Just In
Don't Miss
- News Kalaburagi Rain: ಸೂರ್ಯನಗರಿ ಕಲಬುರಗಿಯಲ್ಲಿ ಭಾರೀ ಗಾಳಿ, ಆಲಿಕಲ್ಲು ಸಮೇತ ದಾರಾಕಾರ ಮಳೆ
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಮಹಿಳೆಯರು ತೀರಿ ಹೋದವರ ಮನೆಯ ಮುಂದೆ 12 ದಿನಗಳ ಕಾಲ ಬಂದು ಅಳಬೇಕು!
ನನ್ನ ಪ್ರಪಂಚ, ನನ್ನ ಬಾಳ ಬೆಳಕು, ನನ್ನ ಖುಷಿ ಹಾಗೂ ನನ್ನ ಜೀವವೇ ನನ್ನ ಸಂಗಾತಿ ಎಂದು ಪ್ರತಿಯೊಂದು ಮಹಿಳೆಯು ನಂಬಿರುತ್ತಾಳೆ. ಬಾಳ ಸಂಗಾತಿಯಾದ ಪತಿಯೇ ಹೆಣ್ಣಿಗೆ ಎಲ್ಲವು... ಜೀವದಲ್ಲಿ ಜೀವವಾಗಿ ಬೆರೆತ ಪತಿಯನ್ನು ಕಳೆದುಕೊಂಡಾಗ ಉಂಟಾಗುವ ದುಃಖವನ್ನು ಹೇಳಿ ತೀರಲು ಸಾಧ್ಯವಿಲ್ಲ. ಇನ್ನು ತನ್ನ ರಕ್ತವನ್ನೇ ಹಂಚಿಕೊಂಡು ಕರುಳ ಬಳ್ಳಿಯಾಗಿ ಬಂದ ಮಗುವು ತಾಯಿಯ ಮಡಿಲಿಂದ ದೂರವಾಗುವುದು ಎಂದರೆ ಅದು ಒಡಲನ್ನು ಸುಡುವ ಬೆಂಕಿ. ಇಂತಹ ನೋವಿನ ನಡುವೆ ಸಿಲುಕಿಕೊಂಡಾಗ ಕಣ್ಣೀರು ಇಡುವುದು ಸಾಮಾನ್ಯ.
ಮನಸ್ಸಿಗೆ ಉಂಟಾದ ನೋವು ಕಣ್ಣೀರಿನ ರೂಪದಲ್ಲಿ ರೋಧಿಸುತ್ತದೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಶ್ರೀಮಂತರ ಮನೆಯ ಮಹಿಳೆಯರು ಅದೆಂತಹದ್ದೇ ದುಃಖದ ಸ್ಥಿತಿ ಉಂಟಾದರೂ ಕಣ್ಣೀರು ಇಡುವಂತಿಲ್ಲ. ಹಾಗೊಮ್ಮೆ ದುಃಖದ ಕಾರಣದಿಂದ ಮಹಿಳೆಯ ಕಣ್ಣಲ್ಲಿ ನೀರು ಬಂತೆಂದರೆ ಅವರು ಆ ಮನೆತನದ ಘನತೆಯನ್ನು ಕಳೆದಂತೆ...
