Just In
- 2 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 3 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 4 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 5 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರೋಗ್ಯವಂತ ವ್ಯಕ್ತಿಗಳಲ್ಲಿರುವ 12 ಅಭ್ಯಾಸಗಳಿವು
ಜೀವನ ಎಂದರೆ ಹಾಗೇ! ಎಲ್ಲರಿಗೂ ಎಲ್ಲವೂ ಏಕಸಮಾನವಾಗಿರುವುದಿಲ್ಲ. ವೃತ್ತಿ, ಸಂಬಂಧಗಳು, ನಿತ್ಯದ ಜವಾಬ್ದಾರಿಗಳು ಮತ್ತು ಮುಖ್ಯವಾಗಿ ಆರೋಗ್ಯ ಎಲ್ಲವೂ ಜೀವನದ ಅಂಗಗಳೇ ಸರಿ. ಆದರೆ ಎಲ್ಲರಿಗೂ ಎಲ್ಲವೂ ಏಕಪ್ರಕಾರವಾಗಿರುವುದಿಲ್ಲ. ಕೆಲವರಿಗೆ ಕೆಲಸದ ಒತ್ತಡ ಹೆಚ್ಚಿದ್ದರೆ ಉಳಿದವರಿಗೆ ಕಡಿಮೆ. ಆದರೆ ಕೆಲವು ವ್ಯಕ್ತಿಗಳು ಮಾತ್ರ ಆರೋಗ್ಯದಲ್ಲಿ ಉತ್ತಮರಾಗಿದ್ದು ಸದಾ ಹಸನ್ಮುಖರಾಗಿದ್ದು ನೆಮ್ಮದಿಯ ಜೀವನ ನಡೆಸುತ್ತಿರುತ್ತಾರೆ.
ಅಂದರೆ ಇವರಿಗೆಲ್ಲಾ ಮಾನಸಿಕ ಒತ್ತಡ ಹಾಗೂ ಇತರ ಜವಾಬ್ದಾರಿಗಳು ಇಲ್ಲವೆಂದೇನೂ ಇಲ್ಲ. ಬದಲಿಗೆ ಇತರರಿಗೆ ಇರುವುದಕ್ಕಿಂತಲೂ ಬಹಳಷ್ಟೇ ಹೆಚ್ಚಿರಬಹುದು. ಆದರೆ ಇತರರಿಗೆ ಸಾಧ್ಯವಾಗದೇ ಇದ್ದದ್ದು ಇವರಿಗೆ ಸಾಧ್ಯವಾಗಿರಬೇಕಾದರೆ ಇವರ ನಿತ್ಯದ ಅಭ್ಯಾಸಗಳೇ ಮುಖ್ಯ ಕಾರಣವಾಗಿವೆ. ಈ ಅಭ್ಯಾಸಗಳಲ್ಲಿ ಕೆಲವನ್ನಾದರೂ ಅನುಸರಿಸುವ ಮೂಲಕ ಈ ವ್ಯಕ್ತಿಗಳು ಪಡೆದಿರುವ ಆರೋಗ್ಯಕರ ಪ್ರಯೋಜನಗಳನ್ನು ನಾವೂ ಪಡೆಯಬಹುದು.
ಬನ್ನಿ, ಹೀಗೆ ಆರೋಗ್ಯವಂತ ವ್ಯಕ್ತಿಗಳಿಂದ ಅನುಸರಿಸಬಹುದಾದ ಹನ್ನೆರಡು ಅಭ್ಯಾಸಗಳು ಯಾವುವು ಎಂದು ನೋಡೋಣ:
1) ಇವರು ನಿತ್ಯವೂ ವ್ಯಾಯಾಮ ಮಾಡುವವರಾಗಿರುತ್ತಾರೆ.
