Just In
Don't Miss
- News ರಷ್ಯಾ ಮೇಲೆ ಉಗ್ರರ ದಾಳಿ ಮಾಡಿಸಿದ್ದು ಉಕ್ರೇನ್?
- Sports IPL 2024: ಪಂಜಾಬ್ ಎದುರು ಡುಬ್ಕಿ ಹೊಡೆದ ಡೆಲ್ಲಿ ಕ್ಯಾಪಿಟಲ್ಸ್
- Movies ರಾಜಕೀಯಕ್ಕೆ ''ಚಿರುತ'' ಚೆಲುವೆ ; ಬಿಹಾರದಲ್ಲಿ ''ಕೈ'' ಬೀಸಲು ರೆಡಿಯಾದ ಮಾದಕ ನಟಿ..?
- Finance ಸುಕನ್ಯಾ ಸಮೃದ್ಧಿ ಯೋಜನೆ: ಬಡ್ಡಿ ದರ ಎಷ್ಟಿದೆ?
- Automobiles ಅನಾವರಣಕ್ಕೆ ಸಜ್ಜಾದ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್ಒವರ್
- Technology ಮೀಡ್ರೇಂಜ್ ಬೆಲೆಗೆ ಇವೇ ನೋಡಿ ಬೆಸ್ಟ್ ಸ್ಮಾರ್ಟ್ಫೋನ್ಗಳು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೀಟ್ರೂಟ್ ನಿಂದ ಆರೋಗ್ಯಕ್ಕೆ ಹಲವು ಲಾಭದ ಜತೆ ದುಷ್ಟರಿಣಾಮಗಳು ಇದೆ ಎಚ್ಚರ!
ಬೀಟ್ರೂಟ್ ಕತ್ತರಿಸಿದಾಗ ಒಸರುವ ರಸ ರಕ್ತದಂತೆ ಕೆಂಪಗಿರುತ್ತದೆ ಎಂಬ ಒಂದೇ ಕಾರಣಕ್ಕೆ ಹೆಚ್ಚಿನವರು ಈ ಅದ್ಭುತ ತರಕಾರಿಯನ್ನು ಇಷ್ಟಪಡುವುದಿಲ್ಲ. ಆದರೆ ಯಾವಾಗ ಇದರ ಪೋಷಕಾಂಶಗಳ ಪ್ರಯೋಜನಗಳ ಅರಿವಾಯ್ತೋ, ಆ ಬಳಿಕವೇ ಇದನ್ನು ಹೆಚ್ಚು ಹೆಚ್ಚಾಗಿ ಸಾಲಾಡ್ ಗಳಲ್ಲಿ ಬಳಸಲಾಗುತ್ತಾ ಬರಲಾಯಿತು. ಆದರೂ, ಮುಟ್ಟಿದರೆ ಬೆರಳು ಕೆಂಪಗಾಗುವುದನ್ನು ಇಷ್ಟಪಡದವರು ಇದರ ರಸವನ್ನು ಕುಡಿಯುವುದನ್ನೇ ಹೆಚ್ಚು ಇಷ್ಟಪಡುತ್ತಾರೆ. ಬೀಟ್ರೂಟಿಗೆ ಈ ಬಣ್ಣ ಬರಲು ಕಾರಣ ಬೀಟಾಲೈನ್ಸ್ ಎಂಬ ವರ್ಣದ್ರವ್ಯಗಳಾಗಿವೆ. ಇದರ ಹೊರತಾಗಿ ಬೀಟ್ರೂಟಿನಲ್ಲಿರುವ ಇತರ ಪೋಷಕಾಂಶಗಳು ದೇಹದಲ್ಲಿ ಸುಲಭವಾಗಿ ಹೀರಲ್ಪಡುತ್ತವೆ. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಬೀಟ್ರೂಟ್ ರಸದ ಸೇವನೆಯಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ.
