Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಅಳಿಯನಿಗೆ ಉಳಿಯದ ಸಾರು

* ಸುಧಾ ಶಿವಕುಮಾರ್, ಭದ್ರಾವತಿ
ಮೂರು ವರ್ಷಗಳ ಹಿಂದೆ ನನ್ನ ಮಗಳ ಮದುವೆ ನಿಶ್ಚಯವಾಗಿತ್ತು. ಅದು ದೀಪಾವಳಿ ಸಮಯ. ನಿಶ್ಚಿತಾರ್ಥ ಆದ ನಂತರ ಮತ್ತು ಮದುವೆ ಮುಹೂರ್ತ ಆಗುವ ನಡುವೆ ಅಳಿಯಂದಿರು ಬೀಗರ ಮನೆಯಲ್ಲಿ ಊಟ ಮಾಡಬಾರದು ಎಂಬ ಪದ್ದತಿ ನಮ್ಮ ಮನೆಯಲ್ಲಿ ಇದೆ. ನಿಶ್ಚಿತಾರ್ಥವಾದ ನಂತರ ಒಂದು ದಿನ ನಮ್ಮ ಭಾವಿ ಅಳಿಯ ಮನೆಗೆ ದಯಮಾಡಿಸಿದ್ದರು. ಅವರು ಊಟ, ಅಂದರೆ ಅನ್ನ ಸಾರು ಹುಳಿ ಪಲಾವ್ ಮುಂತಾದ ಮುಸುರೆ ಪದಾರ್ಥಗಳನ್ನು ತಿನ್ನಬಾರದ ಕಾರಣ ಅವರಿಗೆ ಕೇವಲ ತಿಂಡಿ ಮಾಡಿ ಕೊಡುತ್ತಿದ್ದೆ. ಆವತ್ತು ಮನೆ ತುಂಬ ಮಕ್ಕಳು ಮರಿ ಜನವೋ ಜನ. ಎಲ್ಲರಿಗೂ ಅನ್ನ ಈರುಳ್ಳಿ ಹುಳಿ ಆಲೂಗೆಡ್ಡೆ ಹುಳಿ, ಹುರುಳಿಕಾಯಿ ಪಲ್ಯ, ಸೀಮೆ ಬದನೆಕಾಯಿ ಮೊಸರು ಸಾಸಿವೆ ಮಾಡಿದ್ದೆ. ಆದರೆ ಅಳಿಯಂದರಿಗೆ ಮಾತ್ರ ಸ್ಪೆಷಲ್ ಸಾರು ಮಾಡಿದ್ದೆ.
ಬೆಳಿಗ್ಗೆ ಎಲ್ಲರಿಗೋಸ್ಕರ ಇಡ್ಲಿ ಮಾಡಿದ್ದೆ. ಮಧ್ಯಾನ್ಹ ಅಳಿಯನಿಗೆ ಮತ್ತೆ ತಿಂಡಿ ಆಗಬೇಕು. ಸಭ್ಯ ಅಳಿಯ 'ಮತ್ತೆ ಯಾಕೆ ಬೇರೆ ಮಾಡ್ತೀರಾ, ಇಡ್ಲೀನೇ ಇದ್ರೆ ಕೊಡಿ ಪರವಾಗಿಲ್ಲ' ಎಂದರು. ಇಡ್ಲಿ ಹಿಟ್ಟು ಇತ್ತು ಆದರೆ ಚಟ್ನಿ ಖಾಲಿ ಆಗಿತ್ತು. ಮತ್ತೆ ಚಟ್ನಿ ಮಾಡುವುದಕ್ಕೆ ಬೇಜಾರಾಗಿ ಒಂಥರಾ ಹೊಸ ರುಚಿ ಟೊಮೆಟೋ ಸಾರು ಮಾಡಲು ತೀರ್ಮಾನಿಸಿದೆ. ಅಡುಗೆ ಆಯಿತು, ಊಟದ ಹೊತ್ತು ಸಮೀಪವಾಯಿತು. ಎಲ್ಲರೂ ಊಟದ ಟೇಬಲ್ಲಿಗೆ ಬಂದರು.
