ಮಹಾ ಶಿವರಾತ್ರಿ ಹಬ್ಬದ ಹಿಂದಿದೆ ರೋಚಕ ಕತೆ

ಓಂ ಮನೋಬುದ್ಧಯಹಂಕಾರ ಚಿತ್ತಾನಿ ನಾಹಂ, ನ ಚ ಶ್ರೋತ್ರಜಿವ್ಹೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ, ಚಿದಾನಂದರೂಪಃ ಶಿವೋಹಮ್ ಶಿವೋಹಮ್ ||
ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂರ್ತಿಗಳಲ್ಲಿ ಮಹೇಶ್ವರನಿಗೆ ಮೀಸಲಾದ ಹಬ್ಬವೇ ಮಹಾಶಿವರಾತ್ರಿ.

ಶಿವರಾತ್ರಿ ಎಂದರೆ ಸಾಕು ಹಿಂದುಗಳಿಗೆ ಆಧ್ಯಾತ್ಮಿಕ ಉತ್ಸವ. ರಾತ್ರಿಯಿಡಿ ಶಿವನನ್ನು ನೆನೆಯುತ್ತ ಆಚರಿಸುವ ಈ ಶಿವರಾತ್ರಿಯ ಮಹತ್ವ ಹೇಳುವುದೇ ಒಂದು ಸಂಭ್ರಮ.

facts about shivarathri

ಶಿವರಾತ್ರಿ ಆಚರಣೆಯ ಹಿಂದಿರುವ ಕಥೆ

ಶಿವರಾತ್ರಿ ಆಚರಣೆಯ ಹಿಂದಿರುವ ಕಥೆ

ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಅದು ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿಯೇ ಬರುತ್ತದೆ. ಶಿವರಾತ್ರಿಯನ್ನು ಯಾಕೆ ಆಚರಿಸಲಾಗುತ್ತದೆ ಅಥವಾ ಯಾವ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ ಎಂಬಿತ್ಯಾದಿಗಳ ಬಗ್ಗೆ ಸಾಕಷ್ಟು ಪುರಾಣ ನಂಬಿಕೆಗಳಿವೆ.

  • ಅವುಗಳಲ್ಲಿ ಒಂದು ಶಿವ -ಸತಿ ಮದುವೆ. ಶಿವ ಪಾರ್ವತಿಯನ್ನು ಮದುವೆಯಾದ ದಿನವನ್ನು ಆ ಸಂಭ್ರಮದ ಸವಿ ನೆನಪಿಗಾಗಿ ಮಹಾಶಿವರಾತ್ರಿ ಎಂದು ದೇವಾನುದೇವತೆಗಳಿಂದ ಮೊದಲುಗೊಂಡು ಎಲ್ಲರೂ ಆಚರಿಸುತ್ತಾರೆ ಎಂದು ಹೇಳಲಾಗುತ್ತದೆ. ಇದು ಶಿವನ ಅತ್ಯಂತ ಸಂತೋಷದ ದಿನವಾಗಿದ್ದು ಈ ದಿನ ಭಕ್ತಾದಿಗಳು ಕೇಳಿದ್ದೇಲ್ಲವನ್ನು ಕೊಡುತ್ತಾನೆ ಶಿವ ಎಂಬ ನಂಬಿಕೆಯಿದೆ.
  • ಎರಡನೆಯದಾಗಿ ಶಿವ ತಾಂಡವ: ಹೌದು ಶಿವ ಮೊಟ್ಟಮೊದಲ ಬಾರಿಗೆ ತಾಂಡವ ನೃತ್ಯವನ್ನು ಮಾಡಿದ ದಿನವನ್ನೇ ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎನ್ನಲಾಗಿದೆ.
  • ಇನ್ನು ಒಂದು ಕಥೆಯು ಹೇಳುವಂತೆ, ಮಹಾಶಿವನು ಮೊದಲ ಬಾರಿಗೆ ಲಿಂಗಾವತಾರದಲ್ಲಿ ಕುಳಿತ ದಿನವನ್ನೇ ಮಹಾಶಿವರಾತ್ರಿಯಾಗಿ ಆಚರಿಸಿ ಆ ದಿನ ಶಿವ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
  • ಇದರ ಕಥೆ ಹೀಗಿದೆ

    ಇದರ ಕಥೆ ಹೀಗಿದೆ

    ಒಮ್ಮೆ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ಜಗಳ ನಡೆಯುತ್ತಿರುತ್ತದೆ. ಆಗ ಇವರ ಜಗಳವನ್ನು ತಪ್ಪಿಸಲು ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಅವರಿಬ್ಬರಿಗೂ ಸೂಚಿಸುತ್ತಾನೆ.

