ಜೈಲಿನಲ್ಲಿ ಹಠ ಹಿಡಿದ ಪವಿತ್ರಾ ಗೌಡ.. ಕ್ಯಾರೇ ಎನ್ನದ ದರ್ಶನ್

By Narayana M

ರೇಣುಕಾಸ್ವಾಮಿ ಪ್ರಕರಣದಲ್ಲಿ ಹೈಕೋರ್ಟ್ ನೀಡದ್ದ ಜಾಮೀನು ರದ್ದಾಗಿ 4 ತಿಂಗಳು ಕಳೆದಿದೆ. ಪ್ರಕರಣದ ಆರೋಪಿಗಳೆಲ್ಲಾ ಆಗಸ್ಟ್ 14ರಂದು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಸದ್ಯ ಪ್ರಕರಣದ ಟ್ರಯಲ್ ಆರಂಭವಾಗಿದೆ. ಸಾಕ್ಷಿಗಳ ವಿಚಾರಣೆ ಶುರುವಾಗಿದೆ. ಇದೆಲ್ಲದರ ಬೆನ್ನಲ್ಲೇ ದರ್ಶನ್ ಭೇಟಿಗೆ ಪವಿತ್ರಾ ಗೌಡ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಕರಣದ ಆರೋಪಿಗಳೆಲ್ಲಾ ಬಂಧಿಯಾಗಿದ್ದಾರೆ. ಮಹಿಳಾ ಬ್ಯಾರಕ್‌ನಲ್ಲಿ ಪವಿತ್ರಾ ಗೌಡ ಇದ್ದಾರೆ. ಇದ್ದಕ್ಕಿದ್ದಂತೆ ದರ್ಶನ್ ಭೇಟಿ ಮಾಡಬೇಕು ಎಂದು ಪವಿತ್ರಾ ಗೌಡ ಹಠ ಮಾಡುತ್ತಿದ್ದಾರೆ ಎಂದು ಟಿವಿ9 ವಾಹಿನಿ ವರದಿ ಮಾಡಿದೆ. ದರ್ಶನ್ ಭೇಟಿಗೆ ಪವಿತ್ರಾ ದುಂಬಾಲು ಬಿದ್ದಿದ್ದಾರೆ. ಆದರೆ ದರ್ಶನ್ ಇದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ.


Darshan Refuses to Meet Pavitra Gowda in Jail as Renukaswamy case Trial Begins

ಕೋರ್ಟ್‌ನಲ್ಲಿ ಟ್ರಯಲ್ ಶುರುವಾಗಿದೆ. ಹಾಗಾಗಿ ಈ ವಿಚಾರದ ಬಗ್ಗೆ ದರ್ಶನ್ ಬಳಿ ಮಾತನಾಡಬೇಕು ಎಂದು ಪವಿತ್ರಾ ಗೌಡ ಕೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ. ಆಕೆಯ ಮನವಿಗೆ ದರ್ಶನ್ ನಿರಾಕರಿಸಿದ್ದಾರೆ. ಡಿಜಿಪಿ ಅಲೋಕ್ ಕುಮಾರ್ ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಬಳಿ ಪವಿತ್ರಾ ಗೌಡ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ದರ್ಶನ್ ಇದಕ್ಕೆ ಒಪ್ಪಲಿಲ್ಲ ಎಂದು ವರದಿಯಾಗಿದೆ.

ಅಲೋಕ್ ಕುಮಾರ್ ಜೈಲಿಗೆ ಭೇಟಿ ನೀಡಿದಾಗ ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಹ ಕೈದಿಗಳ ಭೇಟಿಗೆ ಪವಿತ್ರಾ ಗೌಡ ಮನವಿ ಮಾಡಿದ್ದು ಈ ವಿಷಯ ಗೊತ್ತಾಗಿ ದರ್ಶನ್ ಸಾಧ್ಯವೇ ಇಲ್ಲ ಎಂದಿದ್ದಾರೆ ಎನ್ನಲಾಗ್ತಿದೆ. ತಮ್ಮ ವಕೀಲರು ಹಾಗೂ ಆಪ್ತರ ಮೂಲಕವೂ ದರ್ಶನ್ ಭೇಟಿಗೆ ಪವಿತ್ರಾ ಗೌಡ ಯತ್ನಿಸಿದ್ದಾರೆ ಎಂದು ಸುದ್ದಿಯಾಗಿದೆ.


ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ. ಈ ವಿಚಾರವನ್ನು ದರ್ಶನ್‌ಗೆ ಹೇಳಿದ್ದು ಆತನಿಗೆ ಬುದ್ಧಿಕಲಿಸಲು ಮುಂದಾಗಿದ್ದರು. ಆಗಾಗಿ ಆತನನ್ನು ದರ್ಶನ್ ಸೂಚನೆ ಮೇರೆಗೆ ಅಪಹರಿಸಿ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಡಲಾಗಿತ್ತು. ಈ ವೇಳೆ ರೇಣುಕಾಸ್ವಾಮಿ ಪ್ರಾಣವೇ ಹಾರಿಹೋಗಿತ್ತು. ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿ ಆಗಿದ್ದರೆ ದರ್ಶನ್ ಎ2 ಆರೋಪಿಯಾಗಿ ಜೈಲು ಸೇರಿದ್ದಾರೆ. ತನ್ನ ಇವತ್ತಿನ ಸ್ಥಿತಿಗೆ ಪವಿತ್ರಾ ಗೌಡ ಕಾರಣ ಎಂದು ದರ್ಶನ್ ಕೋಪಗೊಂಡಿದ್ದಾರೆ. ಹಾಗಾಗಿ ಭೇಟಿಗೆ ನಿರಾಕರಿಸಿದ್ದಾರೆ ಎಂದು ಹೇಳಲಾಗ್ತಿದೆ.

ಮತ್ತೊಂದು ಕಡೆ ಪರಪ್ಪನ ಅಗ್ರಹಾರ ಜೈಲಿಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. 30 ಮೊಬೈಲ್, ಚಾರ್ಜರ್‌ಗಳು ಹಾಗೂ ಇಯರ್ ಫೋನ್ ಕೂಡ ಪತ್ತೆಯಾಗಿದೆ. ಈ ಹಿಂದೆ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿತ್ತು. ಹಾಗಾಗಿ ಜೈಲು ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮೊಬೈಲ್, ಚಾರ್ಜರ್ ಸೇರಿ ಸಾಕಷ್ಟು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ವರ್ಷ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದ್ದರು. ಬಳಿಕ ವಿಚಾರಣಾಧೀನ ಕೈದಿಗಳಾಗಿ ಎಲ್ಲರೂ ಜೈಲು ಸೇರಿದ್ದರು. ಆದರೆ ನಾಲ್ಕೈದು ತಿಂಗಳ ಬಳಿಕ ಹೈಕೋರ್ಟ್‌ನಲ್ಲಿ ಜಾಮೀನು ಪಡೆದು ಎಲ್ಲರೂ ಬಿಡುಗಡೆ ಆಗಿದ್ದರು. 9 ತಿಂಗಳ ಕಾಲ ಎಲ್ಲರೂ ಹೊರಗಡೆ ಇದ್ದರು. ಇದೇ ವೇಳೆ ದರ್ಶನ್ 'ಡೆವಿಲ್' ಸಿನಿಮಾ ಚಿತ್ರೀಕರಣ ಸಹ ಮುಗಿಸಿದ್ದರು. ಗಂಭೀರ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದ ಬಗ್ಗೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ರದ್ದು ಮಾಡಿತ್ತು.

Credit: Filmibeat

Story first published: Friday, December 19, 2025, 12:32 [IST]
X
Desktop Bottom Promotion