Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಾಂಧಿ ಜಯಂತಿ 2020: ಸನ್ನಡತೆಯ ಜೀವನಕ್ಕೆ ಮಹಾತ್ಮ ಗಾಂಧಿಜಿಯಿಂದ ಕಲಿಯಬೇಕಾದ ಪಾಠಗಳು
ಅವನು ಶ್ರೀಮಂತ ಕುಟುಂಬದಲ್ಲಿ ಜನಿಸಿದ ಬಾಲಕ. ಎಲ್ಲಾ ಸೌಕರ್ಯಗಳೂ ಅವನ ಅನುಕೂಲಕ್ಕೆ ತಕ್ಕಂತೆ ಇದ್ದವು. ಆದರೆ ಅವನಿಗೆ ಇದ್ದ ಕೊರತೆ ಎಂದರೆ ಕತ್ತಲ ಭಯ. ಸುತ್ತಲೂ ಕತ್ತಲು ಕವಿದಾಗ ಭೂತ-ಪ್ರೇತಗಳು ಹಿಡಿದು ಬಿಡುತ್ತವೆ ಎನ್ನುವ ಆತಂಕ ಕಾಡುತ್ತಿತ್ತು. ಒಂದು ದಿನ ಗಾಢ ಅಂದಕಾರ ಕವಿದಿತ್ತು. ಆ ಕತ್ತಲಲ್ಲಿ ಅವನಿಗೆ ಇನ್ನೊಂದು ಕೋಣೆಗೆ ಹೋಗಬೇಕಿತ್ತು. ಆದರೆ ಅವನಲ್ಲಿ ಇದ್ದ ಭಯ ಮುಂದೆ ಹೆಜ್ಜೆ ಇಡಲು ನಿರಾಕರಿಸುವಂತೆ ಮಾಡಿತು. ಅಲ್ಲೇ ಇದ್ದ ದಾದಿಯು ಅವನ ಬಳಿ ಬಂದು ಏಕೆ ಇಲ್ಲಿ ನಿಂತಿರುವೆ ಎಂದು ಕೇಳಿದಳು. ಆಗ ಅವನು ಕತ್ತಲಿದೆ, ನನಗೆ ಆ ಕೋಣೆಗೆ ಹೋಗಲು ಭಯವಾಗುತ್ತಿದೆ, ದೆವ್ವ-ಭೂತಗಳು ಬಂದು ನನ್ನನ್ನು ಹಿಡಿದುಬಿಡುತ್ತವೆ ಎಂದು ಹೇಳಿದನು. ಆಗ ದಾದಿ ನೀನು ರಾಮನನ್ನು ಜಪಿಸು, ಭಯ ಇರುವುದಿಲ್ಲ. ರಾಮನ ಜಪ ಮಾಡಿದರೆ ಭೂತಗಳೆಲ್ಲಾ ಓಡಿ ಹೋಗುತ್ತವೆ ಎಂದು ಹೇಳಿದಳು. ಆಕೆಯ ಮಾತನ್ನು ಕೇಳಿ, ರಾಮನ ಜಪ ಮಾಡುತ್ತ ಕೋಣೆಯ ಒಳಗೆ ಸಾಗಿದನು. ಅವನಿಗೆ ಬೇಕಾದ ವಸ್ತುವನ್ನು ಪಡೆದುಕೊಳ್ಳಲು ಅವನಿಗೆ ಅನುಕೂಲವಾಯಿತು.

