Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಈ ಮೂಢ ನಂಬಿಕೆಗಳ ಹಿಂದಿರುವ ವೈಜ್ಞಾನಿಕ ಸತ್ಯಗಳು
ಲೇಖನ ಓದುವ ಮುನ್ನ ನಿಮಗೊಂದು ಕತೆ ಹೇಳುತ್ತೇವೆ. ಒಂದು ಊರಿನಲ್ಲಿ ಒಬ್ಬ ಶಾಸ್ತ್ರಿ ಇದ್ದ. ಆತ ಪೂಜೆ ತನ್ನ ತಂದೆಗೆ ತಿಥಿ ಮಾಡುವಾಗ ಮನೆಯಲ್ಲಿ ಬೆಕ್ಕನ್ನು ಕಂಬಕ್ಕೆ ಕಟ್ಟಿಹಾಕಿ ನಂತರ ತಿಥಿ ಕರ್ಮ ಮಾಡುತ್ತಿದ್ದ. ಆತನ ಕಾಲವಾಯಿತು, ಮನೆಯಲ್ಲಿದ್ದ ಬೆಕ್ಕೂ ಮರಣವೊಂದಿತು.
ಆತನ ಮಗ ತನ್ನ ತಂದೆ ತಿಥಿ ಕಾರ್ಯ ಮಾಡುವಾಗ ಪಕ್ಕದ ಮನೆಯ ಬೆಕ್ಕನ್ನು ತಂದು ಕಂಬಕ್ಕೆ ಕಟ್ಟಿ ಹಾಕಿ ತಿಥಿ ಕರ್ಮ ಮಾಡಿದನು. ಏಕೆ ಹೀಗೆ ಮಾಡಿದ ಅಂದರೆ ಆತನ ತಂದೆ ಮಾಡುತ್ತಿದ್ದ ಅಲ್ಲ, ಹಾಗಾಗಿ ಆ ರೀತಿ ಮಾಡಿದ. ಆದರೆ ಆತನ ತಂದೆ ಪೂಜೆ ಮಾಡುವಾಗ ಬೆಕ್ಕು ಬಂದು ಪೂಜೆ ಸಾಮಗ್ರಿಗೆ ಬಾಯಿ ಹಾಕುವುದನ್ನು ತಪ್ಪಿಸಲು ಮನೆಯಲ್ಲಿದ್ದ ಬೆಕ್ಕನ್ನು ಕಂಬಕ್ಕೆ ಕಟ್ಟಿ ಹಾಕಿದ. ಮಗ ಅಪ್ಪ ಮಾಡುತ್ತಿದ್ದ ಎಂದು ಪಕ್ಕದ ಮನೆಯ ಬೆಕ್ಕು ತಂದು ಕಂಬಕ್ಕೆ ಕಟ್ಟಿ ಹಾಕಿದ.

ಕೆಲವೊಂದು ಆಚರಣೆಗಳು ಹಾಗೆಯೇ, ನಮ್ಮ ಹಿರಿಯರು ಯಾವುದೋ ಒಳ್ಳೆಯ ಉದ್ದೇಶಕ್ಕೆ ಕೆಲವೊಂದು ನಿಯಮಗಳನ್ನು ಪಾಲಿಸುತ್ತಾ ಬಂದಿರುತ್ತಾರೆ. ಆದರೆ ಕಾಲ ಕ್ರಮೇಣ ಅವುಗಳು ಅದರ ಹಿಂದಿನ ಉದ್ದೇಶ ಮರೆತು ಮೂಢನಂಬಿಕೆಯ ಆಚರಣೆಗಳಾದವು. ಇಲ್ಲಿ ನಾವು ಕೆಲವೊಂದು ಮೂಢ ನಂಬಿಕೆಗಳು ಹಾಗೂ ಅದರ ಹಿಂದಿನ ವೈಜ್ಞಾನಿಕ ದೃಷ್ಟಿಕೋನದ ಬಗ್ಗೆ ಹೇಳಿದ್ದೇವೆ ನೋಡಿ:

ಬೆಕ್ಕು ಅಡ್ಡ ಬಂದರೆ ಅದು ಅಪಶಕುನವೇ?
ಎಲ್ಲಿಗಾದರೂ ಹೋಗುವಾಗ ಪಾಪ ಬೆಕ್ಕೊಂದು ಅಡ್ಡ ಬಂದ್ರೆ ಅಪಶಕುನ ಎಂದು ಬಾಯಿ ಬಡಿದುಕೊಳ್ಳುತ್ತೇವೆ. ನಮ್ಮಂತೆ ಬೆಕ್ಕು ಕೂಡ ಎಲ್ಲಿಗೋ ಹೊರಟರಬಹುದು ಎಂದು ಭಾವಿಸುವವರು ತುಂಬಾ ಕಡಿಮೆ. ಬೆಕ್ಕು ಅಡ್ಡ ಬಂದ ತಕ್ಷಣ ಗಾಡಿ ನಿಲ್ಲಿಸಿ ನಂತರ ಹೊರಡುತ್ತಾರೆ. ಇನ್ನು ಕೆಲವರು ಮನೆಗೆ ವಾಪಾಸ್ಸಾಗುತ್ತಾರೆ.
ನಮ್ಮ ಹಿರಿಯರು ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅಂತಿದ್ರು ಅದನ್ನೇ ಏಕಿರಬಹುದೆಂದು ಚಿಂತಿಸದೆ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.
ಹಿರಿಯರು ನಾವು ಹೋಗುವಾಗ ಬೆಕ್ಕು ಅಡ್ಡಬರಬಾರದು ಎಂದು ಏಕೆ ಹೇಳಿರಬಹುದು ಎಂದು ಯೋಚಿಸುವುದಾದರೆ ಹಿಂದಿನ ಕಾಲದಲ್ಲಿ ಜನರು ಕಾಲ್ನಡಿಗೆ ಅಥವಾ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದರು. ಎತ್ತಿನ ಗಾಡಿಯಲ್ಲಿ ಅಥವಾ ಕುದುರೆ ಗಾಡಿಯಲ್ಲಿ ರಾತ್ರಿ ಹೊತ್ತು ಹೋಗುವಾಗ ಬೆಕ್ಕು ಅಡ್ಡ ಬಂದ್ರೆ ಅದರ ಕಣ್ಣುಗಳು ಕತ್ತಲಿನಲ್ಲಿ ತೀಕ್ಷ್ಣವಾಗಿ ಹೊಳೆಯುವುದರಿಂದ ಭಯಬಿದ್ದು ಕುದುರೆ ಅಥೌಆ ಎತ್ತುಗಳು ಓಡುತ್ತವೆ, ಇದರಿಂದ ಅನಾಹುತವಾಗುವ ಸಾಧ್ಯತೆ ಇತ್ತು. ಆದ್ದರಿಂದಾಗಿ ಹಾಗೇ ಹೇಳುತ್ತಿದ್ದರು.