ಬೀಟ್ರೂಟ್ ರಸದ ಸೇವನೆಯಿಂದ ಇನ್ನೂ ಹಲವಾರು ಪ್ರಯೋಜನಗಳಿವೆ. ಇದರ ಉರಿಯೂತ ನಿವಾರಕ ಗುಣ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ ಹಾಗೂ ಬೀಟಾಲೈನ್ಸ್ ಗಳು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತವೆ. ಇಂದಿನ ಲೇಖನದಲ್ಲಿ ಇವುಗಳಲ್ಲಿ ಪ್ರಮುಖವಾದವುಗಳನ್ನು ವಿವರಿಸಲಾಗಿದೆ. ಬನ್ನಿ ನೋಡೋಣ:
1. ಹೃದಯದ ಆರೋಗ್ಯವನ್ನು ವೃದ್ಧಿಸಬಹುದು
ಬೀಟ್ರೂಟ್ ರಸದ ಸೇವನೆಯಿಂದ ದೇಹಕ್ಕೆ ಉತ್ತಮ ಪ್ರಮಾಣದ ನೈಟ್ರೇಟುಗಳು ದೊರಕುತ್ತವೆ. ಈ ನೈಟ್ರೇಟುಗಳು ರಕ್ತನಾಳಗಳನ್ನು ಸಡಿಲಿಸಿ ರಕ್ತದ ಹರಿವನ್ನು ಸುಗಮಗೊಳಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತವೆ. ಇದರಿಂದ ಹೃದಯದ ಮೇಲಿನ ಭಾರ ಇಳಿದು ಆರೋಗ್ಯ ಉತ್ತಮಗೊಳ್ಳುತ್ತದೆ. ಬೀಟ್ರೂಟ್ ರಸದ ಸೇವನೆಯಿಂದ ನಮ್ಮ ದೇಹದ ಅನೈಚ್ಛಿಕ ಕಾರ್ಯಗಳನ್ನು ನಿರ್ವಹಿಸುವ ನರವ್ಯವಸ್ಥೆ (sympathetic nervous system) ಅಗತ್ಯಕ್ಕೂ ಹೆಚ್ಚು ಪ್ರಚೋದನೆಗೊಳ್ಳದಂತೆ ತಡೆಯುತ್ತದೆ. ಅತಿ ಪ್ರಚೋದನೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಹಾಗೂ ನಿದ್ದೆಯಲ್ಲಿ ಹೃದಯಾಘಾತವಾಗುವ ಸಂಭವವನ್ನು ಹೆಚ್ಚಿಸುತ್ತದೆ. ಒಂದು ಸಂಶೋಧನೆಯಲ್ಲಿ ಕೆಲವು ವ್ಯಕ್ತಿಗಳಿಗೆ ಸತತವಾಗಿ ಬೀಟ್ರೂಟ್ ರಸವನ್ನು ಸೇವಿಸಲು ನೀಡಲಾಯಿತು. ಇವರ ಅಧಿಕ ರಕ್ತದೊತ್ತಡ ಕೇವಲ ಮೂವತ್ತು ನಿಮಿಷಗಳಲ್ಲಿಯೇ ಕಡಿಮೆಯಾಗಿತ್ತು. ಆದರೆ ಮುಂದಿನ ಇಪ್ಪತನಾಲ್ಕು ಘಂಟೆಗಳಲ್ಲಿ ಮೊದಲಿನ ಒತ್ತಡವನ್ನು ಪಡೆದಿತ್ತು.
2. ಕ್ಯಾನ್ಸರ್ ವಿರುದ್ಧ ಹೋರಾಡಬಹುದು
ಇದರಲ್ಲಿರುವ ಬೀಟಾ ಸೈಯಾನಿನ್ ಎಂಬ ಪೋಷಕಾಂಶ ಪ್ರಮುಖ ಆಂಟಿ ಆಕ್ಸಿಡೆಂಟ್ ಆಗಿದೆ ಹಾಗೂ ಇದು ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತದೆ. ಈ ಮೂಲಕ ಕೆಲವಾರು ಬಗೆಯ ಕ್ಯಾನ್ಸರ್ ಗಳಿಗೆ ಬೀಟ್ರೂಟ್ ರಕ್ಷಣೆ ನೀಡುತ್ತದೆ. ಅಲ್ಲದೇ ಬೀಟ್ರೂಟ್ ರಸದಲ್ಲಿರುವ ಉರಿಯೂತ ನಿವಾರಕ ಗುಣ ರಕ್ತ ಮತ್ತು ಅಸ್ಥಿಮಜ್ಜೆಯ ಕ್ಯಾನ್ಸರ್ ಅನ್ನು ಗುಣಪಡಿಸಲು ನೆರವಾಗುತ್ತದೆ. ಈ ಕಾರ್ಯದಲ್ಲಿಯೂ ಬೀಟಾಸೈಯಾನಿನ್ ನೆರವು ನೀಡುತ್ತದೆ. ಕೆಲವಾರು ಬಗೆಯ ಕ್ಯಾನ್ಸರ್ ಗಳಿಗೆ ನೀಡುವ ಔಷಧಿಗಳಲ್ಲಿ doxorubicin ಎಂಬುದು ಒಂದಾಗಿದ್ದು ಬೀಟ್ರೂಟ್ ಈ ಔಷಧಿಯಂತೆಯೇ ಕಾರ್ಯನಿರ್ವಹಿಸುತ್ತದೆ.