ಅಂದಿನಿಂದ ತನ್ನ ಜೀವನದಲ್ಲಿ ಶ್ರೀರಾಮನ ಆದರ್ಶವನ್ನು ಅಳವಡಿಸಿಕೊಂಡನು. ರಾಮನ ಭಕ್ತನಾಗಿ ತನ್ನ ಕೊನೆ ಉಸಿರು ಇರುವ ತನಕವೂ ರಾಮ ಜಪವನ್ನು ಮಾಡಿದನು. ಅಂದು ಬಾಲಕನಾಗಿ ಇರುವಾಗ ಕತ್ತಲೆಗೆ ಭಯ ಪಟ್ಟವರು, ನಂತರ ದೇಶಕ್ಕೇ ಬೆಳಕಾಗಿ ನಿಂತ ಅದಮ್ಯ ಚೇತನ ಮಹಾತ್ಮ ಗಾಂಧೀಜಿ. ಅಹಿಂಸೆಯ ಮೂಲ ತತ್ವವನ್ನಾಗಿಸಿಕೊಂಡು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ. ತಮ್ಮ ಸರಳ ಜೀವನದ ಮೂಲಕವೇ ಎಲ್ಲರೊಂದಿಗೂ ಬೆರೆತು, ಜೀವನದ ದಾರಿಗೆ ಬೆಳಕಾಗಿ ನಿಂತ ಮಹಾನ್ ಚೇತನ ಅವರು.
ಇಂದಿನ ಸ್ವಾತಂತ್ರ್ಯದ ಜೀವನವನ್ನು ನಾವು ಕಾಣಲು ಕಾರಣವಾದ ಮಹಾನ್ ವ್ಯಕ್ತಿ. ಜೀವನದಲ್ಲಿ ಕೆಲವು ತತ್ವಗಳನ್ನು ಅಳವಡಿಸಿಕೊಂಡರೆ ಬದುಕು ಬಂಗಾರವಾಗುತ್ತದೆ, ಮನಸ್ಸು ಸಹ ಸೌಮ್ಯ ಗುಣಗಳಿಂದ ಕೂಡಿರುತ್ತದೆ ಎಂದು ತೋರಿಸಿಕೊಟ್ಟ ಉದಾತ್ತ ಜೀವಿ. ಇವರ ಸ್ಮರಣೆಗಾಗಿ ಪ್ರತಿ ವರ್ಷ ಅಕ್ಟೋಬರ್ 2ರಂದು ದೇಶದಾದ್ಯಂತ ಗಾಂಧೀಜಯಂತಿ ಎಂದು ಆಚರಿಸಲಾಗುವುದು. ನಮಗೆ ಗಾಂಧೀಜಿಯ ನೆನಪು ಬರುವುದು ನಮ್ಮ ಹಣದ ಮೇಲೆ ಇರುವ ಗಾಂಧೀಜಿಯ ಚಿತ್ರ ನೋಡಿದಾಗ ಹಾಗೂ ಗಾಂಧೀಜಯಂತಿಯ ದಿನ ಮಾತ್ರ.
ನಮಗಾಗಿ ಜೀವವನ್ನೇ ತೈದ ಧೀಮಂತ ನಾಯಕ ತನ್ನ ಜೀವನದಲ್ಲಿ ಅನೇಕ ಸತ್ವ ಪೂರ್ಣ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದರು. ಅಂತಹ ಮಹಾನ್ ನಾಯಕರು ಅನುಸರಿಸಿದ ಕೆಲವು ಸೂತ್ರ ಹಾಗೂ ತತ್ವಗಳನ್ನು ನಾವು ಅಳವಡಿಸಿಕೊಳ್ಳುವುದರ ಮೂಲಕ ಜೀವನವನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು. ಅಂತಹ ಐದು ತತ್ವಗಳನ್ನು ಇಂದು ನಾವು ನಿಮ್ಮ ಎದುರು ಇಡುತ್ತಿದ್ದೇವೆ. ಅವುಗಳನ್ನು ನೀವು ಅಳವಡಿಸಿಕೊಂಡರೆ ಸಾರ್ಥಕ ಬದುಕನ್ನು ಕಾಣಬಹುದು.

