Just In
Don't Miss
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿನ ಪೂರ್ತಿ ತ್ವಚೆ ಕಾಂತಿಯಿಂದ ಹೊಳೆಯುತ್ತಲೇ ಇರಬೇಕೆಂದರೆ, ತಪ್ಪದೇ ಈ ಟ್ರಿಕ್ಸ್ ಅನುಸರಿಸಿ
ನಮ್ಮಲ್ಲಿ ಹೆಚ್ಚಿನ ಯುವತಿಯರು ಮನೆಯಿಂದ ಹೊರ ಹೊರಟ ಬಳಿಕ ಹಿಂದಿರುಗುವವರೆಗೂ ತ್ವಚೆ ಕೋಮಲ ಮತ್ತು ತಾಜಾತನವನ್ನು ಉಳಿಸಿಕೊಳ್ಳಬೇಕು ಹಾಗೂ ನಮ್ಮ ಕೂದಲು ಮುಂಜಾನೆಯಷ್ಟೇ ಕಾಂತಿಯುಕ್ತ ಮತ್ತು ಹೊಳಪುಳ್ಳದ್ದಾಗಿಯೇ ಇರಬೇಕೆಂದು ಬಯಸುತ್ತೇವೆ. ಆದರೆ ಪ್ರಖರ ಬಿಸಿಲು, ಪ್ರದೂಷಣೆ, ಕಾಲೇಜಿನ ಅಥವಾ ಕಛೇರಿಯ ಕೆಲಸದ ಒತ್ತಡ ಮೊದಲಾದವುಗಳ ನಡುವೆ ಈ ಬಯಕೆಯನ್ನು ಸಾಧಿಸುವುದು ಕಷ್ಟಸಾಧ್ಯವೆಂದು ಅನುಭವಿಸಿದವರಿಗಷ್ಟೇ ಗೊತ್ತು. ಆದರೆ ಕಷ್ಟಸಾಧ್ಯವಾದರೂ ಇದು ಅಸಾಧ್ಯವೇನಲ್ಲ. ಇದಕ್ಕಾಗಿ ನಿಮ್ಮ ಮುಂಜಾನೆಯ ಸೌಂದರ್ಯ ಕಾಳಜಿಯ ಕ್ರಮಗಳು ಕೊಂಚ ಬದಲಾಗಬೇಕಷ್ಟೇ. ಬನ್ನಿ, ಇಡಿಯ ದಿನ ತ್ವಚೆ ಕಾಂತಿಯಿಂದ ಹೊಳೆಹೊಳೆಯುತ್ತಲೇ ಇರಬೇಕಾದರೆ ದಿನವೂ ಏನು ಮಾಡಬೇಕೆಂದು ನೋಡೋಣ:
ಲಿಂಬೆರಸ ಮತ್ತು ಜೇನು
ದೇಹದಿಂದ ಕಲ್ಮಶಗಳನ್ನು ನಿವಾರಿಸಲು ಇದೊಂದು ಅಧ್ಬುತ ಕ್ರಮವೂ ಆಗಿದ್ದು ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ನೆರವಾಗುವ ವಿಧಾನವೂ ಆಗಿದೆ. ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಿಕ್ಕ ಚಮಚ ಜೇನು ಮತ್ತು ಚಿಕ್ಕ ಲಿಂಬೆಯೊಂದರ ರಸವನ್ನು ಬೆರೆಸಿ ಸೇವಿಸುವುದು ನಿಮ್ಮ ದಿನದ ಪ್ರಾರಂಭವನ್ನು ಅತ್ಯಂತ ಚೈತನ್ಯದಿಂದ ನಡೆಸಲು ಸಾಧ್ಯವಾಗುತ್ತದೆ. ಅಲ್ಲದೇ ತ್ವಚೆಗೆ ಅಗತ್ಯವಾದ ಆರ್ದ್ರತೆಯೂ ಲಭಿಸುವ ಮೂಲಕ ಇಡಿಯ ದಿನ ತಾಜಾತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಲಿಂಬೆಯಲ್ಲಿರುವ ವಿಟಮಿನ್ ಸಿ ಇದಕ್ಕೆಲ್ಲಾ ಕಾರಣವಾಗಿದ್ದು ನಿಮ್ಮ ಮುಖದ ಕಾಂತಿ ದಿನವಿಡೀ ಬೆಳಗುತ್ತಿರಲು ನೆರವಾಗುತ್ತದೆ.