ಇದೇ ಹಳ್ಳಿಯ ಕೆಲವು ಮಹಿಳೆಯರು ಅವರ ವೈಯಕ್ತಿಕ ಜೀವನಕ್ಕೆ ಯಾವುದೇ ನೋವಾಗದಿದ್ದರೂ ಸರಿ... ಊರಲ್ಲಿ ಶ್ರೀಮಂತ ಮನೆತನದಲ್ಲಿ ಉಂಟಾದ ದುಃಖದ ಸಂಗತಿಗೆ ಎಲ್ಲವನ್ನೂ ಕಳೆದುಕೊಂಡವರಂತೆ ಅಳಬೇಕು... ಏಕೆಂದರೆ ಇವರನ್ನು ಊರಲ್ಲಿ ಏನೇ ಆದರೂ ಕಣ್ಣೀರು ಹಾಕಲು ಹುಟ್ಟಿರುವವರು ಎಂದು ಪರಿಗಣಿಸಲಾಗಿದೆ. ನಿಜ, ಮಾನವೀಯತೆಯೇ ಇಲ್ಲದವರಂತೆ ಇಂದಿಗೂ ತಮ್ಮ ಸ್ವಾರ್ಥಕ್ಕಾಗಿ ಮಹಿಳೆಯರನ್ನು ಬಳಸಿಕೊಳ್ಳುತ್ತಿರುವುದು
ಒಂದು ವಿಲಕ್ಷಣ ಪದ್ಧಿತಿ. ಒಂದೇ ಹಳ್ಳಿಯಲ್ಲಿ ಉನ್ನತ ಹಾಗೂ ಕೆಳ ಮಟ್ಟದ ಮಹಿಳೆ ಎನ್ನುವ ತಾರತಮ್ಯದ ಅಡಿಯಲ್ಲಿ ಶೋಷಣೆ ನಡೆಯುತ್ತಿದೆ. ನಿಜ, ರಾಜಸ್ಥಾನದ ಕೆಲವು ಗ್ರಾಮಗಳಲ್ಲಿ ಇಂದಿಗೂ ಠಾಕೂರ್ ಮನೆತನ ಹಾಗೂ ರುಡಾಲಿಸ್ ಮಹಿಳೆಯರು ಎನ್ನುವವರು ಇದ್ದಾರೆ. ಠಾಕೂರ್ ಮನೆತನದವರು ಗ್ರಾಮದಲ್ಲಿ ಅತ್ಯಂತ ಉನ್ನತ ಮನೆತನದವರು. ರುಡಾಲಿಸ್ ಎನ್ನುವ ಮಹಿಳೆಯರು ಗ್ರಾಮದಲ್ಲಿ ಯಾವುದೇ ದುಃಖದ ಸನ್ನಿವೇಶವಾದರೂ ಅಲ್ಲಿಗೆ ಬಂದು ಅಳುವುದರ ಮೂಲಕ ದುಃಖವನ್ನು ವ್ಯಕ್ತಪಡಿಸಬೇಕು. ಅವರು ಹುಟ್ಟಿರುವುದೇ ಕಷ್ಟದ ಸ್ಥಿತಿಯ ಎದುರು ಕುಳಿತು ಕಣ್ಣೀರಿಡುವುದಕ್ಕೆ ಎಂದು ಹೇಳಲಾಗುವುದು. ಸಾವಿನ ಮನೆ ಅಥವಾ ದುಃಖದ ಸ್ಥಿತಿಯ ಎದುರಿಗೆ ಕಪ್ಪು ಬಟ್ಟೆಯನ್ನು ಧರಿಸಿ ಎದೆ ಮತ್ತು ಭೂಮಿಯನ್ನು ಬಡಿಯುತ್ತಾ ಆಳವಾದ ಕಣ್ಣೀರಿನೊಂದಿಗೆ ರೋಧಿಸುವುದು ಅವರ ಕಾಯಕ...
ಇವರು ಜೀವನ ಪರ್ಯಂತ ದುಃಖದಿಂದ ಬದುಕುತ್ತಾರೆ!!
ಈ ಮಹಿಳೆಯರಿಗೆ ರುಡಾಲಿಸ್ ಎಂದು ಕರೆಯಲಾಗುತ್ತದೆ. ಇವರನ್ನು ವೃತ್ತಿಪರ ಶೋಕಾಚಕರು ಎಂದು ಕರೆಯಲಾಗುತ್ತದೆ. ಇವರು ಜೀವನ ಪರ್ಯಂತ ದುಃಖದಿಂದ ಬದುಕುತ್ತಾರೆ. ಯಮನ ಮೆಚ್ಚಿನ ಬಣ್ಣವಾದ ಕಪ್ಪು ಬಣ್ಣದ ಉಡುಗೆಯನ್ನು ಧರಿಸುತ್ತಾರೆ. ಕೆಳಜಾತಿಯವರು ಎಂದು ಪರಿಗಣಿಸಲಾಗಿದ್ದು, ಇವರನ್ನು ಅಂತ್ಯಕ್ರಿಯೆಯ ಸಂದರ್ಭದಲ್ಲಿ ಕಣ್ಣೀರಿಡಲು ಕರೆಯಲಾಗುತ್ತದೆ. ಇವರಿಗೆ ಸಮಾಜದಲ್ಲಿ ಯಾವುದೇ ರೀತಿಯಿಂದಲೂ ಕುಟುಂಬವನ್ನು ಹೊಂದಲು ಅನುಮತಿಸುವುದಿಲ್ಲ... ಒಟ್ಟಿನಲ್ಲಿ ಇವರ ಜೀವನವು ಕೇವಲ ದುಃಖದಿಂದಲೇ ತುಂಬಿರುತ್ತದೆ ಎಂದು ಹೇಳಬಹುದು.