ಮಂಗಳವಾರ ಕೂದಲು ಕತ್ತರಿಸಬಾರದು
ಮಂಗಳವಾರ ಕೂದಲು ಕತ್ತರಿಸಲು ಹೋಗುತ್ತೇನೆ ಎಂದು ಹೊರಟರೆ ಮನೆಯ ಹಿರಿಯರು ಬೈಯುತ್ತಾರೆ, ಮಂಗಳವಾರ ಕೂದಲು ಕತ್ತರಿಸಬಾರದೆಂದು ಹೇಳುತ್ತಾರೆ. ಮಂಗಳವಾರ ಕೂದಲು ಏಕೆ ಕತ್ತರಿಸಬಾರದು ಎಂದು ನೋಡುವುದಾದರೆ ಅದರ ಹಿಂದೆ ಒಂದು ಕತೆಯಿದೆ.
ಹಿಂದೆ ಹೊಲಗಳಲ್ಲಿ ವಾರವಿಡೀ ದುಡಿಯುವ ರೈತರು ಸೋಮವಾರ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆ ದಿನ ಕೂದಲು ಕತ್ತರಿಸುವುದು, ಗಡ್ಡ ತೆಗೆಯುವುದು ಅಂತ ಕ್ಷೌರಿಕ ಬ್ಯುಸಿಯಾಗಿರುತ್ತಿದ್ದ. ನಂತರ ಮಂಗಳವಾರ ತಾನು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಆ ದಿನ ಆತ ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಮಂಗಳವಾರ ಕೂದಲು ತೆಗೆಯುತ್ತಿರಲಿಲ್ಲ. ಈಗ ಜೀವನ ಶೈಲಿ ಬದಲಾಗಿದೆ ಇದನ್ನು ಪಾಲಿಸುವವರು ಸಂಖ್ಯೆಯೂ ಕಡಿಮೆಯಾಗಿದೆ.

ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು
ನಮ್ಮ ಪೂರ್ವಜರಿಗೆ ಭೂಮಿಯ ಗುಣಗಳ ಬಗ್ಗೆ ಅರಿವು ಇತ್ತು. ಆದ್ದರಿಂದಲೇ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಹೇಳುತ್ತಿದ್ದರು. ಉತ್ತರ ದಿಕ್ಕಿನಲ್ಲಿ ಏಕೆ ಮಲಗಬಾರದೆಂದು ವೈಜ್ಞಾನಿಕವಾಗಿ ಹೇಳುವುದಾದರೆ ಉತ್ತರ ದಿಕ್ಕಿನಲ್ಲಿ ಅಯಸ್ಕಾಂತೀಯ ಗುಣ ಅಧಿಕವಿರುತ್ತದೆ. ಆ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ದೇಹದ ರಕ್ತ ಸಂಚಲದಲ್ಲಿ ವ್ಯತ್ಯಾಸ ಉಂಟಾಗುವುದು, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಪೂರ್ವ ದಿಕ್ಕಿಗೆ ತಲೆಹಾಕಿ ಮಲಗಿದರೆ ಯಾವುದೇ ಅಪಾಯವಿಲ್ಲ.