3. ಮಧುಮೇಹದ ಚಿಕಿತ್ಸೆಗೆ ನೆರವಾಗಬಹುದು
ಒಂದು ಅಧ್ಯಯನದಲ್ಲಿ ನಿತ್ಯವೂ ಅರ್ಧ ಕಪ್ ಬೀಟ್ರೂಟ್ ರಸದ ಸೇವನೆಯ ಅಭ್ಯಾಸ ಮಾಡುತ್ತಿರುವ ವ್ಯಕ್ತಿಗಳ ಊಟದ ಬಳಿಕ ರಕ್ತದಲ್ಲಿ ಗ್ಲುಕೋಸ್ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳಾದ ಬೀಟಾಲೈನ್ಸ್ ಈ ಗುಣಕ್ಕೆ ಕಾರಣವಾಗಿದೆ. ಸ್ಥೂಲದೇಹಿಗಳು ಕಾರ್ಬೋಹೈಡ್ರೇಟುಗಳೊಂದಿಗೆ ಬೀಟ್ರೂಟ್ ರಸವನ್ನು ಸೇವಿಸಿದಾಗಲೂ ಇದೇ ಪ್ರಭಾವ ಉಂಟಾಗಿರುವುದನ್ನು ಗಮನಿಸಲಾಗಿದೆ. ಅಲ್ಲದೇ ಈ ವ್ಯಕ್ತಿಗಳ ದೇಹದಲ್ಲಿ ಇನ್ಸುಲಿನ್ ತಾಳಿಕೊಳ್ಳುವ ಕ್ಷಮತೆ ಇತರರಿಗಿಂತಲೂ ಹೆಚ್ಚಾಗಿರುವುದನ್ನು ಗಮನಿಸಲಾಗಿದೆ. ಈ ರಸದಲ್ಲಿರುವ ನೈಟ್ರೇಟುಗಳು ವಿಶೇಷವಾಗಿ ಟೈಪ್ - 2 ಮಧುಮೇಹ ಇರುವ ವ್ಯಕ್ತಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
4. ನಿಮಿರುದೌರ್ಬಲ್ಯವನ್ನು ಹೋಗಲಾಡಿಸಬಹುದು
ಬೀಟ್ರೂಟ್ ರಸದ ಸೇವನೆಯಿಂದ ನಿಮಿರುದೌರ್ಬಲ್ಯ ಇಲ್ಲವಾಗುತ್ತದೆ ಎಂಬುದನ್ನು ಅಧಿಕೃತವಾಗಿ ಪ್ರಮಾಣಿಸಲಾಗಿಲ್ಲ. ಆದರೆ, ಈ ರಸವನ್ನು ಸೇವಿಸಿದ ವ್ಯಕ್ತಿಗಳಲ್ಲಿ ಹೆಚ್ಚಿನವರು ಇದರಿಂದ ತಮಗೆ ಪ್ರಯೋಜನವಾಗಿದೆ ಎಂದು ತಿಳಿಸಿದ್ದಾರೆ. ಕೆಲವು ಅಧ್ಯಯನಗಳ ಪ್ರಕಾರ, ಇದರಲ್ಲಿರುವ ನೈಟ್ರಿಕ್ ಆಮ್ಲ ನಿಮಿರು ದೌರ್ಬಲ್ಯವನ್ನು ಇಲ್ಲವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮಿರುತನಕ್ಕೆ ಅವಶ್ಯಕವಾಗಿ ಬೇಕಾಗಿರುವುದು ರಕ್ತದ ಪ್ರಮಾಣ. ಇದು ಕೆಲವಾರು ಕಾರಣಗಳಿಂದ ಕಡಿಮೆ ಲಭ್ಯವಾಗುತ್ತಿದ್ದಿರಬಹುದು. ನೈಟ್ರಿಕ್ ಆಮ್ಲ ರಕ್ತನಾಳಗಳನ್ನು ಸಡಿಲಿಸಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆಗೊಳಿಸುವ ಜೊತೆಗೇ ಜನನಾಂಗಕ್ಕೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ನಿಮಿರು