1. ನಿಮ್ಮನ್ನು ನೀವು ಮೊದಲು ಬದಲಾಯಿಸಿಕೊಳ್ಳಿ
ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಬದಲಾವಣೆಯನ್ನು ಬಯಸುತ್ತೇವೆ ಎಂದರೆ ಮೊದಲು ನಾವು ನಮ್ಮನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಚಿಂತನೆ ಹಾಗೂ ನಡತೆಯಲ್ಲಿ ಉತ್ತಮ ಬದಲಾವಣೆಯನ್ನು ಕಂಡುಕೊಂಡರೆ ಎಲ್ಲವೂ ಉತ್ತಮವಾಗಿ ಹಾಗೂ ಸರಳವಾಗಿ ಕಾಣುತ್ತವೆ. ನಾವು ನಮ್ಮನ್ನು ಬದಲಿಸಿಕೊಳ್ಳಲು ಕಠಿಣವಾದ ಏಕಾಗ್ರತೆ, ಪರಿಶ್ರಮ ಮತ್ತು ತಾಳ್ಮೆಯ ಅಗತ್ಯವಿರುತ್ತದೆ ಎನ್ನುವುದನ್ನು ಗಾಂಧಿಯವರು ಹೇಳಿದ್ದಾರೆ. ಇವರು ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವಾಗಲೂ ತಮ್ಮಲ್ಲಿ ಸ್ಥಿರತೆ ಭಾವ, ಪ್ರೀತಿ ಮತ್ತು ಶಾಂತ ಚಿತ್ತವನ್ನು ಹೊಂದಿದ್ದರು ಎನ್ನಲಾಗುವುದು.

2. ಶಾಂತಿಯ ಮೂಲಕ ಬಲ ಪಡೆಯುವುದು
ಗಾಂಧೀಜಿ ಅವರು ಒಬ್ಬ ಕ್ರಾಂತಿಕಾರಿ ವೀರ ಮತ್ತು ರಾಷ್ಟ್ರದ ನಾಯಕರಾಗಿದ್ದರು. ಅವರು ತಮ್ಮ ಅಸಾಧಾರಣ ಶಕ್ತಿಯ ಮೂಲಕ ತಮ್ಮ ಜನರನ್ನು ಸ್ವಾತಂತ್ರ್ಯ ಮತ್ತು ಸ್ವರಾಜ್ಯಕ್ಕೆ ಕರೆದೊಯ್ದರು. ಅವರು ಈ ಒಂದು ಯಶಸ್ಸನ್ನು ಇತರರಿಗೆ ನೋವುಂಟಾಗದಂತೆ ಶಾಂತಿಯ ಮೂಲಕವೇ ತಂದುಕೊಟ್ಟರು. ಆತ್ಮ ತ್ಯಾಗ ಮತ್ತು ಧೈರ್ಯವು ಎಂತಹ ಸಂಗತಿಯನ್ನಾದರೂ ಬದಲಾಯಿಸಲು ಅನುವುಮಾಡಿಕೊಡುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ನಿಜ, ಶಾಂತಿಯುತವಾದ ಕ್ರಿಯಾಶೀಲತೆ, ಪ್ರೀತಿಯನ್ನು ತೋರುವುದು ಮತ್ತು ನಿಸ್ವಾರ್ಥ ಬದುಕನ್ನು ನಿರ್ವಹಿಸುವುದರ ಮೂಲಕ ಎಲ್ಲವನ್ನೂ ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟರು.

3. ಹಿಂಸೆ ಎನ್ನುವುದು ಅನಪೇಕ್ಷಿತ
ಗಾಂಧೀಜಿಯವರು ತಮ್ಮ ಜೀವನದಲ್ಲಿ ದ್ವೇಷಿಸಿದ ಏಕೈಕ ವಿಷಯವೆಂದರೆ ಹಿಂಸೆ. ಮಹಾತ್ಮಾ ಗಾಂಧಿಯವರ ಹಿಂಸಾಚಾರವನ್ನು ಕಂಡಿಸುತ್ತಿದ್ದರು. ಹಿಂಸೆಯಿಂದ ಏನನ್ನೂ ಗೆಲ್ಲಲು ಸಾಧ್ಯವಿಲ್ಲ. ಸಂಘರ್ಷದಿಂದ ಜೀವನ ನಡೆಸಿದರೆ ಅಶಾಂತಿಯಿಂದಲೇ ಜೀವನ ಮುಳುಗುವುದು. ಜೊತೆಗೆ ಮುಗ್ಧರು ಜೀವನವನ್ನು ಕಳೆದುಕೊಳ್ಳುತ್ತಾರೆ. ಯುದ್ಧವಾಗಲೀ, ಜೀವನವಾಗಿಲೀ ಎಲ್ಲಕಡೆಯೂ ಪ್ರೀತಿ- ವಿಶ್ವಾಸದಿಂದಲೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ದ್ವೇಷ ಹಿಂಸೆಯಿಂದ ಏನನ್ನೂ ಪಡೆಯಲು ಸಾಧ್ಯವಿಲ್ಲ. ಅವುಗಳಿಂದ ಇನ್ನಷ್ಟು ಸಾವು ನೋವು ಸಂಭವಿಸುತ್ತದೆ ಅಷ್ಟೆ.

