For Quick Alerts
ALLOW NOTIFICATIONS  
For Daily Alerts

ನಿಯಂತ್ರಣಕ್ಕೆ ಬಾರದ ಸಿಟ್ಟನ್ನು ನಿಯಂತ್ರಿಸುವ 'ಯೋಗ ಮುದ್ರೆ'

By Arshad
|

ಸಿಟ್ಟು ಮಾನವರ ಒಂದು ಸಹಜಗುಣವಾಗಿದೆ. ಆದರೆ ಕೆಲವರು ಸಿಟ್ಟನ್ನು ನಿಯಂತ್ರಿಸಲು ಸಾಧ್ಯವಾಗದೇ ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆಯುತ್ತಾರೆ. ಒಂದು ವೇಳೆ ನಿಮಗೂ ಈ ಅಭ್ಯಾಸವಿದ್ದರೆ ಈ ಸಿಟ್ಟನ್ನು ನಿಯಂತ್ರಿಸುವ ಕಲೆಯನ್ನು ಎಷ್ಟು ಬೇಗ ಕಲಿಯುತ್ತೀರೋ ಅಷ್ಟೇ ಉತ್ತಮ. ಏಕೆಂದರೆ ಸಿಟ್ಟಿನ ಭರದಲ್ಲಿ ಕೈಗೊಳುವ ನಿರ್ಧಾರಗಳು, ಕ್ರಮಗಳು ನಷ್ಟವುಂಟುಮಾಡಬಹುದು ಅಲ್ಲದೇ ಸ್ನೇಹ, ಸಂಬಂಧಗಳನ್ನೂ ಕೊನೆಗಾಣಿಸಬಲ್ಲುದು. ಅಷ್ಟೇ ಅಲ್ಲ ಸಿಟ್ಟಿನಿಂದ ಕೆಡುವ ಆರೋಗ್ಯ ಮಾರಕವೂ ಆಗಬಲ್ಲುದು.

ಆರೋಗ್ಯ ಟಿಪ್ಸ್: ಹಾರ್ಮೋನ್‌ಗಳನ್ನು ನಿಯಂತ್ರಿಸುವ ಯೋಗಾಸನಗಳು

ಸಿಟ್ಟನ್ನು ನಿಯಂತ್ರಣಕ್ಕೆ ತರಲು ಕೆಲವು ಯೋಗಮುದ್ರೆಗಳಿದ್ದು ಇವನ್ನು ಅನುಸರಿಸುವ ಮೂಲಕ ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುತ್ತದೆ. ಈ ಮುದ್ರೆಗಳನ್ನು ಯೋಗಪಟು ರಾಮನ್ ಮಿಶ್ರಾರವರು ಶಿಫಾರಸ್ಸು ಮಾಡುತ್ತಾ ಇವುಗಳ ಸರಿಯಾದ ಬಳಕೆಯಿಂದ ನೀವು ಸಮಸ್ಥಿತಿಯನ್ನು ಕಾಯ್ದುಕೊಂಡು ಸಿಟ್ಟಿನ ಸಮಯದಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ. ಬನ್ನಿ, ಈ ಮುದ್ರೆಗಳ ಬಗ್ಗೆ ಅರಿಯೋಣ.....

