ಚಳಿಗಾಲದಲ್ಲಿ ಈ ರೀತಿ ರಸಂ ಮಾಡಿ..! ನೆಗಡಿ, ಕೆಮ್ಮು, ಶೀತ ಮಾಯವಾಗುತ್ತೆ..!!

Posted By:

ರಾಜ್ಯದ ಬಹುತೇಕ ಕಡೆಗಳಲ್ಲಿ ತಾಪಮಾನ ಇಳಿಕೆಯಾಗಿದೆ. ಅತ್ಯಂತ ಚಳಿ ಕಾಡುತ್ತಿದೆ. ಇನ್ನೊಂದು ಕಡೆ ಈ ಶೀತ ತಾಪಮಾನದ ಕಾರಣದಿಂದಾಗಿ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆ ಕೂಡ ಕಾಡಲು ಆರಂಭಿಸಿದೆ. ಅದರಲ್ಲೂ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಕಾಡುತ್ತಿದೆ. ಮತ್ತೆ ಕೆಲವರಲ್ಲಿ ರಾತ್ರಿ ಸಮಯದಲ್ಲಿ ಮೂಗು ಕಟ್ಟುವುದು, ಗಂಟಲು ನೋವು ಹೀಗೆ ಹವಾಮಾನ ಸಂಬಂಧಿ ಸಮಸ್ಯೆ ಕಾಡಲು ಆರಂಭಿಸಿದೆ.

ಇಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ಅಥವಾ ಔಷಧಿ ಸೇವಿಸುವ ಬದಲಾಗಿ ಮನೆಯಲ್ಲೇ ಮದ್ದು ಮಾಡಿಕೊಳ್ಳುವುದು ಉತ್ತಮ. ಅದರಲ್ಲೂ ನೀವು ಹೆಚ್ಚಾಗಿ ಕಷಾಯ, ಶುಂಠಿ ಟೀ ಅಂತಹ ಪರಿಹಾರಕ್ಕೆ ಮುಂದಾಗಿರಬಹುದು. ಆದ್ರೆ ನಾವಿಂದು ಊಟದ ಜೊತೆಗೆ ರುಚಿ ನೀಡುವಂತಹ ತಿಳಿಸಾರಿನ ಮೂಲಕ ಈ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

Make Rasam In Winter For Better Health At Home In Kannada

ಅದರಲ್ಲೂ ಮಸಾಲೆಗಳ ಹಾಕಿ ಮಾಡುವ ತಿಳಿಸಾರು ನಿಮ್ಮ ಆರೋಗ್ಯಕ್ಕೆ ಅತ್ಯುತ್ತಮ. ದೇಹ ತಂಪಾಗಿದ್ದರೆ ಈ ಮಸಾಲೆ ಪದಾರ್ಥಗಳ ನೆರವಿನಿಂದ ಪರಹಾರ ಮಾಡಬಹುದು. ಹಾಗಾದ್ರೆ ಮನೆಯಲ್ಲೇ ಪುಡಿಯನ್ನು ಸಿದ್ದ ಮಾಡಿ ಆರೋಗ್ಯಕ್ಕೆ ಅತ್ಯುತ್ತಮ ರೀತಿಯಲ್ಲಿ ನೆರವಾಗುವಂತಹ ತಿಳಿಸಾರು ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಈ ತಿಳಿ ಸಾರು ಮಾಡಲು ಯಾವೆಲ್ಲಾ ಮಸಾಲೆಗಳ ಬಳಸಬೇಕು? ಈ ತಿಳಿಸಾರು ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ಸರಿಯಾದ ಕ್ರಮ ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.

ತಿಳಿಸಾರು ಮಾಡಲು ಬೇಕಾಗುವ ಪದಾರ್ಥಗಳು

  • ತೊಗರಿ ಬೇಳೆ- ಕಾಲು ಕಪ್
  • ಟೊಮೆಟೋ - 2
  • ಹುಣಸೆ ಹಣ್ಣು
  • ಕೊತ್ತಂಬರಿ ಸೊಪ್ಪು
  • ಕರಿಬೇವಿನ ಸೊಪ್ಪು
  • ಬ್ಯಾಡಗಿ ಮೆಣಸಿನಕಾಯಿ- 4
  • ಕಡ್ಲೆಬೇಳೆ
  • ದನಿಯಾ ಕಾಳು
  • ಜೀರಿಗೆ
  • ಮೆಣಸು
  • ಒಣಕೊಬ್ಬರಿ ತುರಿ
  • ಬೆಲ್ಲ
  • ಅರಿಶಿನ ಪುಡಿ
  • ಸಾಸಿವೆ
  • ಇಂಗು
  • ಉಪ್ಪು
  • ಎಣ್ಣೆ

