Just In
- 5 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 6 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 7 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 7 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2019: ಹೆಣ್ಣು ಮಕ್ಕಳಿಗಾಗಿ ಕೇಂದ್ರ-ರಾಜ್ಯ ಸರ್ಕಾರಗಳು ರೂಪಿಸಿರುವ ಯೋಜನೆಗಳು
ಹೆಣ್ಣು ಮಕ್ಕಳು ದೇಶದ ಭವಿಷ್ಯ. ಮುಂದೊಂದು ದಿನ ಭಾರತದ ಅಭಿವೃದ್ಧಿ ಹೊಂದಿದ ದೇಶವಾಗಬೇಕಿದ್ದರೆ ಅದಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಹೆಣ್ಣು ಮಕ್ಕಳ ಕೊಡುಗೆ ಅಗತ್ಯವಾಗಿದೆ. ಕೇವಲ ಮನೆಕೆಲಸಕ್ಕೆ ಸೀಮಿತಮಾಡಿದ್ದ ಹೆಣ್ಣು ಇಂದು ಬಾಹ್ಯಾಕಾಶ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಉದ್ಯಮ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಒತ್ತಿದ್ದಾಳೆ. ಆದರೆ ಅದೇನೆ ಆಗಲಿ ಭಾರತದಲ್ಲಿ ಇಂದಿಗೂ ಲಿಂಗ ಅಸಮಾನತೆ ಮಾತ್ರ ಕಾಡುತ್ತಿರುವ ಸಮಸ್ಯೆಯಾಗಿಯೇ ಉಳಿದಿದೆ.
ಈ ನಿಟ್ಟಿನಲ್ಲಿ ಭಾರತದಲ್ಲಿ ಹೆಣ್ಣು ಮಕ್ಕಳನ್ನು ಇನ್ನಷ್ಟು ಬಲಪಡಿಸಲು, ಸಬಲೀಕರಣ ಮಾಡಲು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ, ಜಾರಿಗೊಳಿಸುತ್ತಲೇ ಇದೆ. ಹೆಣ್ಣಿನ ರಕ್ಷಣೆ, ಶಿಕ್ಷಣ, ಸಬಲೀಕರಣ, ಹಕ್ಕಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ-ಯಾವ ಯೋಜನೆಗಳನ್ನು ಜಾರಿಗೊಳಿಸಿದೆ ಮುಂದೆ ತಿಳಿಯೋಣ.
ಹೆಣ್ಣು ಮಕ್ಕಳಿಗಾಗಿ ಇರುವ ಸರ್ಕಾರಿ ಯೋಜನೆಗಳಿವು:
1. ಬಾಲಿಕಾ ಸಮೃದ್ದಿ ಯೋಜನೆ
1997 ಆಗಸ್ಟ 15ರಂದು ಬಾಲಿಕಾ ಸಮೃದ್ಡಿ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಯೋಜನೆಯು ಆಗಸ್ಟ 15 1997ರ ನಂತರ ಬವತನ ರೇಖೆಗಿಂತ ಕೆಳವರ್ಗದ ಕುಟುಂಬಗಳಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಅನ್ವಯಿಸುತ್ತದೆ. ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಆರಂಭವಾದ ಈ ಯೋಜನೆಯು ಅವರನ್ನು ಶಾಲೆಗೆ ದಾಖಲಿಸುವುದು, ಕಡ್ಡಾಯ ಶಿಕ್ಷಣ ಕಲ್ಪಿಸುವುದು ಅಲ್ಲದೇ ಅವರು ಕಾನೂನಿನನ್ವಯ ವಿವಾಹದ ವಯಸ್ಸಿಗೆ ಬರುವವರೆಗೂ ಸಹಕಾರ ನೀಡುವ ಉದ್ದೇಶ ಈ ಯೋಜನೆಯದ್ದಾಗಿದೆ. ಒಂದು ಕುಟುಂಬದ ಒಂದು ಹೆಣ್ಣು ಮಗುವಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.
ಪ್ರಯೋಜನಗಳು
* ಜನನದ ಸಮಯದಲ್ಲಿ ಮಗುವಿನ ಖಾತೆಗೆ 500 ರೂಪಾಯಿ ಕೊಡುಗೆ ಮತ್ತು ಮಗು 10ನೇ ತರಗತಿ ಓದುವವರೆಗೂ ಪ್ರತಿ ವರ್ಷ ಶಾಲೆಯಲ್ಲಿ ನಿಗದಿತ ಹಣವನ್ನು ಠೇವಣಿ ಇಡಲಾಗುತ್ತದೆ.
* 3 ನೇ ತರಗತಿಯವರೆಗೆ ವರ್ಷಕ್ಕೆ 300 ರೂಪಾಯಿ
* 4 ನೇ ತರಗತಿಗೆ - ವರ್ಷಕ್ಕೆ 500 ರೂಪಾಯಿ
* 5 ನೇ ತರಗತಿಗೆ - ವರ್ಷಕ್ಕೆ 600 ರೂಪಾಯಿ
* 6 ಮತ್ತು 7 ನೇ ತರಗತಿಗೆ - ವರ್ಷಕ್ಕೆ 700 ರೂಪಾಯಿ
* 8 ನೇ ತರಗತಿಗೆ - ವರ್ಷಕ್ಕೆ 800 ರೂಪಾಯಿ
* 9 ಮತ್ತು 10 ನೇ ತರಗತಿಗೆ - 1000 ರೂಪಾಯಿ
2. ಬೇಟಿ ಬಚಾವೊ, ಬೇಟಿ ಪಡಾವೊ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ನಡೆಸುತ್ತಿರುವ ಮಹತ್ವದ ಯೋಜನೆ ಬೇಟಿ ಬಚಾವೊ, ಬೇಟಿ ಪಡಾವೊ. 2015ರ ಜನವರಿ 22ರಂದು ಆರಂಭವಾದ ಈ ಯೋಜನೆಯ ಪ್ರಮುಖ ಧ್ಯೇಯ ಕುಸಿತವಾಗುತ್ತಿರುವ ಹೆಣ್ಣು ಮಕ್ಕಳ ಲಿಂಗಾನುನುಪಾತ ಚಿತ್ರಣವನ್ನು ಬದಲಿಸುವುದೇ ಆಗಿದೆ.
ಪ್ರಯೋಜನಗಳು
* ಹೆಣ್ಣು ಮಕ್ಕಳ ಲಿಂಗಾನುನುಪಾತ ಕುಸಿತವಾಗುತ್ತಿರುವ 100 ಜಿಲ್ಲೆಗಳಲ್ಲಿ ಬಹು-ವಲಯ ಕ್ರಮಗಳ ಮೇಲೆ ಕೇಂದ್ರೀಕರಿಸಿದೆ.
* ಹೆಣ್ಣು ಶಿಶುಹತ್ಯೆಯನ್ನು ತಡೆಗಟ್ಟುವುದು ಮತ್ತು ಹೆಣ್ಣು ಮಗುವಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆಲಸ ಮಾಡುವ ಗುರಿ ಹೊಂದಿದೆ.
* ದೇಶಾದ್ಯಂತ ಬಾಲಕಿಯರ ಕಲ್ಯಾಣ ಸೇವೆಗಳ ದಕ್ಷತೆಯನ್ನು ಸುಧಾರಿಸುವುದು.
* ನಗರವಾರು ಪ್ರದೇಶಗಳಲ್ಲಿ ಜಿಲ್ಲೆಯ ಮಟ್ಟದ ಶಿಕ್ಷಣ ಅಧಿಕಾರಿಗಳು ತಮ್ಮ ಪ್ರದೇಶದ ಎಲ್ಲ ಹೆಣ್ಣು ಮಕ್ಕಳಿಗೂ ಉಚಿತ ಪ್ರಾಥಮಿಕ ಶಿಕ್ಷಣ ತಲುಪುವಂತೆ ನೋಡಿಕೊಳ್ಳಬೇಕು.
3. ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆಯು ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆಯ ಭಾಗವಾಗಿದೆ. ಹೆಣ್ಣು ಮಗುವಿನ ಪೋಷಕರು ತಮ್ಮ ಮಗುವಿನ ಭವಿಷ್ಯದ ಶಿಕ್ಷಣ ಮತ್ತು ವಿವಾಹ ವೆಚ್ಚಗಳಿಗಾಗಿ ತಮ್ಮ ಮಗುವಿಗೆ ನಿಧಿಯನ್ನು ಕೂಡಿಡಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಪೋಷಕರು ಮೊದಲೇ ಉಳಿಸಲು ಪ್ರಾರಂಭಿಸಬಹುದು ಮತ್ತು ಖಾತೆಯನ್ನು ಸಕ್ರಿಯಗೊಳಿಸಿದ ದಿನದಿಂದ 14 ವರ್ಷಗಳವರೆಗೆ ಖಾತೆ ಸಕ್ರಿಯವಾಗಿರುತ್ತದೆ. ಈ ಯೋಜನೆಯನ್ನು 2015ರ ಜನವರಿ 22 ರಂದು ಪ್ರಾರಂಭಿಸಲಾಯಿತು.
