ಮಳೆಗಾಲದ ಶೀತ, ಕಫ, ಜ್ವರಕ್ಕೆಲ್ಲಾ-ಬೆಳ್ಳುಳ್ಳಿಯೇ ಸಾಕು

By Hemanth

ಮಳೆಗಾಲದ ಋತುವಿನಲ್ಲಿ ಹವಾಮಾನ ಬದಲಾವಣೆಯಿಂದಾಗಿ ಬೇಗನೆ ನಮಗೆ ಶೀತ ಬರುವುದು ಸಾಮಾನ್ಯ. ಹಲವಾರು ರೀತಿಯ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕು ಮಳೆಗಾಲದಲ್ಲಿ ಆಕ್ರಮಿಸುವುದು ಸಹಜ. ಮಳೆಗಾಲದ ಸಾಮಾನ್ಯ ಶೀತ ಮತ್ತು ಇತರ ಸೋಂಕಿನಿಂದ ಬರುವ ರೋಗಳನ್ನು ತಡೆಯಲು ನಿಮ್ಮಲ್ಲಿನ ರೋಗ ನಿರೋಧಕ ಶಕ್ತಿ ಬಲಿಷ್ಠವಾಗಿರಬೇಕಾಗುತ್ತದೆ. ಹಾಗಾಗಿ ಇವೆಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿಯೇ ಸಾಕು!

ಹೌದು ಕಟು ವಾಸನೆಯಿಂದ ಕೂಡಿದ ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಸಣ್ಣ ಪುಟ್ಟ ಕಾಯಿಲೆಗಳಿಗೆ ಹಿಂದಿನ ಕಾಲದಿಂದಲು ಸಹ ಬಳಸಿಕೊಂಡು ಬರಲಾಗುತ್ತಿದೆ. ಇದನ್ನು ಹಲವಾರು ಆಹಾರಗಳಿಗೆ ರುಚಿಯನ್ನು ನೀಡಲು ಬಳಸಲಾಗುತ್ತದೆ. ಬೆಳ್ಳುಳ್ಳಿಯಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಇದ್ದು, ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕಿನ ವಿರುದ್ಧ ಹೋರಾಡುವಲ್ಲಿ ಬೆಳ್ಳುಳ್ಳಿ ಅತೀ ಶಕ್ತಿಶಾಲಿಯಾದ ನೈಸರ್ಗಿಕ ಮನೆಮದ್ದಾಗಿದೆ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುವುದರ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಗಳು, ಎದೆಯಲ್ಲಿ ಕಫ ಗಟ್ಟಿಯಾಗುವಿಕೆ ಮತ್ತು ದೇಹದ ಉಷ್ಣತೆ ಕಡಿಮೆಯಾಗುವುದನ್ನು ತಡೆಯುತ್ತದೆ.

ಸರಿಯಾದ ಕ್ರಮದಲ್ಲಿ ಬೆಳ್ಳುಳ್ಳಿಯನ್ನು ಸೇವನೆ ಮಾಡಿದರೆ ಶೀತದಿಂದ ಪರಿಹಾರಕ್ಕೆ ಯಾವುದೇ ರೀತಿಯ ಔಷಧಿ ಸೇವಿಸಬೇಕೆಂದಿಲ್ಲ. ಬೆಳ್ಳುಳ್ಳಿ ನೈಸರ್ಗಿಕ ಉಡುಗೊರೆಯಾಗಿದ್ದು, ಎಲ್ಲಾ ರೀತಿಯ ರೋಗಗಳಿಂದ ಇದು ಮುಕ್ತಿ ನೀಡುತ್ತದೆ. ಸಾಮಾನ್ಯ ಶೀತವನ್ನು ನಿವಾರಿಸಲು ಮನೆಯಲ್ಲಿಯೇ ಮಾಡಬಹುದಾದ ಬೆಳ್ಳುಳ್ಳಿಯ ಕೆಲವೊಂದು ರೆಸಿಪಿಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಮಳೆಗಾಲದಲ್ಲಿ ಶೀತದಿಂದ ಮುಕ್ತಿ ಪಡೆಯಲು ಬೆಳ್ಳುಳ್ಳಿಯನ್ನು ಯಾವ ರೀತಿಯಲ್ಲಿ ಉಪಯೋಗಿಸಬಹುದು ಎಂಬುದನ್ನು ನೋಡಿ....

ಬೆಳ್ಳುಳ್ಳಿ ಮತ್ತು ಟೊಮೇಟೊ

ಬೆಳ್ಳುಳ್ಳಿ ಮತ್ತು ಟೊಮೇಟೊ

ಒಂದು ಸಣ್ಣ ಟೊಮೇಟೊ, ಆರು ಬೆಳ್ಳುಳ್ಳಿ ಎಸಲು ಮತ್ತು ಒಂದು ಸಣ್ಣ ಚಮಚದಷ್ಟು ಉಪ್ಪನ್ನು ಚೆನ್ನಾಗಿ ಅರೆದು ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಮಳೆಗಾಲದಲ್ಲಿ ದಿನಾಲೂ ಕುಡಿದರೆ ಸಾಮಾನ್ಯ ಶೀತದಿಂದ ಮುಕ್ತಿ ಪಡೆಯಬಹುದು. ಸಾಮಾನ್ಯ ಶೀತಕ್ಕೆ ಇದು ಅತ್ಯುತ್ತಮವಾದ ಬೆಳ್ಳುಳ್ಳಿ ರೆಸಿಪಿ.

