Latest Updates
-
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ?
ನಿಮ್ಮ ಸಂಗಾತಿಯಿಂದ ಶಾಶ್ವತವಾಗಿ ದೂರಾಗಲು ಬಯಸಿದ್ದೀರಾ?, ನಿಮಗೆ ನೀವೇ ಈ 5 ಪ್ರಶ್ನೆಗಳನ್ನು ಕೇಳಿಕೊಳ್ಳಿ!
ವಿವಾಹದ ಆರಂಭದಲ್ಲಿ ಅಥವಾ ಪ್ರೀತಿಯ ಬಲೆಗೆ ಬಿದ್ದ ಹೊಸತರಲ್ಲಿ ಸಂಗಾತಿಯ ಗುಣ, ಹವ್ಯಾಸ, ಮಾತು, ಹಾವ-ಭಾವಗಳು ಹೀಗೆ ಎಲ್ಲವೂ ಸುಂದರವಾಗಿಯೇ ಇರುತ್ತವೆ. ಅವರ ಆಸೆಗಳನ್ನು ಈಡೇರಿಸಲು ಸಾಕಷ್ಟು ಶ್ರಮವನ್ನು ವಹಿಸುತ್ತಾರೆ. ಜೊತೆಗೆ ಅಚ್ಚರಿ ನೀಡುವಂತಹ ಉಡುಗೊರೆ ನೀಡುತ್ತಾರೆ. ಅವರಿಗೆ ಇಷ್ಟವಿಲ್ಲದ ಸಂಗತಿಯನ್ನು ಎಂದಿಗೂ ಮಾಡುವುದಿಲ್ಲ ಎನ್ನುವಂತಹ ವಚನಗಳನ್ನು ನೀಡುತ್ತಾರೆ. ಒಟ್ಟಿನಲ್ಲಿ ಹೇಳಬೇಕು ಎಂದರೆ ತನ್ನ ಪ್ರೀತಿ ಮತ್ತು ಸಂಗಾತಿಗಾಗಿ ಸರ್ವಸ್ವವನ್ನು ನೀಡಲು ಸಿದ್ಧರಾಗಿರುತ್ತಾರೆ. ಒಮ್ಮೆ ಪ್ರೀತಿಯಲ್ಲಿ ಬಿದ್ದವರಿಗೆ ಅಥವಾ ಪ್ರೀತಿಯ ಗುಂಗಿನಲ್ಲಿ ಇರುವವರಿಗೆ ಪ್ರಪಂಚವೆಲ್ಲವೂ ಬಣ್ಣ-ಬಣ್ಣದಿಂದ ಕೂಡಿರುತ್ತವೆ. ಕಲ್ಪನೆಯ ಲೋಕದಂತೆ ಜೀವನವನ್ನು ಸಿಂಗರಿಸಲು ಪ್ರಯತ್ನಿಸುತ್ತಾರೆ.

ಅದೇ ಸಂಬಂಧಗಳು ಹಳೆಯದಾಗುತ್ತಾ ಬಂದಂತೆ ಸಂಗಾತಿಗಳ ನಡುವೆ ಪರಸ್ಪರ ವಿವಾದಗಳು, ಬೇಸರ, ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತವೆ. ಪ್ರತಿಯೊಂದು ಕೆಲಸದಲ್ಲೂ ತಪ್ಪು ಹುಡುಕಲು ಪ್ರಾರಂಭವಾಗುವುದು. ಇತರ ವ್ಯಕ್ತಿಗಳೊಂದಿಗೆ ತಮ್ಮ ಪ್ರೇಮಿಗಳನ್ನು ತುಲನೆ ಮಾಡುತ್ತಾರೆ. ತಮ್ಮಲ್ಲಿ ಇರುವ ಕೊರತೆಯಿಂದಾಗಿ ಸಂಗಾತಿಯನ್ನು ದೂರಲು ಪ್ರಾರಂಭಿಸುವರು. ತಮ್ಮ ತಪ್ಪುಗಳನ್ನು ಹುಡುಕುವುದನ್ನು ಬಿಟ್ಟು, ಸಂಗಾತಿಯು ಯಾವೆಲ್ಲಾ ತಪ್ಪು ಮಾಡುತ್ತಾರೆ? ಅದಕ್ಕೆ ಕಾರಣವೇನು? ಅದರಿಂದ ನಮಗೇನು ತೊಂದರೆ ಆಗುತ್ತಿದೆ? ಎನ್ನುವಂತಹ ನಕಾರಾತ್ಮಕ ಸಂಗತಿಗಳ ಬಗ್ಗೆಯೇ ಹೆಚ್ಚು ಹುಡುಕಾಟ ಹಾಗೂ ದೂಷಣೆಯು ನಡೆಯುತ್ತದೆ.

