದಲ್ಲಿ ನಿಯಂತ್ರಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಧನಿಯ ಕಾಳುಗಳಲ್ಲಿ ವಿಟಮಿನ್, ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿದ್ದು ಈ ನಿಟ್ಟಿನಲ್ಲಿ ಹೆಚ್ಚಿನ ನೆರವು ನೀಡುತ್ತದೆ. ಧನಿಯ ಕಾಳಿನ ಟೀ, ಸ್ಮೂಥಿ ಅಥವಾ ಕಾಳುಗಳನ್ನು ನೆನೆಸಿಟ್ಟ ನೀರನ್ನು ಸಹಾ ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಈ ಕೊರತೆಯನ್ನು ಸರಿಪಡಿಸಿಕೊಳ್ಳಬಹುದು.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಜೀರ್ಣಕ್ರಿಯೆಯ ತೊಂದರೆ ಇದೆಯೇ? ಹಾಗಾದರೆ ಬೇರೆಲ್ಲೂ ಸೂಕ್ತ ಆಹಾರಕ್ಕಾಗಿ ಹುಡುಕದಿರಿ. ಧನಿಯ ಕಾಳುಗಳ ಸೇವನೆಯಿಂದ ದೇಹದಲ್ಲಿ ಎದುರಾಗುವ ಉರಿಯೂತ ಕಡಿಮೆಯಾಗುತ್ತದೆ. ಇದು ಈ ಕಾಳುಗಳ ಅತ್ಯುತ್ತಮ ಪ್ರಯೋಜನಗಳಲ್ಲಿ ಒಂದು. ಈ ಮೂಲಕ ವಾಯುಪ್ರಕೋಪ, ಹೊಟ್ಟೆಯುಬ್ಬರಿಕೆ ಹಾಗೂ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುತ್ತದೆ,. ಅಲ್ಲದೇ ಕರುಳುಗಳ ಕ್ಷಮತೆ ಹೆಚ್ಚುವ ಮೂಲಕ ಆಹಾರದ ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಮಾಣವೂ ಹೆಚ್ಚುತ್ತದೆ. ಸಾಧ್ಯವಾದರೆ ಧನಿಯ ಕಾಳುಗಳನ್ನು ನಿಮ್ಮ ನಿತ್ಯದ ಸ್ಮೂತಿಯಲ್ಲಿ ಬೆರೆಸಿ ನುಣ್ಣಗೆ ಕಡೆದು ಕೊಂಚ ಮಂಜುಗಡ್ಡೆ, ತೆಂಗಿನ ಹಾಲು ಮತ್ತು ತಂಪುಕಾರಕ ಆಹಾರಗಳಾದ ಸೌತೆ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಬೆರೆಸಬಹುದು.

ಅಲರ್ಜಿಕಾರಕ ಪರಿಣಾಮಗಳನ್ನು ನಿವಾರಿಸುತ್ತದೆ
ಈ ಕಾಳುಗಳು ದೇಹವನ್ನು ತಂಪುಗೊಳಿಸುವ ಗುಣವನ್ನು ಹೊಂದಿದ್ದು ದೇಹಕ್ಕೆ ಎದುರಾಗುವ ಹಲವಾರು ಅಲರ್ಜಿಗಳಿಂದ ರಕ್ಷಿಸುತ್ತದೆ. ಸಾಮಾನ್ಯ ಅಲರ್ಜಿಕಾರಕ ತೊಂದರೆಗಳಾದ ತುರಿಕೆ, ಚಿಕ್ಕ ಚಿಕ್ಕ ಗುಳ್ಳೆಗಳು ಮತ್ತು ಬಾವು ಮೊದಲಾದವುಗಳನ್ನು ನಿವಾರಿಸುತ್ತದೆ. ಈ ಸೂಚನೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಚರ್ಮದ ಭಾಗದಲ್ಲಿ ಧನಿಯ ಕಾಳುಗಳನ್ನು ನುಣ್ಣಗೆ ಅರೆದು ಒಂದು ದೊಡ್ಡ ಚಮಚ ಜೇನು ಮತ್ತು ಅರ್ಧ ಚಿಕ್ಕ ಚಮಚ ಧನಿಯ ಪುಡಿಯನ್ನು ಬೆರೆಸಿ ದಪ್ಪನಾಗಿ ಹಚ್ಚಿಕೊಳ್ಳಬೇಕು ಹಾಗೂ ಸುಮಾರು ಐದರಿಂದ ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಈ ವಿಧಾನದಿಂದ ಬಾತುಕೊಂಡ ಕುತ್ತಿಗೆ, ಮುಖ ಮೊದಲಾದವುಗಳಿಗೂ ಚಿಕಿತ್ಸೆ ನೀಡಬಹುದು. ಇನ್ನೂ ಸುಲಭ ವಿಧಾನವೆಂದರೆ ಒಂದು ಲೋಟ ನೀರಿನಲ್ಲಿ ಒಂದು ಚಿಕ್ಕ ಚಮಚ ಧನಿಯ ಕಾಳುಗಳನ್ನು ನುಣ್ಣಗೆ ಪುಡಿಮಾಡಿ ಬೆರೆಸಿ ಕುದಿಸಿ ಬಳಿಕ ಕೊಂಚ ಜೇನನ್ನು ಬೆರೆಸಿ. ಈ ನೀರನ್ನು ಉಗುರುಬೆಚ್ಚಗಿರುವಂತೆಯೇ ಕುಡಿಯಿರಿ. ನಿಮಗೆ ಇಷ್ಟವೆನಿಸಿದರೆ ತಂಪುಕಾರಕ ಇತರ ಆಹಾರಗಳಾದ ಸೌತೆ ಅಥವಾ ಪಾರ್ಸ್ಲೆ ಎಲೆಗಳನ್ನೂ ಬೆರೆಸಬಹುದು.

ಸಂಧಿವಾತವನ್ನು ಕಡಿಮೆ ಮಾಡುತ್ತದೆ
ಧನಿಯ ಕಾಳುಗಳಲ್ಲಿರುವ ಉರಿಯೂತ ನಿವಾರಕ ಗುಣ ಸಂಧಿವಾತವನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ. ಇದಕ್ಕಾಗಿ ಅಗತ್ಯವಿರುವ ಮುಲಾಮನ್ನು ನೀವೇ ಸುಲಭವಾಗಿ ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಅರ್ಧ ಚಿಕ್ಕಚಮಚ ಧನಿಯ ಪುಡಿಯನ್ನು ಶಿಯಾ ಬೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಅಥವಾ ನಿಮ್ಮ ಇಷ್ಟದ ಸುಗಂಧರಹಿತ ಚರ್ಮಕ್ಕೆ ಹಚ್ಚಬಹುದಾದ ಪ್ರಸಾದನದೊಂದಿಗೆ ಬೆರೆಸಿ ನೋವಿರುವ ಭಾಗಕ್ಕೆ ಹಚ್ಚಿಕೊಳ್ಳಬಹುದು. ಪರ್ಯಾಯವಾಗಿ ಧನಿಯ ಎಣ್ಣೆಯನ್ನೂ ಬಳಸಬಹುದು. ಇದಕ್ಕಾಗಿ ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ, ದ್ರಾಕ್ಷಿಬೀಜದ ಎಣ್ಣೆ ಅಥವಾ ಇತರ ಎಣ್ಣೆಯಲ್ಲಿ ಐದು ತೊಟ್ಟು ಧನಿಯ ಎಣ್ಣೆಯನ್ನು ಬೆರೆಸಿ ಹಚ್ಚಿಕೊಳ್ಳಬೇಕು. ಇದರ ಜೊತೆಗೇ ಉರಿಯೂತ ನಿವಾರಕ ಗುಣವಿರುವ ಇತರ ಎಣ್ಣ್ಗೆಗಳಾದ ಫ್ರಾಂಕಿನ್ಸಿನ್ಸ್, ಟೀ ಟ್ರೀ, ಬೇ ಲೀಫ್ ಅಥವಾ ಲಿಂಬೆಯ ಎಣ್ಣೆಯನ್ನೂ ಬೆರೆಸಬಹುದು. ನೋವಿರುವಷ್ಟೂ ದಿನ ಈ ಎಣ್ಣೆಯನ್ನು ಸಂಧಿವಾತವಿರುವ ಭಾಗದ ಮೇಲೆ ಹಚ್ಚಿಕೊಳ್ಳಬಹುದು.