ಇದು ರಾಜಸ್ಥಾನದ ಒಳನಾಡಿನಲ್ಲಿ ಇದೊಂದು ಸಂಪ್ರದಾಯ!
ಇದು ನಮಗೊಂದು ವಿಲಕ್ಷಣವಾದ ವೃತ್ತಿಯಂತೆ ತೋರುತ್ತದೆ. ಆದರೆ ರಾಜಸ್ಥಾನದ ಒಳನಾಡಿನಲ್ಲಿ ಇದೊಂದು ಸಂಪ್ರದಾಯ ಹಾಗೂ ಇದರ ಅಗತ್ಯವು ಅನಿವಾರ್ಯ ಎನ್ನುವಂತೆ ಇದ್ದಾರೆ. ಉನ್ನತ ಜಾತಿ ಹಾಗೂ ಪ್ರತಿಷ್ಠಿತ ಮನೆತನದ ಮಹಿಳೆಯರು ತಮ್ಮ ಭಾವನೆಯನ್ನು ಇತರರ ಮುಂದೆ ಪ್ರದರ್ಶಿಸುವಂತಿಲ್ಲ. ಅವರು ಸದಾ ಮುಸುಕನ್ನು ಧರಿಸಿ ಹವೇಲಿಯಲ್ಲಿಯೇ ಇರಬೇಕು. ನಿಧಿದುಗರ್ ಕುಂಡಲಿಯಾ ಎನ್ನುವವರು ತನ್ನ ಪುಸ್ತಕವಾದ "ದಿ ಲಾಸ್ಟ್ ಜನರೇಷನ್" ಪುಸ್ತಕದಲ್ಲಿ ಬರೆದಿರುವ ಪ್ರಕಾರ... " ಈ ಹಳ್ಳಿಯ ರಾಜ ಮನೆತನದಲ್ಲಿ ಯಾರಾದರೂ ಸತ್ತರೆ ಮಹಿಳೆಯರು ಅಳುವಂತಿಲ್ಲ.
ಇಲ್ಲಿ ರುಡಾಲಿಗಳು ಇತರರ ಪರವಾಗಿ ಅಳುತ್ತಾರಂತೆ
ಮಹಿಳೆಯರಿಗೆ ದುಃಖ ಮತ್ತು ನೋವನ್ನು ಸಹಿಸುವಷ್ಟು ಮಿದುಳಿನ ಶಕ್ತಿ ಇರುವುದಿಲ್ಲ. ದುರ್ಬಲ ಮನಸ್ಸು ಹಾಗೂ ಹೃದಯದಿಂದ ಸಾಮಾನ್ಯ ಜನರ ಎದುರು ಶ್ರೀಮಂತ ಮನೆತನದ ಮಹಿಳೆಯರು ಅಳಬಾರದು. ಪತಿ ಸತ್ತರೂ ತಮ್ಮ ಘನತೆಯನ್ನು ಕಾಪಾಡಿ ಕೊಳ್ಳಬೇಕು. ಅಂತಹ ಸಂದರ್ಭದಲ್ಲಿ ರುಡಾಲಿಗಳು ಇವರ ಪರವಾಗಿ ಬಂದು ಅಳುತ್ತಾರೆ. ಹಳ್ಳಿಯ ಜನರಿಗಾದ ನೋವು ಹಾಗೂ ಶ್ರೀಮಂತ ಮನೆತನದವರ ನೋವನ್ನು ಇವರು ಪ್ರತಿನಿಧಿಸುತ್ತಾರೆ" ಎಂದು ಹೇಳಿದ್ದಾರೆ.
ರುಡಾಲಿಗಳ ಕಣ್ಣೀರಿಗೆ ಬೆಲೆಯೇ ಇಲ್ಲವೇ?
ರುಡಾಲಿಗಳಿಗೆ ಇದೊಂದು ವೃತ್ತಿಯಾಗಿರಬಹುದು. ಆದರೆ ಜಾತಿ, ವರ್ಗ, ಆರ್ಥಿಕ ಸ್ಥಿತಿಯೊಂದಿಗೆ ತಮ್ಮ ದೌರ್ಬಲ್ಯವನ್ನು ಹೆಣೆದುಕೊಂಡಿದ್ದಾರೆ. ಲಿಂಗ ಮತ್ತು ಜಾತಿಗಳಿಂದ ಬೇರ್ಪಡಿಸಿ ಬಡತನ ಎನ್ನುವ ಕೂಪಕ್ಕೆ ತಳ್ಳಲಾಗಿದೆ. ಅವರ ಕಣ್ಣೀರು ಶ್ರೀಮಂತ ವ್ಯಕ್ತಿಗಳಿಗೆ ಬೆಲೆಕೊಡಬಹುದು. ಆದರೆ ಅವರ ಕಣ್ಣೀರು ತಮ್ಮ ಜೀವನದ ನಿಟ್ಟುಸಿರಾಗಿರುತ್ತದೆ.
