Latest Updates
-
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ
ಆಗಾಗ ಕಾಲು ನೋವು ಬರುತ್ತಿದ್ದರೆ, ಒಮ್ಮೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ
ನಿಮಗೆ ಆಗಾಗ ಕಾಲು ನೋವು ಎದುರಾಗುತ್ತಿರುತ್ತದೆಯೇ? ಕಾಲುನೋವು ಯಾವುದೇ ವಯಸ್ಸಿನ ವ್ಯಕ್ತಿಗಳಿಗೆ ಕಾಡಬಹುದಾದ ತೊಂದರೆಯಾಗಿದ್ದು ನಿಂತಾಗ, ನಡೆಯುವಾಗ ಎದುರಾಗುವ ಚಿಕ್ಕ ಪ್ರಮಾಣದ ನೋವಿನಿಂದ ನಿಲ್ಲಲೇ ಅಸಾಧ್ಯವಾಗುವಷ್ಟು ಪ್ರಬಲವೂ ಆಗಿರುತ್ತದೆ. ಕೆಲವೊಮ್ಮೆ ಒಂದೇ ಕಾಲಿಗೆ ನೋವು ಆವರಿಸಿದರೆ ಉಳಿದಂತೆ ಎರಡೂ ಕಾಲುಗಳಲ್ಲಿ ನೋವು ಇರುತ್ತದೆ. ಇದರಿಂದ ಚಲನವಲನ, ನಿತ್ಯ ಕಾರ್ಯಗಳಿಗೆ ಬಹಳಷ್ಟು ಅಡ್ಡಿಯಾಗುತ್ತದೆ.
ಕಾಲುನೋವು ಎದುರಾಗಲು ಕೆಲವಾರು ಕಾರಣಗಳಿವೆ. ಕಾಲಿನ ಸ್ನಾಯುಗಳ ಸೆಡೆತ, ಕಾಲಿನ ಸೆಳೆತ, ಕಾಲಿನ ಸ್ನಾಯುಗಳ ಕ್ಷಮತೆ ಕುಸಿಯುವುದು, ಪೋಷಕಾಂಶಗಳ ಕೊರತೆ, ನಿರ್ಜಲೀಕರಣ, ಹೆಚ್ಚು ಹೊತ್ತು ನಿಂತೇ ಇರುವ ಪರಿಸ್ಥಿತಿ ಮೊದಲಾದವು ಕಾಲುನೋವಿಗೆ ಕಾರಣವಾಗಿವೆ. ಕೆಲವೊಮ್ಮೆ ಮಾನಸಿಕ ಒತ್ತಡ, ಮೂಳೆಯಲ್ಲಿ ಅತಿ ಚಿಕ್ಕದಾಗಿ ಬಿರುಕು ಬಂದಿರುವುದು, ಕೆಲವು ಔಷಧಿಗಳ ಅಡ್ಡಪರಿಣಾಮಗಳಿಂದಲೂ ಎದುರಾಗಬಹುದು.
ಕಾಲುನೋವಿನ ಸೂಚನೆಗಳಲ್ಲಿ ನೋವಿನ ಹೊರತಾಗಿ ಸುಸ್ತು, ಕಾಲುಗಳ ಕೆಲವು ಭಾಗಗಳಲ್ಲಿ ಸಂವೇದನೆ ಇಲ್ಲದಿರುವುದು, ಚಿಕ್ಕದಾಗಿ ಕಚಗುಳಿಯಾದಂತೆ ಅನ್ನಿಸುವುದು, ಚಿಕ್ಕದಾದ ಸೂಜಿಯಲ್ಲಿ ಚುಚ್ಚಿದಂತೆ ಭಾಸವಾಗುವುದು ಇತ್ಯಾದಿಗಳಾಗಿವೆ. ಕಾಲುನೋವನ್ನು ಕಡಿಮೆಗೊಳಿಸಲು ಕೆಲವೊಂದು ಮನೆಮದ್ದುಗಳಿದ್ದು ಇವುಗಳಲ್ಲಿ ನಿಮಗೆ ಸೂಕ್ತವೆನಿಸಿದನ್ನು ಅನುಸರಿಸುವ ಮೂಲಕ ಶೀಘ್ರವೇ ನೋವು ಕಡಿಮೆಯಾಗುತ್ತದೆ....