ವ್ಯಾಯಾಮ, ಇದು ಇಂತಹದ್ದೇ ಆಗಬೇಕೆಂದೇನೂ ಇಲ್ಲ, ವೃತ್ತಿಪರ, ದುಬಾರಿ ಆಗಬೇಕೆಂದೂ ಇಲ್ಲ. ನಿಮಗೆ ಯಾವುದು ಇಷ್ಟವಾಗುತ್ತದೆಯೋ ಆ ವ್ಯಾಯಾಮ ಅಥವಾ ದೈಹಿಕ ಕಸರತ್ತನ್ನು ಒಂದು ದಿನವೂ ಬಿಡದೇ ನಿರ್ವಹಿಸುವುದೇ ಆರೋಗ್ಯಕರ ವ್ಯಕ್ತಿಗಳ ದೃಢಕಾಯದ ಗುಟ್ಟು. ಯೋಗಾಭ್ಯಾಸ, ಜುಂಬಾ, ಸ್ಪಿನ್, ಬಾರ್ ಇತ್ಯಾದಿ ಯಾವುದೇ ಬಗೆಯ ವ್ಯಾಯಾಮವನ್ನು ನೀವು ಮಾಡಬಹುದು. ವ್ಯಾಯಾಮ ಯಾವುದೇ ಆದರೂ ಸರಿ, ದೇಹ ದಣಿವು ಪಡೆಯಬೇಕು ಹಾಗೂ ಇದನ್ನು ತಣಿಸಲು ಬೆವರು ಹರಿಸಬೇಕು. ಇಂದು ಹೆಚ್ಚಿನವರು ಜಿಮ್ನಾಶಿಯಂ ಅಥವಾ ವ್ಯಾಯಾಮಶಾಲೆಗೆ ದುಬಾರಿ ಬೆಲೆ ತೆತ್ತು ಹೋಗುತ್ತಾರೆ. ಇವರ ಉದ್ದೇಶ ಅಲ್ಲಿನ ಫೋಟೋಗಳಲ್ಲಿ ತಗಲಿಸಿರುವ ಭಾರೀ ಸ್ನಾಯುಗಳ ವ್ಯಕ್ತಿಗಳಂತಾಗುವುದು.
ವಾಸ್ತವದಲ್ಲಿ, ದೇಹದ ಆರೋಗ್ಯಕ್ಕೂ ಸ್ನಾಯುಗಳ ಭಂಡಾರಕ್ಕೂ ಯಾವುದೇ ಸಂಬಂಧವಿಲ್ಲ. ವಾಸ್ತವದಲ್ಲಿ, ಆರೋಗ್ಯ ಚೆನ್ನಾಗಿದ್ದರೆ ಸ್ನಾಯುಗಳು ಹುರಿಗಟ್ಟುತ್ತವೆ. ಆದ್ದರಿಂದ ವ್ಯಾಯಾಮಶಾಲೆಯಲ್ಲಿ ವ್ಯಾಯಾಮ ಮಾಡಿದರೆ ಮಾತ್ರವೇ ಸರಿ ಎಂಬ ನಂಬಿಕೆಯನ್ನು ತೊಲಗಿಸಿ. ಸರಳ ನಡಿಗೆಯಾಗಲಿ, ಈಜಾಟ, ನೀರಿನ ಕ್ರೀಡೆಗಳು, ಸೈಕ್ಲಿಂಗ್, ಜಾಗಿಂಗ್, ಒಟ್ಟಾರೆ ಯಾವುದೇ ನಿಮಗೆ ಇಷ್ಟವಾದ ವ್ಯಾಯಾಮವನ್ನು ಮಾಡಬಹುದು. ಈ ವ್ಯಕ್ತಿಗಳು ದಿನದ ತಮ್ಮ ಸಮಯವನ್ನು ಆದಷ್ಟೂ ಮಟ್ಟಿಗೆ ದೈಹಿಕ ಚಲನೆಗಾಗಿ ಮೀಸಲಾಗಿಸುತ್ತಾರೆ. ಉದಾಹರಣೆಗೆ ಕೊಂಚ ದೂರದಲ್ಲಿರುವ ಅಂಗಡಿಯಿಂದ ದಿನಸಿ ತರಲು ಇವರು ವಾಹವನ್ನು ಬಳಸದೇ ನಡೆದೇ ಹೋಗುತ್ತಾರೆ. ಅನಿವಾರ್ಯವಲ್ಲದ ಹೊರತು ಲಿಫ್ಟ್ ಬಳಸದೇ ಮೆಟ್ಟಿಲು ಏರಿಯೇ ಹೋಗುತ್ತಾರೆ. ನಿಮಗೆ ಇಷ್ಟವಾಗುವ ಯಾವುದೇ ಪ್ರಕಾರದ ದೈಹಿಕ ಚಲನೆಯಾದರೂ ಸರಿ, ನಿತ್ಯವೂ ಅನುಸರಿಸಬೇಕು ಮತ್ತು ರಜಾ ದಿನ ಎಂದು ತಪ್ಪಿಸಿಕೊಳ್ಳಬಾರದು.
