Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ದೇಹದ ಲಿವರ್ನ ಬಗ್ಗೆ ನಿಮಗೆ ತಿಳಿಯದೇ ಇರುವ ಪ್ರಮುಖ ಸಂಗತಿಗಳು
ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಯಕೃತ್ ಚರ್ಮದ ಬಳಿಕ ಎರಡನೆಯ ದೊಡ್ಡ ಅಂಗವಾಗಿದೆ. ನಮ್ಮ ಹೊಟ್ಟೆಯ ಮೇಲ್ಭಾಗದಲ್ಲಿ ಬಲಭಾಗದಲ್ಲಿ ಕೊಂಚ ವಾಲಿದಂತಿರುತ್ತದೆ. ಹೃದಯದಂತೆಯೇ ಯಕೃತ್ ಸಹಾ ಸತತವಾಗಿ ಜೀವಮಾನವಿಡೀ ವಿಶ್ರಾಂತಿಯಿಲ್ಲದೇ ಕಾರ್ಯನಿರ್ವಹಿಸುತ್ತದೆ ಹಾಗೂ ಇದರ ಕಾರ್ಯನಿರ್ವಹಣೆ ನಿಂತರೆ ಸಾವು ನಿಶ್ಚಿತವಾಗಿದೆ. ಕಶೇರುಕ ಅಂದರೆ ಬೆನ್ನುಮೂಳೆ ಮತ್ತು ಮೆದುಳುಬಳ್ಳಿ ಇರುವ ಪ್ರತಿ ಜೀವಿಗಳಲ್ಲಿಯೂ ಯಕೃತ್ ಇರಲೇಬೇಕು. ಇದರ ಪ್ರಮುಖ ಕಾರ್ಯವೆಂದರೆ ನಮ್ಮ ಜೀವರಾಸಾಯನಿಕ ಕ್ರಿಯೆಯನ್ನು ನಿಯಂತ್ರಿಸುವುದು, ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ನಿವಾರಿಸಿ ಶುದ್ದಗೊಳಿಸುವುದು ಹಾಗೂ ದೇಹದ ತೂಕವನ್ನು ನಿಯಂತ್ರಣದಲ್ಲಿಡುವುದು.

ಆದರೆ ನಮ್ಮ ದೇಹದ ಬೇರಾವುದೇ ಅಂಗಕ್ಕೂ ಇಲ್ಲದ ವಿಶೇಷ ಶಕ್ತಿಯೊಂದು ಯಕೃತ್ ಗೆ ಇದೆ, ಅದೆಂದರೆ ಇದನ್ನು ಕಸಿ ಮಾಡಲು ಸಾಧ್ಯವಾಗುವುದು ಅಂದರೆ ಒಂದು ಚಿಕ್ಕ ತುಂಡನ್ನು ಕತ್ತರಿಸಿ ದಾನ ಮಾಡಿದ ಬಳಿಕ ಈ ಭಾಗ ಮತ್ತೆ ಬೆಳೆಯುತ್ತದೆ. ಆದರೆ ಯಕೃತ್ ನ ವೈಶಿಷ್ಟ್ಯಗಳನ್ನು ಇಷ್ಟೇ ಪದದಲ್ಲಿ ವಿವರಿಸಲು ಸಾಧ್ಯವಿಲ್ಲ, ಈ ಅದ್ಭುತ ಅಂಗದ ಬಗ್ಗೆ ನಾವು ತಿಳಿದುಕೊಳ್ಳಬೇಕಾಗಿದ್ದು ಬಹಳಷ್ಟಿದೆ ಹಾಗೂ ಇದರ ಕಾಳಜಿ ಎಷ್ಟು ಅಗತ್ಯ ಎನ್ನುವುದರ ಮನವರಿಕೆಯೂ ಆಗುತ್ತದೆ. ಬನ್ನಿ, ಇಂತಹ ಹತ್ತು ಪ್ರಮುಖ ಸಂಗತಿಗಳನ್ನು ಅರಿಯೋಣ:

ಈ ಅಂಗವನ್ನು ಎರಡು ವಿಧದಲ್ಲಿ ಗುರುತಿಸಬಹುದು
ಇದು ನಮ್ಮ ದೇಹದ ಎರಡನೆಯ ದೊಡ್ಡ ಅಂಗವಾಗಿದೆ (ವಿಸ್ತಾರವನ್ನು ಪರಿಗಣಿಸಿ ಚರ್ಮಕ್ಕೆ ಪ್ರಥಮ ಸ್ಥಾನ ದೊರಕುತ್ತದೆ) ಹಾಗೂ ದೇಹದ ಅತಿದೊಡ್ಡ ಗ್ರಂಥಿಯೂ ಆಗಿದೆ. ವಯಸ್ಕರಲ್ಲಿ ಇದರ ತೂಕ ಸುಮಾರು 1.3 ರಿಂದ 1.6 ಕೇಜಿಯವರೆಗೆ ಇರುತ್ತದೆ. ಇದರ ಬಣ್ಣ ಕೆಂಪುಮಿಶ್ರಿತ ಕಂದು ಅಥವಾ ಹೆಚ್ಚೇ ಸುಟ್ಟಿರುವ ಇಟ್ಟಿಗೆಯ ಬಣ್ಣವಿರುತ್ತದೆ. ನಮ್ಮ ದೇಹದಲ್ಲಿರುವ ಕಲ್ಮಶ ಮತ್ತು ವಿಷಕಾರಿ ವಸ್ತುಗಳನ್ನು ಶೋಧಿಸಿ ಪಿತ್ತರಸದ ರೂಪದಲ್ಲಿ ಮೂತ್ರ ಮತ್ತು ಮಲದ ಮೂಲಕ ಹೊರವಿಸರ್ಜಿಸುತ್ತದೆ. ಸಾಮಾನ್ಯವಾಗಿ ಯಾವುದೇ ಆಹಾರ ಸೇವಿಸಿದರೂ ಮಲದ ಬಣ್ಣ ಮಾತ್ರ ಹೆಚ್ಚಾಗಿ ಕಂದು-ಖಾಕಿ ಬಣ್ಣದಲ್ಲಿರುವುದಕ್ಕೆ ಈ ಪಿತ್ತರಸವೇ ಕಾರಣ.

ಕತ್ತರಿಸಿದರೂ ಮತ್ತೆ ಬೆಳೆಯಬಲ್ಲ ಏಕೈಕ ಅಂಗ!
ನಮ್ಮ ದೇಹದಲ್ಲಿ ಒಂದು ತುಂಡನ್ನು ಕತ್ತರಿಸಿ ತೆಗೆದರೂ ಈ ಸ್ಥಾನ ಮತ್ತೆ ಬೆಳೆದು ಪರಿಪೂರ್ಣ ಗಾತ್ರವನ್ನು ಪಡೆಯಬಲ್ಲ ಏಕೈಕ ಅಂಗವೆಂದರೆ ಯಕೃತ್ ಮಾತ್ರ. ಅದರಲ್ಲೂ ಮರುಬೆಳವಣಿಗೆ ಪಡೆಯಲು ಮೂಲಗಾತ್ರದ ಕಾಲು ಭಾಗ ಇದ್ದರೂ ಸಾಕಾಗುತ್ತದೆ. 2009 ರಲ್ಲಿ Journal of Cell Physiology ಎಂಬ ವೈದ್ಯಕೀಯ ಮಾಧ್ಯಮದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಒಂದು ವೇಳೆ ರೋಗಿಯೊಬ್ಬರ ಯಕೃತ್ ಸಂಪೂರ್ಣವಾಗಿ ವಿಫಲವಾಗಿದ್ದು ದಾನಿಯೊಬ್ಬರಿಂದ ಅರ್ಧಭಾಗ ಯಕೃತ್ ದಾನವಾಗಿ ಪಡೆದುಕೊಂಡರೆ ಮುಂದಿನ ಹದಿನೈದು ದಿನಗಳಲ್ಲಿಯೇ ದಾನಿಯ ಯಕೃತ್ ಮೊದಲ ಗಾತ್ರಕ್ಕೆ ಬೆಳೆಯುತ್ತದೆ.

