ಗಣೇಶನಿಗೆ ಬಲು ಪ್ರಿಯ ಈ ಅತ್ರಸ, ಈ ರುಚಿ ತಿಂಡಿ ಮಾಡುವುದು ಬಲು ಸುಲಭ

Posted By:

ಗಣೇಶ ಚತುರ್ಥಿ ಇನ್ನೇನು ಸದ್ಯದಲ್ಲಿಯೇ ಆರಂಭವಾಗಲಿದೆ. ಮೂರು ದಿನಗಳ ಸಂಭ್ರಮದ ಈ ಹಬ್ಬದಲ್ಲಿ ಗಣೇಶನಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಮಾಡುವುದು ವಾಡಿಕೆ. ಪ್ರತಿಯೊಬ್ಬರ ಮನೆಯಲ್ಲಿಯೂ ತರಾವರಿ ತಿನಿಸುಗಳನ್ನು ಮಾಡುತ್ತಾರೆ.

ಇವತ್ತು ನಾವು ಗಣೇಶನಿಗೆ ಇಷ್ಟವಾದ ಒಂದು ಖಾದ್ಯದ ರೆಸಿಪಿಯನ್ನು ನೋಡೋಣ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಭಾಗದಲ್ಲಿ ಈ ತಿನಿಸಿಗೆ ಅತ್ರಸ ಎಂದು ಹೇಳುತ್ತಾರೆ. ಮತ್ತು ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಕಜ್ಜಾಯ ಎಂದು ಹೇಳುತ್ತಾರೆ.

Ganesha Chathurti Special recipe

ಬೇಕಾಗುವ ಸಾಮಗ್ರಿಗಳು
ಅಕ್ಕಿ - 11/2ಕೆಜಿ
ಕಾಯಿತುರಿ - ಮೂರು ತೆಂಗಿನ ಕಾಯಿಗಳ ತುರಿ
ಬೆಲ್ಲ - ಅರ್ಧ ಕೆಜಿ (ಹೆಚ್ಚು ಸ್ಪಿಟ್ ಬೇಕಿದ್ದರೆ ಜಾಸ್ತಿ ಬೆಲ್ಲ ಬಳಸಿ)
ಬಿಳಿ ಎಳ್ಳು - ಸ್ವಲ್ಪ
ತುಪ್ಪ ಅಥವಾ ಎಣ್ಣೆ - ಕರಿಯಲು
ಮಾಡುವ ವಿಧಾನ
ಈ ಕಜ್ಜಾಯ ಮಾಡಲು ರೇಶನ ಅಕ್ಕಿ ಬಳಸುವುದು ಒಳ್ಳೆಯದು. ಸೋನಾ ಮಸೂರಿ ಅಥವ ಬೇರೆ ಊಟದ ಅಕ್ಕಿ ಅಷ್ಟು ಚೆನ್ನಾಗಿ ಆಗುವದಿಲ್ಲ.
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಒಂದು ಗಂಟೆ ನೆನೆಯಲು ಬಿಡಬೇಕು. ನಂತರ ನೀರನ್ನು ಬಸಿದು ಒಂದು ಕಾಟನ್ ಬಟ್ಟೆಯ ಮೇಲೆ ಅದನ್ನು ತಿಳುವಾಗಿ ಹರಡಬೇಕು. ಬಿಸಿಲಿನಲ್ಲಿ ಒಣಗಿಸಬೇಡಿ. ನೆರಳಿನಲ್ಲಿ ಒಣಗಿಸಬೇಕು.

  • ಅಕ್ಕಿ ಸಂಪೂರ್ಣವಾಗಿ ಒಣಗಿದ ನಂತರ ಅದನ್ನು ಮಿಕ್ಸರ್ ಜಾರ್ಗೆ ಹಾಕಿ ಹಿಟ್ಟು ಮಾಡ್ಬೇಕು. ಹಿಟ್ಟು ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಬೇಕು.
  • ಇದಕ್ಕೆ ಕಾಯಿ ತುರಿ, ಬೆಲ್ಲ, ಹಾಗೆ ಕಾಯಿ ಒಡೆದಾಗ ಸಿಗುವ ನೀರನ್ನು ಇದಕ್ಕೆ ಸೇರಿಸಿ ಕೊಳ್ಳಬೇಕು. ರುಚಿ ಹೆಚ್ಚಾಗುತ್ತದೆ. ತೆಂಗಿನ ಕಾಯಿ ನೀರು ಕಡಿಮೆ ಎನಿಸಿದರೆ ಸ್ವಲ್ಪ ನೀರನ್ನು ಸೇರಿಸಿ ಕೊಳ್ಳಬೇಕು. ಸಾಮಾನ್ಯವಾಗಿ ಹಳ್ಳಿ ಕಡೆಯಲ್ಲಿ ಕಣಗಿಲ ಮರದ , ಅಥವ ಅತ್ತಿ ಮರದ ಬೇರನ್ನು ಕಡಿದಾಗ ಬರುವ ನೀರನ್ನು ಉಪಯೋಗಿಸುತ್ತಾರೆ.
  • ಈಗ ಮಿಶ್ರಣವನ್ನ ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಮದ್ಯಮ ಉರಿಯಲ್ಲಿ ಇಟ್ಟು ಕಾಯಿಸಬೇಕು. ಈ ಮಿಶ್ರಣ ಕುದಿಯುವಾಗ ಸ್ವಲ್ಪ ತುಪ್ಪ, ಬಿಳಿ ಎಳ್ಳು ಸೇರಿಸಿ ತಿರುವುತ್ತಾ ಇರಬೇಕು. ಅದನ್ನು ಉಂಡೆ ಮಾಡುವಷ್ಟು ಗಟ್ಟಿಯಾಗಿ ಕಾಯಿಸಿ ಕೊಳ್ಳಬೇಕು.
  • ಬಳಿಕ ಗ್ಯಾಸ್ ಆಫ್ ಮಾಡಿ ಬಿಸಿ ಆರಿದ ನಂತರ, ಅಂಗೈಗೆ ಸ್ವಲ್ಪ ತುಪ್ಪ ಸವರಿ ಕೊಂಡು ಉಂಡೆಗಳನ್ನಾಗಿ ಮಾಡಿ. ನಂತರ ಉಂಡೆಯ ಮಧ್ಯ ಸ್ವಲ್ಪ ಒತ್ತಿ ಬೇಕಾದ ಗಾತ್ರದಲ್ಲಿ ಮಾಡಿಕೊಂಡು ಎಣ್ಣೆ ಅಥವಾ ತುಪ್ಪ ದಲ್ಲಿ ಕರಿಯಬೇಕು. ತುಪ್ಪದಲ್ಲಿ ಕರಿದ ರುಚಿ ಬಹಳ ಚೆನ್ನಾಗಿರುತ್ತದೆ. ಕರಿಯುವಾಗ ಚಿಕ್ಕ ಉರಿಯಲ್ಲಿ ಬೇಯಿಸಬೇಕು. ಕರಿದ ಕಜ್ಜಾಯವನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಇಟ್ಟರೆ ಬಹಳ ದಿನಗಳವರೆಗೆ ತುಂಬಾ ಮೃದುವಾಗಿ ಇರುತ್ತದೆ. ಗಣೇಶನಿಗೆ ಪ್ರಿಯವಾದ ಈ ಕಜ್ಜಾಯವನ್ನು ನೀವು ಮಾಡಿ ಮತ್ತು ಇದರ ಸವಿಯನ್ನು ಎಂಜಾಯ್ ಮಾಡಿ.
[ of 5 - Users]
X
Desktop Bottom Promotion