2) ಇವರು ತಮ್ಮ ಕೆಲಸಗಳನ್ನು ಮೊದಲೇ ನಿರ್ಧರಿಸಿಟ್ಟುಕೊಳ್ಳುತ್ತಾರೆ
ಇಂದು ಮಾಡಬೇಕಾದ ಕೆಲಸಗಳನ್ನು ಪಟ್ಟಿ ಮಾಡಿಟ್ಟು ಯಾವ ಸಮಯಕ್ಕೆ ಯಾವುದನ್ನು ನಿರ್ವಹಿಸಬೇಕು ಎಂಬ ಆದ್ಯತೆಗಳ ಮೇಲೆ ಎಲ್ಲವನ್ನೂ ನಿರ್ವಹಿಸಿ. ಈ ಕೆಲಸಗಳನ್ನು ನೆನಪು ಮಾಡಿಟ್ಟುಕೊಳ್ಳಲು ಕಾಗದದಲ್ಲಿ ಬರೆದು ಜೇಬಿನಲ್ಲಿಡುವುದು ಈಗ ಹಳೆಯದಾಯಿತು. ಮೊಬೈಲಿನಲ್ಲಿ ಗೂಗಲ್ ಕ್ಯಾಲೆಂಡರ್ ಅಥವಾ ನಿಮಗೆ ಸೂಕ್ತ ಎನಿಸುವ ಬೇರೆ ಯಾವುದೇ ನೆನಪು ಮಾಡಿಸುವ ವಿಧಾನದಿಂದ ನಿಮ್ಮ ಕೆಲಸಗಳನ್ನು ಪೂರ್ವ ನಿರ್ಧರಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿತ್ಯದ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
3) ಇವರಲ್ಲಿ ಸದಾ ನೀರಿನ ಬಾಟಲಿ ಇರುತ್ತದೆ
ನಿತ್ಯವೂ ಸಾಕಷ್ಟು ನೀರು ಕುಡಿಯಬೇಕೆಂದು ನಮಗೆಲ್ಲರಿಗೂ ಗೊತ್ತು. ಆದರೆ ನಾವು ಎಷ್ಟರ ಮಟ್ಟಿಗೆ ಇದನ್ನು ಪಾಲಿಸುತ್ತೇವೆ? ನೀರು ಲಭ್ಯವಾದರೆ ಮಾತ್ರ ನೀರು ಕುಡಿಯುತ್ತೇವೆಯೇ ವಿನಃ ಇದಕ್ಕಾಗಿ ನೀರನ್ನು ಕೊಂಡೊಯ್ಯುವುದಿಲ್ಲ. ಆದರೆ ಆರೋಗ್ಯವಂತ ವ್ಯಕ್ತಿಗಳು ತಮ್ಮದೇ ಆದ ನೀರಿನ ಬಾಟಲಿಯೊಂದನ್ನು ಸದಾ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಅಷ್ಟು ಮಾತ್ರವಲ್ಲ, ನಿಯಮಿತವಾಗಿ ನಿರ್ದಿಷ್ಟ ಅಂತರದಲ್ಲಿ ಕುಡಿಯುತ್ತಾ ಸಂಜೆಯ ಮುನ್ನವೇ ಇಡಿಯ ಬಾಟಲಿಯನ್ನು ಖಾಲಿ ಮಾಡುತ್ತಾರೆ. ಸಾಮಾನ್ಯವಾಗಿ ಪ್ರತಿ ಘಂಟೆಗೊಂದು ಲೋಟದಷ್ಟು ನೀರನ್ನು ಇವರು ಕುಡಿಯುತ್ತಾರೆ. ಈ ಅಭ್ಯಾಸ ನಾವೇಕೆ ಅನುಸರಿಸಬಾರದು?