ನೀರಿನ ಸಂಗ್ರಹ ಮತ್ತು ಕಾರ್ಬೋಹೈಡ್ರೇಟುಗಳ ಚಯಾಪಚಯ ಕ್ರಿಯೆಗೆ ನೆರವಾಗುತ್ತದೆ!
ಯಕೃತ್ ದೇಹದಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಒಂದು ವೇಳೆ ವ್ಯಕ್ತಿಯ ಯಕೃತ್ ನ ಒಳಗೆ ಕೊಬ್ಬು ಸಂಗ್ರಹವಾಗಿದ್ದರೆ ಈ ವ್ಯಕ್ತಿಗಳಿಗೆ ಟೈಪ್ - 2 ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚು. ಯಕೃತ್ ಕಾರ್ಬೋಹೈಡ್ರೇಟ್ ಭರಿತ ಆಹಾರಗಳಿಂದ ಗ್ಲುಕೋಸ್ ಅನ್ನು ಗ್ಲೈಕೋಜೆನ್ ಆಗಿ ಪರಿವರ್ತಿಸುತ್ತದೆ ಹಾಗೂ ಇದು ಯಕೃತ್ ನಲ್ಲಿ ಸಂಗ್ರಹಗೊಳ್ಳುತ್ತದೆ. ನಮ್ಮ ಊಟಗಳ ನಡುವೆ ಅಗತ್ಯವಿರುವ ಶಕ್ತಿಗಾಗಿ ಯಕೃತ್ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಈ ಗ್ಲೈಕೋಜೆನ್ ಅನ್ನು ಬಿಡುಗಡೆ ಮಾಡುತ್ತಾ ಹೋಗುವುದರಿಂದಲೇ ನಮಗೆ ಎಲ್ಲಾ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ಗ್ಲೈಕೋಜೆನ್ ತನ್ನ ಗಾತ್ರಕ್ಕೂ ಸುಮಾರು ಆರು ಪಟ್ಟು ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ದೇಹದಲ್ಲಿ ನೀರಿನ ಸಂಗ್ರಹವನ್ನು ಇಟ್ಟುಕೊಳ್ಳಲು ಯಕೃತ್ ಪ್ರಮುಖ ಆಗರವೂ ಆಗಿದೆ.

ಮೆದುಳಿನ ಕೆಲಸಗಳೂ ಯಕೃತ್ ಅನ್ನು ಅವಲಂಬಿಸಿವೆ!
ರಕ್ತದಲ್ಲಿರುವ ನೀರಿನ ಅಂಶವಾದ ಪ್ಲಾಸ್ಮಾ, ಗ್ಲುಕೋಸ್ ಮತ್ತು ಅಮೋನಿಯಾ ಎಷ್ಟಿರಬೇಕೆಂದು ನಮ್ಮ ಯಕೃತ್ ನಿರ್ಧರಿಸುತ್ತದೆ. ಒಂದು ವೇಳೆ ಈ ಪ್ರಮಾಣಗಳಲ್ಲಿ ಏರುಪೇರಾದರೆ ರಕ್ತ ತೀರಾ ಸ್ನಿಗ್ಧಗೊಂಡು ರಕ್ತನಾಳಗಳಲ್ಲಿ ಹರಿಯಲು ಸಾಧ್ಯವಾಗದೇ ಗಂಭೀರವಾದ ಪರಿಸ್ಥಿತಿ ಎದುರಾಬಹುದು. ಈ ಸ್ಥಿತಿಗೆ hepatic encephalopathy ಎಂದು ಕರೆಯಲಾಗುತ್ತದೆ ಹಾಗೂ ಉಲ್ಬಣಗೊಂಡರೆ ವ್ಯಕ್ತಿ ಕೋಮಾ ಸ್ಥಿತಿಯನ್ನೂ ತಲುಪಬಹುದು. ನಮ್ಮ ದೇಹದಲ್ಲಿ ಅತಿ ಹೆಚ್ಚು ರಕ್ತ ಬೇಡುವ ಅಂಗವೆಂದರೆ ಮೆದುಳು. ಮೆದುಳಿಗೆ ತಲುಪುವ ರಕ್ತ ಅಪ್ಪಟವಾಗಿರಬೇಕು ಹಾಗೂ ಈ ಮೂಲಕ ಮೆದುಳು ಸರಿಯಾಗಿ ಕಾರ್ಯನಿರ್ವಹಿಸತ್ತಿರಬೇಕೆಂದರೆ ಇದಕ್ಕೆ ಅಪ್ಪಟ ರಕ್ತ ಒದಗಿಸುವ ಯಕೃತ್ ಅನ್ನು ಅವಲಂಬಿಸಲೇಬೇಕಾಗುತ್ತದೆ.

