ಪದೇ ಪದೇ ಆರೋಗ್ಯ ಸಮಸ್ಯೆಗಳಾಗ್ತಿದ್ಯಾ? ಹಾಗಾದ್ರೆ ಆಯುರ್ವೇದ ಜೀವನ ಶೈಲಿ ಅಳವಡಿಸಿಕೊಳ್ಳಿ

ಭಾರತದಲ್ಲೇ ಹುಟ್ಟಿಕೊಂಡಿರುವ ಮಹಾ ಆಯುರ್ವೇದವು ವಿಶ್ವದಾದ್ಯಂತ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಹಿಂದೆಲ್ಲಾ ನಮ್ಮ ಜನರಿಗೆ ಇಂಗ್ಲೀಷ್‌ ಔಷಧಿಗಳ ಬಗ್ಗೆ ಗೊತ್ತಿರಲಿಲ್ಲ. ಆಯುರ್ವೇದದ ಔಷಧಿಗಳು ಎಂತಹ ರೋಗವನ್ನಾದರೂ ಸುಲಭವಾಗಿ ಗುಣ ಪಡಿಸುವ ಶಕ್ತಿಯನ್ನು ಹೊಂದಿದ್ದವು. ಆನಂತರ ಯಾವಾಗ ಇಂಗ್ಲಿಷ್‌ ಔಷಧಿಗಳು ಭಾರತಕ್ಕೆ ಲಗ್ಗೆ ಇಟ್ಟವೋ ಒಂದು ಸಾರಿ ಜನರೆಲ್ಲಾ ಇಂಗ್ಲೀಷ್‌ ಔಷಧಿಗಳ ಮೋಹಕ್ಕೆ ಬಿದ್ದು ಬಿಟ್ಟರು.

ಆದ್ರೆ ಈಗ ಮತ್ತೆ ಜನ ನಮ್ಮ ಹಳೆಯ ಆಯುರ್ವೇದಕ್ಕೆ ಹಿಂತಿರುಗುತ್ತಿದ್ದಾರೆ. ಈ ಮಾರ್ಡನ್‌ ಜೀವನಶೈಲಿಯಿಂದ ಬೇಸತ್ತಿರುವ ಮಂದಿಗೆ ಆಯುರ್ವೇದದಲ್ಲಿ ಎಲ್ಲಾ ರೋಗಗಳಿಗೂ ಮದ್ದು ಇದೆ ಅನ್ನೋ ವಿಚಾರ ಗೊತ್ತಾಗಿದೆ. ಆಯುರ್ವೇದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳೋದ್ರಿಂದ ನಮ್ಮ ಜೀವನಶೈಲಿಯಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ? ಇದರಿಂದ ಏನೆಲ್ಲಾ ಪ್ರಯೋಜನಗಳಿದೆ ಅನ್ನೋದನ್ನು ತಿಳಿಯೋಣ.

Transform Yourself with These Ayurvedic Lifestyle Changes in Kananda

1. ನಿಮ್ಮ ದಿನಚರಿ ಈ ರೀತಿ ಇರಲಿ
ಪ್ರತಿನಿತ್ಯ ಸ್ಥಿರವಾದ ದಿನಚರಿಯನ್ನು ಅನುಸರಿಸಬೇಕೆಂದು ಆಯುರ್ವೇದ ಹೇಳುತ್ತದೆ. ಬೆಳಗ್ಗೆ ಸರಿಯಾದ ಸಮಯಕ್ಕೆ ಏಳುವುದು, ಯೋಗ, ಧ್ಯಾನ ಮಾಡುವುದು, ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ಪ್ರಮಾಣದಲ್ಲಿ ಊಟ ಹಾಗೂ ತಿಂಡಿಯನ್ನು ಸೇವಿಸಬೇಕು. ಸ್ಥಿರವಾದ ದೈನಂದಿನ ದಿನಚರಿಯನ್ನು ಅನುಸರಿಸುವುದರಿಂದ ನಿಮ್ಮ ದೇಹದ ಆಂತರಿಕ ಗಡಿಯಾರವನ್ನು ನಿಯಂತ್ರಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ನಿಮ್ಮ ಆರೋಗ್ಯಕ್ಕೆ ಯಾವುದೇ ರೀತಿ ತೊಂದರೆ ಇರೋದಿಲ್ಲ.

2. ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸಿ
ಆಯುರ್ವೇದವು ನೀವು ಸೇವಿಸುವ ಆಹಾರದ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ನಿಮ್ಮ ದೇಹಕ್ಕೆ ಸರಿಹೊಂದುವ ಹಾಗೂ ಆಯಾ ಪ್ರದೇಶದಲ್ಲಿ ಬೆಳೆಯುವ ಸ್ಥಳಿಯ ಆಹಾರವನ್ನೇ ನೀವು ಸೇವಿಸಬೇಕು. ಹೆಚ್ಚುವರಿ ಸಕ್ಕರೆ, ಜಿಡ್ಡಿನ ಆಹಾರಗಳನ್ನು ಸೇವಿಸೋದನ್ನು ಆದಷ್ಟು ಕಡಿಮೆ ಮಾಡಿ. ಸಮತೋಲಿತ ಹಾಗೂ ಪೋಷಕಾಂಶಯುಕ್ತ ಆಹಾರಗಳನ್ನೇ ಸೇವಿಸಿ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೇ ಜೀರ್ಣಕ್ರಿಯೆಗೂ ಒಳ್ಳೆಯದು.