ದೌರ್ಬಲ್ಯ ತೊಂದರೆಯನ್ನು ನಿವಾರಿಸುತ್ತದೆ. ನಿಮಿರು ದೌರ್ಬಲ್ಯಕ್ಕೆ ಸಂಬಂಧಿಸಿದ ಇನ್ನೊಂದು ಪ್ರಮುಖ ಅಂಶವೆಂದರೆ CGMP (cyclic guanosine monophosphate) ಎಂಬ ಪೋಷಕಾಂಶ. ಇದು ಸಹಾ ಜನನಾಂಗದ ನರಗಳನ್ನು ಸಡಿಲಿಸಿ ಹೆಚ್ಚಿನ ರಕ್ತದ ಹರಿವಿಗೆ ನೆರವಾಗುತ್ತದೆ. ಒಂದು ಅಧ್ಯಯನದ ಪ್ರಕಾರ, ನೈಟ್ರೇಟುಗಳಿಂದ ಸಮೃದ್ಧವಾಗಿರುವ ಆಹಾರಗಳ ಸೇವನೆಯಿಂದ (ಜೀರ್ಣಕ್ರಿಯೆಯಲ್ಲಿ ಇವು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿತವಾಗುತ್ತದೆ) ರಕ್ತದಲ್ಲಿ CGMP ಹೆಚ್ಚುತ್ತದೆ, ತನ್ಮೂಲಕ ನಿಮಿರುದೌರ್ಬಲ್ಯ ತೊಂದರೆ ನಿವಾರಣೆಯಾಗುತ್ತದೆ.
5. ಕ್ರೀಡಾಪಟುಗಳ ಕ್ಷಮತೆ ಹೆಚ್ಚಿಸಬಹುದು
ಬೀಟ್ರೂಟ್ ರಸದ ಸೇವನೆಗೂ ಹೃದಯ ಮತ್ತು ರಕ್ತಪರಿಚಲನೆ ಹಾಗೂ ಶ್ವಾಸವ್ಯವಸ್ಥೆಗಳಿಗೂ ನಿಕಟ ಸಂಬಂಧವಿರುವುದನ್ನು ಗಮನಿಸಲಾಗಿದೆ. ಈ ರಸದ ಸೇವನೆಯಿಂದ ಓಟಗಾರರ ಕ್ರೀಡಾ ಫಲಿತಾಂಶಗಳಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ. ಕೆಲವು ಓಟಗಾರರು ಸತತವಾಗಿ ಹದಿನೈದು ದಿನ ಬೀಟ್ರೂಟ್ ರಸ ಸೇವಿಸುತ್ತಾ ತಮ್ಮ ನಿತ್ಯದ ಅಭ್ಯಾಸಗಳನ್ನು ನಡೆಸುತ್ತಿದ್ದಾಗ ಇವರು ಓಟದ ಬಳಿಕ ಸುಸ್ತುಗೊಳ್ಳುವ ಸಮಯ ಹೆಚ್ಚಾಗಿದ್ದುದು ಗಮನಕ್ಕೆ ಬಂದಿದೆ. ಆದರೆ ಇದು ಇವರ ಇತರ ಕ್ರೀಡಾ ಸಾಮರ್ಥ್ಯಗಳನ್ನು ಹೆಚ್ಚಿಸುವುದರಲ್ಲಿ ಯಾವುದೇ ಪರಿಣಾಮ ಬೀರದಿರುವುದನ್ನೂ ಗಮನಿಸಲಾಗಿದೆ.
ಇನ್ನೊಂದು ಅಧ್ಯಯನದಲ್ಲಿ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಕ್ರೀಡೆಯನ್ನು ಆರಂಭಿಸುವ ಕೊಂಚ ಹೊತ್ತಿನ ಮುನ್ನ ಬೀಟ್ರೂಟ್ ರಸವನ್ನು ಸೇವಿದ್ದಾಗ ಇವರ ಕ್ಷಮತೆಯಲ್ಲಿ ಹೆಚ್ಚಳವಾಗಿದ್ದುದು ಕಂಡುಬಂದಿದೆ. ಆದರೆ ಈ ಪರೀಕ್ಷೆಯನ್ನು ಒಂದು ಬಾರಿ ಸೇವಿಸಿದಾಗ ಮಾತ್ರವೇ ನಡೆಸಲಾಗಿತ್ತು.