ಮುಟ್ಟಿನ ಸಮಯದಲ್ಲಿ ಮಹಿಳೆಯರು ದೇವಸ್ಥಾನ, ಅಡುಗೆ ಮನೆಗೆ ಹೋಗಬಾರದು
ಇದನ್ನು ಇಂದಿಗೂ ಎಷ್ಟೋ ಕಡೆ ಪಾಲಿಸಿಕೊಂಡು ಬರುತ್ತಿದ್ದಾರೆ. ಮಹಿಳೆಯ ಮುಟ್ಟಾದರೆ ಆಕೆಅಶುಚಿ ಎಂಬ ದೃಷ್ಟಿಯಿಂದ ನೋಡಲಾಗುತ್ತಿದೆ. ಆದರೆ ಇದನ್ನು ವೈಜ್ಞಾನಿಕ ದೃಷ್ಟಿಕೋನಕ್ಕಿಂತ ವೈಚಾರಿಕ ದೃಷ್ಟಿಯಿಂದ ನೋಡಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯ ಜೀವನ ಅಡುಗೆ ಮನೆಯಲ್ಲಿಯೇ ಕಳೆದು ಹೋಗುತ್ತಿತ್ತು.
ಕೂಡು ಕುಟುಂಬದಲ್ಲಿದ್ದ ಆಕೆಗೆ ಬಿಡುವುಲ್ಲದಷ್ಟು ಕೆಲಸಗಳಿರುತ್ತಿದ್ದೆವು. ಮುಟ್ಟಿನ ಸಮಯದಲ್ಲಿ ಆಕೆ ದೇಹ ಬಳಲಿರುತ್ತದೆ. ಆದ್ದರಿಂದ ವಿಶ್ರಾಂತಿ ನೀಡುವ ಸಲುವಾಗಿ ಅಡುಗೆ ಮನೆಗೆ ಬರದಂತೆ, ಯಾವುದೇ ಕೆಲಸದಲ್ಲಿ ತೊಡಗದಂತೆ, ಒಂದು ಕಡೆ ಕೂತು ವಿಶ್ರಾಂತಿ ತೆಗೆದುಕೊಳ್ಳುವಂತೆ ನಮ್ಮ ಪೂರ್ವಜರು ಪ್ರಾರಂಭಿಸಿದ ಪದ್ಧತಿ ಕ್ರಮೇಣ ಮೂಢನಂಬಿಕೆಯಾಗಿ ಬದಲಾಯಿತು. ಇನ್ನು ದೇವಾಲಯಗಳಿಗೆ ಏಕೆ ಹೀಗಬಾರದು ಎಂಬುವುದಕ್ಕೆ ಆಗೀನ ಕಾಲದಲ್ಲಿ ದೂರದ ದೇವಾಲಯಗಳಿಗೆ ನಡೆದುಕೊಂಡೇ ಹೋಗಬೇಕಾಗಿತ್ತು, ದೇಹದಲ್ಲಿ ಬಳಲಿಕೆ ಇರುವುದರಿಂದ ದೇವಾಲಯಕ್ಕೆ ಹೋಗಬಾರದು ಎಂದು ಹೇಳಿರಬಹುದು.
ಮುಟ್ಟಾಗುವುದು ಪ್ರಕೃತಿ ನಿಯಮ, ಆದ್ದರಿಂದ ಅದನ್ನು ಮೈಲಿಗೆ ಎಂದು ಭಾವಿಸುವ ದೃಷ್ಟಿಕೋನವನ್ನು ಈಗಲಾದರೂ ಬದಲಾಯಿಸಬೇಕಾಗಿದೆ.

ಸಂಜೆ ಬಳಿಕ ಉಗುರು ಕತ್ತರಿಸುವುದು, ಕ್ಷೌರ ಮಾಡುವುದು ಮಾಡಬಾರದು
ಹಿಂದಿನ ಕಾಲದಲ್ಲಿ ವಿದ್ಯುತ್ ಇರಲಿಲ್ಲ, ರಾತ್ರಿ ಹೊತ್ತಿನಲ್ಲಿ ಮಂದ ದೀಪದ ಬೆಳೆಕಿನಲ್ಲಿ ಸರಿಯಾಗಿ ಕಾಣಿಸ್ತಾ ಇರಲಿಲ್ಲ. ಅಲ್ಲದೆ ಉಗುರನ್ನು ಕತ್ತರಿಸಲು ನೇಲ್ ಕಟರ್ನಂಥ ಪರಿಕರಗಳೂ ಇರಲಿಲ್ಲ, ಹರಿತವಾದ ಕತ್ತಿಯಿಂದ ಉಗುರು ತೆಗೆಯುತ್ತಿದ್ದರು. ಕತ್ತಲಿನಲ್ಲಿ ಉಗುರು ತೆಗೆಯುವಾಗ, ಕ್ಷೌರ ಮಾಡುವಾಗ ಕಾಣಿಸದೆ ಗಾಯವಾಗುವ ಸಾಧ್ಯತೆ ಇದ್ದಿದ್ದರಿಂದ ರಾತ್ರಿ ಹೊತ್ತು ಉಗುರು ಕತ್ತರಿಸುವುದು, ಕ್ಷೌರ ಮಾಡುವುದು ಮಾಡಬಾರದು ಎಂದು ಹೇಳುತ್ತಿದ್ದರು.
ಈಗ ಅದೆಲ್ಲಾ ಪಾಲಿಸುವವರು ಕಡಿಮೆಯಾಗಿರುವುದರಿಂದಲೇ ಪಾರ್ಲರ್, ಸಲೂನ್ ಸಂಜೆ ಆದ ಮೇಲೂ ಓಪನ್ ಇರುತ್ತದೆ.

