Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ರೊಟ್ಟಿ ಬೊಂಬಾಟಾಗಿದೆ ಬೊಂಬಾಟಾಗಿದೆ!

ನಾನು ಊರಿಗೆ ಬರಲಿ ಎಂದೇ ಕಾಯುತ್ತಿದ್ದ ಇವರೆಲ್ಲ ಈಗ ಬಂದಕೂಡಲೇ 'ಅದು ಮಾಡೆ, ಇದು ಮಾಡಮ್ಮಾ' ಎಂದು ಅಡುಗೆ ತಿಂಡಿಗಳ ಪಟ್ಟಿ ಹಿಡಿದುಕೊಂಡು ನಿಂತಿದ್ದರು. ನಾಲಗೆ ಕೆಟ್ಟಿರಬೇಕು, ಪಾಪ. ಆದರೆ, ಅಡುಗೆ ಮನೆ ಖಾಲಿ ಖಾಲಿ. ಯಾರೂ ಕೂಡ ತಿಂಗಳ ಸಾಮಾನುಗಳನ್ನು ಸೊಸೈಟಿಗೆ ಹೋಗಿ ತಂದಿಟ್ಟಿರಲಿಲ್ಲ. ಮನೆಯಲ್ಲಿ ತರಕಾರಿಗಳೂ ಇರಲಿಲ್ಲ. ಯೋಚನೆ ಮಾಡುತ್ತಿರುವಾಗ ಅಷ್ಟುಹೊತ್ತಿಗೆ ಸರಿಯಾಗಿ ಕೈಗಾಡಿ ತರಕಾರಿಯ ಪುಣ್ಯಾತ್ಮ ಲಕ್ಷ್ಣಣ ಮನೆಮುಂದೆ ಬಂದ. ಬಾರಪ್ಪಾ ಬಾರಪ್ಪಾ ಎಂದು ಬುಟ್ಟಿ ಹಿಡಿದು ಹೋದರೆ ಗಾಡಿಯಲ್ಲಿ ಅಂಥದೇನೂ ತಾಜಾ ತರಕಾರಿ ಕಾಣಿಸಲಿಲ್ಲ.
ಗಾಡಿಯ ಮೂಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸ್ವಲ್ಪ ಅವರೇಕಾಯಿ ಇಟ್ಟಿದ್ದ. ಈಗ ಎಚ್ಚೆತ್ತುಕೊಂಡೆ. ಹೌದಲ್ಲಾ! ಈ ಸೀಸನ್ನಿನಲ್ಲಿ ನಾನು ಅವರೇಕಾಯಿ ಅಡುಗೆ ಮಾಡೇ ಇಲ್ಲವಲ್ಲಾ ಎಂದುಕೊಂಡು 1 ಕೆಜಿ ಖರೀದಿಸಿದೆ. ಕಾಯಿ ಒಣಗಿತ್ತು. ಸೀಸನ್ ಹೋಗುತ್ತಿದೆ, ಈಗ ಬಿಟ್ಟರೆ ಆಮೇಲೆ ಸಿಕ್ಕಲ್ಲ ಎಂದು 'ಹೇಗಾದರೂ ಇರಲಿ ಕೊಡಪ್ಪಾ' ಎಂದು ಲಕ್ಷ್ಣಣನಿಗೆ ಹೇಳಿದೆ.
