For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಏಕತಾ ದಿನಾಚರಣೆ: ನೀವು ತಿಳಿಯಲೇಬೇಕಾದ ಸಂಗತಿಗಳು

|

ದೇಶದ ಮೊದಲ ಗೃಹ ಸಚಿವರಾಗಿದ್ದಂತಹ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರು ಭಾರತದ ಏಕತೆಗಾಗಿ ಶ್ರಮಿಸಿದವರು. ಸ್ವಾತಂತ್ರ್ಯ ಸಿಕ್ಕಿದ ಮೇಲೂ ಕೆಲವೊಂದು ಭೂ ಪ್ರದೇಶಗಳು ರಾಜರ ಮತ್ತು ವಿದೇಶಿಗರ ವಶದಲ್ಲಿದ್ದವು. ಇದನ್ನು ವಶಪಡಿಸಿಕೊಂಡು ಭವ್ಯ ಭಾರತ ನಿರ್ಮಾಣಕ್ಕೆ ಕಾರಣರಾದವರು ಪಟೇಲ್ ಅವರು. ಪಟೇಲ್ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಇಂದು ಪಟೇಲ್ ಅವರ 144ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಉಕ್ಕಿನ ಮನುಷ್ಯನೆಂದು ಕರೆಯಲ್ಪಡುವ ಸರ್ದಾರ್ ಅವರು ಭಾರತ ಗಣರಾಜ್ಯವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

Rashtriya Ekta Dina

ರಾಷ್ಟ್ರೀಯ ಏಕತಾ ದಿನದ ಇತಿಹಾಸ

2014ರಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಏಕತಾ ದಿನವನ್ನು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮದಿನದಂದು ಆಚರಣೆಗೆ ತರಲಾಯಿತು. ದೇಶಕ್ಕಾಗಿ ಅವರು ನೀಡಿರುವ ಅದ್ಭುತ ಸೇವೆಗಾಗಿ ಅವರನ್ನು ಗೌರವಿಸಲಾಗುತ್ತಿದೆ ಮತ್ತು ಅವರು ಭಾರತದ ಏಕೀಕರಣಕ್ಕಾಗಿ ಕಠಿಣವಾಗಿ ದುಡಿದಿರುವರು.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಿಗೆ ಗೌರವ ಸೂಚಕವಾಗಿ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಿದರು. ಈ ವೇಳೆ ಅವರು ಪಟೇಲ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದ್ದರು ಮತ್ತು ಇದೇ ವೇಳೆ ನವದೆಹಲಿಯಲ್ಲಿ "ಏಕತೆಗಾಗಿ ಓಟ'' ಆರಂಭಿಸಿದ್ದರು. ಏಕತೆಗಾಗಿ ಓಟವು ಪಟೇಲ್ ಅವರು ಭಾರತದ ಇತಿಹಾಸಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಆಯೋಜಿಸಲಾಗಿತ್ತು.

ರಾಷ್ಟ್ರೀಯ ಏಕತಾ ದಿನ ಆಚರಣೆ

ಗೃಹ ಸಚಿವಾಲಯದ ಪ್ರಕಾರ ಈ ವರ್ಷ ಏಕತಾ ದಿನಾಚರಣೆಯ ಅಂಗವಾಗಿ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಏಕತಾ ದಿನವನ್ನು ತುಂಬಾ ಸಂಭ್ರಮದಿಂದ ಆಚರಣೆ ಮಾಡುವಂತಹ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವರು. ಜಮ್ಮುಕಾಶ್ಮೀರದಲ್ಲಿನ 370ನೇ ವಿಧಿಯನ್ನು ತೆಗೆದುಹಾಕುವುದು ಸರ್ದಾರ್ ಅವರ ಕನಸಾಗಿತ್ತು. ಅದನ್ನು ಈ ವರ್ಷ ಈಡೇರಿಸಿರುವ ಕಾರಣ ಈ ಸಲದ ಸಂಭ್ರಮಾಚರಣೆಗೆ ಮತ್ತಷ್ಟು ಮೆರಗು ಬಂದಿದೆ.

ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜೀವನದ ಕೆಲವು ವಿಚಾರಗಳು

• ಸರ್ದಾರ್ ವಲ್ಲಭಭಾಯ್ ಪಟೇಲ್ ಪೂರ್ಣನಾಮ ವಲ್ಲಭಭಾಯ್ ಜವೇರಭಾಯ್ ಪಟೇಲ್.

• ಅಕ್ಟೋಬರ್ 31, 1875ರಲ್ಲಿ ಗುಜರಾತ್ ನ ನಾಡಿಯಾಡ್ ನಲ್ಲಿ ಜನಿಸಿದರು ಮತ್ತು 1950 ಡಿಸೆಂಬರ್ 15ರಂದು ಬಾಂಬೆಯಲ್ಲಿ ನಿಧನರಾದರು.

• ಸ್ವಾತಂತ್ರ್ಯ ಬಳಿಕ ಮೊದಲ ಮೂರು ವರ್ಷಗಳ ಕಾಲ ಅವರು ಉಪ ಪ್ರಧಾನಿ, ಗೃಹ ಸಚಿವ, ಮಾಹಿತಿ ಮತ್ತು ರಾಜ್ಯಗಳ ಸಚಿವಾಲಯದ ಸಚಿವರಾಗಿ ಕಾರ್ಯನಿರ್ವಹಿಸಿದರು.

• ಕರಮ್ ಸಾದ್ ನಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಪೆಟ್ಲಾಡ್ ನಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದರು.