6. ಮರೆಗುಳಿತನದ ಸಾಧ್ಯತೆಯನ್ನು ತಗ್ಗಿಸಬಹುದು
ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದ್ದು ಸಧ್ಯಕ್ಕೆ ಈ ವಿಷಯವನ್ನು ದೃಢೀಕರಿಸಿಲ್ಲ. ಆದರೂ, ಕೆಲವು ಮೂಲಗಳ ಪ್ರಕಾರ, ಹೆಚ್ಚುವರಿ ಅಂಶವಾಗಿ ನೈಟ್ರೇಟುಗಳನ್ನು ಸೇವಿಸಿದಾಗ ಮೆದುಳಿಗೆ ರಕ್ತದ ಹರಿವು ಹೆಚ್ಚಾಗಿ ಮರೆಗುಳಿತನ ಹಾಗೂ ಇತರ ತೊಂದರೆಗಳು ಎದುರಾಗುವ ಸಾಧ್ಯತೆಗಳು ತಗ್ಗುತ್ತವೆ.
7. ಯಕೃತ್ ನ ಕ್ಷಮತೆಯನ್ನು ಹೆಚ್ಚಿಸಬಹುದು
ಒಂದು ವೇಳೆ ಯಕೃತ್ ನಲ್ಲಿ ಮದ್ಯಪಾನದ ಹೊರತಾಗಿ ಎದುರಾಗಿರುವ ಕೊಬ್ಬಿನ ಸಂಗ್ರಹವಿದ್ದರೆ ಇದನ್ನು ನಿವಾರಿಸುವಲ್ಲಿ ಬೀಟ್ರೂಟ್ ರಸ ನೆರವಿಗೆ ಬರಬಹುದು. ಈ ಅಂಶವನ್ನು ಕೇವಲ ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಗಳಿಂದ ಮಾತ್ರವೇ ಕಂಡುಕೊಳ್ಳಲಾಗಿದೆ. ಇನ್ನೊಂದು ಅಧ್ಯಯನದಲ್ಲಿ ಇಲಿಗಳಿಗೆ ಬೀಟ್ರೂಟ್ ನಲ್ಲಿರುವ ಬೀಟಾಲೈನ್ ಅಂಶವನ್ನು ಹೆಚ್ಚುವರಿ ಅಂಶವಾಗಿ ನೀಡಿದಾಗ ಇವುಗಳ ಯಕೃತ್ ಅನ್ನು ವಿಷಕಾರಿ ಅಂಶಗಳಿಂದ ರಕ್ಷಣೆ ಪಡೆದಿರುವುದು ಗಮನಕ್ಕೆ ಬಂದಿದೆ.
8. ಕೂದಲಿಗೆ ಬಣ್ಣ ನೀಡಲೂ ಬಳಸಬಹುದು.
ನೇರವಾಗಿ ಇದು ಆರೋಗ್ಯಕಾರಿ ಪ್ರಯೋಜನವಲ್ಲದೇ ಇರಬಹುದು, ಆದರೆ ಇದನ್ನು ಕೂದಲಿಗೆ ಬಣ್ಣ ನೀಡುವ ಪ್ರಸಾದನವಾಗಿ ಬಳಸುವ ಮೂಲಕ ಹಾನಿಕಾರಕ ಕೃತಕ ಬಣ್ಣಗಳಿಂದ ರಕ್ಷಣೆ ಪಡೆಯಬಹುದು.
ಬೀಟ್ರೂಟ್ ಅನ್ನು ಹೇಗೆಲ್ಲಾ ಬಳಸಬಹುದು ಗೊತ್ತೆ?
ನಿಮ್ಮ ನಿತ್ಯದ ಕೂದಲಿಗೆ ಹಚ್ಚುವ ಎಣ್ಣೆ (ಉದಾಹರಣೆಗೆ ಕೊಬ್ಬರಿ ಎಣ್ಣೆ) ಮತ್ತು ಬೀಟ್ರೂಟ್ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ.
ಈ ದ್ರವವನ್ನು ಸ್ನಾನದ ಬಳಿಕ ಕೂದಲಿಗೆ ಸಾಕಷ್ಟು ಪ್ರಮಾಣದಲ್ಲಿ ಹಚ್ಚಿಕೊಳ್ಳಿ.