ಅಳಿಯ ಟೇಬಲ್ಲಿಗೆ ಬರುವಷ್ಟರಲ್ಲಿ ನನ್ನ ಇನ್ನೊಬ್ಬ ಮಗಳು, ಮೈದುನನ ಮಕ್ಕಳು ಊಟ ಶುರು ಮಾಡಿದ್ದರು. ಅಳಿಯನಿಗೆ ಮಾಡಿದ್ದ ಸಾರಿನ ರುಚಿಯನ್ನು ಸವಿದು ಯಾರೋ 'ಚೆನ್ನಾಗಿದೆ ಚೆನ್ನಾಗಿದೆ' ಎಂದು ಡಂಗುರ ಬಾರಿಸಿದ್ದರು. ಮಕ್ಕಳಿಗೆ ಸೂಕ್ಷ್ಮ ಗೊತ್ತಾಗೋದಿಲ್ಲ. ಮಹಾಜನತೆಗೆ ಮಾಡಿದ ಹುಳಿ ಬಿಟ್ಟು ಅಳಿಯನಿಗೆ ಮಾಡಿದ ಸಾರನ್ನು ಬಡಿಸಿಕೊಂಡು ತಿಂದು ಪಾತ್ರೆ ಖಾಲಿ ಮಾಡಿದರು. ಅಳಿಯ ಡೈನಿಂಗ್ ಟೇಬಲ್ಲಿಗೆ ಬಂದಾಗ ಸಾರು ಖಾಲಿ ಆಗಿ ನಾನು ಪೆಚ್ಚುಮೋರೆ ಹಾಕಿಕೊಳ್ಳಬೇಕಾಯಿತು. ಆನಂತರ ವಿಶಾಲ ಮನೋಭಾವದ ಅಳಿಯಂದಿರು ಚಟ್ನಿ ಪುಡಿ ತುಪ್ಪದಲ್ಲಿ ಇಡ್ಲಿ ತಿಂದು ಮುಗಿಸಿದರು. ಅಂತೂ ಅಳಿಯಂದಿರ ಆವತ್ತಿನ ಮಧ್ಯಾನ್ಹದ ಉಪಾಹಾರ ಕಾರ್ಯಕ್ರಮ ಮುಗಿಯಿತೆನ್ನಿ. ಈ ಪ್ರಸಂಗವನ್ನು ಕೇಳಿದವರೆಲ್ಲ ಉಳಿಯದ ಸಾರಿನ ರೆಸಿಪಿ ಕೇಳುತ್ತಾರೆ. ಅದು ಹೀಗಿದೆ:
ಬೇಕಾಗುವ ಪದಾರ್ಥ:
ಅಡುಗೆ ಎಣ್ಣೆ 6 ಚಮಚ
ದಪ್ಪನೆಯ ಮೂರು ಟೊಮೆಟೊ
ಕಾಯಿತುರಿ ಸ್ವಲ್ಪ
ಜೀರಿಗೆ 1/4 ಚಮಚ
ಸಾರಿನ ಪುಡಿ 2 ಚಮಚ
ಚೂರು ಬೆಲ್ಲ, ರುಚಿಗೆ ಹೊಂದುವಷ್ಟು ಉಪ್ಪು
ಮಾಡುವ ವಿಧಾನ :
ನಾಲಕ್ಕು ಚಮಚ ಎಣ್ಣೆಯನ್ನು ಬಾಣಲೆಗೆ ಹಾಕಿ ಗಾಲಿಗಾಲಿಯಾಗಿ ಹೆಚ್ಚಿಕೊಂಡ ಟೊಮೆಟೊ ಮತ್ತು ಜೀರಿಗೆ ಬೆರಸಿ ಬೇಯಿಸಬೇಕು. ಬೆಂದ ಬಳಿಕ ಕಾಯಿ ತುರಿ ಹಾಕಿ ಸ್ವಲ್ಪಹೊತ್ತು ಬಾಡಿಸಿ ಒಲೆಯಿಂದ ಕೆಳಗಿಳಿಸಿ ಮುಚ್ಚಿಡಬೇಕು. ಟೊಮೆಟೊ ಆರಿದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬುವುದು. ರುಬ್ಬಿದ ಪದಾರ್ಥವನ್ನು ಮತ್ತೆ ಒಲೆಯ ಮೇಲಿಟ್ಟು ಚೂರು ನೀರು ಬೆರೆಸಿ ಕುದಿಸಬೇಕು. ಕುದಿಯುವಾಗ ಉಪ್ಪು ಬೆಲ್ಲ ಹಾಕಬೇಕು. ಚೆನ್ನಾಗಿ ಕುದ್ದ ನಂತರ ಕೆಳಗಿಳಿಸಿ ಅದಕ್ಕೆ ಎರಡು ಚಮಚ ಎಣ್ಣೆ, ಸಾಸಿವೆ, ಎರಡು ಒಣ ಮೆಣಸಿನಕಾಯಿ, ಚಿಟಿಕೆ ಇಂಗಿನ ಒಗ್ಗರಣೆ ಕೊಡಬೇಕು. ಈ ಸಾರು ಗಟ್ಟಿಯಾಗಿರುತ್ತದೆ. ಗಟ್ಟಿಯಾದಾಗ ಇಡ್ಲಿ, ಚಪಾತಿಗೆ ಹೊಂದುತ್ತದೆ. ನೀರು ಹೆಚ್ಚಿಗೆ ಹಾಕಿದ್ದರೆ ಅನ್ನದ ಜತೆಗೂ ಸೈ.



Click it and Unblock the Notifications