ರಸದೂತಗಳ ಚಯಾಪಚಯಕ್ಕೆ ನೆರವಾಗುತ್ತದೆ
ನಮ್ಮ ದೇಹದಲ್ಲಿ ಸ್ರವಿಸುವ ಹಲವಾರು ರಸದೂತಗಳನ್ನು ಒಡೆದು ಉಪವಿಭಾಗಗಳನ್ನಾಗಿಸುವ ಕೆಲಸ ಯಕೃತ್ ನದ್ದು. ಮಹಿಳೆಯರ ದೇಹದಲ್ಲಿ ಸ್ರವಿಸುವ ಈಸ್ಟ್ರೋಜೆನ್ ರಸದೂತವನ್ನು ಒಡೆದು ಪಿತ್ತರಸವಾಗಿಸುತ್ತದೆ ಹಾಗೂ ಸಣ್ಣಕರುಳಿನಲ್ಲಿ ಪ್ರತ್ಯೇಕಿಸಲ್ಪಟ್ಟು ವಿಸರ್ಜಿಸಲ್ಪಡುತ್ತದೆ. ಒಂದು ವೇಳೆ ಯಕೃತ್ ನ ಮೇಲಿನ ಹೊರೆ ಹೆಚ್ಚಾದರೆ ಈ ಕೆಲಸವನ್ನು ಮಾಡಲು ಸಾಧ್ಯವಾಗದೇ ಮಹಿಳೆಯ ದೇಹದಲ್ಲಿ ಈಸ್ಟ್ರೋಜೆನ್ ಪ್ರಮಾಣ ಹೆಚ್ಚುತ್ತದೆ. ಈ ರಸದೂತ ಮಹಿಳೆಯರ ದೇಹದ ಹಲವು ಬೆಳವಣಿಗೆಗಳನ್ನು ನಿಯಂತ್ರಿಸುವ ರಸದೂತವಾಗಿದ್ದು ಸ್ತನಗಳಲ್ಲಿ ಗಂಟುಗಳು, ದೇಹದಿಂದ ದ್ರವ ಹೊರಹರಿಯದೇ ಹೋಗುವುದು, ಮಾಸಿಕ ದಿನಗಳಲ್ಲಿ ಸೆಡೆತ ಎದುರಾಗುವುದು, ಮುಖದಲ್ಲಿ ಎದ್ದು ಕಾಣುವಷ್ಟು ಗಾಢವಾದ ರೋಮಗಳು ಮೊದಲಾದ ತೊಂದರೆಗಳನ್ನು ತಂದೊಡ್ಡಬಹುದು. ಇದೇ ರೀತಿ ಪುರುಷರಲ್ಲಿ ಆಂಡ್ರೋಜೆನ್ ಎಂಬ ರಸದೂತವನ್ನು ಒಡೆಯದೇ ಹೋದರೆ ಭಾರೀ ಗಾತ್ರದ ಮೊಡವೆಗಳು, ನೆತ್ತಿಯ ತಲೆಗೂದಲು ಉದುರುವುದು ಮೊದಲಾದವು ಎದುರಾಗಬಹುದು.

ಯಕೃತ್ ವಿಟಮಿನ್ನುಗಳು ಮತ್ತು ಖನಿಜಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ
ಯಕೃತ್ ಒಂದು ಸಂಗ್ರಹಾಗಾರವೂ ಆಗಿದ್ದು ಇಲ್ಲಿ ವಿಟಮಿನ್ ಎ, ಡಿ, ಇ, ಕೆ ಮತ್ತು ಬಿ12 ಹಾಗೂ ಖನಿಜಗಳಾದ ಕಬ್ಬಿಣ ಮತ್ತು ತಾಮ್ರಗಳೂ ಸಂಗ್ರಹಿಸಲ್ಪಡುತ್ತವೆ. ಅಲ್ಲದೇ ವಿಟಮಿನ್ ಡಿ ಯನ್ನು ಕ್ರಿಯಾತ್ಮಕ ರೂಪಕ್ಕೆ ಪರಿವರ್ತಿಸುತ್ತದೆ.