ಕ್ಷೇಪನ ಮುದ್ರೆ

ಕ್ಷೇಪನ ಮುದ್ರೆ

ಈ ಮುದ್ರೆಯ ಪ್ರಮುಖ ಕಾರ್ಯವೆಂದರೆ ನಿಮ್ಮಲ್ಲಿರುವ ಅಹಮ್ಮಿಕೆಯನ್ನು ನಿವಾರಿಸುವುದು. ಈ ಮುದ್ರೆಯನ್ನು ಅನುಸರಿಸುವ ಮೂಲಕ ಖಿನ್ನತೆ, ಸಿಟ್ಟಿನ ಸಮಯದಲ್ಲಿ ದೇಹವನ್ನು ಆವರಿಸುವ ಋಣಾತ್ಮಕ ಶಕ್ತಿಗಳು ಹಾಗೂ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಈ ಮುದ್ರೆಯನ್ನು ಅನುಸರಿಸಲು ಮೊದಲು ಎರಡೂ ಹಸ್ತಗಳನ್ನು ಪರಸ್ಪರ ತಾಕಿಸಿ ಐದು ಬೆರಳುಗಳು ಪರಸ್ಪರ ತಾಕುವಂತೆ ಮುಗಿಯಿರಿ. ಈಗ ಕೇವಲ ತೋರುಬೆರಳುಗಳು ಮಾತ್ರ ಒಂದಕ್ಕೊಂದು ತಗಲಿರುವಂತೆ ಉಳಿದೆಲ್ಲಾ ಬೆರಳುಗಳನ್ನು ಪರಸ್ಪರ ಬೆರಳುಗಳ ನಡುವೆ ಹುದುಗಿಸಿ ಬಿಗಿಯಾಗಿಸಿ. ಈಗ ತೋರುಬೆರಳುಗಳನ್ನು ನೆಲಕ್ಕೆ ತೋರಿಸುತ್ತಾ ಕೈಗಳನ್ನು ಸಾಧ್ಯವಾದಷ್ಟು ನೀಳವಾಗಿಸಿ.

ಜ್ಞಾನ ಮುದ್ರೆ

ಜ್ಞಾನ ಮುದ್ರೆ

ಈ ಮುದ್ರೆಯಲ್ಲಿ ನಿಮ್ಮ ಹಸ್ತದ ಹೆಬ್ಬೆರಳಿನ ತುದಿಯನ್ನು ತೋರುಬೆರಳಿನ ತುದಿಗೆ ತಗಲಿಸಿ ವೃತ್ತಾಕಾರವಾಗಿಸುವ ಮೂಲಕ ಮೂಲಚಕ್ರಕ್ಕೆ ಚಾಲನೆ ನೀಡಿದಂತಾಗುತ್ತದೆ ಹಾಗೂ ಈ ಮೂಲಕ ಮನಸ್ಸು ನಿರಾಳವಾಗಲು ನೆರವಾಗುತ್ತದೆ. ಮೊದಲು ಪದ್ಮಾಸನದಲ್ಲಿ ಕುಳಿತು ಎರಡೂ ಹಸ್ತಗಳು ಮೇಲೆ ಬರುವಂತೆ ಮೊಣಕಾಲುಗಳ ಮೇಲಿರಿಸಿ. ಎರಡೂ ಹೆಬ್ಬೆರಳುಗಳನ್ನು ತೋರುಬೆರಳುಗಳಿಗೆ ಕೊಂಚವೇ ಒತ್ತಡದಲ್ಲಿ ಒತ್ತಿ ಉಳಿದ ಮೂರೂ ಬೆರಳುಗಳನ್ನು ನೇರವಾಗಿಸಿ.

ಮುಷ್ಠಿ ಮುದ್ರೆ

ಮುಷ್ಠಿ ಮುದ್ರೆ

ಈ ಮುದ್ರೆಯನ್ನು ಅನುಸರಿಸುವ ಮೂಲಕ ಸುಪ್ತಾವಸ್ಥೆಯಲ್ಲಿದ್ದ ಕೋಪ, ತಲ್ಲಣಗಳು, ಹತಾಶೆ, ಕಿರಿಕಿರಿ ಹಾಗೂ ಋಣಾತ್ಮಕ ಭಾವನೆಗಳು ಇಲ್ಲವಾಗುತ್ತವೆ. ಈ ಮುದ್ರೆಯನ್ನು ಅನುಸರಿಸಲು ನಾಲ್ಕೂ ಬೆರಳುಗಳು ಹೆಬ್ಬೆರಳ ಅಡಿಯಲ್ಲಿ ಬರುವಂತೆ ಮಡಚಿ ಸಾಧ್ಯವಾದಷ್ಟು ಬಿಗಿಯಾಗಿಸಿ. ಈ ಪರಿಯಲ್ಲಿ ಮುಷ್ಟಿಕಟ್ಟಿ ಸುಮಾರು ಐದರಿಂದ ಹತ್ತು ನಿಮಿಷ ಕಣ್ಣುಮುಚ್ಚಿಕೊಂಡು ಇದ್ದರೆ ಮಡುಗಟ್ಟಿದ್ದ ಕೋಪ, ದುಃಖ, ದುಮ್ಮಾನಗಳೆಲ್ಲಾ ಹೊರಟು ಹೋಗುತ್ತವೆ.