    ಆಗ ಹಂಸದ ರೂಪ ತಾಳಿದ ಬ್ರಹ್ಮನು ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹಾರುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ಹುಡುಕಲು ಪಾತಾಳಕ್ಕೆ ತೆರಳುತ್ತಾನೆ.

    ಎಷ್ಟೇ ಮುಂದೆ ಸಾಗಿದರೂ ಇವರಿಬ್ಬರಿಗೂ ಕಂಭದ ಅಂತ್ಯವೇ ಸಿಗುವುದಿಲ್ಲ.

    ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇದಗಿ ಪುಷ್ಫದ ಬಳಿ ಬ್ರಹ್ಮ, ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂಬ ಉತ್ತರ ನೀಡುತ್ತದೆ.

    ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇದಗಿ ಪುಪ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇದಗಿ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ.

    ಇವರಿಬ್ಬರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಹೀಗಾಗಿ ಈ ದಿನವನ್ನು ಶಿವರಾತ್ರಿಯನ್ನಾಗಿ ಆಚರಿಸಲಾಗುತ್ತದೆ.

    ಜಾಗರಣೆ

    ಜಾಗರಣೆ

    ಶಿವರಾತ್ರಿ ಎಂದರೆ ನೆನಪಾಗುವುದು ಜಾಗರಣೆ. ಒಂದು ಇಡೀ ದಿನ ಹಾಗೂ ರಾತ್ರಿ ಶಿವನನ್ನು ಭಕ್ತಿಪೂರ್ವಕವಾಗಿ ಪೂಜಿಸಲಾಗುತ್ತದೆ. ಸೃಷ್ಟಿ ಸ್ಥಿತಿ ಲಯಗಳ ಕಾರಣಿಕರ್ತ ಶಿವನನ್ನು ಹಾಡಿ ಕೊಂಡಾಡಲಾಗುತ್ತದೆ.

    ದೇಶದೆಲ್ಲೆಡೆ ಶಿವರಾತ್ರಿ ಎಂದರೆ ಒಂದು ರೀತಿಯ ಸಂಭ್ರಮವೇ. ಈ ದಿನದಂದು ಶಿವಾಲಯಗಳೆಲ್ಲವೂ ಭಕ್ತರಿಂದ ತುಂಬಿ ತುಳುಕಾಡುತ್ತವೆ. ಅವತ್ತಿನ ದಿನ ಶಿವ ಲಿಂಗಕ್ಕೆ ಇನ್ನಿಲ್ಲದಷ್ಟು ಅಲಂಕಾರಗಳನ್ನು ಮಾಡಲಾಗುತ್ತದೆ.

    ಇಡೀ ದಿನ ಇಡೀ ರಾತ್ರಿ ದೇವಾಲಯಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜೆ ಪುನಸ್ಕಾರಗಳು, ಪ್ರಸಾದ ವಿತರಣೆ ಹೀಗೆ ಹಲವಾರು ಭಕ್ತಿಪೂರ್ವಕ ಕ್ರಿಯಾ ವಿಧಾನಗಳಿಂದ ಜಾಗರಣೆಯನ್ನು ಸಂಪನ್ನಗೊಳಿಸಲಾಗುತ್ತದೆ.

    ಶಿವರಾತ್ರಿ ಉಪವಾಸ:

    ಮಹಾಶಿವರಾತ್ರಿ ಎಂದರೆ ಆ ದಿನ ಉಪವಾಸ. ಯಾವುದೇ ವಯೋಮಿತಿಯಿಲ್ಲದೇ ಎಲ್ಲರೂ ಭಕ್ತಿಯಿಂದ ಉಪವಾಸ ಮಾಡುತ್ತಾರೆ. ಈ ದಿನ ಕೇವಲ ಫಲಾಹಾರಗಳನ್ನು ಮಾತ್ರ ಸೇವಿಸಲಾಗುತ್ತದೆ. ದೇವಸ್ಥಾನಗಳಲ್ಲಿ ಈ ದಿನ ವಿಶೇಷ ಪ್ರಸಾದ ವಿತರಣೆಯನ್ನೂ ಮಾಡಲಾಗುತ್ತದೆ.