ಯಕೃತ್ ನಲ್ಲಿ ಪ್ರೋಟೀನ್ ಉತ್ಪಾದನೆಯಾಗುತ್ತದೆ ಹಾಗೂ ರಕ್ತ ಹೆಪ್ಪುಗಟ್ಟಿಸುವುದಕ್ಕೆ ಬೆಂಬಲ ನೀಡುತ್ತದೆ:
ನಮ್ಮ ದೇಹದ ಯಾವುದೇ ಬೆಳವಣಿಗೆಗೆ ಪ್ರೋಟೀನುಗಳು ಅವಶ್ಯಕ. ಒಂದು ವೇಳೆ ನಾವು ಸೇವಿಸುವ ಆಹಾರದಿಂದ ಈ ಪ್ರೋಟೀನುಗಳು ಲಭಿಸದೇ ಹೋದರೆ ಬೆಳವಣಿಗೆಗೆ ಸಾಧ್ಯವಾಗದೇ ಹೋಗಬಹುದು. ಯಕೃತ್ ಹಾಗಾಗಲು ಬಿಡದೇ ತಾನೇ ಪ್ರೋಟೀನ್ ಅನ್ನು ಉತ್ಪಾದಿಸಿ ಈ ಕೊರತೆಯನ್ನು ತುಂಬಿಕೊಳ್ಳುತ್ತದೆ. ಅಲ್ಲದೇ ನಮ್ಮ ರಕ್ತದಲ್ಲಿರುವ ವಿಟಮಿನ್ ಕೆ ರಕ್ತಸ್ರಾವವಾದ ಸಮಯದಲ್ಲಿ ಹೆಪ್ಪುಗಟ್ಟಿ ರಕ್ತದ ಸೋರುವಿಕೆಯನ್ನು ತಡೆಗಟ್ಟುವ ಗುಣ ಹೊಂದಿದೆ. ರಕ್ತ ಹೆಪ್ಪುಗಟ್ಟಲು ಪ್ಲೇಟ್ಲೆಟ್ ಗಳೆಂಬ ತಟ್ಟೆಗಳು ಗಾಳಿಯ ಸಂಪರ್ಕಕ್ಕೆ ಬಂದೊಡನೇ ಒಂದಕ್ಕೊಂದು ಅಂಟಿಕೊಂಡು ಗೋಡೆಯಂತೆ ಅಡ್ಡನಿಲ್ಲುತ್ತವೆ. ಹೀಗಾಗಬೇಕಾದರೆ ಕೆಲವು ರಾಸಾಯನಿಕಗಳು ಮತ್ತು ಕಿಣ್ವಗಳು ರಕ್ತದಲ್ಲಿ ಸದಾ ಇರಬೇಕಾಗುತ್ತದೆ. ಈ ಅಂಶಗಳನ್ನು ಯಕೃತ್ ಸತತವಾಗಿ ಉತ್ಪಾದಿಸಿ ರಕ್ತದಲ್ಲಿ ಇರುವಂತೆ ಮಾಡುತ್ತದೆ. ಹಾಗಾಗಿ ಯಕೃತ್ ನ ತೊಂದರೆ ಇರುವ ವ್ಯಕ್ತಿಗಳಿಗೆ ಗಾಯವಾದರೆ ಇಲ್ಲಿಂದ ರಕ್ತ ಸೋರುವುದು ನಿಲ್ಲಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಅಷ್ಟರವರೆಗೆ ಇವರಿಂದ ಹೆಚ್ಚಿನ ರಕ್ತ ನಷ್ಟವಾಗಿರುತ್ತದೆ.

ಔಷಧಿಗಳನ್ನು ಪರಿವರ್ತಿಸುವ ಕೆಲಸವನ್ನೂ ಯಕೃತ್ ಮಾಡುತ್ತದೆ
ನಾವು ಸೇವಿಸುವ ಯಾವುದೇ ಔಷಧಿ ನೇರವಾಗಿ ನಮ್ಮ ದೇಹಕ್ಕೆ ಲಭಿಸುವುದಿಲ್ಲ ಎಂದು ನಿಮಗೆ ಗೊತ್ತೇ? ಈ ಔಷಧಿಗಳನ್ನು ನಮ್ಮ ದೇಹ ಸ್ವೀಕರಿಸಲು ಸಾಧ್ಯವಾಗುವಂತೆ ಮಾಡುವುದು ಯಕೃತ್ ನ ಕೆಲಸ. ಹಾಗಾಗಿ ಯಕೃತ್ ಇಲ್ಲದೇ ಇದ್ದಲ್ಲಿ ಯಾವುದೇ ಔಷಧಿ ನಮ್ಮ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ.

ನಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ಧರಿಸುವುದು ಯಕೃತ್
ನಮ್ಮ ದೇಹದಲ್ಲಿ ಯಕೃತ್ ಎಷ್ಟು ಆರೋಗ್ಯಕರವಾಗಿರುತ್ತದೆಯೋ ಆ ಅಂಶವನ್ನು ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಅವಲಂಬಿಸಿರುತ್ತದೆ. ಒಂದು ವೇಳೆ ನಮ್ಮ ಯಕೃತ್ ನಲ್ಲಿಯೇ ಕೊಬ್ಬು (fatty liver)ಇದ್ದರೆ ಇದರ ಪರಿಣಾಮವಾಗಿ ಕೆಟ್ಟ ಅಥವಾ LDLಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡುಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ನಮ್ಮ ಯಕೃತ್ ಉತ್ಪಾದಿಸುತ್ತದೆ ಎಂದು ಹೇಳಬಹುದು. ಇವು ಕೆಲವು ರಸದೂತಗಳನ್ನು ಸಂಶ್ಲೇಷಿಸಿ ಹೊಸ ಜೀವಕೋಶಗಳನ್ನು ಉತ್ಪತ್ತಿಮಾಡುತ್ತವೆ.

ಯಕೃತ್ ಸುಮಾರು ಐನೂರು ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ
ವಿಜ್ಞಾನಿಗಳ ಪ್ರಕಾರ ಯಕೃತ್ ಸುಮಾರು ಐನೂರರಷ್ಟು ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ಪ್ರಮುಖ ಅಂಗಕ್ಕೆ ಮದ್ಯ, ಕೆಲವು ಔಷಧಿಗಳು, ಹೆಪಟೈಟಿಸ್ ಬಿ ವೈರಸ್ಗಳು ಹಾನಿ ಎಸಗಬಹುದು. ಒಂದು ವೇಳೆ ಯಕೃತ್ ನ ಕ್ಷಮತೆ ಉಡುಗಿ ಇದು ಬೈಲಿರುಬಿನ್ ಎಂಬ ರಸವನ್ನು ಪೂರ್ಣವಾಗಿ ಸಂಸ್ಕರಿಸದೇ ಹೋದರೆ ಇದರ ಪರಿಣಾಮವಾಗಿ ಕಣ್ಣು ಮತ್ತು ಚರ್ಮದ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದೇ ಕಾಮಾಲೆ ರೋಗ. ಹಾಗಾಗಿ ಆರೋಗ್ಯ ಉತ್ತಮವಾಗಿರಬೇಕೆಂದರೆ ಯಕೃತ್ ನಿರ್ವಹಿಸುವ ಈ ಆಗಾಧ ಬಗೆಯ ಕಾರ್ಯವಿಧಾನಗಳೂ ಸುಲಲಿತವಾಗಿ ನಡೆಯಬೇಕಾಗುವುದು ಅವಶ್ಯವಾಗಿವೆ. ಉದಾಹರಣೆಗೆ ಕೆಲವು ರಾಸಾಯನಿಕ ಮತ್ತು ಕಿಣ್ವಗಳನ್ನು ಉತ್ಪಾದಿಸುವ ಮೂಲಕ ರಕ್ತ ಹೆಪ್ಪುಗಟ್ಟಲು ನೆರವಾಗುವುದು ಮತ್ತು ಗಾಯವಾದರೆ ರಕ್ತವನ್ನು ಹೆಪ್ಪುಗಟ್ಟಿಸಿ ರಕ್ತದ ಹೊರಹರಿವನ್ನು ತಡೆಯುತ್ತದೆ. ಅಲ್ಲದೇ ತನ್ನಲ್ಲಿ ಇದು ಸಕ್ಕರೆಯನ್ನು ಗ್ಲೈಕೋಜೆನ್ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಯಾವಾಗ ಶಕ್ತಿಯ ಅಗತ್ಯ ಬೀಳುತ್ತದೆಯೋ ಆಗ ಈ ಗ್ಲೈಕೋಜೆನ್ ಗಳನ್ನು ಒಡೆದು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ ಹಾಗೂ ದೇಹದ ಕಾರ್ಯಕ್ಕೆ ಅಗತ್ಯವಾದ ಇಂಧನವನ್ನು ಒದಗಿಸುತ್ತದೆ.



Click it and Unblock the Notifications