4) ಊಟದ ವ್ಯವಸ್ಥೆಯನ್ನೂ ಮುಂಚಿತವಾಗಿಯೇ ಮಾಡುತ್ತಾರೆ
ಆರೋಗ್ಯದ ಗುಟ್ಟು ಆಹಾರಕ್ರಮದಲ್ಲಿದೆ. ಯಾವ ಹೊತ್ತಿನ ಆಹಾರವನ್ನು ಯಾವಾಗ ಸೇವಿಸಬೇಕೋ ಆಗಲೇ ಸೇವಿಸಬೇಕು. ಈ ವ್ಯಕ್ತಿಗಳು ತಮ್ಮ ದಿನದ ಎಲ್ಲಾ ಹೊತ್ತಿನ ಆಹಾರಗಳನ್ನು ಮುಂಚಿತವಾಗಿಯೇ ನಿರ್ಧರಿಸಿಟ್ಟುಕೊಂಡಿರುತ್ತಾರೆ ಹಾಗೂ ತಮಗೆ ಇಷ್ಟವಾದ ಆಹಾರ ಸರಿಯಾದ ಸಮಯಕ್ಕೆ ಲಭಿಸುವಂತೆ ವ್ಯವಸ್ಥೆ ಮಾಡಿಟ್ಟುಕೊಂಡಿರುತ್ತಾರೆ. ಹೊರಗಿನ ಅನಾರೋಗ್ಯಕರ ಆಹಾರವನ್ನು ದುಬಾರಿ ಬೆಲೆಗೆ ಕೊಳ್ಳುವುದರ ಬದಲಿಗೆ ಆರೋಗ್ಯಕರ ಆಹಾರವನ್ನು ನೀವೇ ಏಕೆ ಸ್ವತಃ ತಯಾರಿಸಿಕೊಳ್ಳಬಾರದು?
5) ಇವರ ಮನೆಯ ಫ್ರೀಜರ್ ನಲ್ಲಿ ಸದಾ ಆಹಾರದ ದಾಸ್ತಾನು ಇರುತ್ತದೆ
ಫ್ರೀಜರ್ ಎಂದರೆ ಐಸ್ ಕ್ರೀಮ್ ಗೆ ಮಾತ್ರವಲ್ಲ, ಶೀತಲ ಆಹಾರದ ಸಂಗ್ರಹಣೆಗೂ ಬಳಸಬಹುದು. ಊಟದಲ್ಲಿ ಉಳಿದ ಭಾಗ ಅಥವಾ ಶೀತಲೀಕರಿಸಿ ಇಡಬಹುದಾದ ಆಹಾರವನ್ನು ಇಲ್ಲಿ ಶೇಖರಿಸಿ ಮುಂದಿನ ಹೊತ್ತಿನಲ್ಲಿ ಸೇವಿಸಬಹುದು. ಈ ಮೂಲಕ ಆಹಾರ ಪೋಲಾಗುವುದನ್ನು ತಪ್ಪಿಸಬಹುದು ಹಾಗೂ ಯಾವುದೇ ಸಮಯದಲ್ಲಿ ಆಹಾರದ ಕೊರತೆಯಾಗದೇ ಇರುವಂತೆ ವ್ಯವಸ್ಥೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಅನಿರೀಕ್ಷಿತವಾಗಿ ಬರುವ ಅತಿಥಿಗಳ ಸತ್ಕಾರಕ್ಕೂ ಈ ಫ್ರೀಜರ್ ಆಪದ್ಭಾಂಧವನೇ ಹೌದು.
6) ಇವರ ಆಹಾರದಲ್ಲಿ ಬಹುತೇಕ ಅಥವಾ ಎಲ್ಲವೂ ಸಸ್ಯಾಹಾರವೇ ಆಗಿರುತ್ತದೆ.