ಅವರನ್ನು ನಾವು ದೂಷಿಸುವುದು ಸೂಕ್ತವೇ?
ಈ ಮಹಿಳೆಯರಿಗೆ ಸಮಾಜದಲ್ಲಿ ಕೆಳಮಟ್ಟದಲ್ಲಿ ನೋಡಲಾಗುತ್ತದೆ. ಅಲ್ಲದೆ ಅವರನ್ನು ಶೋಷಣೆಗೆ ಗುರಿಯಾಗುವಂತೆ ಮಾಡಲಾಗುವುದು. ಉನ್ನತ ಜಾತಿ ಹಾಗೂ ಮನೆತನದ ಪುರುಷರು ಇವರೊಂದಿಗೆ ನ್ಯಾಯ ಸಮ್ಮತವಲ್ಲದ ಸಂಬಂಧವನ್ನು ಹೊಂದುವುದು ಹಾಗೂ ಅವರಿಗೆ ಮಕ್ಕಳ ಭಾಗ್ಯವನ್ನು ಕರುಣಿಸುತ್ತಾರೆ. ಹಾಗೊಮ್ಮೆ ಅವರಿಗೆ ಈ ಸಂಬಂಧದಲ್ಲಿ ಜನಿಸಿದ್ದು ಹೆಣ್ಣು ಮಗುವಾಗಿದ್ದರೆ ಅದೊಂದು ಕಳಂಕ ಎಂದು ಪರಿಗಣಿಸಲಾಗುವುದು. ನಂತರ ಅವರು ರುಡಾಲಿಗಳಾಗಿ ಬದುಕುವರು.
ಮಗು ತಂದೆಯ ಹೆಸರನ್ನು ಹೊಂದುವಂತಿಲ್ಲ!!
ಹಾಗಂತ ಇವರ ಸಂಬಂಧದಲ್ಲಿ ಗಂಡು ಮಗು ಜನಿಸಿದರೂ ಸಹ ಆ ಮಗು ತಂದೆಯ ಹೆಸರನ್ನು ಹೊಂದುವಂತಿಲ್ಲ. ಅವರೆಲ್ಲರೂ ನ್ಯಾಯ ಸಮ್ಮತವಲ್ಲದ ಬದುಕನ್ನು ಹೊಂದಿರುತ್ತಾರೆ. ಕೆಳಜಾತಿಯ ಮಹಿಳೆಯರೊಂದಿಗೆ ಅವರು ಬದುಕಬೇಕು. ಇವರನ್ನು ಕೆಳ ಜಾತಿಯ ಜನರು ಎಂದು ಪರಿಗಣಿಸಲಾಗುವುದು. ಉನ್ನತ ಜಾತಿಯ ಪುರುಷರು ಈ ಮಹಿಳೆಯರೊಂದಿಗೆ ದೀರ್ಘಾವಧಿಯವರೆಗೆ ಅಥವಾ ಜೀವಿತಾವಧಿಯ ವರೆಗೂ ಬದುಕಲು ಇಷ್ಟಪಡುತ್ತಾರೆ.
ಇವರಿಗೆ ಸಿಗುವುದು ಏನು?
ಸಾವಿನ ಮನೆಯ ಮುಂದೆ ಕುಳಿತು ರೋಧಿಸಿರುವುದಕ್ಕೆ ಬಹಳಷ್ಟು ಸಂಭಾವನೆ ಅಥವಾ ಹಣವನ್ನು ಪಡೆಯುವುದಿಲ್ಲ. ದುಃಖವನ್ನು ಎದೆ ಬಡಿದುಕೊಳ್ಳುವುದು ಹಾಗೂ ನೆಲಕ್ಕೆ ಹೊರಳಾಡುವುದರ ಮೂಲಕ ವ್ಯಕ್ತ ಪಡಿಸುತ್ತಾರೆ. ಇವರ ರೋಧನಕ್ಕೆ ಕಡಿಮೆ ಹಣ, ಸ್ವಲ್ಪ ಅಕ್ಕಿ ಹಾಗೂ ಹಳೆಯ ಉಡುಗೆಯನ್ನು ನೀಡಲಾಗುತ್ತದೆ. ತಿನ್ನಲು ತಂಗಳು ರೊಟ್ಟಿ ಹಾಗೂ ಈರುಳ್ಳಿಯನ್ನು ನೀಡಲಾಗುವುದು.