• 16ನೇ ವಯಸ್ಸಿನಲ್ಲಿ ಅವರಿಗೆ ಮದುವೆಯಾಗಿತ್ತು ಮತ್ತು 22ನೇ ವಯಸ್ಸಿಗೆ ಅವರು ಮೆಟ್ರಿಕ್ಯುಲೇಟ್ ಮಾಡಿದ್ದರು ಮತ್ತು ಜಿಲ್ಲಾ ನ್ಯಾಯವಾದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದರಿಂದಾಗಿ ಅವರು ಕಾನೂನು ಅಭ್ಯಾಸ ಮಾಡುವಂತಾಗಿತ್ತು.

• 1900ರಲ್ಲಿ ಗೋದ್ರಾದಲ್ಲಿ ಅವರು ಸ್ವತಂತ್ರ ಜಿಲ್ಲಾ ನ್ಯಾಯವಾದಿ ಕಚೇರಿಯನ್ನು ಸ್ಥಾಪಿಸಿದರು.

• 1910ರಲ್ಲಿ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ ಗೆ ತೆರಳಿದರು.

• 1913ರಲ್ಲಿ ಅವರು ಭಾರತಕ್ಕೆ ಮರಳಿ ಅಹ್ಮದಾಬಾದ್ ನಲ್ಲಿ ನೆಲೆಸಿ. ಅಹ್ಮದಾಬಾದ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಕಾನೂನಿನ ಬ್ಯಾರಿಸ್ಟರ್ ಆಗಿದ್ದರು.

• 1917-1924ರ ತನಕ ಪಟೇಲ್ ಅವರು ಅಹ್ಮದಾಬಾದ್ ನಲ್ಲಿ ಭಾರತದ ಮೊದಲ ಪಾಲಿಕೆ ಕಮಿಷನರ್ ಆಗಿ ಕಾರ್ಯನಿರ್ವಹಿಸಿದರು ಮತ್ತು 1924-1928ರ ತನಕ ಅವರು ಪಾಲಿಕೆಯ ಅಧ್ಯಕ್ಷರಾದರು.

• ಭಾರೀ ಮಳೆಯಿಂದಾಗಿ ಬೆಳೆಗೆ ಹಾನಿ ಆಗಿದ್ದರೂ ಆಗಿನ ಬಾಂಬೆ ಸರ್ಕಾರವು ಸಂಪೂರ್ಣ ವಾರ್ಷಿಕ ಕರ ಸಂಗ್ರಹಿಸುವುದನ್ನು ವಿರೋಧಿಸಿ 1918ರಲ್ಲಿ ಸರ್ದಾರ್ ಅವರು ಗುಜರಾತ್ ನ ಕೈರಾದ ರೈತರು ಮತ್ತು ಭೂಮಾಲೀಕರ ಬೃಹತ್ ಚಳವಳಿಯ ಮುಂದಾಳತ್ವ ವಹಿಸಿದರು.

• 1928ರಲ್ಲಿ ಅವರು ಬರ್ಡೊಲಿ ಚಳವಳಿಯನ್ನು ಯಶಸ್ವಿಯಾಗಿ ಆಯೋಜಿಸಿದರು ಮತ್ತು ಅವರಿಗೆ ಜನರು "ಸರ್ದಾರ್'' ಎಂದು ಬಿರುದು ನೀಡಿದರು. ಸರ್ದಾರ್ ಅರ್ಥ ನಾಯಕ ಎಂದಾಗಿದೆ.

• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಲಾಹೋರ್ ಅಧಿವೇಶನಕ್ಕೆ ಮಹಾತ್ಮ ಗಾಂಧೀಜಿ ಅವರ ಬಳಿಕ ಅಧ್ಯಕ್ಷರಾಗಲು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಎರಡನೇ ಅಭ್ಯರ್ಥಿಯಾಗಿದ್ದರು.

• 1931ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕರಾಚಿ ಅಧಿವೇಶನದಲ್ಲಿ ಅವರು ಅಧ್ಯಕ್ಷರಾದರು.

• ಪಟೇಲ್ ಅವರು ಜಾವೇರಿಭಾಯಿ ದಜಿಭಾಯ್ ಪಟೇಲ್ ಹೈಸ್ಕೂಲ್ (ಈಗ ಎಡ್ವರ್ಡ್ ಸ್ಮಾರಕ ಹೈಸ್ಕೂಲ್ ಬೊರಸದ್)ನ ಸ್ಥಾಪಕ ಹಾಗೂ ಮೊದಲ ಕಾರ್ಯಾಧ್ಯಕ್ಷರಾಗಿದ್ದರು.

• ಭಾರತದ ಏಕೀಕರಣಕ್ಕಾಗಿ ಅವರು ತುಂಬಾ ಶ್ರಮಿಸಿದರು. ಶ್ರೇಷ್ಠ ಭಾರತ ನಿರ್ಮಾಣಕ್ಕಾಗಿ ಜತೆಯಾಗಿ ಬದುಕುವಂತೆ ಅವರು ಜನರಿಗೆ ಕರೆ ನೀಡಿದ್ದರು.

• ಮೊದಲ ಗೃಹ ಸಚಿವ ಹಾಗೂ ಉಪಪ್ರಧಾನಿಯಾಗಿದ್ದ ಅವರು ರಾಜರ ವಶದಲ್ಲಿದ್ದ ಕೆಲವೊಂದು ರಾಜ್ಯಗಳನ್ನು ದೇಶಕ್ಕೆ ಸೇರ್ಪಡೆ ಮಾಡಿದ್ದರು.

English summary

Rashtriya Ekta Dina 2019: All you need to know

Rashtriya Ekta Diwas or National Unity Day commemorates the birth anniversary of Sardar Vallabhbhai Patel. In 2019, the 144th birth anniversary of Sardar Vallabhbhai Patel is celebrated. He played an important role in uniting India. He is also famous as an Iron Man of India and one of the founding leaders of the Republic of India.
X
Desktop Bottom Promotion