ನಾವು ಮಿಶ್ರಾಹಾರಿಗಳು, ಅಂದರೆ ಅತ್ತ ಪೂರ್ಣ ಸಸ್ಯಾಹಾರವೂ ಅಲ್ಲ ಇತ್ತ ಪೂರ್ಣ ಮಾಂಸಾಹಾರವೂ ಅಲ್ಲ, ಆ ಬಗೆಯ ಜೀವಿಗಳು. ಆದ್ದರಿಂದಲೇ ನಮಗೆ ಆಹಾರ ಬೇಯಿಸಿ ತಿನ್ನಬೇಕಾಗುತ್ತದೆ. ವಾಸ್ತವಲ್ಲಿ ನಾವು ಹೆಚ್ಚು ಸಸ್ಯಾಹಾರಿಗಳೂ ಕಡಿಮೆ ಮಾಂಸಾಹಾರಿಗಳೂ ಆಗಿದ್ದೇವೆ. ಅಂದರೆ ನಮ್ಮ ಕರುಳುಗಳ ಉದ್ದವನ್ನು ಸಸ್ಯಾಹಾರಿ (ಉದಾ ಹಸು) ಮತ್ತು ಮಾಂಸಾಹಾರಿ (ಉದಾ ಹುಲಿ) ಪ್ರಾಣಿಗಳ ಕರುಳುಗಳ ಉದ್ದಗಳಿಗೆ ಹೋಲಿಸಿದರೆ ಸುಮಾರು ಮುಕ್ಕಾಲರಷ್ಟು ಉದ್ದ ಇರುತ್ತದೆ. ನಿಸರ್ಗದ ಈ ನಿಯಮದ ಪ್ರಕಾರ ನಮ್ಮ ಆಹಾರವೂ ಮುಕ್ಕಾಲು ಪಾಲು ಸಸ್ಯಾಹಾರಿ ಮತ್ತು ಕಾಲು ಭಾಗಕ್ಕೂ ಕಡಿಮೆ ಮಾಂಸಾಹಾರವಿರಬೇಕು. ಸಸ್ಯಾಹಾರದಲ್ಲಿ ಲಭ್ಯವಿರುವ ವೈವಿಧ್ಯತೆಯನ್ನು ಆಸ್ವಾದಿಸುವ ಮೂಲಕ ನಿಮ್ಮ ನಿತ್ಯದ ಊಟಗಳನ್ನು ಇನ್ನಷ್ಟು ರುಚಿಕರ ಮತ್ತು ಆರೋಗ್ಯಕರವಾಗಿಸಬಹುದು.
7) ಇವರ ಆಹಾರದಲ್ಲಿ ರುಚಿಕರಕ್ಕಿಂತಲೂ ಆರೋಗ್ಯಕರ ಗುಣಕ್ಕೆ ಹೆಚ್ಚಿನ ಮಹತ್ವವಿದೆ.
ಇಂದು ಲಭಿಸುತ್ತಿರುವ ಸಿದ್ಧ ಆಹಾರಗಳು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಲು ಮೊದಲಾಗಿ ಇವುಗಳ ಚಿತ್ರ ಅತ್ಯಂತ ಸುಂದರವಾಗಿರಬೇಕು ಮತ್ತು ಎರಡನೆಯದಾಗಿ ರುಚಿ ಇರಬೇಕು. ಆರೋಗ್ಯಕರವೋ ಅಲ್ಲವೋ ಇದು ಅಷ್ಟೊಂದು ಮುಖ್ಯವಲ್ಲದ ಪ್ರಶ್ನೆ. ಎಲ್ಲಿಯವರೆಗೆ ಕಾನೂನು ಅನುವು ಮಾಡಿಕೊಡುತ್ತದೆಯೋ ಅಲ್ಲಿಯವರೆಗೂ ಇವು ಆರೋಗ್ಯಕರವೇ. ಆದರೆ ಈ ತಂತ್ರಗಳೆಲ್ಲಾ ಈ ವ್ಯಕ್ತಿಗಳ ಮುಂದೆ ನಡೆಯದು.
