For Quick Alerts
ALLOW NOTIFICATIONS  
For Daily Alerts

Datta Jayanti 2022: ದತ್ತ ಜಯಂತಿ: ಪೂಜಾ ವಿಧಿಗಳೇನು, ಜೀವನದ ಕಷ್ಟ ನಿವಾರಣೆಗೆ ಪಠಿಸಬೇಕಾದ ಸ್ತೋತ್ರಗಳು

|

ಮಾರ್ಗಶಿರ ಮಾಸದ ಪೂರ್ಣಿಮಾ ತಿಥಿಯಂದು ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುವುದು. ಇದನ್ನು ದತ್ತ ಜಯಂತಿ ಎಂದು ಕೂಡ ಕರೆಯಲಾಗುವುದು. ಈ ದಿನ ಭಗವಾನ್‌ ದತ್ತಾತ್ರೇಯರು ಜನಿಸಿದರು ಎಂದು ಹೇಳಲಾಗುವುದು. ಈ ವರ್ಷ ಡಿಸೆಂಬರ್ 7 ಬುಧವಾರದಂದು ಬಂದಿದೆ.

ದತ್ತಾತ್ರೇಯ ಜಯಂತಿ ಪೂಜಾ ಮುಹೂರ್ತ, ಪೂಜಾ ವಿಧಿ, ಮಹತ್ವ ಹಾಗೂ ಶುಭ ಕೋರಲು ಶುಭಾಶಯ ಪೋಸ್ಟ್‌ರ್ ನೀಡಲಾಗಿದೆ ನೋಡಿ:

ಶುಭ ಮುಹೂರ್ತ:
ಪೂರ್ಣಿಮೆ ತಿಥಿ ಪ್ರಾರಂಭ: ಡಿಸೆಂಬರ್ 7 ಬೆಳಗ್ಗೆ 08:01ಕ್ಕೆ
ಪೂರ್ಣಿಮೆ ತಿಥಿ ಮುಕ್ತಾಯ: ಡಿಸೆಂಬರ್ 8 ಗುರುವಾರ ಬೆಳಗ್ಗೆ 9:37ಕ್ಕೆ

Dattatreya Jayanti

ದತ್ತ ಜಯಂತಿ ಪೂಜಾ ವಿಧಿ
* ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು ಅಥವಾ ಮನೆಯಲ್ಲಿ ಮಾಡುವುದಾದರೆ ಸ್ನಾನದ ನೀರಿಗೆ ಸ್ವಲ್ಪ ಗಂಗಾಜಲ ಬೆರೆಸಿ ಮಾಡಿ.
* ನಂತರ ದೇವರ ಕೋಣೆಯನ್ನು ಶುದ್ಧ ಮಾಡಿ
* ನಂತರ ದೀಪ ಬೆಳಗಿ ಧೂಪ ಹಚ್ಚಿ ಹೂಗಳು ಹಾಗೂ ನೈವೇದ್ಯ ಅರ್ಪಿಸಬೇಕು.
ಆತ್ಮ ಹಾಗೂ ಮನಸ್ಸಿನ ಶುದ್ಧೀಕರಣಕ್ಕೆ "ಓಂ ಶ್ರೀ ಗುರುದೇವ್ ದತ್ತ" ಹಾಗೂ "ಶ್ರೀ ಗುರು ದತ್ತಾತ್ರೇಯ ನಮಃ" ಮಂತ್ರಗಳನ್ನು ಹೇಳುತ್ತಾ ಪೂಜೆ ಮಾಡಿ.