ತಣ್ಣನೆಯ ಪಟ್ಟಿ
ಕೆಲವೊಮ್ಮೆ ಬಲುದೂರದ ನಡಿಗೆ ಅಥವಾ ಪ್ರಯಾಸದ ಕೆಲಸ ನಿರ್ವಹಿಸಿದ ಬಳಿಕ ಕಾಲುನೋವು ಎದುರಾಗುತ್ತದೆ ಹಾಗೂ ವಿಶ್ರಾಂತಿಯ ಬಳಿಕವೂ ಕಡಿಮೆಯಾಗದೇ ಇದ್ದರೆ ಇದರ ಪರಿಣಾಮವಾಗಿ ಕಾಲುಗಳಲ್ಲಿ ಸಂವೇದನೆ ಇಲ್ಲದೇ ಮರಗಟ್ಟಿದಂತಾಗಬಹುದು. ಈ ಭಾಗ ಕೊಂಚ ಊದಿಕೊಂಡಿರುತ್ತದೆ. ಇದಕ್ಕೆ ಅತಿಯಾದ ಸ್ನಾಯುಗಳ ಚಟುವಟಿಕೆಯಿಂದ ಉಂಟಾದ ಉರಿಯೂತವೇ ಕಾರಣ. ಈ ಊತವನ್ನು ಕಡಿಮೆ ಮಾಡಲು ಒಂದು ದಪ್ಪ ಟವೆಲ್ಲಿನೊಳಗೆ ಕೆಲವು ಮಂಜುಗಡ್ಡೆಯ ತುಂಡುಗಳನ್ನಿರಿಸಿ ಬಾವು ಬಂದ ಭಾಗದ ಮೇಲೆ ಸುಮಾರು ಹತ್ತು ಹದಿನೈದು ನಿಮಿಷ ಇರಿಸಿ. ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸಿ ಹಾಗೂ ಬಾವು ಪೂರ್ಣವಾಗಿ ಗುಣವಾಗುವವರೆಗೂ ವಿಶ್ರಾಂತಿ ಪಡೆಯಬೇಕು.

ಮಸಾಜ್
ಅತಿಯಾದ ವ್ಯಾಯಾಮ ಅಥವಾ ನಡಿಗೆಯಿಂದ ಸ್ನಾಯುಗಳ ಅಂಗಾಂಶ ತುಂಡಾಗುವುದರಿಂದ ಆಯಾಸದಿಂದಾಗಿ ಕಾಲುನೋವು ಎದುರಾಗಿದ್ದರೆ ನೋವಿರುವ ಭಾಗದಲ್ಲಿ ಮಸಾಜ್ ಮಾಡಿದಾಗ ಈ ಭಾಗದಲ್ಲಿ ರಕ್ತಪರಿಚಲನೆ ಉತ್ತಮಗೊಂಡು ಶೀಘ್ರವೇ ನೋವು ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಈ ಮಸಾಜ್ ಗೆ ಉತ್ತಮ ಆಯ್ಕೆಯಾಗಿದೆ. ದಿನಕ್ಕೆ ಮೂರು ಬಾರಿಯಂತೆ ಸುಮಾರು ಹತ್ತು ನಿಮಿಷಗಳ ಕಾಲ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ಮಸಾಜ್ ಮಾಡಬೇಕು.

ಅರಿಶಿನ
ಒಂದು ವೇಳೆ ನೋವು ಉಂಟಾಗಿದ್ದ ಭಾಗದಲ್ಲಿ ಚರ್ಮ ಕೆಂಪಗಾಗಿದ್ದರೆ ಅರಿಶಿನ ಉತ್ತಮ ಆಯ್ಕೆಯಾಗಿದ್ದು ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಉರಿಯೂತ ನಿವಾರಕ ಗುಣ ನೋವು ಕಡಿಮೆಯಾಗಲು ನೆರವಾಗುತ್ತವೆ.ಇದಕ್ಕಾಗಿ ತಲಾ ಒಂದು ಚಿಕ್ಕ ಚಮಚ ಅರಿಶಿನ ಪುಡಿಯನ್ನು ಉಗುರುಬೆಚ್ಚಗಾಗಿಸಿದ ಎಳ್ಳೆಣ್ಣೆಯಲ್ಲಿ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ನೋವು ಉಂಟಾಗಿರುವ ಭಾಗಕ್ಕೆ ತೆಳ್ಳಗೆ ಹಚ್ಚಿ ಅರ್ಧ ಗಂಟೆ ಬಿಡಿ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸಿ.