4. ಸತ್ಯದಿಂದ ಜೀವನ ನಡೆಸಿ
ಗಾಧೀಜಿಯವರು ಸತ್ಯದ ಸಂಗತಿಯ ಪ್ರತಿಪಾದಕರಾಗಿದ್ದರು. ಇವರ ನಡತೆ ಹಾಗೂ ನುಡಿಗಳೆಲ್ಲವೂ ಸತ್ಯ ದಿಂದಲೇ ಕೂಡಿರುತ್ತಿತ್ತು. ನಾವು ಸಹ ನಮ್ಮ ಜೀವನದಲ್ಲಿ ಆದಷ್ಟು ಸತ್ಯದಿಂದ ನಡೆದರೆ ಬದುಕಲ್ಲಿ ಕಷ್ಟಗಳು ಕಡಿಮೆಯಾಗುತ್ತವೆ. ಜೀವನದಲ್ಲಿ ಭರವಸೆಯ ಹೊಂಬೆಳಕು ದೊರೆಯುವುದು. ನಮ್ಮ ನಡತೆಯು ಸತ್ಯ ಹಾಗೂ ಸದ್ಗತಿಯಿಂದ ಕೂಡಿದ್ದರೆ ಎಲ್ಲರೂ ನಮ್ಮನ್ನು ನಂಬುತ್ತಾರೆ. ನಮ್ಮೊಡನೆ ಕೈಜೋಡಿಸಿ ಮುಂದೆ ಸಾಗುತ್ತಾರೆ. ತೆರೆದ ಮನಸ್ಸಿನ ಭಾವನೆಗಳು ಹಾಗೂ ಸತ್ಯದ ಮಾತುಗಳು ನಮ್ಮಲ್ಲಿ ಭರವಸೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.

5. ನಿಮ್ಮ ವಿಚಾರಗಳನ್ನು ನೀವು ಪರಾಮರ್ಶಿಸಿ
ಇಚ್ಛಾ ಶಕ್ತಿಯನ್ನು ಗಾಂಧೀಜಿಯವರು ಪ್ರಬಲವಾಗಿ ನಂಬುತ್ತಿದ್ದರು. ನಮ್ಮಲ್ಲಿ ಉತ್ತಮ ಇಚ್ಛಾ ಶಕ್ತಿ ಇದ್ದರೆ ಏನನ್ನಾದರೂ ಸಾಧಿಸುವ ಛಲ ಇರುತ್ತದೆ. ಉತ್ತಮ ಛಲ ಹಾಗೂ ಇಚ್ಛಾ ಶಕ್ತಿಯಿಂದ ಬಹುಬೇಗ ನಮ್ಮ ಗುರಿಯನ್ನು ತಲುಪಬಹುದು. ಗಾಂಧೀಜಿಯವರಲ್ಲಿ ಇದ್ದ ಇಚ್ಛಾ ಶಕ್ತಿಯೇ ಸಕಾರಾತ್ಮಕ ಚಿಂತನೆಯ ಮೂಲಕ ಸಾಧನೆಯನ್ನು ಮಾಡಲು ಸಾಧ್ಯವಾಯಿತು. ಅಂತಹ ಒಂದು ಉತ್ತಮ ಇಚ್ಛಾ ಶಕ್ತಿಯು ನಮ್ಮನ್ನು ಉತ್ತಮ ಚಿಂತನೆಗಳೆಡೆಗೆ ಕರೆದೊಯ್ಯುವುದು. ಜೊತೆಗೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದುಕೊಡುವುದು.



Click it and Unblock the Notifications