ಮಕರ ಸಂಕ್ರಾಂತಿ: ಉಡುಪಿಯಲ್ಲಿ ವೈಭವದ ಮೂರು ತೇರು

By ಬಾಲರಾಜ್ ತಂತ್ರಿ

ದಕ್ಷಿಣಾಯಣದ ಆರು ತಿಂಗಳ ಅವಧಿಯ ಕೊನೆಯ ದಿನವಾದ ಮಕರ ಸಂಕ್ರಮಣದ ದಿನದಂದು ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಮಠದ ಸಂಪ್ರದಾಯದಂತೆ ಮೂರು ರಥವನ್ನು ಎಳೆಯುವ ಉತ್ಸವ ಅನಾದಿ ಕಾಲದಿಂದಲೂ ನಡೆದು ಕೊಂಡು ಬರುತ್ತಿದೆ.

ಮಾರ್ಗಶಿರ ಮಾಸ ಕೃಷ್ಣಪಕ್ಷದ ದ್ವಾದಶಿಯಿಂದ ಅಂದರೆ ಜನವರಿ 9ರಿಂದ ಆರಂಭವಾಗುವ ಸಪ್ತೋತ್ಸವದ ಆರನೇ ದಿನ ರಾತ್ರಿ ಮಾಧ್ವ ಸಂಪ್ರದಾಯಂದಂತೆ ಬ್ರಹ್ಮರಥೋತ್ಸವ ಸೇರಿ ಮೂರು ರಥವನ್ನು ಅ ್ಟ ಮಠಾಧೀಶರ ಉಪಸ್ಥಿತಿಯಲ್ಲಿ ಎಳೆಯಲಾಗುವುದು.

12ನೇ ಶತಮಾನದಲ್ಲಿ ಆಚಾರ್ಯ ಮಧ್ವರು ಮಕರ ಸಂಕ್ರಾಂತಿಯ ದಿನದಂದು ಕಡಗೋಲು ಕೃಷ್ಣ ವಿಗ್ರಹವನ್ನು ಪ್ರತಿಷ್ಟಾಪಿಸಿದರು.

Makara Sankranti day in Udupi

ಅಂದಿನಿಂದ ಮಧ್ವಾಚಾರ್ಯರ ಆದೇಶದಂತೆ ಮಕರ ಸಂಕ್ರಾಂತಿಯ ಪುಣ್ಯದಿನದಂದು ಮೂರು ರಥ ಮತ್ತು ಮರುದಿನ ಹಗಲು ಬ್ರಹ್ಮ ರಥವನ್ನು ಎಳೆಯುವುದು ಮಠದ ಪದ್ಧತಿ. ಹಗಲು ಉತ್ಸವ ಈ ಭಾಗದಲ್ಲಿ 'ಚೂರ್ಣೋತ್ಸವ' ಎಂದೇ ಪ್ರಸಿದ್ದ.

ಮೂರು ರಥ ಎಳೆಯುವ ದಿನದಂದು ಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ ದೇವ ಉತ್ಸವ ಮೂರ್ತಿಯನ್ನು ಮಧ್ವ ಸರೋವರದಲ್ಲಿ ನಡೆಯುವ ತೆಪ್ಪೋತ್ಸವದ ನಂತರ ಕೃಷ್ಣ ಮಠದ ದ್ವಾರದಲ್ಲಿ ಕ್ರಮವಾಗಿ ಬ್ರಹ್ಮರಥ, ಗರುಡ ರಥ ಮತ್ತು ಮಹಾಪೂಜೆ ರಥ (ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ) ಎಂದು ಕರೆಯಲ್ಪಡುವ ರಥದಲ್ಲಿ ಇಟ್ಟು ರಥಬೀದಿ ಸುತ್ತ ಒಂದು ಸುತ್ತು ಎಳೆಯಲಾಗುವುದು.

ರಥ ಸಾಗುವ ಮುಂದೆ ಮಠಾಧೀಷರು ನಡೆದುಕೊಂಡು ಬರುವುದು ಮಠದ ಇನ್ನೊಂದು ಸಂಪ್ರದಾಯ. ಇತ್ತೀಚಿನ ದಿನಗಳಲ್ಲಿ ಮೂರು ರಥದ ಜೊತೆ ಇನ್ನೆರಡು ರಥಗಳನ್ನೂ ಎಳೆಯಲಾಗುತ್ತದೆ.

ಇದಾದ ಮರುದಿನ ಹಗಲು ಉತ್ಸವ ನಡೆಯುತ್ತದೆ. ಅಂದು ಕೃಷ್ಣ ಮತ್ತು ಮುಖ್ಯಪ್ರಾಣನ ಉತ್ಸವ ಮೂರ್ತಿಯನ್ನು ರಥದಲ್ಲಿ ಇಟ್ಟ ನಂತರ ಗರುಡ ರಥವನ್ನು ಮೂರು ಸುತ್ತು ಸುತ್ತುತ್ತಾನೆ. ಅದಾದ ನಂತರವೇ ರಥ ಎಳೆಯಲು ಚಾಲನೆ ನೀಡಲಾಗುತ್ತದೆ.

ವೈಭವದ ಉತ್ಸವದ ನಂತರ ಪರ್ಯಾಯ ಸ್ವಾಮಿಗಳು ಭಕ್ತಾದಿಗಳಿಗೆ ಮಂತ್ರಾಕ್ಷತೆಯನ್ನು ನೀಡುತ್ತಾರೆ. ಇದಾದ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ಲಕ್ಷಾಂತರ ಮಂದಿ ಭಕ್ತಾದಿಗಳು ಒಟ್ಟು ಏಳು ದಿನ ನಡೆಯುವ ಉತ್ಸವಕ್ಕೆ ವರ್ಷ ವರ್ಷ ಸಾಕ್ಷಿಯಾಗುತ್ತಾರೆ

X
Desktop Bottom Promotion