ಶ್ರೀ ದತ್ತಾತ್ರೇಯ ಸ್ತೋತ್ರಗಳು
ಅವಧೂತ ಗೀತಾ
ಔದುಂಬರ ಪಾದುಕಾ ಸ್ತೋತ್ರಂ
ಶ್ರೀ ದತ್ತ ಅಥರ್ವಶೀರ್ಷಂ
ಶ್ರೀ ದತ್ತ ಅಪರಾಧ ಕ್ಷಮಾಪಣ ಸ್ತೋತ್ರಂ

ಶ್ರೀ ದತ್ತಾವತಾರ ಸ್ತೋತ್ರ ಸುಳಾದಿ
ದತ್ತಾ ಯೋಗೀಶ ಯೋಗಿ ಯೋಗಶಕ್ತಿಪ್ರದ
ದತ್ತಾ ಪ್ರಣತರಿಗೆ ಪ್ರಣವಪ್ರತಿಪಾದ್ಯ
ದತ್ತ ಸ್ವತಂತ್ರದಿಂದ ಜಗಕೆ ಸತ್ಕರ್ಮ ಪ್ರ -
ದತ್ತ ಮಾಡಿಕೊಡುವ ದೀಪ್ತಾ ಚೂಡಾ
ದತ್ತಾ ಚೀರಾಂಬರಗೇಯಾ ವಲ್ಕಲವಾಸ
ದತ್ತಾ ದುರ್ವಾಸ ಚಂದ್ರ ಸಹಭವ ಭವ್ಯಹಂಸಾ
ನಿತ್ಯ ಪ್ರಕೃತಿ ರಮಣಾ ಮೂಲಮೂರ್ತಿ
ಅತ್ರಿನಂದನ ಕೃಷ್ಣಾಂಜನ ಬ್ರಹ್ಮಸೂತ್ರ ಪ -
ವಿತ್ರ ಧಾರಣದೇವಾ ದೇವವಂದ್ಯಾ
ಸತ್ಯಕ್ರಿಯಾ ಸತತ ಸಾವಿರ ಹಸ್ತವರದ
ದೈತ್ಯ ಮೋಹಕ ರೂಪಾ ಘನ ಪ್ರತಾಪಾ
ಅತ್ಯಂತ ಜಗದ್ಭರಿತಾ ಜನನಾದಿ ಶೂನ್ಯ ಸ -
ರ್ವೋತ್ತಮ ಮಹಾ ಪ್ರಭುವೆ ಸ್ವಪ್ರಭಾವಾ
ಕೀರ್ತಿ ಪಾವನವಪುಷ ವೈಕುಂಠವಾಸ ತಪೋ -
ವಿತ್ತ ಸುಚಿತ್ತಾ ಸಚ್ಚಿದಾನಂದಾತ್ಮಾ ಉತ್ತುಂಗ -
ವ್ಯಾಪ್ತ ಗೋಪ್ತಾ ಪ್ರಾಪ್ತಾ ಸಂತೃಪ್ತಾ
ತಪ್ತಾಂಚನಗಾತ್ರಾ ನಿರ್ಜರಾಪ್ತಾ
ಚಿತ್ರ ವಿಚಿತ್ರ ಕರ್ಮ ವಿಜಯವಿಟ್ಠಲರೇಯಾ
ದತ್ತಾವತಾರ ಭಗದತ್ತಾಯುಧಧಾರಿ ॥ 1 ॥

ಮಟ್ಟತಾಳ

ದತ್ತ ಜ್ಞಾನದತ್ತಾ ದತ್ತ ಭಕುತಿದತ್ತಾ
ದತ್ತ ಶ್ರವಣದತ್ತಾ ದತ್ತ ಮನನದತ್ತಾ
ದತ್ತ ದಾನದತ್ತಾ ದತ್ತಾ ಸಾಧನದತ್ತಾ
ದತ್ತ ಚಿತ್ತದತ್ತಾ ದತ್ತವಿರಕ್ತಿ ದತ್ತಾ
ದತ್ತ ಮಾರ್ಗದತ್ತಾ ದತ್ತಾ ದತ್ತಾ ಇಷ್ಟದತ್ತಾ
ದತ್ತ ಸರ್ವದತ್ತಾ ದತ್ತ ಭೋಗದತ್ತಾ
ದತ್ತಾನಂದದತ್ತಾ ದತ್ತ ತನ್ನನೆದತ್ತಾ ದತ್ತಾತ್ರೇಯ
ದತ್ತ ಮೂರುತಿ ನಮ್ಮ ವಿಜಯವಿಟ್ಠಲರೇಯಾ
ದತ್ತನೆಂದವನಿಗೆ ದತ್ತ ಮಗನಾಹಾ ॥ 2 ॥