12 ದಿನಗಳ ಕಾಲ ಕಣ್ಣೀರು ಇಡುವ ನಾಟಕ ಮಾಡಲೇಬೇಕು
ಕಣ್ಣೀರು ಇಡುವ ನಾಟಕವನ್ನು ಕಡಿಮೆ ಎಂದರೂ ಸತ್ತ ಮನೆಯ ಮುಂದೆ 12 ದಿನಗಳ ಕಾಲ ಮುಂದುವರಿಸಬೇಕು. ಇವರು ಹೀಗೆ ಮಾಡುವುದರಿಂದ ಸತ್ತವರ ಮನೆಯ ಆರ್ಥಿಕ ಸ್ಥಾನ ಮಾನ ಹೆಚ್ಚುವುದು ಎಂದು ಹೇಳಲಾಗುತ್ತದೆ. ರುಡಾಲಿಗಳು ಅಳಬೇಕಾದ ಸನ್ನಿವೇಶದಲ್ಲಿ ತಮ್ಮ ದುಃಖದ ಜೀವನವನ್ನು ನೆನೆಸಿಕೊಂಡು ಅಳುತ್ತಾರೆ. ಕೆಲವೊಮ್ಮೆ ಕೆಲವು ಸಸ್ಯಗಳ ರಸವನ್ನು ಕಣ್ಣಿಗೆ ಹಚ್ಚಿಕೊಳ್ಳುತ್ತಾರೆ. ಇದರಿಂದ ಕಣ್ಣು ಸುಟ್ಟ ಸಂವೇದನೆಗೆ ಒಳಗಾಗುತ್ತದೆ. ಜೊತೆಗೆ ಕಣ್ಣಲ್ಲಿ ಸಾಕಷ್ಟು ನೀರು ಸುರಿಯುತ್ತದೆ ಎಂದು ಹೇಳಲಾಗುವುದು.
12 ದಿನಗಳ ಕಾಲ ಕಣ್ಣೀರು ಇಡುವ ನಾಟಕ ಮಾಡಲೇಬೇಕು
ಸಂತೋಷ ಹಾಗೂ ದುಃಖ ಎನ್ನುವುದು ಯಾವುದೇ ಆಡಂಬರ ಅಥವಾ ಸಂಪ್ರದಾಯವಲ್ಲ. ಇವೆರಡೂ ಮನುಷ್ಯನ ಸಂವೇದನೆಯಲ್ಲಿ ಒಂದು. ನೋವುಂಟಾದಾಗ ಕಣ್ಣೀರು, ಸಂತೋಷವಾದಾಗ ನಗುವುದು ಸಾಮಾನ್ಯವಾದ ಪ್ರಕ್ರಿಯೆ. ಇದನ್ನು ಯಾರು ದೌರ್ಬಲ್ಯ ಅಥವಾ ಇನ್ಯಾವುದೇ ದುರುದ್ದೇಶಕ್ಕೆ ಬಳಸಿಕೊಳ್ಳುವುದು ಸೂಕ್ತವಲ್ಲ. ತಾಂತ್ರಿಕವಾಗಿ ಹಾಗೂ ಆಧುನಿಕವಾಗಿ ಬೆಳೆಯುತ್ತಿರುವ ನಮ್ಮ ದೇಶದಲ್ಲಿ ಈ ಬಗೆಯ ಕೆಟ್ಟ ಸಂಪ್ರದಾಯಗಳು ಅಂತ್ಯಗೊಳ್ಳುವ ಅಗತ್ಯವಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ಸ್ವತಂತ್ರ ಜೀವನವನ್ನು ಜೀವಿಸುವ ಹಕ್ಕಿದೆ. ಅದನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ಇತ್ತೀಚೆಗೆ ರುಡಾಲಿಗಳಿಗೂ ತಮ್ಮ ಏಕೈಕ ವೃತ್ತಿಯಿಂದ ಜೀವನ ನಡೆಸುವುದು ಕಷ್ಟ ಎನ್ನುವುದನ್ನು ಕಂಡುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.