ಸೇಬಿನ ಶಿರ್ಕಾ
ಈ ಶಿರ್ಕಾ ಸಹಾ ಕಾಲಿನ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದರ ಕ್ಷಾರಿಯ ಗುಣ ರಕ್ತದಲ್ಲಿ ಸಂಗ್ರಹವಾಗಿದ್ದ ಯೂರಿಕ್ ಆಮ್ಲದ ಕಣಗಳನ್ನು ನಿವಾರಿಸಲು ನೆರವಾಗುತ್ತವೆ. ಎರಡು ಕಪ್ ಸೇಬಿನ ಶಿರ್ಕಾವನ್ನು ಒಂದು ಬಕೆಟ್ ಅಥವಾ ತೊಟ್ಟಿಯಲ್ಲಿರುವ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ. ನೋವು ಉಂಟಾಗಿರುವ ಕಾಲು ಪೂರ್ಣವಾಗಿ ಈ ನೀರಿನಲ್ಲಿ ಮುಳುಗಿರುವಂತೆ ಸುಮಾರು ಮೂವತ್ತು ನಿಮಿಷ ಇರಿಸಿ. ಬಳಿಕ ದಪ್ಪ ಟವೆಲ್ಲಿನಿಂದ ಒತ್ತಿಕೊಂಡು ಒಣಗಿಸಿ.

ಎಪ್ಸಂ ಉಪ್ಪು
ಇದರಲ್ಲಿರುವ ಮೆಗ್ನೀಶಿಯಂ ಒಂದು ಉತ್ತಮವಾದ ಎಲೆಕ್ಟ್ರೋಲೈಟ್ ಆಗಿದ್ದು ನರಗಳ ಸಂಕೇತವನ್ನು ನಿರ್ವಹಿಸಲು ನೆರವಾಗುತ್ತದೆ. ಅಲ್ಲದೇ ಸ್ನಾಯುಗಳನ್ನು ಸಡಿಲಿಸಿ ಈ ಮೂಲಕ ಎದುರಾಗಿದ್ದ ನೋವನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಅರ್ಧ ಕಪ್ ಎಪ್ಸಂ ಉಪ್ಪನ್ನು ಸ್ನಾನದ ತೊಟ್ಟಿಯ ನೀರಿನಲ್ಲಿ ಬೆರೆಸಿ. ನೋವು ಉಂಟಾಗಿರುವ ಕಾಲುಗಳನ್ನು ನೀರಿನಲ್ಲಿ ಪೂರ್ಣವಾಗಿ ಮುಳುಗಿರುವಂತೆ ಹದಿನೈದು ನಿಮಿಷ ಇರಿಸಿ ಬಳಿಕ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ದಿನಕ್ಕೆ ಮೂರು ಬಾರಿ ಪುನರಾವರ್ತಿಸಿ.

ಚೆರ್ರಿ ಹಣ್ಣಿನ ಜ್ಯೂಸ್
ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕ ಗುಣ ಸ್ನಾಯುಗಳಿಗೆ ಉಂಟಾಗಿದ್ದ ಘಾಸಿಯನ್ನು ಸರಿಪಡಿಸಿ ನೋವು ಇಲ್ಲವಾಗಿಸಲು ನೆರವಾಗುತ್ತದೆ. ಇದಕ್ಕಾಗಿ ಒಂದು ಕಪ್ ಚೆರ್ರಿ ಹಣ್ಣುಗಳ ಜ್ಯೂಸ್ ಅನ್ನು ನಿತ್ಯವೂ ದಿನಕ್ಕೊಂದು ಬಾರಿ ಸೇವಿಸಿ. ಬದಲಿಗೆ ಒಂದು ಮುಷ್ಟಿಯಷ್ಟು ಚೆರ್ರಿ ಹಣ್ಣುಗಳನ್ನು ಕೊಂಚ ಕೊಂಚವಾಗಿ ಇಡಿಯ ದಿನ ಸೇವಿಸಿ.

ಹಸಿಶುಂಠಿ
ಇದರ ಉರಿಯೂತ ನಿವಾರಕ ಗುಣ ಕಾಲುಗಳ ಭಾಗದಲ್ಲಿ ರಕ್ತಪರಿಚಲನೆ ಹೆಚ್ಚಿಸುವ ಮೂಲಕ ಉರಿಯೂತದಿಂದ ಉಂಟಾಗಿದ್ದ ಕಾಲುನೋವನ್ನು ಕಡಿಮೆಗೊಳಿಸುತ್ತದೆ. ಇದಕ್ಕಾಗಿ ಹಸಿಶುಂಠಿ ಬೆರೆಸಿ ತಯಾರಿಸಿದ ಬಿಸಿ ಬಿಸಿ ಟೀ ದಿನಕ್ಕೆ ಮೂರು ಬಾರಿ ಸೇವಿಸಿ.