ಬಳಿಕ ಎಣ್ಣೆ ತೊಟ್ಟಿಕ್ಕುವುದನ್ನು ಸಂಗ್ರಹಿಸಲು ಪ್ಲಾಸ್ಟಿಕ್ಕಿನ ಟೊಪ್ಪಿಗೆಯನ್ನು ಧರಿಸಿ.
ಸುಮಾರು ಒಂದು ಘಂಟೆ ಹಾಗೇ ಬಿಡಿ.
ಬಳಿಕ ಬಟ್ಟೆಯಿಂದ ಒರೆಸಿಕೊಂಡು ಒಣಗಿಸಿಕೊಳ್ಳಿ.
ಬೀಟ್ರೂಟನ್ನು ನೀವೆಷ್ಟೇ ದ್ವೇಶಿಸಿದರೂ, ಇದರ ಗುಣಗಳನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ವಿಶೇಷವಾಗಿ ತೂಕ ಇಳಿಸುವ ನಿಟ್ಟಿನಲ್ಲಿ, ಮಲಬದ್ಧತೆ ನಿವಾರಿಸುವಲ್ಲಿ ಬೀಟ್ರೂಟ್ ಅತ್ಯುತ್ತಮ ಪರಿಹಾರ ನೀಡುತ್ತದೆ. ಆದರೆ ಈ ಗುಣಗಳೆಲ್ಲಾ ಇದನ್ನು ಬಳಸಿದ ವ್ಯಕ್ತಿಗಳು ಹೇಳಿದ ಹೇಳಿಕೆಗಳೇ ಹೊರತು ಇದನ್ನು ವಿಜ್ಞಾನ ಸಾಬೀತುಪಡಿಸಿಲ್ಲ. ಹಾಗಾಗಿ ಇದನ್ನು ಚಿಕಿತ್ಸೆಯ ರೂಪದಲ್ಲಿ ಬಳಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯಿರಿ. ಬೀಟ್ರೂಟ್ ರಸವು ಪ್ರಬಲವಾದ ಸಂಯುಕ್ತಗಳಿಂದ ತುಂಬಿದೆ ಮುಂದಿನ ವಿಭಾಗದಲ್ಲಿ, ನಾವು ಪೌಷ್ಠಿಕಾಂಶದ ವಿವರಗಳನ್ನು ನೋಡೋಣ:
ಬೀಟ್ರೂಟ್ ರಸ ಸಂಗ್ರಹಿಸುವುದು ಹೇಗೆ?
ಅಗತ್ಯವಿರುವ ಸಾಮಾಗ್ರಿಗಳು
- ಎರಡರಿಂದ ನಾಲ್ಕು ಮಧ್ಯಮ ಗಾತ್ರದ ಬೀಟ್ರೂಟುಗಳು. ಇದರ ಜುಟ್ಟಿನ ಭಾಗವೂ ಇರಲಿ.
- ಒಂದು ಪಾತ್ರೆ
- ಜ್ಯೂಸರ್
ಬೀಟ್ರೂಟುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಅಗತ್ಯವೆನಿಸಿದರೆ (ಮರಳು ಇದೆ ಎನಿಸಿದರೆ) ಇದನ್ನು ನಿವಾರಿಸುವ ಬ್ರಶ್ ಬಳಸಿ ತಿಕ್ಕಿ ಸ್ವಚ್ಛಗೊಳಿಸಿ. ಸಿಪ್ಪೆಯನ್ನು ತೆಳುವಾಗಿ ಹೆಚ್ಚಿ ಸುಲಿಯಿರಿ.
ಬೀಟ್ರೂಟನ್ನು ಚಿಕ್ಕ ತುಂಡುಗಳಾಗಿಸಿ, ಜುಟ್ಟಿನ ಸಹಿತ ಜ್ಯೂಸರಿನಲ್ಲಿ ಹಾಕಿ. ನಿಮಗೆ ಅನುಕೂಲವೆನಿಸಿದಷ್ಟು ಮಾತ್ರ ನೀರು ಬೆರೆಸಿ. ಜ್ಯೂಸರನ್ನು ಚೆನ್ನಾಗಿ ಗೊಟಾಯಿಸಿ. ಬಳಿಕ ಈ ರಸವನ್ನು ಪಾತ್ರೆಯಲ್ಲಿ ಸಂಗ್ರಹಿಸಿ.