ನೋಡಲಿಕ್ಕೆ ಚೆನ್ನಾಗಿದೆ ಅಥವಾ ರುಚಿಕರ ಅಥವಾ ಖ್ಯಾತ ಕಂಪೆನಿಯ ಉತ್ಪನ್ನ ಎಂಬ ಯಾವುದೇ ಕಾರಣದಿಂದ ಇವರು ಆಹಾರಗಳನ್ನು ಕೊಳ್ಳುವುದಿಲ್ಲ. ಬದಲಿಗೆ ಕೇವಲ ಆರೋಗ್ಯಕರ ಮಾಹಿತಿಗಳನ್ನು ಆಧರಿಸಿ ಅತ್ಯುತ್ತಮ ಎನ್ನಬಹುದಾದುದನ್ನೇ ಖರೀದಿಸುತ್ತಾರೆ. ಇದಕ್ಕಾಗಿ ಇವರು ಕೊಂಚ ಹೆಚ್ಚಿನ ಬೆಲೆಯನ್ನು ತೆರಲೂ ಹಿಂಜರಿಯುವುದಿಲ್ಲ.
8) ಆದರೆ ಆಗಾಗ ಅನಾರೋಗ್ಯಕರ ಆಹಾರಕ್ಕೂ ಮಣಿಯುತ್ತಾರೆ
ಸಮಾಜದಲ್ಲಿದ್ದಾಗ ಎಲ್ಲವೂ ತನಗೆ ಸೂಕ್ತವಾದಂತೆಯೇ ಇರಬೇಕು ಎಂದರೆ ಅದು ಎಂದಿಗೂ ಸಾಧ್ಯವಿಲ್ಲದ ಮಾತು. ಹಾಗಾಗಿ ಸಂದರ್ಭಕ್ಕನುಸಾರವಾಗಿ ಕೊಂಚ ಮಟ್ಟಿಗೆ ಬಾಗಲೇ ಬೇಕಾಗುತ್ತದೆ. ಕೆಲವು ಆಹಾರಗಳು ಅನಾರೋಗ್ಕಕರ ಎಂದು ಗೊತ್ತಿದ್ದರೂ ಪ್ರತಿಯೊಬ್ಬರೂ ಇವುಗಳಿಗೆ ಗುಟ್ಟಾಗಿಯಾದರೂ ವ್ಯಸನಿಯಾಗಿಯೇ ಇರುತ್ತಾರೆ. ಇದಕ್ಕೆ ಆಹಾರ ವ್ಯಸನ ಎಂದು ಕರೆಯುತ್ತಾರೆ.
ಆಹಾರ ವ್ಯಸನ ಕೊಂಚ ಮಟ್ಟಿಗೆ ಇರಲೂ ಬೇಕು. ಇಲ್ಲದಿದ್ದರೆ ನೀವು ಯಾವುದಾದರೂ ಆಹಾರವನ್ನು ಮೆಚ್ಚಿಕೊಳ್ಳುವುದಾದರೂ ಹೇಗೆ? ಈ ವ್ಯಕ್ತಿಗಳೂ ಯಾವುದಾದರೂ ಕೆಲವು ಆಹಾರಗಳಿಗೆ ವ್ಯಸನರಾಗಿಯೇ ಇರುತ್ತಾರೆ. ಆದರೆ ಈ ವ್ಯಸನವಿದ್ದೂ ಇವರ ಆರೋಗ್ಯವೇಕೆ ಬಾಧೆಗೊಳ್ಳಲಿಲ್ಲ ಎಂದರೆ ಇವರೆಂದೂ ಈ ವ್ಯಸನವನ್ನು ತಮ್ಮ ಒಟ್ಟು ಆಹಾರದ ಪ್ರಮಾಣದಲ್ಲಿ ಹತ್ತು ಶೇಖಡಾಕ್ಕಿಂತ ಹೆಚ್ಚಾಗಲು ಬಿಡಲೇ ಇಲ್ಲ. ಇದೇ ಇವರ ಆರೋಗ್ಯದ ಗುಟ್ಟು. ನಿಮಗೂ ಕೆಲವಾರು ಆಹಾರಗಳ ಬಗ್ಗೆ ಅತಿ ಹೆಚ್ಚಿನ ಒಲವು ಇರಬಹುದು. ಇವನ್ನು ಪೂರ್ಣವಾಗಿ ಬಿಡದೇ ಮಿತಿಯಲ್ಲಿ ಸೇವಿಸುವುದೇ ಜಾಣತನದ ಕ್ರಮ.
