ಮಳೆಗಾಲದಲ್ಲಿ ಜೀರ್ಣಶಕ್ತಿ ವರ್ಧಿಸುವ ಆಹಾರ

By * ವೆಂಕಟರಮಣ ಬಿಎಸ್, ಮೈಸೂರು

Healthy food during monsoon
ಬೇಸಿಗೆ ಬೇಗೆಯಿಂದ ಬಸವಳಿದ ಮನಗಳಿಗೆ ತಂಪೆರೆಯುವ ಮುಂಗಾರು ಮಳೆ ನೂರೆಂಟು ರೋಗಗಳ ಬಳುವಳಿಯನ್ನೂ ನೀಡುತ್ತದೆ. ಮಳೆಗಾಲದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಅಗತ್ಯ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದರೆ ಅನೇಕ ಸಾಂಕ್ರಾಮಿಕ ರೋಗಳಿಗೆ ತುತ್ತಾಗಬೇಕಾಗುತ್ತದೆ.

ವೈರಲ್ ಜ್ವರ, ಮಲೇರಿಯಾ, ಕಾಲರಾ, ಡೆಂಗ್ಯೂ, ಚಿಕೂನ್ ಗುನ್ಯಾದಂಥ ರೋಗಗಳು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತವೆ. ಇದೆಲ್ಲದಕ್ಕೂ ನೀರೇ ಮೂಲ ಕಾರಣ ಎಂಬುದನ್ನು ಗಮನದಲ್ಲಿಡಬೇಕು.

ಮನೆ ಸುತ್ತಮುತ್ತ ಎಲ್ಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಿದರೆ ಅರ್ಧಕ್ಕರ್ಧ ರೋಗಗಳು ನಮ್ಮ ಮುಂದೆ ಸುಳಿಯುವುದಿಲ್ಲ. ಕುಡಿಯುವ ನೀರಿನ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಬೇಕು. ಶುದ್ಧ ನೀರು ಎಲ್ಲ ರೋಗಗಳಿಗೂ ರಾಮಬಾಣ. ನಿರ್ಮಲ ನೀರು ದೇಹದಲ್ಲಿನ ವಿಷಕಾರಕಗಳನ್ನು ಹೊರಹಾಕುತ್ತವೆ.

ಬೇಸಿಗೆಯಲ್ಲಿ ಡಿಹೈಡ್ರೈಶನ್ ನಿಂದಾಗಿ ಜೀರ್ಣಕ್ರಿಯೆ ಕುಂಠಿತವಾಗಿರುತ್ತದೆ. ಮಳೆಗಾಲದ ವಾತಾವರಣ ಮತ್ತು ರೋಗಗಳು ಈ ಜೀರ್ಣಶಕ್ತಿಯನ್ನು ಮತ್ತಷ್ಟು ಕುಂಠಿತವಾಗಿಸುತ್ತವೆ. ಆದ್ದರಿಂದ ಜೀರ್ಣಶಕ್ತಿಯನ್ನು ವರ್ಧಿಸುವ ಆಹಾರ, ಪಾನೀಯಗಳತ್ತ ಗಮನ ಹರಿಸೋಣ.

ಆರೋಗ್ಯಕರ ಆಹಾರ

* ಕಾಯ್ದಾರಿನ ನೀರಿನಲ್ಲಿ ಒಂದು ಚಮಚ ಜೇನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
* ತಣ್ಣಗಿನ ಆಹಾರ ತಿನ್ನುವುದನ್ನು ಕಡಿಮೆಮಾಡಿ.
* ತಿಂಡಿ ತಿನಿಸಿನಲ್ಲಿ ಹಸಿ ಶುಂಠಿ ಹೆಚ್ಚು ಇರಲಿ.
* ಅಕ್ಕಿ, ಗೋಧಿಯಿಂದ ತಯಾರಿಸಿದ ಆಹಾರ ಹೆಚ್ಚಿರಲಿ.
* ತರಕಾರಿ ಸೂಪ್ ಅಥವಾ ಕ್ಯಾರಟ್ ಜ್ಯೂಸ್ ಕುಡಿಯುತ್ತಿರಿ.
* ಹೊರಗಿನ ತಿಂಡಿಯನ್ನು ತಿನ್ನಲೇಬೇಡಿ.
* ಕರಿದ ತಿಂಡಿ ತಿನ್ನಬೇಕೆನ್ನಿಸಿದರೆ ಮನೇಲೇ ತಯಾರಿಸಿ.
* ಪಲ್ಯ ತಯಾರಿಸುವ ಮುನ್ನ ತರಕಾರಿಯನ್ನು ಚೆನ್ನಾಗಿ ತೊಳೆಯಿರಿ.
* ಶುದ್ಧ ನೀರನ್ನು ಚೆನ್ನಾಗಿ ಕುಡಿಯಿರಿ. ಇದು ಡಿಹೈಡ್ರೇಶನ್ ಆಗದಂತೆ ನೋಡಿಕೊಳ್ಳುತ್ತದೆ.

ಮತ್ತಷ್ಟು ಆರೋಗ್ಯ ಸಲಹೆ

* ಯಾರನ್ನೇ ಭೇಟಿಯಾದ ನಂತರ ಸೋಪಿನಲ್ಲಿ ಕೈ ತೊಳೆಯಿರಿ.
* ದೇಹವನ್ನು ಬೆಚ್ಚಗಿಟ್ಟುಕೊಳ್ಳಿ.
* ತಲೆಗೂದಲು ಒದ್ದೆಯಾದಾಗ ಎಸಿ ಕೋಣೆ ಪ್ರವೇಶಿಸಬೇಡಿ.
* ಪಾದ ಒಡೆದಿದ್ದರೆ ನಿಯಮಿತವಾಗಿ ಅರಿಷಿಣ ಮತ್ತು ಬೇವಿನ ಪುಡಿಯ ಪೇಸ್ಟ್ ಹಚ್ಚಿರಿ.
* ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿದಿನ ವ್ಯಾಯಾಮ ಮಾಡುವುದನ್ನು ಮರೆಯಬೇಡಿ.

Story first published: Saturday, July 3, 2010, 18:23 [IST]
X
Desktop Bottom Promotion