ಲಿಂಬೆ
ಇದರಲ್ಲಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ಕಾಲುನೋವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇದಕ್ಕಾಗಿ ಒಂದು ಲಿಂಬೆಯ ರಸವನ್ನು ಹಿಂಡಿ ಒಂದು ಕಪ್ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಒಂದು ಚಿಕ್ಕ ಚಮಚ ಜೇನು ಕದಡಿ ದಿನಕ್ಕೆರಡು ಬಾರಿ ಸೇವಿಸಿ.

ವಿಟಮಿನ್ ಡಿ
ಕೆಲವೊಮ್ಮೆ ವಿಟಮಿನ್ ಡಿ ಕೊರತೆಯಿಂದಲೂ ಕಾಲುನೋವು ಹಾಗೂ ವಿಶೇಷವಾಗಿ ತೊಡೆಭಾಗದಲ್ಲಿ ನೋವು ಎದುರಾಗಬಹುದು. ವಿಟಮಿನ್ ಡಿ ನಮ್ಮ ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಹಾಗೂ ಗಂಧಕಗಳನ್ನು ನಿಯಂತ್ರಿಸಲು ಅಗತ್ಯವಾಗಿದೆ ಹಾಗೂ ಸ್ನಾಯುಗಳ ಕಾರ್ಯನಿರ್ವಹಣೆಗೂ ಇವೆರಡು ಖನಿಜಗಳ ಅಗತ್ಯವಿದೆ. ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಮುಂಜಾನೆಯ ಎಳೆಬಿಸಿಲು ದೇಹದ ಮೇಲೆ ಬೀಳುವಂತೆ ಕನಿಷ್ಟ ಹತ್ತರಿಂದ ಹದಿನೈದು ನಿಮಿಷಗಳಾದದೂ ನಡೆದಾಡಬೇಕು.

ಪೊಟ್ಯಾಶಿಯಂ
ದೇಹದಲ್ಲಿ ಪೊಟ್ಯಾಶಿಯಿಂ ಕೊರತೆ ಎದುರಾದರೂ ಕಾಲುನೋವನ್ನು ಉಲ್ಬಣಗೊಳಿಸುತ್ತದೆ. ಏಕೆಂದರೆ ಸ್ನಾಯು ಹಾಗೂ ನರಗಳ ಕಾರ್ಯನಿರ್ವಹಣೆಗೆ ಪೊಟ್ಯಾಶಿಯಂ ಅಗತ್ಯವಾದ ಖನಿಜವಾಗಿದೆ. ಒಂದು ವೇಳೆ ನಿಂತ ತಕ್ಷಣವೇ ಧುತ್ತನೆ ಸ್ನಾಯುಗಳಲ್ಲಿ ನೋವು ಎದುರಾದರೆ ಇದು ಪೊಟ್ಯಾಶಿಯಂ ಕೊರತೆ ಎಂದು ತಿಳಿದುಕೊಳ್ಳಬಹುದು. ಇದಕ್ಕಾಗಿ ಪೊಟ್ಯಾಶಿಯಂ ಹೆಚ್ಚಿರುವ ಬಾಳೆಹಣ್ಣು, ಪ್ಲಮ್, ಒಣದ್ರಾಕ್ಷಿ, ಟೊಮೆಟೋ ರಸ ಹಾಗೂ ಬೇಯಿಸಿದ ಆಲುಗಡ್ಡೆಗಳನ್ನು ಸೇವಿಸಿದರೆ ಸಾಕು.

ಬಟ್ಟೆಯ ಶಾಖ
ಒಣ ಹಾಗೂ ದಪ್ಪನೆಯ ಹತ್ತಿಯ ಬಟ್ಟೆಯನ್ನು ಇಸ್ತ್ರಿ ಪೆಟ್ಟಿಗೆ ಉಪಯೋಗಿಸಿ ಸಾಕಷ್ಟು ಬಿಸಿಯಾಗಿಸಿ ನೋವಿರುವ ಭಾಗದ ಮೇಲೆ ನವಿರಾಗಿ ಒತ್ತಿ ನೋವಿರುವ ಭಾಗದ ಮೇಲೆ ಶಾಖ ನೀಡುವ ಮೂಲಕವೂ ನೋವು ಕಡಿಮೆ ಮಾಡಬಹುದು. ದಿನಕ್ಕೆರಡು ಬಾರಿ ಈ ವಿಧಾನವನ್ನು ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನಿರ್ವಹಿಸಬೇಕು.



Click it and Unblock the Notifications