ಅಧಿಕ ಮಾಸಿಕ ರಕ್ತಸ್ರಾವವನ್ನು ಕಡಿಮೆಗೊಳಿಸುತ್ತದೆ:
ಮಾಸಿಕ ಸ್ರಾವ ಅಧಿಕವಿರುವ ಮಹಿಳೆಯರಿಗೆ ಧನಿಯ ಕಾಳುಗಳನ್ನು ಕುದಿಸಿದ ನೀರನ್ನು ಕುಡಿಯುವುದು ಉತ್ತಮ ಪರಿಹಾರವಾಗಿದೆ. ಈ ಮೂಲಕ ರಕ್ತಸ್ರಾವದ ಪ್ರಮಾಣ ನಿಯಂತ್ರಣದಲ್ಲಿರುತ್ತದೆ ಹಾಗೂ ಸ್ರಾವ ಅತಿಹೆಚ್ಚಾಗದಂತೆ ತಡೆಯುತ್ತದೆ. ಧನಿಯ ಕಾಳುಗಳಲ್ಲಿರುವ ಕಬ್ಬಿಣದ ಅಂಶ ಕಳೆದುಕೊಂಡ ರಕ್ತವನ್ನು ಮರುತುಂಬಿಸಲು ನೆರವಾಗುತ್ತದೆ ಹಾಗೂ ಈ ಮೂಲಕ ದೇಹದಲ್ಲಿ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ
ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಗ್ಲುಕೋಸ್ ಮಟ್ಟವನ್ನೂ ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಮೇದೋಜೀರಕ ಗ್ರಂಥಿಯಿಂದ ಹೆಚ್ಚಿನ ಇನ್ಸುಲಿನ್ ಸ್ರವಿಸಲು ಧನಿಯ ಕಾಳುಗಳು ಎಂಡೋಕ್ರೈನ್ ಗ್ರಂಥಿಗಳಿಗೆ ಹೆಚ್ಚಿನ ಪ್ರಚೋದನೆ ನೀಡುತ್ತದೆ. ಈ ಮೂಲಕ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಇಳಿಯುವುದನ್ನು ತಡೆಯಲು ಸಾಧ್ಯವಾಗುತ್ತದೆ ಹಾಗೂ ತನ್ಮೂಲಕ ದೇಹದ ಜೀವರಾಸಾಯನಿಕ ಕ್ರಿಯೆ ಸುಲಭವಾಗಿ ಜರುಗಲು ನೆರವಾಗುತ್ತದೆ. ಇದಕ್ಕಾಗಿ ಧನಿಯ ಪುಡಿಯನ್ನು ಅಥವಾ ಧನಿಯ ಕಾಳುಗಳನ್ನು ನಿಮ್ಮ ನಿತ್ಯದ ಆಹಾರಗಳಾದ ಸಾರು, ಸೂಪ್, ಉಪ್ಪಿನಕಾಯಿ, ಜ್ಯೂಸ್, ಗ್ರೇವಿ ಮೊದಲಾದವುಗಳ ಜೊತೆಗೆ ಬೆರೆಸಿ ಸೇವಿಸಬಹುದು. ಅಲ್ಲದೇ ಹತ್ತು ಗ್ರಾಂನಷ್ಟು ಧನಿಯ ಪುಡಿಯನ್ನು ಒಂದು ಚಿಕ್ಕ ಲೋಟ ನೀರಿನಲ್ಲಿ ಬೆರೆಸಿ ಇಡಿಯ ರಾತ್ರಿ ನೆನೆಸಿಟ್ಟು ಕುಡಿಯಲೂಬಹುದು.