ಜವಾಬ್ದಾರಿಯೇ ಬೇಸರ ಎನಿಸುತ್ತದೆ
ಕೆಲವರಿಗೆ ವಿವಾಹವಾಗಿ ಮೂರು ವರ್ಷ ಕಳೆಯುತ್ತಿದ್ದಂತೆ ಸಂಸಾರದ ಬಗ್ಗೆ ಬೇಸರ, ಹೊರೆ ಎನ್ನುವಂತಹ ಮನಃಸ್ಥಿತಿಗೆ ಬಂದು ಬಿಡುತ್ತಾರೆ. ಜೊತೆಗೆ ಕುಟುಂಬದಲ್ಲಿ ಹೊಣೆಗಾರಿಕೆಯನ್ನು ಹೊರುವುದು, ಮಕ್ಕಳು ಸಂಗಾತಿ ಹಾಗೂ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಲು ಇಷ್ಟಪಡರು. ಜಾಲಿಯ ಜೀವನ, ಸದಾ ಮೋಜು ಮಸ್ತಿ ಮಾಡುವುದಕ್ಕಾಗಿಯೇ ಹೆಚ್ಚು ಸಮಯವನ್ನು ಕಳೆಯಲು ಬಯಸುವರು. ಇಂತಹ ಸ್ಥಿತಿಯಲ್ಲಿ ಇನ್ನೊಬ್ಬ ಸಂಗಾತಿ ಸಿಕ್ಕರೆ ಅಥವಾ ಆಕರ್ಷಣೆಗೆ ಒಳಗಾದರೆ ಹಳೆಯ ಸಂಬಂಧಗಳ ಬಗ್ಗೆ ತಿರಸ್ಕಾರ ಹಾಗೂ ಅವರಿಂದ ಸಂಬಂಧವನ್ನು ಮುರಿಯುವ ಸಾಧ್ಯತೆಯು ಹೆಚ್ಚಾಗಿ ಇರುತ್ತದೆ.

ಸ್ವವಿಮರ್ಶೆ ಅಗತ್ಯ
ಪ್ರೀತಿ ಇದ್ದಾಗ ಕೂಡಿ ಉಂಡ ಕಷ್ಟ-ಸುಖಗಳ ಬಗ್ಗೆ ಸದಾ ಅರಿವಿರಬೇಕು. ನಮ್ಮ ನಿರೀಕ್ಷೆಯಂತೆ ಜೀವನ ಸಾಗಲಿಲ್ಲ ಎನ್ನುವ ಉದ್ದೇಶಕ್ಕೆ ಸಂಬಂಧ ಮುರಿಸುಕೊಂಡರೆ ಜೀವನ ಸುಖವಾಗಿರಲು ಸಾಧ್ಯವಿಲ್ಲ. ಯಾವುದೇ ಕೆಲಸ ಮಾಡುವಾಗ ಸಾಕಷ್ಟು ಚಿಂತನೆ ನಡೆಸುತ್ತೇವೆ. ಅಂತೆಯೇ ನಿಮ್ಮ ಜೀವಕ್ಕೆ ಜೀವವಾಗಿ ಬಂದ ಸಂಗಾತಿಯ ಸಂಬಂಧವನ್ನು ತೊರೆಯುವಾಗ ನಿಮಗೆ ನೀವೇ ಕೆಲವು ಪ್ರಶ್ನೆಯನ್ನು ಕೇಳಿಕೊಳ್ಳಬೇಕು ಎಂದು ಸಂಬಂಧಗಳ ತಜ್ಞರು ಹೇಳುತ್ತಾರೆ. ಆಗ ನಿಮ್ಮ ಸಂಬಂಧ ಮುರಿಯಬೇಕೇ? ಅಥವಾ ಜೀವನದ ಅಂತ್ಯದ ವರೆಗೂ ಮುಂದುವರಿಯಬೇಕೇ? ಎನ್ನುವ ಸ್ಪಷ್ಟ ಚಿತ್ರಣ ದೊರೆಯುವುದು. ಹಾಗಾದರೆ ನೀವು ನಿಮ್ಮ ಮನಸ್ಸಿಗೆ ಕೇಳಬೇಕಾದ ಆ ಪ್ರಶ್ನೆಗಳು ಯಾವವು ನೋಡಿ...