9) ಇವರು ತಮ್ಮ ಆರೋಗ್ಯದ ಕಾಳಜಿಯನ್ನು ತಾವೇ ವಹಿಸಿಕೊಳ್ಳುತ್ತಾರೆ.
ಆರೋಗ್ಯ, ಸುಮ್ಮ ಸುಮ್ಮನೇ ಯಾರಿಗೂ ಲಭಿಸುವುದಿಲ್ಲ. ಇದಕ್ಕಾಗಿ ಕಾಳಜಿಯನ್ನೂ ಮಾಡಬೇಕಾಗುತ್ತದೆ. ಹಾಗಾಗಿ ಇವರು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಅಗತ್ಯವಿರುವ ಎಲ್ಲವನ್ನೂ ಸೂಕ್ತ ಸಮತೋಲನದಲ್ಲಿ ಕಾಯ್ದುಕೊಳ್ಳುತ್ತಾರೆ. ಸೂಕ್ತ ಅಹಾರ, ವ್ಯಾಯಾಮ, ನಿದ್ದೆ, ಮಾನಸಿಕ ನಿರಾಳತೆ, ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳು, ಪ್ರವಚನಗಳು ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯಗಳ ಕಾಳಜಿಯನ್ನು ವಹಿಸುತ್ತಾರೆ.
10) ಅವರು ವಿಷಯಗಳ ಮೇಲೆ ಧನಾತ್ಮಕ ದೃಷ್ಟಿಕೋನವನ್ನು ಹೊಂದಿರುತ್ತಾರೆ
ನಿರ್ದಿಷ್ಟ ಸನ್ನಿವೇಶದ ಫಲಿತಾಂಶವು ನಮ್ಮ ಗ್ರಹಿಕೆಗೆ ಸಂಬಂಧಿಸಿದೆ. ನಿಜವಾಗಿಯೂ ಆರೋಗ್ಯವಂತ ಜನರು ತಮ್ಮ ಲೋಟದಲ್ಲಿರುವ ಅರ್ಧದಷ್ಟಿರುವ ನೀರನ್ನು ಅರ್ಧದಷ್ಟು ತುಂಬಿದೆ ಎಂಬ ನಿಟ್ಟಿನಲ್ಲಿ ನೋಡುತ್ತಾರೆ. ಹಾಗೂ ಋಣಾತ್ಮಕ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುವ ಬದಲು ಜೀವನದಲ್ಲಿ ಅವರು ಹೊಂದಿರುವ ವಿಷಯಗಳಿಗೆ ಕೃತಜ್ಞತೆಯನ್ನು ತೋರಿಸುತ್ತಾರೆ. ಉದಾಹರಣೆಗೆ ಇತ್ತೀಚೆಗೆ ನೀವು ಅರ್ಜಿ ಹಾಕಿದ್ದ ಕೆಲಸ ನಿಮಗೆ ಸಿಗದೇ ಬೇರಾರಿಗೂ ಕಡೆ ಘಳಿಗೆಯಲ್ಲಿ ಅವಕಾಶ ತಪ್ಪಿದ ಬೇಸರ ನಿಮಗೆ ಎದುರಾದರೆ ಈ ವ್ಯಕ್ತಿಗಳು ಈ ಸಮಯದಲ್ಲಿಯೂ ಧನಾತ್ಮಕ ಧೋರಣೆ ತೋರುತ್ತಾರೆ. ಈಗ ಸಿಗದಿದ್ದುದು ಮುಂದೆ ಸಿಗಲಿರುವ ಇನ್ನೂ ಒಳ್ಳೆಯ ಕೆಲಸದ ಮುನ್ನುಡಿಯಾಗಿರಬಹುದು ಎಂಬುದಾಗಿ ಚಿಂತಿಸುತ್ತಾರೆ. ಎಷ್ಟೇ ಕಷ್ಟಗಳು ಬರಲಿ, ದೀರ್ಘವಾದ ಉಸಿರೆಳೆದುಕೊಂಡು ಇವನ್ನು ಎದುರಿಸಿ, ಪರಿಹರಿಸಲು ಯತ್ನಿಸಿ. ಈ ವ್ಯಕ್ತಿಗಳು ಮಾಡುವುದೂ ಇದನ್ನೇ.
