Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೊಟ್ಟಿ ಬೊಂಬಾಟಾಗಿದೆ ಬೊಂಬಾಟಾಗಿದೆ!

ನಾನು ಊರಿಗೆ ಬರಲಿ ಎಂದೇ ಕಾಯುತ್ತಿದ್ದ ಇವರೆಲ್ಲ ಈಗ ಬಂದಕೂಡಲೇ 'ಅದು ಮಾಡೆ, ಇದು ಮಾಡಮ್ಮಾ' ಎಂದು ಅಡುಗೆ ತಿಂಡಿಗಳ ಪಟ್ಟಿ ಹಿಡಿದುಕೊಂಡು ನಿಂತಿದ್ದರು. ನಾಲಗೆ ಕೆಟ್ಟಿರಬೇಕು, ಪಾಪ. ಆದರೆ, ಅಡುಗೆ ಮನೆ ಖಾಲಿ ಖಾಲಿ. ಯಾರೂ ಕೂಡ ತಿಂಗಳ ಸಾಮಾನುಗಳನ್ನು ಸೊಸೈಟಿಗೆ ಹೋಗಿ ತಂದಿಟ್ಟಿರಲಿಲ್ಲ. ಮನೆಯಲ್ಲಿ ತರಕಾರಿಗಳೂ ಇರಲಿಲ್ಲ. ಯೋಚನೆ ಮಾಡುತ್ತಿರುವಾಗ ಅಷ್ಟುಹೊತ್ತಿಗೆ ಸರಿಯಾಗಿ ಕೈಗಾಡಿ ತರಕಾರಿಯ ಪುಣ್ಯಾತ್ಮ ಲಕ್ಷ್ಣಣ ಮನೆಮುಂದೆ ಬಂದ. ಬಾರಪ್ಪಾ ಬಾರಪ್ಪಾ ಎಂದು ಬುಟ್ಟಿ ಹಿಡಿದು ಹೋದರೆ ಗಾಡಿಯಲ್ಲಿ ಅಂಥದೇನೂ ತಾಜಾ ತರಕಾರಿ ಕಾಣಿಸಲಿಲ್ಲ.
ಗಾಡಿಯ ಮೂಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸ್ವಲ್ಪ ಅವರೇಕಾಯಿ ಇಟ್ಟಿದ್ದ. ಈಗ ಎಚ್ಚೆತ್ತುಕೊಂಡೆ. ಹೌದಲ್ಲಾ! ಈ ಸೀಸನ್ನಿನಲ್ಲಿ ನಾನು ಅವರೇಕಾಯಿ ಅಡುಗೆ ಮಾಡೇ ಇಲ್ಲವಲ್ಲಾ ಎಂದುಕೊಂಡು 1 ಕೆಜಿ ಖರೀದಿಸಿದೆ. ಕಾಯಿ ಒಣಗಿತ್ತು. ಸೀಸನ್ ಹೋಗುತ್ತಿದೆ, ಈಗ ಬಿಟ್ಟರೆ ಆಮೇಲೆ ಸಿಕ್ಕಲ್ಲ ಎಂದು 'ಹೇಗಾದರೂ ಇರಲಿ ಕೊಡಪ್ಪಾ' ಎಂದು ಲಕ್ಷ್ಣಣನಿಗೆ ಹೇಳಿದೆ.