3. ಯಾವುದೇ ಅಡ್ಡಿ- ಆತಂಕಗಳಿಲ್ಲದೇ ತಿನ್ನಿ
ಆಯುರ್ವೇದದ ಅಭ್ಯಾಸಗಳಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೇ ತಿನ್ನುವುದು ಕೂಡ ಒಂದು. ಊಟ ಮಾಡುವಾಗ ನಿಮಗೆ ಒಬ್ಬರೆ ಕುಳಿತು ತಿನ್ನಬೇಕು. ಪಕ್ಕದಲ್ಲಿ ಯಾರಾದರೂ ಇದ್ದರೆ ಅವರ ಜೊತೆಗೆ ಮಾತನಾಡೋದಕ್ಕೆ ಹೋಗಬಾರದು. ಟಿವಿ, ಮೊಬೈಲ್‌ ಬಳಸದೇ ಮನಸ್‌ ಪೂರ್ತಿಯಾಗಿ ತಿನ್ನಬೇಕು. ಆಹಾರವನ್ನು ಸಂಪೂರ್ಣವಾಗಿ ಅಗಿಯಿರಿ, ರುಚಿಯನ್ನು ಸವಿಯಿರಿ ಮತ್ತು ನಿಧಾನವಾಗಿ ತಿನ್ನಿರಿ. ಈ ರೀತಿ ತಿಂದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ, ಹಾಗೂ ಆಹಾರದೊಂದಿಗೆ ನಿಮ್ಮ ಸಂಬಂಧ ವೃದ್ಧಿಯಾಗುತ್ತದೆ.

4. ದಿನ ನಿತ್ಯ ವ್ಯಾಯಾಮ ಮಾಡಿ
ಆಯುರ್ವೇದದ ಪ್ರಕಾರ ನಾವು ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ದಿನ ನಿತ್ಯ ವ್ಯಾಯಾಮ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ದೇಹಕ್ಕೆ ಸರಿ ಹೊಂದುವ ಹಾಗೆ ಯೋಗ, ವ್ಯಾಯಾಮ, ಈಜುವುದು, ವಾಕಿಂಗ್‌, ರನ್ನಿಂಗ್‌ ಹೀಗೆ ಯಾವುದಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ನಿಯಮಿತ ವ್ಯಾಯಾಮವು ರಕ್ತ ಪರಿಚಲನೆ ಸುಧಾರಿಸುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ. ಒಟ್ಟಿನಲ್ಲಿ ನೀವು ಆರೋಗ್ಯವಾಗಿರಬಹುದು.

5. ಸರಿಯಾಗಿ ನಿದ್ದೆ ಮಾಡಿ
ಆಯುರ್ವೇದದ ಪ್ರಕಾರ ನಾವು ಆರೋಗ್ಯವಾಗಿರಬೇಕೆಂದರೆ ಸರಿಯಾದ ಪ್ರಮಾಣದಲ್ಲಿ ನಿದ್ರಿಸಲೇಬೇಕು. ನಮ್ಮ ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ತುಂಬಾನೇ ಇದೆ. ನಿತ್ಯವೂ ಒಂದೇ ಸಮಯಕ್ಕೆ ಮಲಗಿ ಹಾಗೂ ಎದ್ದೇಳಿ. ನಿಮ್ಮ ನಿದ್ರೆಯ ದಿನಚರಿ ಒಂದೇ ರೀತಿ ಇರಲಿ. ಮಲಗುವ ಮೊದಲು ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ, ಇನ್ನೂ ನಿದ್ರೆಗೂ ಮುನ್ನ ಮೊಬೈಲ್‌ ನೋಡುವ ಅಭ್ಯಾಸ ಬೇಡ. ನಿಮ್ಮನ್ನು ಒತ್ತಡದಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಲು ಯಾವುದಾದರೂ ಚಟುವಟಿಯನ್ನು ಮಾಡಿ.

6. ಒತ್ತಡ ನಿಯಂತ್ರಿಸಲು ಈ ರೀತಿ ಮಾಡಿ
ದೀರ್ಘಕಾಲದ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಬಹುದು. ಆಯುರ್ವೇದದಲ್ಲಿ ಒತ್ತಡವನ್ನು ನಿಯಂತ್ರಿಸೋದಕ್ಕೂ ಪರಿಹಾರವಿದೆ. ದಿನ ನಿತ್ಯ ಪ್ರಾಣಾಯಾಮ, ವ್ಯಾಯಾಮ ಮಾಡಿ. ದೀರ್ಘವಾಗಿ ಉಸಿರಾಡಿ. ಧ್ಯಾನವು ಒತ್ತಡವನ್ನು ಕಡಿಮೆ ಮಾಡಲು, ಮನಸ್ಸನ್ನು ಶಾಂತಗೊಳಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ನಾವು ಚೆನ್ನಾಗಿರಬೇಕೆಂದರೆ ಮೊದಲು ನಮ್ಮ ಆರೋಗ್ಯ ಚೆನ್ನಾಗಿರಬೇಕು. ಮೊದಲಿಗೆ ಈ ಸ್ಮಾರ್ಟ್‌ ಫೋನ್‌, ಕುಡಿತ, ಮೋಜು, ಮಸ್ತಿಯಿಂದ ಹೊರಬಂದು ಆಯುರ್ವೇದ ಜೀವನ ಶೈಲಿಗೆ ಒಗ್ಗಿಕೊಳ್ಳಿ. ಖಂಡಿತ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳಬಹುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Transform Yourself with These Ayurvedic Lifestyle Changes in Kananda

Transform Yourself with These Ayurvedic Lifestyle Changes.
Story first published: Friday, May 5, 2023, 18:00 [IST]
X
Desktop Bottom Promotion