ಕಿತ್ತಳೆ ಜ್ಯೂಸ್ ಮತ್ತು ಬೆಳ್ಳುಳ್ಳಿ

ಕಿತ್ತಳೆ ಜ್ಯೂಸ್ ಮತ್ತು ಬೆಳ್ಳುಳ್ಳಿ

ಸಾಮಾನ್ಯ ಶೀತಕ್ಕೆ ಚಿಕಿತ್ಸೆ ನೀಡಲು ಬೆಳ್ಳುಳ್ಳಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಸುಮಾರು 20 ನಿಮಿಷಗಳ ಕಾಲ ಹಾಗೆ ಬಿಟ್ಟುಬಿಡಿ. ಮಲಗುವ ಮೊದಲು ಕಿತ್ತಳೆ ಜ್ಯೂಸ್ ಗೆ ಬೆಳ್ಳುಳ್ಳಿ ತುಂಡುಗಳನ್ನು ಹಾಕಿ ಕುಡಿಯಿರಿ. ಪ್ರತೀ ದಿನ ಇದನ್ನು ಪುನರಾವರ್ತಿಸಿ.

ಬೆಳ್ಳುಳ್ಳಿ ಮತ್ತು ಜೇನಿನ ಮಿಶ್ರಣ

ಬೆಳ್ಳುಳ್ಳಿ ಮತ್ತು ಜೇನಿನ ಮಿಶ್ರಣ

ಬೆಳ್ಳುಳ್ಳಿಯ ಕೆಲವು ಎಸಲುಗಳನ್ನು ಜೇನಿನ ಜತೆಗೆ ಒಂದು ಜಾರಿನಲ್ಲಿ ಹಾಕಿಡಿ. ಇದರ ಮುಚ್ಚಳವನ್ನು ಗಟ್ಟಿಯಾಗಿಡಿ. ಫ್ರಿಡ್ಜ್ ನಲ್ಲಿ ಈ ಜಾರ್ ನ್ನು ಇಟ್ಟುಬಿಡಿ. ಶೀತದಿಂದ ದೂರವಿರಲು ಈ ಜಾರಿನಿಂದ ತೆಗೆದ ಬೆಳ್ಳುಳ್ಳಿ ಎಸಲುಗಳನ್ನು ಪ್ರತೀ ದಿನ ಬೆಳಿಗ್ಗೆ ತೆಗೆದು ತಿನ್ನಿ. ನಿಮಗೆ ಅತಿಯಾದ ಶೀತವಿದ್ದರೆ ಆಗ ನೀವು ಎಂಟು ಎಸಲುಗಳನ್ನು ತಿನ್ನಿ. ಇದು ಕಫ ಮತ್ತು ಮೂಗು ಕಟ್ಟುವುದನ್ನು ನಿವಾರಿಸುತ್ತದೆ.

ಬಿಸಿ ನೀರು ಮತ್ತು ಬೆಳ್ಳುಳ್ಳಿ

ಬಿಸಿ ನೀರು ಮತ್ತು ಬೆಳ್ಳುಳ್ಳಿ

ಕೆಲವೊಂದು ಬೆಳ್ಳುಳ್ಳಿ ಎಸಲುಗಳನ್ನು ಚೆನ್ನಾಗಿ ಜಜ್ಜಿ ಒಂದು ಲೋಟ ಬಿಸಿ ನೀರಿಗೆ ಹಾಕಿ, ಚೆನ್ನಾಗಿ ಕಲಸುಕೊಂಡು ದಿನಾ ಸೇವಿಸುತ್ತಾ ಬನ್ನಿ, ಅಥವಾ ಕಚ್ಛಾ ಬೆಳ್ಳುಳ್ಳಿಯ ಒಂದು ತುಣುಕನ್ನು 3-4 ಗಂಟೆಗಳಿಗೊಮ್ಮೆ ಹಾಗೆಯೇ ಸೇವಿಸುವುದರಿಂದ, ಸುಲಭವಾಗಿ ಶೀತವನ್ನು ನಿವಾರಿಸಿಕೊಳ್ಳಬಹುದು. ಬೆಳ್ಳುಳ್ಳಿಯಲ್ಲಿರುವ ವೈರಸ್ ನಿರೋಧಕ ಅಂಶಗಳು, ಶೀತವನ್ನು ದೂರ ಮಾಡುತ್ತವೆ. ನಿಮಗೆ ಹಾಗೆಯೇ ಸೇವಿಸಲು ಕಷ್ಟವಾದಲ್ಲಿ, ಇದನ್ನು ಜಜ್ಜಿ, ಜೇನು ತುಪ್ಪದ ಜೊತೆಗೆ ಸೇವಿಸಬಹುದು.

ಬೆಳ್ಳುಳ್ಳಿ ಮತ್ತು ಲಿಂಬೆರಸ

ಬೆಳ್ಳುಳ್ಳಿ ಮತ್ತು ಲಿಂಬೆರಸ

ಬೆಳ್ಳುಳ್ಳಿ ಮತ್ತು ಲಿಂಬೆರಸದ ಮಿಶ್ರಣವು ಶೀತಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತವೆ. ಇದು ನಿಮ್ಮ ದೇಹವನ್ನು ಟಾಕ್ಸಿನ್‌ಗಳಿಂದ ಮುಕ್ತಗೊಳಿಸುತ್ತದೆ ಮತ್ತು ನಿಮ್ಮನ್ನು ಇತರೆ ಇನ್‍ಫೆಕ್ಷನ್‌ಗಳಿಗೆ ಗುರಿಯಾಗದಂತೆ ತಡೆಯುತ್ತವೆ. ಬೆಳಗ್ಗೆ ಎದ್ದ ಕೂಡಲೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದಲ್ಲಿ, ಈ ಚಿಕಿತ್ಸೆಯು ಚೆನ್ನಾಗಿ ಕೆಲಸ ಮಾಡುತ್ತದೆ.

Story first published: Friday, June 19, 2015, 23:33 [IST]
X
Desktop Bottom Promotion