ಕಣ್ಣಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ
ಧನಿಯ ಕಾಳುಗಳಲ್ಲಿ ಹೆಚ್ಚಿನ ಮಟ್ಟದ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವು ಕಣ್ಣಿನ ತುರಿಕೆ, ಕೆಂಪಗಾಗುವಿಕೆ ಹಾಗೂ ಉರಿಯೂತವನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಇವುಗಳಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಕಣ್ಣುಗಳನ್ನು ಇತರರಿಂದ ಹರಡುವ ಕಂಜಂಟಿವೈಟಿಸ್ (ಮದ್ರಾಸ್ ಕಣ್ಣು) ಎಂಬ ರೋಗದಿಂದಲೂ ರಕ್ಷಿಸುತ್ತವೆ. ಒಂದು ವೇಳೆ ಈ ರೋಗ ಈಗಾಗಲೇ ಆವರಿಸಿದ್ದರೆ ಧನಿಯ ಕಾಳುಗಳನ್ನು ಕುದಿಸಿ ತಣಿಸಿ ಸೋಸಿದ ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ಕಣ್ಣುಗಳ ದೃಷ್ಟಿಯನ್ನು ಉತ್ತಮಗೊಳಿಸಲು ಧನಿಯ ಕಾಳುಗಳನ್ನು ಇಡಿಯ ರಾತ್ರಿ ನೆನೆಸಿಟ್ಟು ಮರುದಿನ ಇವನ್ನು ಸೋಸಿ ಕೇವಲ ಕಾಳುಗಳನ್ನು ಮಾತ್ರವೇ ಅರೆದು ಹಿಂಡಿ ತೆಗೆದ ರಸದಲ್ಲಿ ಒಂದು ತೊಟ್ಟನ್ನು ಕಣ್ಣುಗಳಿಗೆ ಬಿಟ್ಟುಕೊಳ್ಳಬೇಕು. ಅಲ್ಲದೇ ಕಣ್ಣುಗಳಿಗೆ ಎದುರಾಗುವ ಇತರ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳಲು ನಿತ್ಯವೂ ಧನಿಯ ಕಾಳುಗಳನ್ನು ಇಡಿಯ ರಾತ್ರಿ ನೆನೆಸಿಟ್ಟು ಮರುದಿನ ಇವನ್ನು ನುಣ್ಣಗೆ ಅರೆದು ಖಾಲಿಹೊಟ್ಟೆಯಲ್ಲಿ ಸೇವಿಸುವುದೂ ಉತ್ತಮ ಕ್ರಮವಾಗಿದೆ.

ಚರ್ಮ ವ್ಯಾಧಿಗಳನ್ನು ಕಡಿಮೆಗೊಳಿಸುತ್ತದೆ
ಸಾಮಾನ್ಯ ಚರ್ಮದ ತೊಂದರೆಗಳಾದ ತುರಿಕೆ, ಎಕ್ಸಿಮಾ, ಹುಳಕಡ್ಡಿ, ಕೆಂಪಗಾಗುವುದು, ಉರಿ ಮೊದಲಾದವುಗಳಿಗೆ ಕೊಂಚ ಕೊತ್ತಂಬರಿ ಪುಡಿಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ನಯವಾದ ಲೇಪನ ತಯಾರಿಸಿ ಹೆಚ್ಚಿಕೊಳ್ಳುವ ಮೂಲಕ ಶೀಘ್ರ ಉಪಶಮನ ದೊರಕುತ್ತದೆ.



Click it and Unblock the Notifications