ರಾತ್ರಿ ಹೊತ್ತು ಕಸ ಗುಡಿಸಬಾರದು
ಇದಕ್ಕೂ ಅಷ್ಟೇ ಬೆಳಕೇ ಕಾರಣ. ಆಗ ವಿದ್ಯುತ್ ದೀಪಗಳಿರಲಿಲ್ಲ. ಜನರು ಸೀಮೆ ಎಣ್ಣೆ ದೀಪ ಅಥವಾ ಎಣ್ಣೆಯ ದೀಪ ಬಳಸುತ್ತಿದ್ದರು. ದೀಪದ ಬೆಳಕಿನಲ್ಲಿ ಗುಡಿಸಿ ಬಿಸಾಡಿದರೆ ಚಿನ್ನಾ, ದುಡ್ಡಿನಂಥ ಅಮೂಲ್ಯವಾದ ವಸ್ತುಗಳು ಬಿದ್ದಿದ್ದರೆ ಅದನ್ನು ಗುಡಿಸಿ ಬಿಸಾಡುವ ಸಾಧ್ಯತೆ ಇತ್ತು, ಹಾಗಾಗಿ ರಾತ್ರಿ ಹೊತ್ತು ಗುಡಿಸಬಾರದು ಎನ್ನುತ್ತಿದ್ದರು.

ಅಶ್ವಥ ಮರದ ಹತ್ತಿರ ರಾತ್ರಿ ವೇಳೆ ಹೋಗಬಾರದು
ರಾತ್ರಿ ಹೊತ್ತು ಅಶ್ವಥ ಮರದ ಬಳಿ ಹೋದರೆ ಅಲ್ಲಿ ದೆವ್ವವಿರುತ್ತದೆ ಎಂಬ ಮೂಢನಂಬಿಕೆ ಜನರಲ್ಲಿದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಅಶ್ವಥ ಮರದ ಸಮೀಪ ರಾತ್ರಿ ಇಂಗಾಲದ ಡೈ ಆಕ್ಸೈಡ್ ಹೆಚ್ಚು ಇರುತ್ತದೆ. ಇಂಗಾಲದ ಡೈ ಅಕ್ಸೈಡ್ ಹೆಚ್ಚಿದ್ದು, ಆಮ್ಲಜನಕ ಕೊರತೆಯಾದರೆ ಉಸಿರಾಡಲು ಕಷ್ಟವಾಗುತ್ತದೆ. ಆದ್ದರಿಂದಾಗಿ ಅಶ್ವಥ ಮರದ ಬಳಿ ಹೋಗಬಾರದು ಎನ್ನುತ್ತಾರೆ.

ಸಾವು ಮನೆಗೆ ಹೋಗಿ ಬಂದರೆ ಸ್ನಾನ ಮಾಡಬೇಕು
ಮನುಷ್ಯ ಸತ್ತ ಮೇಲೆ ಆತನ ದೇಹ ಅಳಿಯಲು ಪ್ರಾರಂಭಿಸುತ್ತದೆ. ದೇಹವನ್ನು ಸುಡುವಾಗ ಕೆಲವೊಮ್ಮೆ ಸೋಂಕು, ಬ್ಯಾಕ್ಟೀರಿಯಾ ಹರಡುವುದು. ಆದ್ದರಿಂದ ಅಂತ್ಯಕ್ರಿಯೆ ಬಳಿಕ ಸತ್ತ ವ್ಯಕ್ತಿಯ ಮನೆಗೆ ಸೆಗಣಿ ನೀರು ಹಾಕಿ ಶುದ್ಧೀಕರಿಸುತ್ತಾರೆ, ಹಾಗೂ ಸಾವು ಮನೆಯಿಂದ ಬಂದ ಮೇಲೆ ಸ್ನಾನ ಮಾಡಿದರೆ ಮನಸ್ಸು ಹಾಗೂ ದೇಹದಲ್ಲಿ ಸ್ವಲ್ಪ ಚೇತರಿಕೆ ದೊರೆಯುತ್ತದೆ.

