Latest Updates
-
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ
ಬರೀ 30 ಸೆಕೆಂಡ್ಗಳ ಈ ಟ್ರಿಕ್ ಅನುಸರಿಸಿ, ಸಂಬಂಧಗಳನ್ನು ಉಳಿಸಿಕೊಳ್ಳಿ!
ಯಾವುದೋ ಕ್ಷುಲ್ಲಕ ಕಾರಣದ ಸಿಟ್ಟಿನ ಭರದಲ್ಲಿ ಆಡಿದ ಮಾತು ಅನೇಕ ಬಾರಿ ಒಂದು ಸುಮಧುರ ಸಂಬಂಧವನ್ನೇ ಹಾಳುಗೆಡವುತ್ತದೆ. ಒಂದೈದು ನಿಮಿಷ ತಾಳ್ಮೆ ಪಡೆದು ಪರಿಸ್ಥಿತಿಯನ್ನು ನಿಭಾಯಿಸಿದ್ದರೆ ಚೆನ್ನಾಗಿತ್ತಲ್ಲ ಎಂದು ಎಲ್ಲ ಮುಗಿದು ಹೋದ ಮೇಲೆ ಹಳಹಳಿಸುವಂತಾಗುತ್ತದೆ. ಸಂಗಾತಿಗಳ ಮಧ್ಯೆ, ಗೆಳೆಯರ ಮಧ್ಯೆ ಅಥವಾ ಕೌಟುಂಬಿಕ ಸಂಬಂಧಗಳಲ್ಲಿ ಆಗಾಗ ಇಂಥ ಪರಿಸ್ಥಿತಿಗಳು ಬರುತ್ತಿರುತ್ತವೆ.

ಅಂಥ ಸಂದರ್ಭಗಳನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಎಲ್ಲರೂ ಅರಿತುಕೊಂಡರೆ ಸಂಬಂಧಗಳಲ್ಲಿ ಬಿರುಕು ಮೂಡುವುದನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಬಹುದು. ಕ್ಷಣ ಮಾತ್ರದ ಕೋಪದಿಂದ ಸಂಬಂಧಗಳಲ್ಲಿ ಉಂಟಾಗುವ ಸಮಸ್ಯೆಗಳು ಹಾಗೂ ಸಮಸ್ಯೆ ಬಾರದಂತೆ ಮುಂಜಾಗ್ರತೆ ವಹಿಸುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು ತಪ್ಪದೇ ಓದಿ ಅರಿತುಕೊಳ್ಳಿ.