11) ಇವರು ಮಾನಸಿಕ ಒತ್ತಡವನ್ನು ನಿರ್ವಹಿಸುತ್ತಾರೆ
ಮಾನಸಿಕ ಒತ್ತಡ ಯಾರಿಗಿಲ್ಲ? ಎಲ್ಲರಿಗೂ ತಮ್ಮದೇ ಆದ ಒತ್ತಡಗಳು ಮತ್ತು ಕರ್ತ್ಯವ್ಯಗಳಿವೆ. ಆದರೆ ಆರೋಗ್ಯವಂತ ವ್ಯಕ್ತಿಗಳು ತಮಗೆ ಎದುರಾಗುವ ಮಾನಸಿಕ ಒತ್ತಡವನ್ನು ಎದುರಿಸಿ ತಮ್ಮ ಸಾಮರ್ಥ್ಯದ ಪ್ರಕಾರ ನಿರ್ವಹಿಸುತ್ತಾರೆ. ಮಾನಸಿಕ ಒತ್ತಡವನ್ನು ಇವರು ನಿರೀಕ್ಷಿಸಿಯೇ ಇದ್ದು ಇದಕ್ಕೆ ಮಾನಸಿಕವಾಗಿ ತಯಾರಾಗಿರುತ್ತಾರೆ. ಯಾವುದೇ ಒತ್ತಡ ಬರಲಿ ನಾನು ನಿರ್ವಹಿಸಬಲ್ಲೆ ಎಂಬುದಾಗಿ ಇವರು ತಮ್ಮ ಮನಸ್ಸನ್ನು ಗಟ್ಟಿ ಮಾಡಿಟ್ಟುಕೊಂಡಿರುತ್ತಾರೆ. ಮನಸ್ಸಿನ ಬೇಗುದಿಯನ್ನು ತಣಿಸಲು ನಡಿಗೆ, ಓದುವಿಕೆ, ಸ್ನೇಹಿತರೊಂದಿಗೆ ಹರಟು ನಗುವುದು ಮೊದಲಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
12) ಇವರು ಸಾಕಷ್ಟು ನಿದ್ರಿಸುತ್ತಾರೆ
ನಿದ್ದೆ ಒಂದು ನಿಧಿ ಎಂದು ಕೆಲವು ಧರ್ಮಗ್ರಂಥಗಳಲ್ಲಿಯೇ ಹೇಳಲಾಗಿದೆ. ಒಟ್ಟಾರೆ ಆರೋಗ್ಯಕ್ಕೆ ಸಾಕಷ್ಟು ನಿದ್ದೆಯೂ ಅವಶ್ಯವಾಗಿದೆ. ನಮ್ಮ ದೇಹದ ಐಚ್ಛಿಕ ಕಾರ್ಯಗಳಷ್ಟೇ ಅನೈಚ್ಛಿಕ ಕಾರ್ಯಗಳೂ ಮುಖ್ಯವಾಗಿದ್ದು ಇದನ್ನು ನಿರ್ವಹಿಸಲು ನಿತ್ಯವೂ ಸುಮಾರು ಆರರಿಂದ ಎಂಟು ಘಂಟೆ ಕಾಲ ಮಲಗಲೇ ಬೇಕು. ಈ ಅವಧಿ ಕಡಿಮೆಯೂ ಆಗಬಾರದು, ಹೆಚ್ಚಲೂ ಬಾರದು. ನಿತ್ಯವೂ ಒಂದೇ ಹೊತ್ತಿನಲ್ಲಿ ಮಲಗಿ ಒಂದೇ ಹೊತ್ತಿನಲ್ಲಿ ಮುಂಜಾನೆ ಬೇಗನೇ ಏಳುವುದು ಆರೋಗ್ಯದ ಗುಟ್ಟು