ಐಸ್ ಪ್ಯಾಕ್
ಮುಂಜಾನೆ ನಿಮ್ಮ ಮುಖದ ತ್ವಚೆಗೆ ಮಂಜುಗಡ್ಡೆಯ ಆರೈಕೆ ನೀಡುವುದೂ ಒಂದು ಉತ್ತಮ ಅಭ್ಯಾಸವಾಗಿದ್ದು ಈ ಮೂಲಕ ಚರ್ಮದಲ್ಲಿ ಕಾಣಿಸಿಕೊಳ್ಳುವ ಉಬ್ಬುವಿಕೆಯನ್ನು ಇಲ್ಲವಾಗಿಸಬಹುದು. ಮುಂಜಾನೆಯ ಹೊತ್ತಿನಲ್ಲಿ ಮಂಜುಗಡ್ಡೆಯ ತುಂಡೊಂದರಿಂದ ವೃತ್ತಾಕಾರದಲ್ಲಿ ಹೆಚ್ಚಿನ ಒತ್ತಡವಿಲ್ಲದೇ ಮುಖದ ತ್ವಚೆಯನ್ನು ಒರೆಸಿಕೊಳ್ಳಬೇಕು. ಇದರಿಂದ ತ್ವಚೆ ಸಹಜವರ್ಣದಿಂದ ಕಂಗೊಳಿಸುತ್ತದೆ ಹಾಗೂ ರಾತ್ರಿಯ ಸಮಯದಲ್ಲಿ ಅಗಲವಾಗಿ ತೆರೆದಿದ್ದ ಚರ್ಮದ ಸೂಕ್ಷ್ಮ್ಜರಂಧ್ರಗಳು ಕಿರಿದಾಗುವ ಮೂಲಕ ಕಲ್ಮಶಗಳು ಒಳಹೋಗದಂತೆ ತಡೆದು ತಾಜಾತನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
Most Read: ಕೂದಲಿನ ಎಲ್ಲಾ ಸಮಸ್ಯೆಗೂ- ಸೀಗೆಕಾಯಿ ಪರ್ಫೆಕ್ಟ್ ಮನೆಮದ್ದು!
ವ್ಯಾಯಾಮದ ಮೂಲಕ ಲಭಿಸುವ ಸೌಂದರ್ಯ
ವ್ಯಾಮಾಯದ ಮೂಲಕ ಚರ್ಮದಿಂದ ಹೊರಹರಿಯುವ ಬೆವರು ತನ್ನೊಂದಿಗೆ ಚರ್ಮದ ಅಡಿಯಲ್ಲಿದ್ದ ಕಲ್ಮಶಗಳನ್ನೂ ಕೊಂಡೊಯ್ಯುತ್ತದೆ. ಹಾಗಾಗಿ ಮುಂಜಾನೆಯ ಲಘು ವ್ಯಾಯಾಮದ ಮೂಲಕವೂ ಬೆವರು ಹರಿಸಿ ಈ ಕಲ್ಮಶಗಳನ್ನು ನಿವಾರಿಸಿಕೊಳ್ಳುವುದು ಉತ್ತಮ ಅಭ್ಯಾಸವಾಗಿದೆ. ನಿಮ್ಮ ಮನೆಯ ಅಕ್ಕಪಕ್ಕದ ಉದ್ಯಾನ ಅಥವಾ ರಸ್ತೆಯಲ್ಲಿಯೇ ಕೊಂಚ ಹೊತ್ತು ನಿಧಾನವಾದ ಓಟದ ಮೂಲಕ ಹಾಗೂ ಕೊಂಚ ಕಾಲ ಲಘು ವ್ಯಾಯಾಮಗಳನ್ನು ನಿರ್ವಹಿಸುವ ಮೂಲಕ ಕೇವಲ ನಿಮ್ಮ ದೈಹಿಕ ಆರೋಗ್ಯ ಮಾತ್ರವಲ್ಲ, ತ್ವಚೆಯ ಸೌಂದರ್ಯವೂ ಅಧ್ಬುತ ಎನಿಸುವಷ್ಟು ಬೆಳಗುತ್ತದೆ.
