ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ಚಿತ್ರರಂಗಕ್ಕೆ ಗುಡ್ ಬೈ

By Narayana M

ಎಷ್ಟೇ ಸಿನಿಮಾಗಳು ಸೋತರೂ ಮತ್ತೆ ಮತ್ತೆ ಸಿನಿಮಾಗಳನ್ನು ಮಾಡುವವರ ನಡುವೆ ವೃತ್ತಿ ಜೀವನದ ಉತ್ತುಂಗಕ್ಕೆ ಏರಿದ ಹೊತ್ತಲ್ಲೇ ನಟ ವಿಜಯ್ ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ್ದಾರೆ. ತನ್ನನ್ನು ಇಷ್ಟು ಪ್ರೀತಿಸಿದ ಅಭಿಮಾನಿಗಳಿಗಾಗಿ ಈ ನಿರ್ಧಾರ ಎಂದಿದ್ದಾರೆ. ಆ ಮೂಲಕ ತಮಿಳು ಚಿತ್ರರಂಗದಲ್ಲಿ ದಳಪತಿ ಪರ್ವ ಮುಗೀತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ ನಟ ವಿಜಯ್ ಹೀಗೆ ಏಕಾಏಕಿ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಕಾರಣ ರಾಜಕೀಯ. ಈಗಾಗಲೇ ಸ್ವಂತ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಇಳಿದಿರುವ ದಳಪತಿ ವಿಜಯ್ ಕೊನೆಯದಾಗಿ 'ಜನನಾಯಗನ್' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಮಲೇಷಿಯಾದಲ್ಲಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ಮುಂದೆ ನಾನು ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎಂದು ಈ ಹಿಂದೆಯೇ ವಿಜಯ್ ಸುಳಿವು ನೀಡಿದ್ದರು. ಅದನ್ನು ಈಗ ಖಚಿತಪಡಿಸಿದ್ದಾರೆ.


Thalapathy Vijay Confirms Retirement from Films Makes Emotional Farewell with Jananayagan

ಮಲೇಷಿಯಾದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ 'ಜನನಾಯಗನ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ಭಾವುಕರಾಗಿಯೇ ವೇದಿಕೆ ಏರಿ ಮಾತನಾಡಿದ ವಿಜಯ್ ಇದು ನನ್ನ ಕೊನೆಯ ಸಿನಿಮಾ ಎಂದು ಹೇಳಲು ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ವಿಜಯ್ ಕಣ್ಣಿಟ್ಟಿದ್ದಾರೆ. ತಮ್ಮ ಟಿವಿಕೆ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ.

ರಜನಿಕಾಂತ್ ಬಿಟ್ಟರೆ ತಮಿಳುನಾಡಿನಲ್ಲಿ ಅತಿಹೆಚ್ಚು ಅಭಿಮಾನಿ ಬಳಗ ಹೊಂದಿರುವ ದಳಪತಿ ವಿಜಯ್. ತಮಿಳುನಾಡಿನಲ್ಲಿ ರಜನಿಕಾಂತ್ ಚಿತ್ರಗಳಿಗಿಂತ ವಿಜಯ್ ಸಿನಿಮಾಗಳು ಹೆಚ್ಚು ಕಲೆಕ್ಷನ್ ಮಾಡುತ್ತವೆ. ಅಷ್ಟರಮಟ್ಟಿಗೆ ವಿಜಯ್ ಅಭಿಮಾನಿಗಳ ಫೇವರಿಟ್ ಎನಿಸಿಕೊಂಡಿದ್ದಾರೆ. ತಮ್ಮ ನಟನೆ, ಡ್ಯಾನ್ಸ್ ಮೂಲಕ ಮೋಡಿ ಮಾಡಿದ್ದಾರೆ.

ತಮಿಳುನಾಡು ರಾಜಕೀಯರಂಗದಲ್ಲಿ ಜಯಲಲಿತಾ, ಕರುಣಾನಿಧಿ ಅಗಲಿಕೆ ಬಳಿಕ ಮಾಸ್ ನಾಯಕ ಕೊರತೆ ಎದ್ದು ಕಾಣುತ್ತಿದೆ. ಎಐಎಡಿಎಂಕೆ ಪಕ್ಷ ಛಿದ್ರ ಛಿದ್ರವಾಗಿ. ಡಿಎಂಕೆ ಪಕ್ಷ ಸದ್ಯ ಅಧಿಕಾರದಲ್ಲಿದೆ. ಈ ಸಮಯವನ್ನು ಸದ್ಬಳಕೆ ಮಾಡಿಕೊಂಡು ರಾಜಕೀಯರಂಗಕ್ಕೆ ಬಂದು ಜನಸೇವೆ ಮಾಡಲು ವಿಜಯ್ ಮನಸ್ಸು ಮಾಡಿದ್ದಾರೆ. ಚಿತ್ರವೊಂದಕ್ಕೆ 200 ಕೋಟಿ ರೂ. ಸಂಭಾವನೆ ಪಡೆಯುವ ನಟ ವಿಜಯ್ ಇದೀಗ ಚಿತ್ರರಂಗದಿಂದ ದೂರಾಗುತ್ತಿದ್ದಾರೆ.

ಮಲೇಷ್ಯಾದ ಬುಕಿಟ್ ಜಲೀಲ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ಜನನಾಯಗನ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ಮಲೇಷ್ಯಾದಲ್ಲಿ ಸಾಕಷ್ಟು ತಮಿಳು ಭಾಷಿಕರು ನೆಲೆಸಿದ್ದಾರೆ. ವಿಜಯ್ ಅಭಿಮಾನಿಗಳು ದೊಡ್ಡಮಟ್ಟದಲ್ಲಿದ್ದಾರೆ. ಹಾಗಾಗಿ ಅಲ್ಲೇ ಕಾರ್ಯಕ್ರಮ ನಡೆಸಲು ಚಿತ್ರತಂಡ ಮನಸ್ಸು ಮಾಡಿತ್ತು. ಅಭಿಮಾನಿಗಳಿಂದ ಅದ್ಭುತ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಸಾವಿರಾರು ಅಭಿಮಾನಿಗಳ ಎದುರು ತಮ್ಮ ಕೊನೆಗೆ ಸಿನಿಮಾ ಭಾಷಣ ಮಾಡಿದರು ವಿಜಯ್.

ಕೊಂಚ ಭಾವುಕರಾಗಿಯೇ ಮಾತನಾಡಿದ ವಿಜಯ್ ಕೊನೆಯ ಬಾರಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ರಂಜಿಸಿದರು. ಇದು ವಿಜಯ್ ಅವರ ಕೊನೆಯ ಡ್ಯಾನ್ಸ್ ಎಂದು ಅಭಿಮಾನಿಗಳು ಬೇಸರದಿಂದ ವೀಡಿಯೋ ವೈರಲ್ ಮಾಡುತ್ತಿದ್ದಾರೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ.

ಅನಿರುದ್ಧ್ ರವಿಚಂದ್ರನ್ ಸಂಗೀತ 'ಜನನಾಯಗನ್' ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಹಾಡುಗಳು ಒಂದೊಂದಾಗಿ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕಾಗಿ ವಿಜಯ್ 250 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆಯಾಗಿದೆ.

Credit: Filmibeat

X
Desktop Bottom Promotion