ಕಾಯಿ ಸುಲಿದರೆ ಬರೀ ಹುಳ. ಕಾಯಿಗಳೂ ಚಪ್ಪಟೆ ಚಪ್ಪಟೆ. ಚೆನ್ನಾದ ಕಾಯಿಗಳು ಕೆಲವು ಇದ್ದವು. ಆದರೆ ಕಾಳುಗಳು ಕಪ್ಪುಕಪ್ಪು, ಸ್ವಲ್ಪ ಬಲಿತಿತ್ತು ಕೂಡ. ಅದನ್ನೇ ಹಾಗೂ ಹೀಗೂ ಕ್ಲೀನ್ ಮಾಡಿ ಸುಲಿದೆ. ಎರಡು ಕಪ್ಪು ಕಾಳು ರೆಡಿ ಆಯಿತು. ಅಡುಗೆ ಮನೆಯ ಶೆಲ್ಫ್ ನಾನು ಆಸ್ಟ್ರೇಲಿಯಾಗೆ ಹೋದಾಗ ಹೇಗೆ ಇಟ್ಟಿದ್ದೇನೋ ಹಾಗೇ ಇತ್ತು. ಧೂಳು ಕೂಡ ಒರೆಸಿರಲಿಲ್ಲ. ನಾನಷ್ಟೇ ಉಪಯೋಗಿಸುವ ಸಾಮಾನುಗಳನ್ನು ನಮ್ಮ ಮನೆಯಲ್ಲಿ ಯಾರೂ ಮುಟ್ಟಿಕೂಡ ನೋಡುವುದಿಲ್ಲ. ತುಂಬಾ ಒಳ್ಳೆ ಜನ. ಶೆಲ್ಫ್ ನಲ್ಲಿ ಸ್ಟೀಲ್ ಡಬ್ಬಿಯಲ್ಲಿ ಇಟ್ಟಿದ್ದ ಅಕ್ಕಿ ಹಿಟ್ಟು ಹಾಗೇ ಇತ್ತು. ಪುಣ್ಯಕ್ಕೆ ಕೆಟ್ಟುಹೋಗಿರಲಿಲ್ಲ. ಅದನ್ನೇ ಇನ್ನೊಂದು ಸರತಿ ಜರಡಿ ಹಿಡಿದು ನಾಲಕ್ಕು ಕಪ್ಪು ಹಿಟ್ಟಿಗೆ ಸ್ವಲ್ಪ ಮಜ್ಜಿಗೆ ಸ್ವಲ್ಪ ನೀರು ಉಪ್ಪು ಹಾಕಿ ಕಲಸಿಟ್ಟೆ.
ಹಿತ್ತಲಲ್ಲಿ ಕರಿಬೇವು ಎಲೆ ಬಿಡಿಸಿ ತಂದೆ. ಒಣ ಮೆಣಸಿನಕಾಯಿ ಹೇಗೂ ಸ್ಟಾಕ್ ಇದ್ದೇ ಇರತ್ತೆ. ಅದನ್ನೇ ಒಂದಿಷ್ಟು ಕೈಯಲ್ಲೇ ಪುಡಿಪುಡಿ ಮಾಡಿ ಹಿಟ್ಟಿಗೆ ಸೇರಿಸಿ ಕಲಸಿದೆ. ಕುಕ್ಕರ್ ನಲ್ಲಿ ಬೆಂದು ಇನ್ನಷ್ಟು ಕಪ್ಪು ಕಪ್ಪಾಗಿದ್ದ ಅವರೇಕಾಳುಗಳನ್ನು ಹಿಟ್ಟಿಗೆ ಹಾಕಿದೆ. ಎಣ್ಣೆ ಸವರಿ ಬಾಣಲಿ ರೊಟ್ಟಿ ಮಾಡಿದರೆ "ಅಕ್ಕಿ ರೊಟ್ಟಿ ಬೊಂಬಾಟಾಗಿದೆ ಬೊಂಬಾಟಾಗಿದೆ" ಎಂದು ಬರಗೆಟ್ಟವರಂತೆ ಎಲ್ಲಾ ತಿಂದು ಖಾಲಿಮಾಡಿದರು. ಇವರಿಗೆಲ್ಲ ನಾನು ಮಾಡುವ ಅಡುಗೆ ಬೆಲೆ ಗೊತ್ತಾಗಬೇಕಾದರೆ ಮತ್ತೆ ನಾನು ಮೆಲ್ಬೋರ್ನ್ ಮಗಳ ಮನೆಗೆ ಹೋಗಬೇಕು ಅಂದು ಮನಸ್ಸಿನಲ್ಲೇ ಅಂದುಕೊಂಡೆ. ಇದೇ ಜೀವನವಲ್ಲವೇ?
(ನಿರೂಪಣೆ : ದಟ್ಸ್ ಕನ್ನಡ ಅಡುಗೆ ಶಾಲೆ)



Click it and Unblock the Notifications