ಉಗುರುಬೆಚ್ಚನೆಯ ನೀರಿನ ಸ್ನಾನ
ವ್ಯಾಯಾಮದ ಬಳಿಕ ಕೊಂಚ ವಿಶ್ರಾಂತಿ ಪಡೆದು ಉಗುರುಬೆಚ್ಚನೆಯ ನೀರಿನಿಂದ ಮಾಡಿಕೊಂಡ ಸ್ನಾನ ನಿಮ್ಮ ಇಡಿಯ ದಿನವನ್ನು ಚೈತನ್ಯಕರವಾಗಿರಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ನಿಮ್ಮದು ಎಣ್ಣೆಯುಕ್ತ ತ್ವಚೆಯಾಗಿದ್ದರೆ ಸ್ನಾನಕ್ಕೆ ಜೆಲ್ ಆಧಾರಿತ ಫೇಸ್ ಸೋಪ್ ಉಪಯೋಗಿಸಿ. ಒಂದು ವೇಳೆ ನಿಮ್ಮದು ಒಣಚರ್ಮವಾಗಿದ್ದರೆ ಸೌಮ್ಯವಾದ ತೇವಕಾರಕ ಅಂಶವಿರುವ (ಮಾಯಿಶ್ಚರೈಸಿಂಗ್) ಸೋಪನ್ನು ಉಪಯೋಗಿಸಿ. ಉಗುರುಬೆಚ್ಚನೆಯ ನೀರು ಬೆವರು ಮತ್ತು ಪ್ರದೂಷಣೆಯಿಂದ ತ್ವಚೆಯಲ್ಲಿ ಹುದುಗಿದ್ದ ಕೊಳೆ ಮತ್ತು ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಸ್ವಚ್ಛಗೊಳಿಸುತ್ತದೆ. ಅಲ್ಲದೇ ಬೆಚ್ಚನೆಯ ನೀರಿನ ಹಿತ ದಿನವಿಡೀ ಉಲ್ಲಾಸದಿಂದಿರಲು ಮತ್ತು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲು ನೆರವಾಗುತ್ತದೆ.
ನೈಸರ್ಗಿಕ ಮುಖಲೇಪ ಮತ್ತು ಟೋನರ್ಗಳು
ನಿಮ್ಮ ಸ್ನಾನಕ್ಕೂ ಸುಮಾರು ಐದು ನಿಮಿಷಗಳ ಮುನ್ನ ಮುಖದ ತ್ವಚೆಗೆ ಪಪ್ಪಾಯಿ ಹಣ್ಣಿನ ತಿರುಳನ್ನು ಅಥವಾ ಟೊಮಾಟೋ ಮತ್ತು ಹಾಲನ್ನು ಬೆರೆಸಿ ಹಚ್ಚಿಕೊಂಡು ಬಳಿಕವೇ ಸ್ನಾನ ಮಾಡುವ ಮೂಲಕ ಆರೋಗ್ಯಕರ ಮತ್ತು ಕಾಂತಿಯುಕ್ತ ತ್ವಚೆ ಪಡೆಯಲು ಸಾಧ್ಯವಾಗುತ್ತದೆ. ಈ ವಿಧಾನ ತೇವಕಾರಕ ಮಾತ್ರವಲ್ಲ ತ್ವಚೆಗೆ ಅಗತ್ಯವಿರುವ ಟೋನರ್ ನಂತೆಯೂ ಕಾರ್ಯನಿರ್ವಹಿಸಿ ಮುಖದ ಕಾಂತಿ ಹೆಚ್ಚು ಹೊತ್ತು ಉಳಿಸಿಕೊಳ್ಳಲು ನೆರವಾಗುತ್ತದೆ.
ತೇವಕಾರಕ ಹಚ್ಚಿಕೊಳ್ಳುವುದು ಕಡ್ಡಾಯ
ಮನೆಯಿಂದ ಹೊರ ಹೊರಡುವ ಮುನ್ನ ತೇವಕಾರಕ ಅಥವಾ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳುವುದು ಕಡ್ಡಾಯವಾಗಿದೆ. ಏಕೆಂದರೆ ಆರ್ದ್ರತೆಯ ಕೊರತೆಯಿಂದ ತ್ವಚೆ ಒಣಗುತ್ತದೆ ಹಾಗೂ ಹೊರಪದರ ಪಕಳೆಯೇಳುತ್ತದೆ. ತ್ವಚೆ ಒಣಗುವಿಕೆ ಹೆಚ್ಚೂ ಕಡಿಮೆಯಾಗಿ ನೆರಿಗೆಗಳು ಸುಲಭವಾಗಿ ಮೂಡುತ್ತವೆ ಹಾಗೂ ದೀರ್ಘಾವಧಿಯಲ್ಲಿ ಈ ನೆರಿಗೆಗಳು ಹೆಚ್ಚು ಸ್ಪಷ್ಟ ಮತ್ತು ಆಳವಾಗುತ್ತಾ ಹೋಗುತ್ತವೆ. ಹಾಗಾಗಿ ನಿತ್ಯವೂ ತ್ವಚೆಗೆ, ವಿಶೇಷವಾಗಿ ಗಾಳಿಗೆ ಒಡ್ಡುವ ತ್ವಚೆಗೆ ತೇವಕಾರಕ ಹಚ್ಚಿಕೊಳ್ಳುವ ಮೂಲಕ ಇಡಿಯ ದಿನ ಚರ್ಮ ಒಣಗದಂತೆ ಕಾಪಾಡಲು ಸಾಧ್ಯವಾಗುತ್ತದೆ.