ಈ ರಸವನ್ನು ತಣ್ಣಗಿದ್ದಂತೆಯೂ ಸೇವಿಸಬಹುದು. ಇದರ ರುಚಿ ಹಿಡಿಸದೇ ಇದ್ದರೆ ಜ್ಯೂಸ್ ಮಾಡುವಾಗ ಅರ್ಧ ಸೇಬನ್ನು ಸೇರಿಸಿ ಕೊಂಚ ಸಿಹಿಯಾಗಿಸಿಕೊಳ್ಳಬಹುದು.
ಈ ರಸದ ರುಚಿ ಕೊಂಚ ಒಗರಾಗಿದ್ದು ವಾಸನೆ ಮಣ್ಣಿನ ವಾಸನೆಯಂತಿರುತ್ತದೆ. ಹಾಗಾಗಿ ಕೊಂಚ ಲಿಂಬೆ ರಸವನ್ನು ಬೆರೆಸಬಹುದು. ಈ ರಸವನ್ನು ಬೀಟ್ರೂಟಿನ ತಿರುಳಿನೊಂದಿಗೇ ಸೇವಿಸಿ. ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರಿನಂಶವಿದ್ದು ಮಲಬದ್ಧತೆಯನ್ನು ಇಲ್ಲವಾಗಿಸುತ್ತದೆ.
ಬೀಟ್ರೂಟಿನ ಅಡ್ಡ ಪರಿಣಾಮಗಳು
ಅತಿಯಾದರೆ ಅಮೃತವೂ ವಿಷವಂತೆ. ಅಂತೆಯೇ ಬೀಟ್ರೂಟ್ ರಸದ ಸೇವನೆಯೂ ಮಿತಿಯಲ್ಲಿರಬೇಕು. ಇದರ ಸೇವನೆಯಿಂದಲೂ ಕೆಲವು ಅಡ್ಡಪರಿಣಾಮಗಳಿವೆ. ಬನ್ನಿ ನೋಡೋಣ:
• ಬೀಟ್ಯೂರಿಯಾ ಎದುರಾಗಬಹುದು
ಬೀಟ್ಯೂರಿಯಾ (Beeturia) ಎಂದರೆ ಮೂತ್ರದ ಬಣ್ಣ ಬದಲಾಗುವುದು. ಬೀಟ್ರೂಟಿನಲ್ಲಿರುವ ಬೀಟಾಸೈಯಾನಿನ್ ವರ್ಗಕ್ಕೆ ಸೇರಿದ ವರ್ಣದ್ರವ್ಯವೇ ಈ ಬಣ್ಣಕ್ಕೆ ಕಾರಣವಾಗಿದೆ. ಆದರೆ ಈ ಸ್ಥಿತಿಯಿಂದೇನೂ ತೊಂದರೆಯಿಲ್ಲ. ಮೂತ್ರದ ಬಣ್ಣ ಬದಲಾಗಿದ್ದರೆ ಇದು ರಕ್ತದ ಇರುವಿಕೆಯ ಅನುಮಾನವನ್ನು ಹುಟ್ಟಿಸುವುದರಿಂದ ಗಾಬರಿಯಾಗಬಹುದು ಅಷ್ಟೇ. ಆದರೆ, ನಿಜವಾಗಿಯೂ ಬೇರಾವುದೋ ತೊಂದರೆಯಿಂದ ಮೂತ್ರದ ಬಣ್ಣ ಬೇರಾವುದೋ ಬಣ್ಣ ಬರಬೇಕಾಗಿದ್ದರೆ (ಉದಾಹರಣೆಗೆ ರಕ್ತಹೀನತೆ ಇರುವ ವ್ಯಕ್ತಿಗಳಲ್ಲಿ) ಈ ಸಮಯದಲ್ಲಿ ಬೀಟ್ರೂಟ್ ಸೇವಿಸಿದ್ದರೆ ಆ ಬಣ್ಣ ಬರದೇ ಮೂತ್ರಪರೀಕ್ಷೆಯ ವಿವರಗಳು ಬೇರೆಯಾಗಿಯೇ ಬರಬಹುದು. ಇದು ವೈದ್ಯರಿಗೂ ಗೊಂದಲವುಂಟು ಮಾಡಬಹುದು. ಹಾಗಾಗಿ ಮೂತ್ರಪರೀಕ್ಷೆಯ ಸಮಯದಲ್ಲಿ ಬೀಟ್ರೂಟ್ ಸೇವನೆ ಬೇಡ. ಉಳಿದಂತೆ ಇದರ ಪ್ರಮಾಣ ಮಿತವಾಗಿದ್ದರೆ ಸಾಕು.
ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು
ಬೀಟ್ರೂಟಿನಲ್ಲಿರುವ ಆಕ್ಸಲೇಟುಗಳು ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಹಾಗಾಗಿ ಬೀಟ್ರೂಟ್ ರಸದ ಪ್ರಮಾಣ ಅತಿಯಾಗಿದ್ದರೆ ಇದು ಹೆಚ್ಚಿನ ಆಕ್ಸಲೇಟುಗಳ ಸಂಗ್ರಹಕ್ಕೆ ಕಾರಣವಾಗಬಹುದು ಹಾಗೂ ಇವು ಮೂತ್ರಪಿಂಡದಲ್ಲಿ ಈಗಾಗಲೇ ಇರುವ ಚಿಕ್ಕ ಕಲ್ಲುಗಳನ್ನು ದೊಡ್ಡದಾಗಿಸಬಹುದು. ಒಂದು ವೇಳೆ ನಿಮಗೆ ಹಿಂದೆ ಮೂತ್ರಪಿಂಡದಲ್ಲಿ ಕಲ್ಲುಗಳಾಗಿದ್ದರೆ ನಿಮಗೆ ಬೀಟ್ರೂಟ್ ಸೇವನೆ ಬೇಡ.
ರಕ್ತದೊತ್ತಡವನ್ನು ಅತಿ ಎನಿಸುವಷ್ಟು ಕಡಿಮೆಯಾಗಿಸಬಹುದು
ಅಧಿಕ ರಕ್ತದೊತ್ತಡಕ್ಕಿಂತಲೂ ಕಡಿಮೆ ರಕ್ತದೊತ್ತಡ ಹೆಚ್ಚು ಮಾರಕ! ಒಂದು ವೇಳೆ ನಿಮಗೆ ಈಗಾಗಲೇ ರಕ್ತದೊತ್ತಡದ ತೊಂದರೆ ಇದ್ದು ಇದಕ್ಕಾಗಿ ನೀವು ಔಷಧಿಗಳನ್ನು ಸೇವಿಸುತ್ತಿದ್ದರೆ, ಬೀಟ್ರೂಟ್ ಸೇವನೆ ಇದನ್ನು ಇನ್ನೂ ಕಡಿಮೆಯಾಗಿಸಿ ಅಪಾಯದ ಸಾಧ್ಯತೆ ಹೆಚ್ಚಿಸಬಹುದು. ಹಾಗಾಗಿ ಬೀಟ್ರೂಟ್ ಸೇವನೆಗೂ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ. ವೈದ್ಯರು ನಿಮ್ಮ ಆಹಾರಕ್ಕನುಗುಣವಾಗಿ ಔಷಧಿಗಳ ಪ್ರಮಾಣವನ್ನು ಬದಲಿಸಿ ನೀಡಬಲ್ಲರು.
ಇದೂ ತಿಳಿದಿರಲಿ
ಬೀಟ್ರೂಟ್ ಒಂದು ಅತ್ಯುತ್ತಮ ಆಹಾರ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಹಸಿಯಾಗಿಯೂ, ಬೇಯಿಸಿಯೂ, ಸಾಲಾಡ್ ರೂಪದಲ್ಲಿ, ದೋಸೆ ಪೂರಿಗಳಿಗೆ ಪಲ್ಯದ ರೂಪದಲ್ಲಿ ಮೊದಲಾದ ಬಗೆಯಲ್ಲಿ ಸೇವಿಸಬಹುದು. ಇದನ್ನು ನಿತ್ಯವೂ ಸೇವಿಸಬಹುದು. ಬೆಳಿಗ್ಗೆ, ಮದ್ಯಾಹ್ನ ಸಂಜೆ ರಾತ್ರಿ ಯಾವುದೇ ಸಮಯದಲ್ಲಿ ಸೇವಿಸಬಹುದು. ದೀರ್ಘಾವಧಿಯ ಸೇವನೆಯಲ್ಲಿ ಇದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಇದರ ಪ್ರಮಾಣ ಮಿತವಾಗಿರುವುದು ಮುಖ್ಯ. ಅಲ್ಲದೇ ಮೂತ್ರಪಿಂಡದ ತೊಂದರೆ ಇರುವವರಿಗೆ ಬೀಟ್ರೂಟ್ ಸಲ್ಲದು.