ಪ್ರಯೋಜನಗಳು
* ಈ ಯೋಜನೆ 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಅನ್ವಯ.
* ತೆರಿಗೆ ಪ್ರಯೋಜನಗಳನ್ನು ಮತ್ತು 9.1% ಬಡ್ಡಿದರವನ್ನು ಹೊಂದಿದೆ.
* ಕೇವಲ 1,000 ರೂಗಳೊಂದಿಗೆ ನೀವು ಖಾತೆಯನ್ನು ಪ್ರಾರಂಭಿಸಬಹುದು ಮತ್ತು ಗರಿಷ್ಠ ಠೇವಣಿ ವರ್ಷಕ್ಕೆ 1,50,000 ರೂಪಾಯಿ ವರೆಗೆ ಠೇವಣಿ ಇಡಬಹುದು.
4. ಮುಖಮಂತ್ರಿ ರಾಜಶ್ರೀ ಯೋಜನೆ
ರಾಜ್ಯದಲ್ಲಿ ಮಹಿಳಾ ಸಬಲೀಕರಣ ಮತ್ತು ಸಮಾನತೆಯ ಗುರಿಯನ್ನು ಹೊಂದಿರುವ ರಾಜಸ್ಥಾನ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿತು. ಇದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರವೇಶವನ್ನು ಕಲ್ಪಿಸಲು ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ.
ಪ್ರಯೋಜನಗಳು
* ಎಲ್ಲಾ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುವ ಮೂಲಕ ಶಿಕ್ಷಣ ನೀಡಲಾಗುವುದು.
* ಈ ಯೋಜನೆ ಎಲ್ಲಾ ಹೆಣ್ಣು ಮಕ್ಕಳಿಗೆ, ವಿಶೇಷವಾಗಿ ಬಡ ಮತ್ತು ಹಿಂದುಳಿದ ಕುಟುಂಬಗಳಿಗೆ ಸೇರಿದವರಿಗೆ ಅನ್ವಯಿಸುತ್ತದೆ.
* ಯೋಜನೆಯಡಿ ಪ್ರಾಥಮಿಕ ತರಗತಿಯಿಂದ ಉನ್ನತ ವ್ಯಾಸಂಗದವರೆಗೆ ಬಾಲಕಿಯರಿಗೆ ವಿದ್ಯಾರ್ಥಿವೇತನ ನೀಡಲಾಗುವುದು.
5. ಸಿಬಿಎಸ್ಇ ಉಡಾನ್ ಯೋಜನೆ
ಸಿಬಿಎಸ್ಇ ಉಡಾನ್ ಯೋಜನೆಯನ್ನು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದ ಮೂಲಕ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ನಿರ್ವಹಿಸುತ್ತದೆ. ಈ ಯೋಜನೆಯನ್ನು 2014ರಲ್ಲಿ ಪ್ರಾರಂಭಿಸಲಾಯಿತು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಹೆಣ್ಣು ಮಕ್ಕಳ ದಾಖಲಾತಿಯನ್ನು ಪ್ರತಿಷ್ಠಿತ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಹೆಚ್ಚಿಸುವ ಗುರಿಯನ್ನು ಯೋಜನೆ ಹೊಂದಿದೆ.
ಪ್ರಯೋಜನಗಳು
* ಸಿಬಿಎಸ್ಇ ಶಾಲೆಗಳಲ್ಲಿ 11 ಮತ್ತು 12 ನೇ ತರಗತಿಯಲ್ಲಿ ರಸಾಯನಶಾಸ್ತ್ರ, ಭೌತಶಾಸ್ತ್ರ ಅಥವಾ ಗಣಿತದ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಹೆಣ್ಣು ಮಕ್ಕಳಿಗೆ ಈ ಯೋಜನೆ ಅನ್ವಯವಾಗುತ್ತದೆ.
* 1000 ಆಯ್ದ ಬಾಲಕಿಯರಿಗೆ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಉಚಿತ ಆನ್ಲೈನ್ ಸಂಪನ್ಮೂಲಗಳನ್ನು ಒದಗಿಸುತ್ತದೆ.