ಆರೋಗ್ಯಕರ ಉಪಾಹಾರ
ನಮ್ಮ ದಿನದ ಎಲ್ಲಾ ಆಹಾರಗಳಲ್ಲಿ ಉಪಾಹಾರ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ 'ರಾಜನಂತೆ ಉಪಾಹಾರ ಸೇವಿಸು' ಎಂಬ ನಾಣ್ಣುಡಿ ಪ್ರಚಲಿತವಾಗಿದೆ. ನಿಮ್ಮ ಉಪಾಹಾರ ಉತ್ತಮ ಪ್ರಮಾಣ ಹಾಗೂ ಸಾಕಷ್ಟು ಪೌಷ್ಟಿಕವಾಗಿರುವುದು ಅಗತ್ಯ. ಇದಕ್ಕಾಗಿ ಮೊಟ್ಟೆ ಅತ್ಯುತ್ತಮ ಆಯ್ಕೆಯಾಗಿದೆ ಹಾಗೂ ಇವುಗಳ ಸೇವನೆಯಿಂದ ಉತ್ತಮ ಪ್ರಮಾಣದ ಪ್ರೋಟೀನ್ ಲಭಿಸುತ್ತದೆ. ಇದರ ಜೊತೆಗೇ ಕೊಂಚ ಕಿತ್ತಳೆ ಅಥವಾ ಇತರ ಸಿಟ್ರಸ್ ಜಾತಿಯ ಹಣ್ಣುಗಳನ್ನು ಸೇವಿಸುವುದರಿಂದ ತ್ವಚೆ ಮತ್ತು ಕಣ್ಣುಗಳಿಗೆ ಹೆಚ್ಚಿನ ಪೋಷಣೆ ಒದಗುತ್ತದೆ. ಅಲ್ಲದೇ ಈ ಆಹಾರ ದಿನವಿಡೀ ನಿಮ್ಮ ಚಟುವಟಿಕೆಗಳಿಗೆ ಶಕ್ತಿಯನ್ನು ಒದಗಿಸಲೂ ಸಮರ್ಥವಾಗಿದೆ.
Most Read: ಕಾಂತಿಯುಕ್ತ, ಪ್ರಜ್ವಲಿಸುವ ತ್ವಚೆಗಾಗಿ ಸಂಪೂರ್ಣ ನೈಸರ್ಗಿಕ ಆರೈಕೆಯ ಗುಟ್ಟು
ಸನ್ ಸ್ಕ್ರೀನ್ ಇಲ್ಲದೇ ಹೋಗಬೇಡಿ
ಸೌಂದರ್ಯ ರಕ್ಷಣೆಯೂ ಇನ್ನೊಂದು ಕ್ರಮವಾಗಿದ್ದು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮುನ್ನ ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ಪ್ರಸಾದಹವನ್ನು ದಿನವಿಡೀ ಹಚ್ಚಿಕೊಂಡಿರುವುದು ಅಗತ್ಯವಾಗಿದೆ. ಈ ಮೂಲಕ ಸೂರ್ಯನ ಅತಿನೇರಳೆ ಕಿರಣಗಳು ನಿಮ್ಮ ತ್ವಚೆಗೆ ಘಾಸಿಯಾಗುವುದನ್ನು ತಡೆಗಟ್ಟಬಹುದು ಹಾಗೂ ತ್ವಚೆಯ ಆರೋಗ್ಯವನ್ನು ಉಳಿಸಿಕೊಳ್ಳಬಹುದು. ಯುವತಿಯರೇ, ನಿಮ್ಮ ನಿಜವಾದ ಸೌಂದರ್ಯ ನಿಮ್ಮ ಆರೋಗ್ಯಕರವಾದ ನೈಸರ್ಗಿಕ ತ್ವಚೆಯನ್ನೇ ಅವಲಂಬಿಸಿದೆ. ಹಾಗಾಗಿ ಈ ಎಲ್ಲಾ ಕ್ರಮಗಳನ್ನು ಪ್ರತಿದಿನವೂ ಅನುಸರಿಸುವುದನ್ನು ಮರೆಯದಿರಿ.