ಶಿವರಾತ್ರಿಗೆ ಮಾಡಿ ಹುರಿಗಡಲೆಯ ತಂಬಿಟ್ಟು ಉಂಡೆ..! ಬಹಳ ಸಿಂಪಲ್ ಸಿಹಿ ರೆಸಿಪಿ

Posted By:

ಶಿವರಾತ್ರಿ ಹಬ್ಬ ಅಂದರೆ ಹಿಂದೂ ಸಮುದಾಯದ ಮಂದಿ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ, ಈ ದಿನ ಉಪವಾಸ ಮಾಡುವುದರಿಂದ ಹಿಡಿದು ಭಜನೆ, ಶಿವ ಮಂತ್ರ ಮಠಣೆಯ ಮಾಡುವುದು ನೋಡಬಹುದು. ದೊಡ್ಡ ದೊಡ್ಡ ದೇವಾಲಯಗಳು ಬಿಟ್ಟು ಮನೆಯಲ್ಲೂ ಅದ್ದೂರಿಯಾಗಿ ಶಿವರಾತ್ರಿ ಆಚರಿಸುತ್ತಾರೆ. ಪ್ರಮುಖವಾಗಿ ಈ ದಿನದಂದು ಶಿವನ ಮೂರ್ತಿಗೆ ಅಭಿಷೇಕ ಮಾಡುವುದು, ಶಿವನಿಗೆ ಸಿಹಿಗಳ ನೈವೇದ್ಯ ಮಾಡುವುದು ಸಾಮಾನ್ಯವಾಗಿ ನೋಡಬಹುದು.

ಹೀಗಾಗಿ ನಾವಿಂದು ಶಿವನಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಬಳಕೆಯಾಗುವಂತಹ ಹುರಿಗಡಲೆ ತಂಬಿಟ್ಟಿನ ಕುರಿತು ತಿಳಿದುಕೊಳ್ಳೋಣ. ತಂಬಿಟ್ಟು ಉಂಡೆಯನ್ನು ಎಷ್ಟು ಬಗೆಯಲ್ಲಿ ಮಾಡಬಹುದು ಎಂಬುದು ನಿಮಗೂ ತಿಳಿದಿರಬಹುದು. ಅಕ್ಕಿ ಹಿಟ್ಟಿನ ತಂಬಿಟ್ಟು, ಗೋಧಿ ತಂಬಿಟ್ಟು, ನೆಲಗಡಲೆ ತಂಬಿಟ್ಟು ಹೀಗೆ ಹತ್ತಾರು ಬಗೆಯ ತಂಬಿಟ್ಟು ಮಾಡಿ ಸವಿಯಬಹುದು.

How To Make Chana Daal Tambittu Unde At Home In Kannada

ಆದ್ರೆ ನಾವಿಂದು ಹುರಿಗಡಲೆಯಿಂದ ಮಾಡುವಂತಹ ಅತ್ಯಂತ ರುಚಿಕರ ಹಾಗೂ ಶಿವಪ್ರಿಯ ಸಿಹಿ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಹುರಿಗಡಲೆ ತಂಬಿಟ್ಟು ಮಾಡುವುದು ಬಹಳ ಸುಲಭ ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು. ಶಿವರಾತ್ರಿ ಸಮಯದಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಈ ತಿಂಡಿ ಸವಿಯುವುದು ನೋಡಬಹುದು.

ಹಾಗಾದ್ರೆ ಈ ಹುರಿಗಡಲೆ ತಂಬಿಟ್ಟು ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಹುರಿಗಡಲೆ ತಂಬಿಟ್ಟು ಉಂಡೆ ಮಾಡಲು ಬೇಕಾಗುವ ಪದಾರ್ಥಗಳು

  • ಹುರಿಗಡಲೆ - 2 ಕಪ್
  • ಬೆಲ್ಲದ ಪುಡಿ- ಒಂದೂವರೆ ಕಪ್
  • ಒಣ ಕೊಬ್ಬರಿ ತುರಿ
  • ಕಡಲೆಕಾಯಿ ಬೀಜ
  • ಬಿಳಿ ಅಥವಾ ಕಪ್ಪು ಎಳ್ಳು
  • ಗಸಗಸೆ 2 ಸ್ಪೂನ್
  • ಏಲಕ್ಕಿ
  • ಎಣ್ಣೆ

ಹುರಿಗಡಲೆ ತಂಬಿಟ್ಟು ಉಂಡೆ ಮಾಡುವುದು ಹೇಗೆ?

ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕಡಲೆ ಬೀಜವನ್ನು ಹುರಿದುಕೊಳ್ಳಿ. 10 ನಿಮಿಷ ಹುರಿದುಕೊಂಡ ಬಳಿಕ ಕಡಲೆಯನ್ನು ತೆಗೆದು ಬದಿಗಿಟ್ಟುಕೊಂಡು ತಣ್ಣಗಾಗಲು ಬಿಡಿ. ಈಗ ಅದೇ ಬಾಣಲೆಗೆ 4 ಸ್ಪೂನ್ ಎಳ್ಳು ಹಾಕಿ 2 ನಿಮಿಷ ಹುರಿದುಕೊಳ್ಳಿ. ನಂತರ ಇದನ್ನು ಕೂಡ ತೆಗೆದಿಟ್ಟುಕೊಳ್ಳಿ. ಈಗ ಹುರಿದ ಬಾಣಲೆಗೆ ಗಸೆಗಸೆ ಕೂಡ ಹಾಕಿ ಅರ್ಧ ನಿಮಿಷ ಬಿಸಿ ಮಾಡಿಕೊಳ್ಳಿ.

ನಂತರ ಗಸೆಗಸೆ ತೆಗೆದು ಬದಿಗಿಟ್ಟುಕೊಳ್ಳಿ. ಈಗ ಮೊದಲು ಹುರಿದುಕೊಂಡ ಕೆಡಲೆ ಬೀಜದ ಸಿಪ್ಪೆ ತೆಗೆದುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್‌ಗೆ ಒಂದು ಕಪ್ ಹುರಿಗಡಲೆ, ಸ್ವಲ್ಪ ಕಡಲೆ ಬೀಜ, ಹುರಿದ ಗೆಸಗಸೆ, ಏಲಕ್ಕಿ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈ ಹುರಿದಿರುವ ಇಡಿ ಕಡಲೆ ಬೀಜವನ್ನು ಅದೇ ಬೌಲ್‌ಗೆ ಹಾಕಿ. ಹಾಗೆ ಎಳ್ಳು, ಕೊಬ್ಬರಿ ತುರಿಯನ್ನು ಇದಕ್ಕೆ ಹಾಕಿ ಎಲ್ಲಾವನ್ನು ಮಿಕ್ಸ್ ಮಾಡಿ.

ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಒಂದೂವರೆ ಕಪ್ ಬೆಲ್ಲದ ಪುಡಿ ಹಾಕಿ ಕರಗಲು ಬಿಡಿ. ಸ್ವಲ್ಪ ನೀರು ಹಾಕಿ ಕರಗಲು ಬಿಡಿ. ಬೆಲ್ಲ ಕರಗಿದ ಬಳಿಕ ಅದನ್ನು ಜರಡಿ ಹಿಡಿದು ಪಾಕ ಮಾತ್ರ ತೆಗೆದುಕೊಳ್ಳಿ. ಈ ಪಾಕವನ್ನು ಬೌಲ್‌ನಲ್ಲಿರುವ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಅಂಟು ಅಂಟಾಗಿ ಇರುವುದರಿಂದ ಅಳತೆ ಮೀರಬಾರದು ಎಂದು ಸ್ವಲ್ಪ ಸ್ವಲ್ಪ ಹಾಕಿಕೊಂಡು ಕೈಯಿಂದ ಕಲಸಿಕೊಳ್ಳಿ. ಇದು ಚಪಾತಿ ಹಿಟ್ಟಿನಂತೆಯೇ ಹದವಾಗಿ ಬರಬೇಕು.

ಇಷ್ಟಾದರೆ ನಿಮಗೆ ಯಾವ ಗಾತ್ರಕ್ಕೆ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಂಡರೆ ಹುರಿಗಡಲೆಯ ತಂಬಿಟ್ಟು ಉಂಡೆ ರೆಡಿಯಾಗುತ್ತದೆ. ನೀವು ಕೂಡ ಈ ಶಿವರಾತ್ರಿಗೆ ಈ ರೀತಿಯ ಸಿಹಿ ಮಾಡಿ ನೋಡಿ.

[ of 5 - Users]
X
Desktop Bottom Promotion