ಕಾಯಿ ಸುಲಿದರೆ ಬರೀ ಹುಳ. ಕಾಯಿಗಳೂ ಚಪ್ಪಟೆ ಚಪ್ಪಟೆ. ಚೆನ್ನಾದ ಕಾಯಿಗಳು ಕೆಲವು ಇದ್ದವು. ಆದರೆ ಕಾಳುಗಳು ಕಪ್ಪುಕಪ್ಪು, ಸ್ವಲ್ಪ ಬಲಿತಿತ್ತು ಕೂಡ. ಅದನ್ನೇ ಹಾಗೂ ಹೀಗೂ ಕ್ಲೀನ್ ಮಾಡಿ ಸುಲಿದೆ. ಎರಡು ಕಪ್ಪು ಕಾಳು ರೆಡಿ ಆಯಿತು. ಅಡುಗೆ ಮನೆಯ ಶೆಲ್ಫ್ ನಾನು ಆಸ್ಟ್ರೇಲಿಯಾಗೆ ಹೋದಾಗ ಹೇಗೆ ಇಟ್ಟಿದ್ದೇನೋ ಹಾಗೇ ಇತ್ತು. ಧೂಳು ಕೂಡ ಒರೆಸಿರಲಿಲ್ಲ. ನಾನಷ್ಟೇ ಉಪಯೋಗಿಸುವ ಸಾಮಾನುಗಳನ್ನು ನಮ್ಮ ಮನೆಯಲ್ಲಿ ಯಾರೂ ಮುಟ್ಟಿಕೂಡ ನೋಡುವುದಿಲ್ಲ. ತುಂಬಾ ಒಳ್ಳೆ ಜನ. ಶೆಲ್ಫ್ ನಲ್ಲಿ ಸ್ಟೀಲ್ ಡಬ್ಬಿಯಲ್ಲಿ ಇಟ್ಟಿದ್ದ ಅಕ್ಕಿ ಹಿಟ್ಟು ಹಾಗೇ ಇತ್ತು. ಪುಣ್ಯಕ್ಕೆ ಕೆಟ್ಟುಹೋಗಿರಲಿಲ್ಲ. ಅದನ್ನೇ ಇನ್ನೊಂದು ಸರತಿ ಜರಡಿ ಹಿಡಿದು ನಾಲಕ್ಕು ಕಪ್ಪು ಹಿಟ್ಟಿಗೆ ಸ್ವಲ್ಪ ಮಜ್ಜಿಗೆ ಸ್ವಲ್ಪ ನೀರು ಉಪ್ಪು ಹಾಕಿ ಕಲಸಿಟ್ಟೆ.
ಹಿತ್ತಲಲ್ಲಿ ಕರಿಬೇವು ಎಲೆ ಬಿಡಿಸಿ ತಂದೆ. ಒಣ ಮೆಣಸಿನಕಾಯಿ ಹೇಗೂ ಸ್ಟಾಕ್ ಇದ್ದೇ ಇರತ್ತೆ. ಅದನ್ನೇ ಒಂದಿಷ್ಟು ಕೈಯಲ್ಲೇ ಪುಡಿಪುಡಿ ಮಾಡಿ ಹಿಟ್ಟಿಗೆ ಸೇರಿಸಿ ಕಲಸಿದೆ. ಕುಕ್ಕರ್ ನಲ್ಲಿ ಬೆಂದು ಇನ್ನಷ್ಟು ಕಪ್ಪು ಕಪ್ಪಾಗಿದ್ದ ಅವರೇಕಾಳುಗಳನ್ನು ಹಿಟ್ಟಿಗೆ ಹಾಕಿದೆ. ಎಣ್ಣೆ ಸವರಿ ಬಾಣಲಿ ರೊಟ್ಟಿ ಮಾಡಿದರೆ "ಅಕ್ಕಿ ರೊಟ್ಟಿ ಬೊಂಬಾಟಾಗಿದೆ ಬೊಂಬಾಟಾಗಿದೆ" ಎಂದು ಬರಗೆಟ್ಟವರಂತೆ ಎಲ್ಲಾ ತಿಂದು ಖಾಲಿಮಾಡಿದರು. ಇವರಿಗೆಲ್ಲ ನಾನು ಮಾಡುವ ಅಡುಗೆ ಬೆಲೆ ಗೊತ್ತಾಗಬೇಕಾದರೆ ಮತ್ತೆ ನಾನು ಮೆಲ್ಬೋರ್ನ್ ಮಗಳ ಮನೆಗೆ ಹೋಗಬೇಕು ಅಂದು ಮನಸ್ಸಿನಲ್ಲೇ ಅಂದುಕೊಂಡೆ. ಇದೇ ಜೀವನವಲ್ಲವೇ?
(ನಿರೂಪಣೆ : ದಟ್ಸ್ ಕನ್ನಡ ಅಡುಗೆ ಶಾಲೆ)



Click it and Unblock the Notifications











