ಸರಳ ತಯಾರಿಕೆಯ ಹರಿಕಾರ-ಮೊಟ್ಟೆ ಮಸಾಲ ರೆಸಿಪಿ!

By Super

ಒಂದು ವೇಳೆ ನಿಮ್ಮ ಮನೆಯಲ್ಲಿ ಚಪಾತಿ ಅಥವಾ ರೊಟ್ಟಿ ಇದ್ದು ನೆಂಜಿಕೊಳ್ಳಲು ಏನೂ ಇಲ್ಲದೇ ಇದ್ದ ಸಮಯದಲ್ಲಿ ಸುಲಭವಾಗಿ ಮತ್ತು ಧಿಡೀರನೇ ಮಾಡಿ ಸವಿಯಬಹುದಾದ ಅಡುಗೆ ಎಂದರೆ ಮೊಟ್ಟೆ ಮಸಾಲೆ ಸಾರು. ಕಡಿಮೆ ಸಮಯದಲ್ಲಿ ತಯಾರಿಸಿದ್ದೆಂದ ಮಾತ್ರಕ್ಕೆ ಇದರಲ್ಲಿ ಪೌಷ್ಟಿಕಾಂಶಗಳ ಕೊರತೆಯೇನಿಲ್ಲ.

ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಇಷ್ಟಪಡುವ ಈ ಸಾರು ರೊಟ್ಟಿ, ಚಪಾತಿಗಳೊಂದಿಗೆ ಮಾತ್ರವಲ್ಲ, ಅನ್ನದೊಂದಿಗೂ ಸೇವಿಸಬಹುದು. ಆದ್ದರಿಂದ ಇದನ್ನು ದಿನದ ಯಾವುದೇ ಹೊತ್ತಿನ ಆಹಾರವನ್ನಾಗಿ ತಯಾರಿಸಿ ಹಸಿದವರಿಗೆ ಬಡಿಸಿ ಶಹಬ್ಬಾಸ್ ಗಿಟ್ಟಿಸಿಕೊಳ್ಳಬಹುದು. ಶಾಭಾಷ್ ಗಿರಿ ಪಡೆಯಲು ಅಗತ್ಯವಿರುವ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ:

ಪ್ರಮಾಣ: ಮೂವರಿಗೆ, ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹತ್ತು ನಿಮಿಷಗಳು
ತಯಾರಿಕಾ ಸಮಯ: ಹದಿನೈದು ನಿಮಿಷಗಳು. ಸುಲಭವಾಗಿ ತಯಾರಿಸಿ ಆಂಧ್ರ ಶೈಲಿಯ ಮೊಟ್ಟೆ ಕರಿ ರೆಸಿಪಿ

 Easy To Make Egg Curry recipe

ಅಗತ್ಯವಿರುವ ಸಾಮಾಗ್ರಿಗಳು:
*ಮೊಟ್ಟೆ : ನಾಲ್ಕು (ಬೇಯಿಸಿ, ಸಿಪ್ಪೆ ಸುಲಿದು ನಾಲ್ಕು ತುಂಡುಗಳನಾಗಿಸಿದ್ದು)
*ಟೊಮೇಟೊ: ಎರಡು (ಮಧ್ಯಮ ಗಾತ್ರ)
*ಈರುಳ್ಳಿ: ಎರಡು (ಮಧ್ಯಮ ಗಾತ್ರ)
*ಮೆಣಸಿನ ಪುಡಿ: ಒಂದು ಚಿಕ್ಕ ಚಮಚ
*ಕಾಯಿತುರಿ: ಒಂದು ಕಪ್
*ಚೆಕ್ಕೆ: ಒಂದಿಂಚಿನ ಚೂರು
*ಏಲಕ್ಕಿ: ಮೂರು
*ಶುಂಠಿ ಬೆಳ್ಳುಳ್ಳಿ ಪೇಸ್ಟ್ : 2 ದೊಡ್ಡಚಮಚ
*ಕೊತ್ತೊಂರಿ ಪುಡಿ : 1 ದೊಡ್ಡಚಮಚ
*ಉಪ್ಪು ರುಚಿಗನುಸಾರ:
*ಎಣ್ಣೆ: ಒಂದು ದೊಡ್ಡ ಚಮಚ
*ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು, ಚಿಕ್ಕದಾಗಿ ಹೆಚ್ಚಿದ್ದು.