ಶಕ್ತಿಚಾಲಿನಿ ಮುದ್ರೆ

ಶಕ್ತಿಚಾಲಿನಿ ಮುದ್ರೆ

ಈ ಮುದ್ರೆಯನ್ನು ಅನುಸರಿಸುವ ಮೂಲಕ ಜಡತ್ವ, ಸಿಟ್ಟು ಹಾಗೂ ಹತಾಶೆಗಳನ್ನು ಹಿಮ್ಮೆಟ್ಟಿಸಬಹುದು. ಇದಕ್ಕಾಗಿ ವಜ್ರಾಸನದಲ್ಲಿ ಕುಳಿತುಕೊಳ್ಳಿ. ಈಗ ಎರಡೂ ಕೈಗಳನ್ನು ಮೊಣಕಾಲುಗಳ ಮೇಲಿರಿಸಿ ಮುಂಬಾಗಿ. ಈಗ ಹೊಟ್ಟೆಯ ಸ್ನಾಯುಗಳನ್ನು ಸಂಕುಚಿಸುವ ಹಾಗೂ ವಿಕಸಿಸುವ ಮೂಲಕ ಜೀರ್ಣಾಂಗಗಳನ್ನು ಚಲಿಸುವಂತೆ ಮಾಡಿ. ಪ್ರತಿ ಬಾರಿಯೂ ಸುಮಾರು ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಅನುಸರಿಸಿ.

ಉನ್ಮಣಿ ಮುದ್ರ

ಉನ್ಮಣಿ ಮುದ್ರ

ಈ ಮುದ್ರೆಯನ್ನು ಅನುಸರಿಸುವ ಮೂಲಕ ಮನಸ್ಸನ್ನು ಏಕಾಗ್ರತೆಯತ್ತ ಹೊರಳಿಸಲು ಹಾಗೂ ಈ ಮೂಲಕ ಮನಸ್ಸಿನ ಒತ್ತಡ ಹಾಗೂ ಇದರ ಪರೋಕ್ಷ ಪರಿಣಾಮಗಳಿಂದ ದೂರವಿರಬಹುದು. ಮೊದಲು ಪದ್ಮಾಸನದಲ್ಲಿ ಕುಳಿತುಕೊಂಡು ನಿಮ್ಮ ಎರಡೂ ಹುಬ್ಬುಗಳ ನಡುವಣ ಭಾಗ ಅಂದರೆ ಮೂರನೆಯ ಕಣ್ಣು ಇರುವ (ಕುಂಕುಮವಿಡುವ ಭಾಗ) ಭಾಗದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ಈ ಭಾಗದಲ್ಲಿ ಗಮನವನ್ನು ಕೇಂದ್ರೀಕರಿಸುವ ಮೂಲಕ ಮನಸ್ಸನ್ನು ಆವರಿಸುತ್ತಿರುವ ಯಾವುದೇ ಋಣಾತ್ಮಕ ಯೋಚನೆ ಆವರಿಸದಂತೆ ನೋಡಿಕೊಳ್ಳಬಹುದು.

English summary

Yoga mudras to deal with anger before it gets out of control!

Are you someone who is into breaking objects around you because you cannot control your anger? You should do something about it because anger causes stress at your work and in personal relationships and also harms your health. Practising these yoga mudras recommended by yoga expert Raman Mishra will make you a calmer person and never let your anger go out of control.
X
Desktop Bottom Promotion