ತುತ್ತು ಕೂಳಿನ ಸಹಾಯಾರ್ಥ ಭರ್ಜರಿ ಭೋಜನ

By Super

ಬೆಂಗಳೂರು, ಜ. 3 : ದೇಶದ ನಾನಾ ರಾಜ್ಯಗಳಲ್ಲಿ ಮದುವೆ ಸಂದರ್ಭದಲ್ಲಿ ತಯಾರು ಮಾಡುವ ವಿವಿಧ ಆಹಾರ ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡ 'ಭಾರತೀಯ ವಿವಾಹ ಭೋಜನ ವಿಶೇಷ" ಕಾರ್ಯಕ್ರಮ ಹೊಸ ವರ್ಷದ ಮೊದಲ ದಿನ ಬೆಂಗಳೂರಿನಲ್ಲಿ ನಡೆಯಿತು. ರಾಜಾಜಿನಗರದಲ್ಲಿ ಏರ್ಪಾಟಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ದೇಶದೆಲ್ಲೆಡೆಯ ವಿವಾಹ ಭೋಜನಗಳನ್ನು ಒಂದೇ ಮಂಟಪದಡಿ ತಂದ ಕೀರ್ತಿಗೆ 'ಅಕ್ಷಯ ಪಾತ್ರೆ "ಸಂಸ್ಥೆ ಕಾರಣವಾಯಿತು.

ತವ್ವಾ ಚಾಟ್, ಕಟೋರಿ ಚಾಟ್, ಗುಲ್ ಗುಲ್ಶನ್ ಗುಲ್ಫಮ್, ನರ್ಗಿಸಿ ಕಮಲ್ ಕಾಕ್ಡಿ, ಮೂಂಗ್ ದಾಲ್ ಪಾಪಡ್, ಕೇಸರಿ ದೊಯ್, ಪುಷ್ಪಾನ್ನ, ಕ್ವಾಷ್ ಬಾತ್, ಅನಾನಸ್ ರಸಗುಲ್ಲ, ಮಟ್ಟರ್ ಸಿಂಗಾರ, ಖಡೀ ಪನೀರ್ ಮಖಾನಿ, ಆಮ್ ಕದಂಬ್... ಹೆಸರುಗಳನ್ನು ಕೇಳುತ್ತಿದ್ದರೆ 'ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು ಭೀಗರಿಗೆ ಔತಣವಿದು, ತಗೊಳ್ಳಿ ಎನಗೆ ಒಂದು...' ಮಾಯಾ ಬಜಾರ್‌ನ ಈ ಹಾಡು ನೆನಪಿಗೆ ಬರದೆ ಇರದು. ಬಾಯಲ್ಲಿ ನೀರೂರಿಸುವ ಬರೊಬ್ಬರಿ 80 ವೈವಿಧ್ಯಮಯ ಭಕ್ಷ್ಯಗಳು ಅಲ್ಲಿದ್ದವು.

ಕಳೆದ ಆರು ವರ್ಷಗಳಿಂದಲೂ ಅಕ್ಷಯ ಪಾತ್ರೆ ಈ ಯೋಜನೆ ಆಯೋಜಿಸುತ್ತದೆ. ಆದರೆ ಈ ಬಾರಿ ವಿಶೇಷ ಆಕರ್ಷಣೆಯಿಂದ ಸಮಾರಂಭ ವಿಜೃಂಬಿಸುತ್ತಿತ್ತು. ಆಯಾ ರಾಜ್ಯದ ಆಹಾರ ವಿಶೇಷಗಳನ್ನು ತಯಾರಿಸಲು ಆಯಾ ಸ್ಥಳದ ಅಡುಗೆಯಲ್ಲಿ ಪರಿಣಿತರಾದವರನ್ನೇ ಕರೆಸಲಾಗಿತ್ತು. ವರ್ಷದ ಪ್ರಾರಂಭದಲ್ಲೇ ಹೊಟ್ಟೆ ತುಂಬಾ ಆಹಾರ ಸೇವಿಸಿದ್ದ ಸಂತೃಪ್ತಿ ಅಲ್ಲಿಗೆ ಬಂದಿದ್ದ ಜನತೆಗೆ ದಕ್ಕಿತ್ತು.

ದಕ್ಷಿಣದವರು ಉತ್ತರದ ಆಹಾರ ವೈವಿಧ್ಯತೆಯನ್ನು ಸವಿಯುವ ತರಾತುರಿಯಲ್ಲಿದ್ದರೆ, ಉತ್ತರದವರು ದಕ್ಷಿಣದ ಮೊಸರನ್ನ, ಬಿಸಿ ಬೇಳೆ ಭಾತ್ ಕಡೆಗೆ ತಮ್ಮ ಒಲವು ವ್ಯಕ್ತಪಡಿಸಿದರು. ಒಟ್ಟಾರೆ ವಿವಿಧತೆಯಲ್ಲಿ ಏಕತೆಯನ್ನು ಈ ವಿವಾಹ ಭೋಜನ ಅನುರಣಿಸಿತು.

ಅಕ್ಷಯ ಪಾತ್ರೆ ಪೌಂಡೇಷನ್ಸ್‌ನ ಉಪಾಧ್ಯಕ್ಷ ಚಂಚಲಾಪತಿ ಊಟದಸಮಯದಲ್ಲಿ ಮಾತನಾಡಿ, 'ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸಲು ದೇಣಿಗೆ ಕಲೆಹಾಕುವ ಉದ್ದೇಶದಿಂದ ಹಾಗೂ ದೇಶದ ಉತ್ತರ ದಕ್ಷಿಣ, ಪೂರ್ವ, ಪಶ್ಚಿಮ ಕಡೆಗಳಲ್ಲಿ ವಿವಾಹ ಸಮಾರಂಭದಲ್ಲಿ ಬಳಸಬಹುದಾದ ಆಹಾರವನ್ನು ಭೋಜನ ಪ್ರಿಯರಿಗೆ ಒಂದೇ ಸೂರಿನಡಿ ಒದಗಿಸುವ ಸಲುವಾಗಿ ಅಕ್ಷಯ ಪಾತ್ರೆ ಈ ಯೋಜನೆ ಆಯೋಜಿಸಿದೆ" ಎಂದರು.

ಸಮಾರಂಭಕ್ಕೆ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್, ಮಾಜಿ ಶಾಸಕ ಸಿ.ಟಿ.ರವಿ, ಫ್ಯಾಷನ್ ಗುರು ಪ್ರಸಾದ್ ಬಿಡ್ಡಪ್ಪ, ಚಿತ್ರನಟ ಶಿವರಾಜ್ ಕುಮಾರ್ ಕುಟುಂಬ, ಹಿರಿಯ ನಟಿ ಜಯಂತಿ ಅತಿಥಿಗಳಾಗಿ ಆಗಮಿಸಿದ್ದರು.

(ದಟ್ಸ್‌ಕನ್ನಡ ವಾರ್ತೆ)

ಭಾರತೀಯ ವಿವಾಹ ಭೋಜನ ವಿಶೇಷ ಕಾರ್ಯಕ್ರಮಕ್ಕೆ ಜನಸಾಗರ

English summary

A dinner to support a meal - ತುತ್ತು ಕೂಳಿನ ಸಹಾಯಾರ್ಥ ಭರ್ಜರಿ ಭೋಜನ

India marriage Dinner, a bouquet. Akshya patre foundation initiative "Grand Indian Marriage Dinner" for the benefit of midday meals project in Karnataka.
X
Desktop Bottom Promotion