ಮಸಾಲೆ ಭರಿತ ತಿಳಿಸಾರು ಮಾಡುವ ವಿಧಾನವಿದು

ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ ನೀರು ಹಾಕಿ, ಎಣ್ಣೆ, ಅರಶಿಣ ಹಾಕಿ 2 ಸೀಟಿ ಹೊಡೆಸಿ ಇಟ್ಟುಕೊಳ್ಳಿ. ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಕಡಲೆ ಬೇಳೆ, ಧನಿಯಾ ಕಾಳು, ಜೀರಿಗೆ, ಕಾಳು ಮೆಣಸು, ಬ್ಯಾಡಗಿ ಮೆಣಸು, ಒಣ ಮೆಣಸು ಹಾಕಿ 2 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಕಾಳು ಮೆಣಸು ಮತ್ತು ಜೀರಿಗೆ ನಿಮಗೆ ಹೆಚ್ಚಿಗೆ ಬೇಕಿದ್ದರೆ ಬಳಸಿಕೊಳ್ಳಿ. ನಂತರ ಇದಕ್ಕೆ ಕೊಬ್ಬರಿ ಹಾಕಿಕೊಂಡು ಮತ್ತೊಂದು ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ.

ತಣ್ಣಗಾದ ಈ ಮಸಾಲೆ ಪದಾರ್ಥಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ಸಣ್ಣದಾಗಿ ಪುಡಿ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಕರಿವೇವು, ಇಂಗು, ಒಣ ಮೆಣಸು ಹಾಕಿ ಬಿಸಿ ಮಾಡಿ. ನಂತರ ಎರಡು ಟೊಮೆಟೋ ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ ನೆನೆಸಿಟ್ಟಿರುವ ಹುಣಸೆ ಹಣ್ಣನ್ನು ಹಿಂಡಿಕೊಂಡು ಅದರ ರಸ ಹಾಕಿಕೊಳ್ಳಿ.

ಹಾಗೆ ಇದಕ್ಕೆ ಮೊದಲು ಬೇಯಿಸಿದ್ದ ತೊಗರಿ ಬೇಳೆಯ ಪೇಸ್ಟ್ ಅನ್ನು ಕೂಡ ಹಾಕಿಕೊಳ್ಳಿ. ತೊಗರಿ ಬೇಳೆ ಕುಕ್ಕರ್‌ನಲ್ಲಿ ಬೆಂದ ಬಳಿಕ ಅದನ್ನು ಸ್ವಲ್ಪ ಕಿವುಚಿ ಮೆತ್ತಗೆ ಮಾಡಿಕೊಳ್ಳಿ. ಇದನ್ನು ಬಾಣಲೆಗೆ ಹಾಕಿ ಒಮ್ಮೆ ಮಿಕ್ಸ್ ಮಾಡಿ ಮಿಕ್ಸಿ ಜಾರ್‌ನಲ್ಲಿದ್ದ ಮಸಾಲೆ ಪುಡಿಯನ್ನು ಹಾಕಿ, ಸ್ಪೂನ್ ಬೆಲ್ಲದ ಪುಡಿ, ಉಪ್ಪು, ಸ್ವಲ್ಪ ನೀರು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ.

ನಂತರ ಕುದಿಬರಲು ಬಿಡಬೇಕು. ಸುಮಾರು 5ರಿಂದ 10 ನಿಮಿಷ ಕುದಿಯಲು ಬಿಡಿ. ಕೊನೆಯಲ್ಲಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ತಕ್ಷಣ ಒಲೆ ಆಫ್ ಮಾಡಿಕೊಂಡು ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಚಳಿಗಾಲದ ರಸಂ ರೆಡಿಯಾಗುತ್ತೆ.

[ of 5 - Users]
X
Desktop Bottom Promotion