1. ನಿಮ್ಮನ್ನು "ತನ್ನ ಪ್ರಪಂಚ" ಎಂದು ಯಾರು ನಂಬಿದ್ದಾರೆ?
ನಿಮ್ಮ ಸಂಗಾತಿ ಹಾಗೂ ಪಾಲಕರನ್ನು ಬಿಟ್ಟರೆ ಇನ್ಯಾರೂ ತಮ್ಮ ಪ್ರಪಂಚ ಎಂದು ಪರಿಗಣಿಸಲು ಸಾಧ್ಯವಿಲ್ಲ. ನೀವು ನಿಮ್ಮ ಪ್ರೀತಿಯ ಸಾಕ್ಷಿಯಾಗಿ ಮುದ್ದಾದ ಮಕ್ಕಳನ್ನು ಹೊಂದಿರುತ್ತೀರಾ. ಸಂಗಾತಿಯನ್ನು ತೊರೆದರೆ ನಿಮ್ಮ ಮಗು ಯಾರೊಂದಿಗೆ ಇರುತ್ತದೆ? ಅದರ ಭದ್ರತೆಗೆ ಯಾರು ನಿಲ್ಲುತ್ತಾರೆ? ಅವರ ಭವಿಷ್ಯದಲ್ಲಿ ನೀವೇ ಕಪ್ಪು ನೆರಳಾಗಿ ನಿಲ್ಲುವಿರಾ? ಇಲ್ಲಾ ಬೆಳಕಿನ ಹಾದಿಯನ್ನು ತೋರುವಿರಾ? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಿ. ನಿಮ್ಮ ಆಕರ್ಷಣೆಗೆ ನೀವು ಬೆಲೆ ಕೊಟ್ಟು ಹೋದರೆ ನಿಮ್ಮ ಅಂತರಾಳವನ್ನು ಪ್ರೀತಿಸಿ ಬಂದ ಸಂಗಾತಿಯ ಪ್ರೀತಿ ಪುನಃ ದೊರೆಯಲು ಸಾಧ್ಯವೇ? ಎನ್ನುವುದರ ಕುರಿತು ಚಿಂತಿಸಿ.