ವಿಧಾನ:
1) ಮೊದಲು ಮಿಕ್ಸಿಯಲ್ಲಿ ಟೊಮೇಟೊ, ಈರುಳ್ಳಿ (ದೊಡ್ಡದಾಗಿ ಹೆಚ್ಚಿದ್ದು), ಕಾಯಿತುರಿ, ಚೆಕ್ಕೆ, ಏಲಕ್ಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತೊಂಬರಿ ಪುಡಿ ಮತ್ತು ಸ್ವಲ್ಪ ನೀರು ಹಾಕಿ ನಯವಾಗುವಷ್ಟು ಅರೆಯಿರಿ.
2) ಒಂದು ದಪ್ಪತಳದ ಬಾಣಲೆ ಅಥವಾ ಅಗಲವಾದ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಉಳಿದ ಒಂದು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿಹಾಕಿ ಕಂದುಬಣ್ಣ ಬರುವವರೆಗೆ ತಿರುವಿ. (ಉರಿ ಮಧ್ಯಮ ಇರಲಿ)
3) ಇದಕ್ಕೆ ಈಗ ಮಸಾಲೆ ಹಾಕಿ ಕೊಂಚ ಹೊತ್ತು ತಿರುವುದನ್ನು ಮುಂದುವರೆಸಿ. (ನೀರು ಬಿಡುವವರೆಗೆ ತಿರುವುತ್ತಿರಿ. ಕೊಂಚ ಬಿಟ್ಟರೂ ತಳಭಾಗ ಸುಟ್ಟು ರುಚಿ ಕಹಿಯಾಗುತ್ತದೆ)
4) ಈಗ ಮೆಣಸಿನ ಪುಡಿ ಹಾಕಿ ತಿರುವುದನ್ನು ಮುಂದುವರೆಸಿ
5) ಈಗ ಬೆಂದ ಮೊಟ್ಟೆಗಳನ್ನು ಹಾಕಿ ನಯವಾಗಿ ಮಿಶ್ರಣ ಮಾಡಿ
6) ಉಪ್ಪು ಸೇರಿಸಿ ನಯವಾಗಿ ತಿರುವಿ. ಮೊಟ್ಟೆಗಳು ಮಿಶ್ರಣದಲ್ಲಿ ಪೂರ್ಣವಾಗಿ ಮುಳುಗುವುದು ಅಗತ್ಯ.
7) ಚಪಾತಿಗಾದರೆ ಕಡಿಮೆ ನೀರು ಸೇರಿಸಿ. ಅನ್ನಕ್ಕಾದರೆ ಕೊಂಚ ಹೆಚ್ಚು ನೀರು ಸೇರಿಸಿ ಕುದಿ ಬರಿಸಿ.
8) ಕುದಿ ಬಂದ ತಕ್ಷಣ ಇಳಿಸಿ ಕೊತ್ತಂಬರಿ ಸೊಪ್ಪು ಸೇರಿಸಿ ಬಡಿಸಿ.

ಕಿವಿಮಾತು:
*ಮೊಟ್ಟೆಯನ್ನು ಮೂರು ನಿಮಿಷಕ್ಕಿಂತ ಹೆಚ್ಚು ಕುದಿನೀರಿನಲ್ಲಿಡಬಾರದು. ಅಂದರೆ ಬೆಂದ ಬಳಿಕ ಒಳಗಿನ ಹಳದಿಭಾಗ ಪೂರ್ಣವಾಗಿ ಹಳದಿಯಾಗಿದ್ದಷ್ಟೂ ಆರೋಗ್ಯಕರ. ಒಂದು ವೇಳೆ ಹೆಚ್ಚು ಬೆಂದರೆ ಹಳದಿಭಾಗದ ಹೊರಕವಚ ಗಾಢ ಹಸಿರು ಬಣ್ಣಕ್ಕೆ ತಿರುಗುತ್ತದೆ. ಇದು ಆರೋಗ್ಯಕ್ಕೆ ಉತ್ತಮವಲ್ಲ.
*ಏಕೆಂದರೆ ಮೊಟ್ಟೆಯಲ್ಲಿದ್ದ ಕಬ್ಬಿಣದ ಅಂಶ ಹೆಚ್ಚು ಕಾಯಿಸಿದ್ದರಿಂದ ಬಿಳಿಭಾಗದ ಹೈಡ್ರೋಜನ್ ಸಲ್ಫೈಡ್ ನೊಂದಿಗೆ ರಾಸಾಯನಿಕ ಕ್ರಿಯಿಗೆ ಒಳಗಾಗಿ ಪೋಷಕಾಂಶಗಳು ನಷ್ಟವಾಗುತ್ತವೆ. ಇದು ದೇಹಕ್ಕೆ ಅಪಾಯಕಾರವೂ ಹೌದು.
*ಆದ್ದರಿಂದ ಮೊಟ್ಟೆಗಳನ್ನು ನೀರು ಕುದಿ ಬಂದ ಬಳಿಕವೇ ನೀರಿಗೆ ಹಾಕಿ ಮೊಟ್ಟೆಯ ಗಾತ್ರಕ್ಕನುಗುಣವಾಗಿ ಎರಡರಿಂದ ಮೂರು ನಿಮಿಷ ಬೇಯಿಸಿ ಕೂಡಲೇ ಹೊರತೆಗೆಯುವುದರಿಂದ ಇದನ್ನು ತಡೆಯಬಹುದು.

X
Desktop Bottom Promotion