6. ಪ್ರೌಢ ಶಿಕ್ಷಣಕ್ಕಾಗಿ ಬಾಲಕಿಯರಿಗೆ ಪ್ರೋತ್ಸಾಹ ಧನ ನೀಡುವ ರಾಷ್ಟ್ರೀಯ ಯೋಜನೆ
ಪ್ರೌಢ ಶಿಕ್ಷಣಕ್ಕಾಗಿ ಬಾಲಕಿಯರಿಗೆ ಪ್ರೋತ್ಸಾಹ ಧನ ನೀಡುವ ರಾಷ್ಟ್ರೀಯ ಯೋಜನೆಯನ್ನು ಮೇ 2008ರಂದು ಪ್ರಾರಂಭಿಸಲಾಯಿತು. ಈ ಯೋಜನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ವಹಿಸುತ್ತದೆ ಮತ್ತು ಇದು ವಿಶೇಷವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಹೆಣ್ಣು ಮಕ್ಕಳಿಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಗೆ ಅರ್ಹರಾಗಲು ಎಸ್ಸಿ / ಎಸ್ಟಿ ಯ ಎಲ್ಲ ಹೆಣ್ಣು ಮಕ್ಕಳು 8ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಅವರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
ಪ್ರಯೋಜನಗಳು
* ಅರ್ಹ ಬಾಲಕಿಯರಿಗೆ ರೂ .3,000 ನಿಗದಿಪಡಿಸಲಾಗಿದೆ ಮತ್ತು ಈ ಮೊತ್ತವನ್ನು ಅವರು 18 ವರ್ಷ ತಲುಪಿದಾಗ ಮತ್ತು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ಬಡ್ಡಿಯೊಂದಿಗೆ ಹಿಂಪಡೆಯಬಹುದು.
* ದ್ವಿತೀಯ ಹಂತದಲ್ಲಿ 14-18 ವರ್ಷದ ಬಾಲಕಿಯರ ದಾಖಲಾತಿಯನ್ನು ಉತ್ತೇಜಿಸುವುದು ಮತ್ತು ಅಂತಹ ಹೆಣ್ಣು ಮಕ್ಕಳಿಗೆ ಮಾಧ್ಯಮಿಕ ಶಿಕ್ಷಣವನ್ನು ಉತ್ತೇಜಿಸುವುದು.
7. ಬಂಗಾಳ ಕನ್ಯಾಶ್ರೀ ಪ್ರಕಾಲ್ಪಾ
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಹೆಣ್ಣುಮಕ್ಕಳ ಜೀವನ ಮತ್ತು ಸ್ಥಾನಮಾನವನ್ನು ಸುಧಾರಿಸಲು ಪಶ್ಚಿಮ ಬಂಗಾಳ ಸರ್ಕಾರ ಕೈಗೊಂಡ ಯೋಜನೆ ಇದಾಗಿದೆ. ಪೋಷಕರು ತಮ್ಮ ಹೆಣ್ಣುಮಕ್ಕಳ ಮದುವೆಯನ್ನು 18 ವರ್ಷಗಳ ಮೊದಲು ಕಡ್ಡಾಯವಾಗಿ ಮಾಡುವಂತಿಲ್ಲ. ಈ ಯೋಜನೆಯನ್ನು 2011ರಲ್ಲಿ ಪ್ರಾರಂಭಿಸಲಾಯಿತು
ಪ್ರಯೋಜನಗಳು
* ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳು, ವೃತ್ತಿಪರ ಅಥವಾ ತಾಂತ್ರಿಕ ತರಬೇತಿ ಪಡೆಯುತ್ತಿರುವ 8ರಿಂದ 12ನೇ ತರಗತಿಯ 13-18 ವರ್ಷ ವಯಸ್ಸಿನ ಅವಿವಾಹಿತ ಬಾಲಕಿಯರಿಗೆ ವಾರ್ಷಿಕ 500 ರೂಪಾಯಿ ಸಹಾಯಧನ.
* 18 ವರ್ಷದ ಅವಿವಾಹಿತ ಹೆಣ್ಣು ಮಕ್ಕಳು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ದಾಖಲಾತಿ ಅಥವಾ ವೃತ್ತಿಪರ ಕೋರ್ಸ್ ಗೆ ದಾಖಲಾತಿಯಾದರೆ 25 ಸಾವಿರ ರೂಪಾಯಿ ಹಣ ಸಹಾಯಧನ.