2. ನಾನು ಇಂದಿಗೂ ಸಂತೋಷವಾಗಿ ಇದ್ದೇನೆಯೇ?
ಆರೋಗ್ಯಕರ ಸಂಬಂಧದಲ್ಲಿ ಎಲ್ಲವೂ ಸಂತೋಷವನ್ನು ತಂದುಕೊಡುತ್ತದೆ ಎಂದಲ್ಲ. ದಾರಿಯುದ್ದಕ್ಕೂ ಸವಾಲುಗಳು ಹಾಗೂ ಜವಾಬ್ದಾರಿಗಳು ಇರುತ್ತವೆ. ಅವುಗಳನ್ನು ಸರಿಯಾಗಿ ನಿಭಾಯಿಸಿಕೊಂಡು ಮುಂದೆ ಸಾಗುವುದು ಮುಖ್ಯ. ಇಂತಹ ಜವಾಬ್ದಾರಿ ಹಾಗೂ ಹೊಣೆಗಾರಿಕೆಗೆ ಸಂಗಾತಿ ಹೇಗೆ ಸಹಾಯ ಮಾಡಿದ್ದಾಳೆ? ಅವಳಿಂದ ನಾನು ಯಾವೆಲ್ಲಾ ಸುಖ, ಸಂತೋಷ ಹಾಗೂ ಸಹಾಯವನ್ನು ಪಡೆದುಕೊಂಡಿದ್ದೇನೆ? ಎನ್ನುವುದನ್ನು ಮೊದಲು ಅರಿಯಿರಿ. ಇಂದಿಗೂ ನನಗಾಗಿ ನನ್ನ ಸಂಗಾತಿ ಯಾವೆಲ್ಲಾ ಸವಾಲುಗಳನ್ನು ಎದುರಿಸಲು ಮುಂದೆ ಬರುತ್ತಾರೆ? ಅವರಿಂದ ಯಾವ ವಿಷಯಗಳಿಗೆ ಇಂದಿಗೂ ಸಂತೋಷ ಹಾಗೂ ಸಮಾಧಾನವನ್ನು ಪಡೆದುಕೊಂಡಿದ್ದೇನೆ? ಎನ್ನುವುದರ ಬಗ್ಗೆ ಸೂಕ್ತ ಚಿಂತನೆ ಮಾಡಿ.

3. ಇಂದಿಗೂ ನಿಮಗೆ ಬೇಕಾದದ್ದು ಇದೆಯೇ?
ಸಂಬಂಧದಿಂದ ದೂರ ಸರಿಯಲು ಮನಸ್ಸು ಏಕೆ ಬಯಸುತ್ತಿದೆ? ಇಂದಿಗೂ ನಿಮ್ಮ ಸಂಬಂಧದಲ್ಲಿ ಅಗತ್ಯವಾಗಿರುವುದು ಇದೆ ಎನ್ನುವುದು ಏನಿದೆ? ಬೇರೆಯಾಗುವುದರಿಂದ ನೀವು ಪಡೆದುಕೊಳ್ಳುವುದು ಏನಿದೆ? ಕಳೆದುಕೊಳ್ಳುವುದು ಏನಿದೆ? ಎನ್ನುವುದು ಅತ್ಯಮೂಲ್ಯವಾದದ್ದು. ಇರುವುದೆಲ್ಲವನ್ನು ಬಿಟ್ಟು, ಭ್ರಮೆಯ ಜೀವನದಲ್ಲಿ ಸುಖವಿದೆ ಎಂದು ಹೊರಟರೆ ಸಿಗುವುದು ಏನೂ ಇಲ್ಲ ಎನ್ನುವುದನ್ನು ನೀವು ಒಮ್ಮೆ ಮನವರಿಕೆ ಮಾಡಿಕೊಳ್ಳಬೇಕು. ಆಗಲೇ ನಿಮ್ಮ ಸಂಬಂಧ ಬೇಕೇ? ಬೇಡವೇ? ಎನ್ನುವ ಅರಿವು ಮೂಡುವುದು.