    ಪೂಜಾ ಕ್ರಮ

    ಪೂಜಾ ಕ್ರಮ

    ಶಿವನಿಗೆ ಹೆಚ್ಚು ಮಡಿ-ಮೈಲಿಗೆ ಶಾಸ್ತ್ರಾದಿಗಳು ಆಗಬೇಕೆಂದೇನಿಲ್ಲ. ಮಹೇಶ್ವರನ ಪೂಜೆಗೆ ಬೇಕಾಗಿರುವುದು ಮೊದಲು ಶುದ್ಧ ಮನಸ್ಸು. ಶುದ್ಧ ಮನಸ್ಸಿನಿಂದ, ಶುಭ್ರ ಬಟ್ಟೆಗಳನ್ನು ತೊಟ್ಟು ಶಿವರಾತ್ರಿಯ ಬೆಳಿಗ್ಗೆಯೇ ಶಿವಲಿಂಗ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠ. ಈ ದಿನ ಮನೆಯಲ್ಲಿ ಅಥವಾ ಹತ್ತಿರದ ಯಾವುದೇ ಶಿವ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ ಎಂದು ನಂಬಲಾಗುತ್ತದೆ.

    ಶಿವರಾತ್ರಿಯಂದು ಶಿವನಿಗೆ ಬಿಲ್ವ ಪತ್ರೆಗಳ ಹೊರತು ಪೂಜೆ ಸಂಪೂರ್ಣವಾಗದು. ಹಾಗಾಗಿ ಇತರ ಯಾವುದೇ ಹೂವುಗಳು ಲಭ್ಯವಿಲ್ಲದಿದ್ದರ ಬಿಲ್ವಪತ್ರೆ, ಕೇದಿಗೆ ಹೂವುಗಳಿಂದ ಶಿವನನ್ನು ಪೂಜಿಸುವುದು ಸೂಕ್ತ.

    ಶಿವರಾತ್ರಿಯ ದಿನದ ಆಚರಣೆ ಕೇವಲ ಆಧ್ಯಾತ್ಮಿಕ ಆಚರಣೆ ಮಾತ್ರವಲ್ಲ. ಈ ದಿನ ಶಿವ ನಮ್ಮಲ್ಲಿರುವ ಎಲ್ಲಾ ನಕಾರಾತ್ಮಕತೆಯನ್ನು ದೂರಮಾಡಿ ತನ್ನ ಭಕ್ತಾಧಿಗಳಲ್ಲಿ ಶಾಂತಿ, ಪ್ರೀತಿಯನ್ನು ತುಂಬುತ್ತಾನೆ ಎಂಬ ನಂಬಿಕೆಯಿದೆ. ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಭಕ್ತರು ಕೊಂಡಾಡುವ ದಿನವಿಂದು. ಸಿಹಿ ಖಾದ್ಯಗಳನ್ನು ಮಾಡಿ ಶಂಭೋ ಶಂಕರನಿಗೆ ಅರ್ಪಿಸಿ ಭಕ್ತಾದಿಗಳು ಪುನೀತರಾಗುತ್ತಾರೆ.

    ಅಭಿಷೇಕ

    ಅಭಿಷೇಕ

    ಶಿವ ಆಭರಣ ಪ್ರಿಯನಲ್ಲ. ಅತ್ಯಂತ ಸರಳತೆ, ಪ್ರಾಮಾಣಿಕತೆಗೆ ಹೆಸರಾದವನು ಈಶ್ವರ. ಹಾಗಾಗಿ ಹಾಲು, ಜೇನು ಮೊದಲಾದವುಗಳಿಂದ ಶಿವನಿಗೆ ಅಭಿಷೇಕವನ್ನು ಮಾಡಲಾಗುತ್ತದೆ.

    ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ಶಿವಲಿಂಗವನ್ನು ಅಲಂಕಾರ ಮಾಡಿ ಶಿವನನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವೆ, ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಗಳಿವೆ.

    ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ.

    ಹೀಗೆ ನೂರಾರು ವಿಧದಲ್ಲಿ ನೂರಾರು ಬಗೆಯಲ್ಲಿ, ದೇಶದೆಲ್ಲೆಡೆ ಶಿವನನ್ನು ಆರಾಧಿಸಲಾಗುತ್ತದೆ. ಭಕ್ತಿಯಿಂದ ಬೇಡಿದವರಿಗೆ ಬೇಡಿದ್ದೆಲ್ಲವನ್ನು ಕೊಡುವ ಆ ಪರಶಿವ ಎಲ್ಲರಿಗೂ ಶ್ರೇಯಸ್ಸನ್ನು ಉಂಟುಮಾಡಲಿ.

English summary

Interesting Facts About Shivratri

On the occassion of maha shivarathri here we are discussing about interesting facts about shivratri. Read more.
Story first published: Wednesday, February 19, 2020, 10:00 [IST]
X
Desktop Bottom Promotion