ಇಂಥ ಒಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ!
ಯಾವುದೋ ಒಂದು ದಿನ ನೀವು ನಿಮ್ಮ ಸಂಗಾತಿಗೆ ಯಾವುದೋ ವಿಷಯ ಕುರಿತು ನಿಮ್ಮ ಮೊಬೈಲ್ಗೆ ಟೆಕ್ಸ್ಟ್ ಸಂದೇಶ ಕಳುಹಿಸಿದ್ದೀರಿ ಎಂದಿಟ್ಟುಕೊಳ್ಳಿ. ಆಗ ಯಾವುದೋ ಕೆಲಸದ ತೀವ್ರತೆಯ ಮಧ್ಯೆ ಅದಕ್ಕೆ ಉತ್ತರಿಸಲು ಅಥವಾ ತಿರುಗಿ ಕಾಲ್ ಮಾಡಲು ಆತ (ಅವಳು/ಅವನು)ಮರೆತು ಹೋಗಿರಬಹುದು. ಆವಾಗ ನೀವು ಕೋಪದಲ್ಲಿ ಮಾತನಾಡಿ, ನಿನಗೆ ನಮ್ಮ ಸಂಬಂಧದ ಬಗ್ಗೆ ಗೌರವವೇ ಇಲ್ಲ. ಒಂದು ಫೋನ್ ಸಹ ಮಾಡದಷ್ಟು ನಿರ್ಲಕ್ಷ್ಯ ಮಾಡುತ್ತಿರುವೆ ಎಂದೆಲ್ಲ ಎಗರಾಡಿದರೆ ಹೇಗಿರಬಹುದು ಎಂದು ಊಹಿಸಿಕೊಳ್ಳಿ. ಒಂದು ಚಿಕ್ಕ ವಿಷಯಕ್ಕೆ ಇಷ್ಟೆಲ್ಲ ಬೇಕೆ ಎಂಬುದು ಎಲ್ಲ ಮುಗಿದು ಹೋದ ಮೇಲೆ ಅರಿವಾಗುತ್ತದೆ. ಸಂದರ್ಭವನ್ನು ಒಂದಿಷ್ಟು ಸೂಕ್ಷ್ಮವಾಗಿ ನಿಭಾಯಿಸಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದು ಅನಿಸಲು ಶುರುವಾಗುತ್ತದೆ. ಕಡ್ಡಿಯನ್ನು ಗುಡ್ಡ ಮಾಡಿ ನಂತರ ಪಶ್ಚಾತ್ತಾಪ ಪಟ್ಟ ಇಂಥ ಪರಿಸ್ಥಿತಿಗಳು ನಿಮ್ಮ ಜೀವನದಲ್ಲೂ ಘಟಿಸಿರಬಹುದು ಅಲ್ಲವೆ? ವಿವೇಚನೆ ಕಳೆದುಕೊಂಡು ಆಡಿದ ಒಂದು ಮಾತು ಎಷ್ಟೆಲ್ಲ ಅನಾಹುತಕ್ಕೆ ಕಾರಣವಾಗುತ್ತವೆ. ಆದರೆ ಇಂಥ ಪರಿಸ್ಥಿತಿಗಳನ್ನು ಸುಲಭವಾಗಿ ಹಾಗೂ ತಾರ್ಕಿಕವಾಗಿ ನಿಭಾಯಿಸುವುದು ಹೇಗೆ ಎಂಬುದನ್ನು ನೋಡೋಣ.

30 ಸೆಕೆಂಡ್ಗಳ ಟ್ರಿಕ್ ಅನುಸರಿಸಿ
ಮನೋವೈಜ್ಞಾನಿಕವಾದ ಈ ಟ್ರಿಕ್ ಮೂರು ಸ್ಟೆಪ್ಗಳನ್ನು ಒಳಗೊಂಡಿದ್ದು, ಕೇವಲ 30 ಸೆಕೆಂಡ್ಗಳ ಅವಧಿಯಲ್ಲಿ ನೀವಿದನ್ನು ಕಲಿಯಬಹುದು. ಮೊದಲಿಗೆ ದೀರ್ಘವಾಗಿ ಶ್ವಾಸವನ್ನೆಳೆದುಕೊಂಡು ನಿಮಗೆ ಏನು ಅನಿಸುತ್ತದೆ ಎಂಬುದರ ಬಗ್ಗೆ ಕೊಂಚ ಯೋಚಿಸಿ. ನಂತರ ನಿಮಗೆ ನೀವೇ ಕೆಲ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಇದನ್ನು ವಾಸ್ತವವಾಗಿ ಜಾರಿಗೆ ತರಲು ಕೆಳಗೆ ತಿಳಿಸಿದ ಕ್ರಮಗಳನ್ನು ಅನುಸರಿಸಿ.