8. ಲಡ್ಲಿ ಲಕ್ಷ್ಮಿ ಯೋಜನೆ
ಮಧ್ಯಪ್ರದೇಶ ಸರ್ಕಾರದ ಲಡ್ಲಿ ಲಕ್ಷ್ಮಿ ಯೋಜನೆಯು ಜನವರಿ 1, 2006ರ ನಂತರ ಜನಿಸಿದ ಹೆಣ್ಣು ಮಕ್ಕಳಿಗೆ ಅನ್ವಯಿಸುತ್ತದೆ. ಆದಾಯ ತೆರಿಗೆ ಪಾವತಿಸದ ಕುಟುಂಬದ ಮಕ್ಕಳು ಮತ್ತು ಅನಾಥ ಹೆಣ್ಣು ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ. ಆದರೆ ಒಂದೇ ಕುಟುಂಬದಲ್ಲಿ ಎರಡು ಮಕ್ಕಳಿಗಿಂತ ಹೆಚ್ಚು ಇರಬಾರದು.
ಪ್ರಯೋಜನಗಳು
* ಮುಂದಿನ 4 ವರ್ಷಗಳವರೆಗೆ 6,000 ರೂಪಾಯಿಗಳ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವನ್ನು (ಎನ್ಎಸ್ಸಿ) ಪ್ರತಿ ವರ್ಷ ನೀಡಲಾಗುವುದು, ಇದು ಕಾಲಕಾಲಕ್ಕೆ ನವೀಕರಿಸಲ್ಪಡುತ್ತದೆ.
* 6ನೇ ತರಗತಿಯಲ್ಲಿ ಬಾಲಕಿಗೆ 2,000 ರೂಪಾಯಿ ಸಹಾಯಧನ
* 9ನೇ ತರಗತಿಯ ಬಾಲಕಿಗೆ 4,000 ರೂಪಾಯಿ ಸಹಾಯಧನ
* 11ನೇ ತರಗತಿಯ ಬಾಲಕಿಗೆ 7,500 ರೂಪಾಯಿ ಸಹಾಯಧನ
* ಬಾಲಕಿಯ ಉನ್ನತ ಮಾಧ್ಯಮಿಕ ಶಿಕ್ಷಣದ ಸಮಯದಲ್ಲಿ ತಿಂಗಳಿಗೆ 200 ರೂಪಾಯಿ ಸಹಾಯಧನ
* 21 ವರ್ಷಗಳು ಪೂರ್ಣಗೊಂಡ ನಂತರ ಬಾಲಕಿಗೆ ಉಳಿದ ಅಂದಾಜು 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಸ್ವೀಕರಿಸಬಹುದು.
9. ಶಿವಗಾಮಿ ಅಮ್ಮಯ್ಯರ್ ಸ್ಮಾರಕ ಬಾಲಕಿಯರ ಮಕ್ಕಳ ರಕ್ಷಣಾ ಯೋಜನೆ
ತಮಿಳುನಾಡು ಸರ್ಕಾರ ಜಾರಿಗೆ ತಂದಿರುವ ಶಿವಗಾಮಿ ಅಮ್ಮಯ್ಯರ್ ಸ್ಮಾರಕ ಬಾಲಕಿಯರ ಮಕ್ಕಳ ರಕ್ಷಣಾ ಯೋಜನೆ ಬಡ ಕುಟುಂಬದ ಹೆಣ್ಣುಮಕ್ಕಳಿಗೆ ಆರ್ಥಿಕ ನೆರವು ನೀಡಲು ಯೋಜನೆಯಾಗಿದೆ. ತಮಿಳುನಾಡಿದ ಸಮಾಜ ಕಲ್ಯಾಣ ಮತ್ತು ಪೌಷ್ಟಿಕ ಆಹಾರ ಕಾರ್ಯಕ್ರಮ ಇಲಾಖೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಹೆಣ್ಣು ಶಿಶುಹತ್ಯೆಯನ್ನು ತೊಡೆದುಹಾಕುವುದು ಮತ್ತು ಬಡ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಕಲ್ಯಾಣವನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪ್ರಯೋಜನಗಳು
* ಒಂದೇ ಹೆಣ್ಣು ಮಗುವನ್ನು ಹೊಂದಿರುವ ಕುಟುಂಬಕ್ಕೆ ಹೆಣ್ಣು ಮಗುವಿನ ಹೆಸರಿನಲ್ಲಿ 22,200 ರೂಪಾಯಿ ಸಹಾಯಧನ.
* ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಪ್ರತಿ ಹೆಣ್ಣು ಮಗುವಿಗೆ 15,200 ರೂಪಾಯಿ ಸಹಾಯಧನ.