ತ್ರಿವಿಡಿತಾಳ

ಎಣಿಸಿ ಪೇಳುವನಾರು ನಿನ್ನ ಸ್ವಭಾವವಾ
ಅನುಸೂಯ ವರಸೂನು ಕರ್ದಮ ದೌಹಿತ್ರ
ಗುಣಸಿ ಕೊಂಡಾಡಿದ ಜನರಿಗೆ ಭೀತಿ ಕರ್ಮಾ
ಜನಿಸುವ ಬಗೆಯಿಲ್ಲ ಇಳಿಯೊಳಗೆ
ನೆನೆಸಿದವರ ಮಸ್ತಕದಲ್ಲಿ ಸುಳಿವ
ಮನಸಿಜ ಜನಕ ಜಗನ್ಮೋಹನಾ
ಕನಸಿನೊಳಾದರೂ ಕಳವಳಿಕಿಯಿಂದಾಡೆ
ಮನ ಸೂರೆಗೊಡುವಾನು ಮಂದಹಾಸಾ
ಅನುಸರಿಸಿ ತಿರುಗುವ ಭಕ್ತರೊಡನೆ ದತ್ತಾ
ಘನ ಶುದ್ಧಾತ್ಮನು ಕಾಣೊ ಗೌರವರ್ಣಾ
ಉಣಿಸುವ ತನ್ನಯ ನಾಮಾಮೃತವ ವ -
ಕ್ಕಣಿಸುವಂತೆ ನಿತ್ಯ ಪ್ರೇರಿಸುವಾ
ಜನ ಸುಮ್ಮನಿರದಲೆ ಜಪಿಸಿ ಈತನ ನಾಮಾ
ಮಣಿ ಸಾರಿಸಾರಿಗೆಲಿ ಎಣಿಕೆ ಗೈಯೊ
ಗುಣ ಸಾರಾತರ ನಮ್ಮ ವಿಜಯವಿಠ್ಠಲರೇಯಾ
ಮನಸಿನೊಳಗೆ ನಿಲುವಾ ನಂಬಿದವಗೆ ದತ್ತಾ ॥ 3 ॥

ಅಟ್ಟತಾಳ

ಯೋಗಾಸನಾ ಅಕ್ಷಮಾಲಾ ಜ್ಞಾನ ಮುದ್ರ
ಯೋಗಶಾಸ್ತ್ರ ಕರ್ತ ವರ್ತಮಾನಕಾಲ
ಭೂಗೋಲ ಚರಿಸುವ ಬ್ರಹ್ಮಚರ್ಯಧಾರ್ಯಾ
ಶ್ರೀಗುರು ಅಜಗುರು ಸರ್ವಜಗದ್ಗುರು
ಭಾಗೀರಥಿ ತೀರ ಬದರಿನಿವಾಸ ಅ -
ಯೋಗ ಕರ್ಮಹಾರಿ ದತ್ತ ದಾನವರಿಗೆ
ಭೋಗ ಶಾಯಿ ಮುಕ್ತಾಭೋಗ ಭಾಗಾಧೇಯಾ
ಭಾಗ ತ್ರಯಗುಣ ನಾಶ ಗುಣಾಂಬುಧಿ
ರಾಗವಿದೂರ ಸರಾಗ ಮಣಿ ನಖಾ
ಪೂಗರ್ಭನೆನಿಸುವ ಈ ತನ್ನ ತಾತನ್ನ
ಆಗಸದಲಿ ನೋಡಿ ತಾತನ್ನ ಐಶ್ವರ್ಯ
ಯಾಗಾ ತೀರ್ಥಯಾತ್ರಿ ನಾನಾ ಪುಣ್ಯ ಸಂ -
ಯೋಗದಿಂದಧಿಕ ದತ್ತನ ಸ್ಮರಣೆ ಒಮ್ಮೆ
ಜಾಗು ಮಾಡದೆ ಮಾಡೆ ಮುದದಿ ಬಂದೊದಗೋದು
ಜಾಗರತನದಿಂದ ಮಹಪುಣ್ಯ ಪ್ರತಿದಿನ
ಸಾಗರ ಮಂದಿರ ವಿಜಯವಿಟ್ಠಲ ಭವ -
ರೋಗದ ವೈದ್ಯ ವೈಲಕ್ಷಣ್ಯ ॥ 4 ॥