4. ಜೀವನದಲ್ಲಿ ಏನಾದರೂ ದೊಡ್ಡ ಸಂಗತಿ ಎನ್ನುವುದು ಇದೆಯೇ?
ನೀವು ನಿಮ್ಮ ಕೆಲಸ ಬದಲಾಯಿಸಿದ ಹಾಗೆ ಜೀವನವನ್ನು ಬದಲಾಯಿಸಿಕೊಳ್ಳುತ್ತಿದ್ದೀರಿ, ಸಂಬಂಧದಿಂದ ಬೇಸತ್ತು ಇನ್ನೊಂದು ಸಂಬಂಧಕ್ಕೆ ಹವಣಿಸುತ್ತಿದ್ದೀರಿ, ಹಳೆಯ ಪ್ರಣಯ ಸಂಬಂಧಕ್ಕಿಂತ ಹೊಸ ಸಂಬಂಧಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದೀರಿ ಎಂದಾದ ಮೇಲೆ ನಿಮ್ಮ ಜೀವನದಲ್ಲಿ ದೊಡ್ಡ ಸಂಗತಿ ಎನ್ನುವುದು ಏನಿದೆ?. ಹಾಗಾದರೆ ನೀವು ಯಾವ ದೊಡ್ಡ ಸಂಗತಿಗಾಗಿ ಸಂಬಂಧವನ್ನು ಬದಲಿಸಿಕೊಳ್ಳುತ್ತಿದ್ದೀರಿ. ಬದಲಿಸಿಕೊಂಡರೂ ನಿಮಗೆ ದೊಡ್ಡ ಸಂಗತಿ ಎನ್ನುವುದು ಯಾವುದೂ ಸಿಗುವುದಿಲ್ಲ. ಹಳೆಯ ಸಂಬಂಧಗಳಲ್ಲಿ ಸಿಗುವಂತಹ ಜೀವನವೇ ದೊರೆಯುವುದು ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು.

5. ನಾನು ಬೇಸರಗೊಂಡಿದ್ದೇನೆ ಏಕೆ?
ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲಾ ಒಂದು ಕಾರಣಕ್ಕೆ ಬೇಸರ ಹಾಗೂ ಚಿಂತೆ ಎನ್ನುವುದು ಇರುತ್ತದೆ. ಅಂತಹ ಬೇಸರ ಅಥವಾ ಚಿಂತೆ ಎದುರಾದಾಗ ಅದನ್ನು ನಿಭಾಯಿಸಿಕೊಂಡು ನಮ್ಮ ಸ್ಥಿತಿಯ ಬದಲಾವಣೆಗೆ ಮುಂದಾಗಬೇಕು. ಜೀವನದಲ್ಲಿ ಯಾವುದೂ ಸ್ಥಿರವಲ್ಲ. ಕಾಲ ಚಕ್ರ ತಿರುಗುತ್ತಿದ್ದಂತೆ ಎಲ್ಲವೂ ಬದಲಾಗುತ್ತಲೇ ಹೋಗುತ್ತವೆ. ಅದಕ್ಕೆ ಅನುಗುಣವಾಗಿ ನಾವು ನಮ್ಮ ಜೀವನವನ್ನು ಸುಧಾರಿಸಿಕೊಳ್ಳಬೇಕು. ಒಂದು ದೋಣಿಯಲ್ಲಿ ಹೋಗುತ್ತಿರುವಾಗ ಬೇಸರ ಬಂತು ಎಂದು ನೀರಿಗೆ ಹಾರಿದರೆ ಉಂಟಾಗುವುದು ಅಪಾಯ ಅಷ್ಟೇ, ಹಾಗೆಯೇ ಜೀವನ. ಸಂಬಂಧ ಬೇಸರವಾಗುತ್ತಿದೆ ಎಂದಾಗ ಅದರಲ್ಲಿ ಸಂತೋಷ ಕಂಡುಕೊಳ್ಳಲು ಹಾಗೂ ಚೈತನ್ಯ ತುಂಬಲು ಪ್ರಯತ್ನಿಸಬೇಕು. ಅದೆಲ್ಲವನ್ನು ಬಿಟ್ಟು ಪಲಾಯನ ಆಗುವುದು ಹೇಡಿಯ ಲಕ್ಷಣ ಎನ್ನುವುದನ್ನು ಒಮ್ಮೆ ಮನವರಿಕೆ ಮಾಡಿಕೊಳ್ಳುವುದು ಸೂಕ್ತ.



Click it and Unblock the Notifications