ಮೊದಲ ಹಂತ - ದೀರ್ಘ ಶ್ವಾಸ
ಪಿತ್ತ ನೆತ್ತಿಗೇರಿಸಿಕೊಂಡು ಯಾವುದೋ ಸಂದರ್ಭವನ್ನು ನಿಭಾಯಿಸಲು ಮುಂದಾಗುವ ಮುನ್ನ ದೀರ್ಘ ಶ್ವಾಸೋಚ್ಛಾಸ ಆರಂಭಿಸಿ. ಉಸಿರು ತೆಗೆದುಕೊಳ್ಳುವುದು ಮತ್ತೆ ಹೊರಗೆ ಬಿಡುವುದು ಕೆಲಸಕ್ಕೆ ಬಾರದ ಕ್ರಿಯೆ ಎಂದೆನಿಸಿದರೂ ಇದರಿಂದ ನಿಜವಾಗಿಯೂ ಅನೇಕ ಪ್ರಯೋಜನಗಳಿವೆ. ಹೀಗೆ ಮಾಡುವುದರಿಂದ ನೀವು ತಕ್ಷಣಕ್ಕೆ ಕೋಪದಲ್ಲಿ ಪ್ರತಿಕ್ರಿಯೆ ನೀಡುವುದರಿಂದ ತಪ್ಪಿಸಿಕೊಳ್ಳಬಹುದು ಹಾಗೂ ಸಂದರ್ಭದ ಬಗ್ಗೆ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಲು ಇದು ಸಹಾಯಕವಾಗುತ್ತದೆ. ಉಸಿರಾಟ ಕ್ರಿಯೆಯಿಂದ ಮೆದುಳಿನ ಮುಂಭಾಗದಲ್ಲಿರುವ ಪ್ರಿಫ್ರಂಟಲ್ ಕಾರ್ಟೆಕ್ಸ್ಗೆ ಹೆಚ್ಚು ಆಮ್ಲಜನಕ ಪೂರೈಕೆಯಾಗಿ ಪರಿಸ್ಥಿತಿಯನ್ನು ನಿರಾಳವಾಗಿ ನೋಡಲು ಸಾಧ್ಯವಾಗುತ್ತದೆ.

ಭಾವನೆಗಳ ತಾಕಲಾಟವನ್ನು ಅರ್ಥ ಮಾಡಿಕೊಳ್ಳಿ
ಈ ಹಂತದಲ್ಲಿ ನಿಮ್ಮ ಮನದಲ್ಲಿ ಮೂಡುತ್ತಿರುವ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವನ್ನು ಗುರುತಿಸಲು ಯತ್ನಿಸಿ. ಮನದಲ್ಲಿ ಕೋಪ, ಆಕ್ರೋಶ, ಹಾಸ್ಯ ಅಥವಾ ನೋವು ಹೀಗೆ ಯಾವ ಭಾವನೆ ಮೂಡುತ್ತಿದೆ ಎಂಬುದನ್ನು ಗಮನಿಸಿ. ನನ್ನ ಮನದಲ್ಲಿ ಕೋಪವಿದೆಯಾ? ಅಥವಾ ನಾನು ತಲ್ಲಣ ಹಾಗೂ ಆಕ್ರೋಶಿತನಾಗಿದ್ದೇನಾ? ಎಂದು ಕೇಳಿಕೊಳ್ಳಿ. ನಿಮ್ಮ ಭಾವನೆಗಳ ಮೇಲೆ ನಿಮಗೆ ಸದ್ಯಕ್ಕೆ ನಿಯಂತ್ರಣವಿಲ್ಲ ಎಂಬುದು ನಿಮಗೇ ತಿಳಿಯುತ್ತದೆ. ಈಗಲೇ ಪ್ರತಿಕ್ರಿಯೆ ನೀಡುವುದು ಬೇಡ, ಮನಸ್ಸು ತಹಬಂದಿಗೆ ಬಂದ ನಂತರ ಮಾತನಾಡುತ್ತೇನೆ ಎಂದು ನೀವೇ ಈಗ ನಿರ್ಧರಿಸುವಂತಾಗುತ್ತದೆ. ಈಗ ನೀವು ಸಂದರ್ಭದ ಬಗ್ಗೆ ನಿರಾಳವಾಗಿ ವಿಚಾರ ಮಾಡಿ ಸಿಟ್ಟಿನ ಭರದಲ್ಲಿ ಏನೋ ಹೇಳುವುದರಿಂದ ಪಾರಾಗುವಿರಿ.

ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ
ಅತಿಯಾಗಿ ಪ್ರತಿಕ್ರಿಯೆ ನೀಡುವುದರಿಂದ ನನಗಾಗುವ ಪ್ರಯೋಜನವಾದರೂ ಏನು?
ಈ ಹತ್ತು ನಿಮಿಷಗಳ ಬೆಲೆ ಎಷ್ಟು? ಇದಕ್ಕಾಗಿ ಮುಂದಿನ ಅನೇಕ ವರ್ಷಗಳ ಕಾಲ ಕೆಟ್ಟದ್ದನ್ನು ಅನುಭವಿಸಬೇಕಾ?
ಈ ಸಂದರ್ಭದಿಂದ ನಾನು ಯಾವ ಪಾಠ ಕಲಿಯಬಹುದು? ಈ ಪ್ರಶ್ನೆಗಳಿಂದ ನಿಮ್ಮ ಮನಸ್ಸು ನಕಾರಾತ್ಮಕ ಯೋಚನೆಗಳನ್ನು ಬದಿಗೊತ್ತಿ ಸಕಾರಾತ್ಮಕ ವಿಚಾರಗಳತ್ತ ಹರಿಯಲಾರಂಭಿಸುತ್ತದೆ.

ಕ್ಷಣ ಮಾತ್ರದ ಕೋಪದಿಂದ ತಪ್ಪಿಸಿಕೊಳ್ಳಿ
ಇನ್ನು ಮುಂದೆ ಯಾವತ್ತಾದರೂ ನಿಮ್ಮ ಸಂಗಾತಿ, ಗೆಳೆಯ, ಸಹೋದ್ಯೋಗಿ ಅಥವಾ ಯಾರೇ ಅಪರಿಚಿತರ ಜೊತೆ ಆಕ್ರೋಶದಿಂದ ವಾದ ಮಾಡುವ ಮುನ್ನ ಶ್ವಾಸ ತೆಗೆದುಕೊಳ್ಳಲು, ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಪರಿಸ್ಥಿತಿಯನ್ನು ಅರಿತುಕೊಳ್ಳಲು ಯತ್ನಿಸಿ. ಈ ಟ್ರಿಕ್ ಅನ್ನು ನೀವು ಕಲಿತರೆ ಎಂಥ ಸಂದರ್ಭವನ್ನಾದರೂ ಸೂಕ್ತವಾಗಿ ನಿಭಾಯಿಸಿ ಅದರಿಂದ ಉತ್ತಮ ಪರಿಣಾಮಗಳನ್ನು ನೀವು ಪಡೆದುಕೊಳ್ಳಬಹುದು. ಎಲ್ಲಕ್ಕೂ ಮುಖ್ಯವಾಗಿ ಕೋಪದಲ್ಲಿ ಮಾತಾಡಿ ನಂತರ ಪಶ್ಚಾತ್ತಾಪ ಪಡುವುದು ಅಥವಾ ಕ್ಷಮೆ ಕೇಳುವ ಸಂದರ್ಭಗಳು ದೂರವಾಗುತ್ತವೆ.

ಕೆಟ್ಟ ಸಂದರ್ಭಗಳಲ್ಲಿ ವಿವೇಚನೆಯಿಂದ ವರ್ತಿಸಿ
ಸಂಬಂಧಗಳು ಅಮೂಲ್ಯವಾಗಿದ್ದು ಚಿಕ್ಕ ಪುಟ್ಟ ವಿಷಯಗಳಿಗೆ ಮಾತನಾಡಿ ಅದರಲ್ಲಿ ಬಿರುಕು ತಂದುಕೊಳ್ಳುವುದು ಜಾಣತನವಲ್ಲ. ಕೆಟ್ಟ ಸಂದರ್ಭಗಳಲ್ಲಿ ವಿವೇಚನೆಯಿಂದ ವರ್ತಿಸಿ ಮತ್ತೊಬ್ಬರಿಗೆ ನೋವಾಗದಂತೆ ಪರಿಸ್ಥಿತಿಯನ್ನು ನಿಭಾಯಿಸುವ ಕಲೆಯನ್ನು ನಿಮ್ಮದಾಗಿಸಿಕೊಂಡರೆ ಸಂಬಂಧಗಳನ್ನು ಸುಮಧುರವಾಗಿ ಕಾಪಾಡಿಕೊಳ್ಳಲು ಸಾಧ್ಯವಿದೆ.



Click it and Unblock the Notifications