ಆದಿತಾಳ

ಜಯ ಜಯವೆಂದು ದತ್ತಮಂತ್ರವ
ನಯಮತಿಯಿಂದ ಜಪಿಸಲು
ತ್ರಯ ಪರಿಚ್ಛೇದಕ ಛೇದನಾ
ಭಯಪರ್ವತ ವಿಭೇದನಾ
ಅಯುತದುರಿತ ರೋದನಾ
ಕ್ಷಯರಹಿತ ಸನ್ಮೋದನಾ
ಜಯಜಯವೆಂದು ದತ್ತಾ ಮಂತ್ರಾ
ಪ್ರಿಯವಾಗಿಪ್ಪದು ಗತಿಲಬ್ಧಾ
ಲಯವಾಗುವದು ಪ್ರಾರಬ್ಧಾ
ಜಯಜಯವೆನ್ನನೊ ಬಲುಲಬ್ಧಾ
ತ್ರಯ ಜಗದೊಳವನೆ ತಬ್ಧಾ
ಸುಯತಿಗಳು ನುಡಿದ ಶಬ್ಧಾ
ಪಯಳಾಯಂತಿದೆ ನೋಡಬ್ಧಾ
ದಯಪೂರ್ಣ ನಮಗೆ ವಿಜಯವಿಠ್ಠಲ ದತ್ತ
ಬಯಕೆ ಕೊಡುವದು ಒಲಿದು ಬಿಡಬ್ಧ ಅಬ್ಧಾ ॥ 5 ॥

ಜತೆ

ದತ್ತ ಪ್ರಧಾನ ವಿದ್ಯಾ ಸಪ್ರದಾತಾ ಪಾರ -
ತಂತ್ರರಹಿತ ವಿಜಯವಿಟ್ಠಲ ಪ್ರಜ್ಞಾ ॥

ದತ್ತ ಜಯಂತಿ ಮಹತ್ವ

ದತ್ತ ಜಯಂತಿಯಂದು ದತ್ತಾತ್ರೇಯರಿಗೆ ಪೂಜೆ ಮಾಡುವುದರಿಂದ ಜೀವನದಲ್ಲಿರುವ ಸಮಸ್ಯೆಗಳು ದೂರಾಗಿ ಒಳ್ಳೆಯ ಪ್ರತಿಫಲವನ್ನು ಪಡೆಯಬಹುದು. ಅಲ್ಲದೇ ಜಯಂತಿಯ ಮುನ್ನಾದಿನ ಮಾಡುವ ಪೂಜೆಯಿಂದ ಪೂರ್ವಜರಿಗೆ ಮುಕ್ತಿ ಹಾಗೂ ಅವರಿಂದ ಉಂಟಾಗುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು.

English summary

Dattatreya Jayanti 2022 Date, Time, History, Story, Puja Vidhi and Significance in Kannada

Dattatreya Jayanti 2022 Date, Time, History, Story, Puja Vidhi and Significance Wishes, Images, Quotes, Messages In Kannada
X
Desktop Bottom Promotion