ಮನೆ ಬಾಗಿಲಿಗೆ ನಿಂಬೆ ಹಣ್ಣು, ಮೆಣಸಿನಕಾಯಿ ತೋರಣ ಕಟ್ಟುವುದು
ನಿಂಬೆಹಣ್ಣು ಹಾಗೂ ಹಸಿ ಮೆಣಸು ಕೀಟಾಣುಗಳನ್ನು ತಡೆಯುತ್ತವೆ, ಮನೆ ಬಾಗಿಲಿಗೆ ಕಟ್ಟಿದರೆ ಕೀಟಾಣುಗಳು ಒಳಗೆ ಬರುವುದಿಲ್ಲ. ಆದ್ದರಿಂದ ಮನೆ ಬಾಗಿಲಿಗೆ ನಿಂಬೆಹಣ್ಣು, ಹಸಿ ಮೆಣಸಿನಕಾಯಿ ಕಟ್ಟುತ್ತಾರೆ.

ಪವಿತ್ರ ನದಿಗೆ ನಾಣ್ಯ ಎಸೆಯುವುದು
ನದಿಗಳಿಗೆ ನಾಣ್ಯ ಎಸೆಯುವುದರಿಂದ ಒಳ್ಳೆಯದಾಗುತ್ತದೆ ಎಂದು ನಾಣ್ಯ ಎಸೆಯುವುದನ್ನು ನೋಡುತ್ತೇವೆ. ಆದರೆ ಏಕೆ ಎಸೆಯುತ್ತಾರೆ ಎಂದು ಆಲೋಚಿಸಲೇ ಹೋಗುವುದಿಲ್ಲ. ನದಿಗೆ ನಾಣ್ಯ ಎಸೆದರೆ ಸಂಪತ್ತು ಹೆಚ್ಚುತ್ತದೆ ಎಮಬುವುದು ಭಕ್ತರ ನಂಬಿಕೆ. ಆದರೆ ಹಿಂದೆ ತಾಮ್ರದ ನಾಣ್ಯಗಳನ್ನು ಬಳಸುತ್ತಿದ್ದರು. ತಾಮ್ರದ ನಾಣ್ಯ ನದಿಗೆ ಎಸೆದರೆ ತಳದಲ್ಲಿ ಇರುತ್ತದೆ. ಅದರ ಮೇಲೆ ಹರಿಯುವ ನೀರಿಗೆ ಅದರ ಖನಿಜಾಂಶ ಮಿಶ್ರವಾಗಿ ನೀರು ಕುಡಿಯಲು ಮತ್ತಷ್ಟು ಯೋಗ್ಯವಾಗುತ್ತದೆ ಎಂದು ಎಸೆದಿರಬಹುದು.

ಕನ್ನಡಿ ಒಡೆದರೆ ಒಳ್ಳೆಯದಲ್ಲ
ಕನ್ನಡಿ ಒಡೆದರೆ ದುರಾದೃಷ್ಟ ಬರುತ್ತದೆ ಎಂಬ ನಂಬಿಕೆಯಿದೆ. ಆದರೆ ಅದೊಂದು ಮೂಢ ನಂಬಿಕೆ ಅಷ್ಟೇ. ಹಿಂದೆ ಕನ್ನಡಿ ದುಬಾರಿಯಾದ ವಸ್ತುವಾಗಿತ್ತು, ಆದ್ದರಿಂದಾಗಿ ಕನ್ನಡಿ ಹೊಡೆಯಬಾರದು ಎಂದು ಹೇಳುತ್ತಿದ್ದರು.



Click it and Unblock the Notifications