ಸ್ನೇಹಿತರ ಮೌಲ್ಯ ಬಗ್ಗೆ, ಸ್ನೇಹಿತರ ದಿನದ ಬಗ್ಗೆ ಯುವ ಜನತೆ ಹೇಳಿದ್ದು ಹೀಗೆ

ಬದುಕೇ ಹಾಗೆ ನಮಗೆ ತಿಳಿಯದೇ ಮುಂಚಿತವಾಗಿ ರೂಪುಗೊಂಡಿರುವ ನಕ್ಷೆಯದು.ನಮಗೆ ಅನಿವಾರ್ಯ ಇರುವ ಸಮಯದಲ್ಲಿ ನಮಗೇ ತಿಳಿಯದೇ ಒಂದೊಂದು ವ್ಯಕ್ತಿ ನಮಗೆ ದೊರೆತು ಬಿಡುತ್ತಾರೆ.

ಸ್ನೇಹದಿಂದ ಹೆಚ್ಚು ನಿರೀಕ್ಷೆ ಮಾಡಿದ ಮನಸ್ಸು ನನ್ನದಲ್ಲ , ಗೆಳೆತನ ಎಂದಾದರೆ ಆ ಬಾಂಧವ್ಯಕ್ಕೆ ನಮ್ಮ ಸಂಪೂರ್ಣ ಪ್ರಯತ್ನ ಇರಬೇಕು ಎನ್ನುವ ಸಿದ್ಧಾಂತ ನನ್ನದು.ಇಂತಹ ಯೋಚನೆಗಳಿಗಿರುವ ನನಗೆ ಅನಿರೀಕ್ಷಿತವಾಗಿ ಸಿಕ್ಕಿದ್ದು ಅನುಜ್ಞಾ ಎನ್ನುವ ಸುಂದರ ಜೀವ. ಹೆಸರಂತೆ ವಿಭಿನ್ನ ವ್ಯಕ್ತಿತ್ವವುಳ್ಳ ಹುಡುಗಿ ಅವಳು.ಅನುಜ್ಞಾ ಎಂದರೆ ಕೆಲಸದ ಪ್ರಾರಂಭ ಎಂಬ ಅರ್ಥವಂತೆ, ಆದರೆ ಅವಳು ನನ್ನ ಎಲ್ಲಾ ಸಂತೋಷಗಳಿಗೆ ಆರಂಭವಾದಳು , ಮೂಲ ಕಾರಣವಾದಳು.

Friendship Day

ಬದುಕು ಇದ್ದಂತೆ ಸ್ವೀಕರಿಸು ಎನ್ನುವ ಅವಳ ಮಾತು , ಇನ್ನೂ ಜೀವಂತವಾಗಿರುವ ಮಗುವಿನ ಮುಗ್ಧತೆ, ಹೊಸ ಗೆಳೆತನವನ್ನು ನಾನು ಮಾಡಿದಾಗ ಬರುವ ಸ್ವಾರ್ಥದ ಹುಸಿಗೋಪ, ಸಾಧನೆ ಮಾಡಿದಾಗ ಪ್ರಶಂಸನೆ ನೀಡಿ , ದುಃಖದ ಸಮಯದಲ್ಲಿ ಸಾಂತ್ವನದ ಅಪ್ಪುಗೆ ನೀಡುವ ಮಮತೆಯ ಹೃದಯ ಅವಳದ್ದು . ಪರಿಚಯ ಎಂಟು ವರ್ಷಗಳಿಂದ ಇದ್ದರೂ , ಹಿಂದಿನ ಮೂರು ವರ್ಷಗಳಿಂದ ನನ್ನ ಬದುಕಿನ ಸುಂದರ ಭಾಗವೇ ಆಗಿಬಿಟ್ಟಳು.

ಪ್ರತೀ ಕ್ಷಣವನ್ನು ಇಬ್ಬರೂ ಜೊತೆಯಾಗಿ ಜೀವಿಸುತ್ತೇವೆ , ಪ್ರತೀ ಸುಖ ದುಃಖಗಳಿಗೂ ಜೊತೆಯಾಗಿ ಇರುತ್ತೇವೆ.ಬಾಯಿ ಬಿಟ್ಟು ಹೇಳದಿದ್ದರೂ , ಅವಳಿಗಿಂತ ನಾನೇ ಅದೆಷ್ಟೋ ಕಿರಿಕಿರಿ ಪ್ರತಿದಿನ ನೀಡುತ್ತೇನೆ ಆದರೂ ಸಹಿಸಿಕೊಂಡು ಜೊತೆಯಾಗಿ ಇರುವುದೇ ನಮ್ಮ ಬಾಂಧವ್ಯದ ವಿಶೇಷತೆ. ನನಗಿಷ್ಟವಾದ ಧಾರವಾಡ ಪೇಡದಂತೆ ಸಿಹಿ ಅವಳ ಮಾತು , ಪಾನಿಪೂರಿಗೆ ಖಾರ ಇನ್ನಷ್ಟು ಸೇರಿಸಿದಾಗ ಬರುವ ಖುಷಿಯಂತೆ ಅವಳ ಗೆಳೆತನ.

ನಮ್ಮ ಸ್ನೇಹವನ್ನು ಸಂಭ್ರಮಿಸಲು ಯಾವುದೇ ಒಂದು ದಿನ ಬೇಕಾಗಿಲ್ಲ ಕಾರಣ ಪ್ರತೀ ಕ್ಷಣವೂ ನಮಗೆ ಗೆಳೆತನದ ರುಚಿಯನ್ನು ನೀಡಿದೆ ಮತ್ತು ಈ ಸ್ನೇಹ ಸದಾ ಜೊತೆಗಿರುವುದು ಎನ್ನುವ ಭರವಸೆ ನನ್ನದು.
ಮನದಾಳದ ಕೃತಜ್ಞತೆಗಳು,
ಅನುಜ್ಞಾ

ಪ್ರೀತಿ , ವಿಶ್ವಾಸದಿಂದ
ಸಿಂಚನ ಕಲ್ಲೂರಾಯ
ಪುತ್ತೂರು

ಜೀವನವೆಂಬುವುದು ಸಾಗರ, ಕಬ್ಬಿಣ ದ ಕಡಲೆ ಎಂದೇ ಹಲವಾರು ರೀತಿಯಲ್ಲಿ ಪ್ರತಿಬಿಂಬಿಸಬಹುದು. ಏಕೆಂದರೆ ಸಾಗರದಲ್ಲಿರುವ ಅಲೆಗಳು ಯಾವರೀತಿ ಎತ್ತರ ತಗ್ಗಿನೊಂದಿಗಿರುತ್ತದೆಯೋ ಅದೇ ರೀತಿ ಜೀವನದಲ್ಲಿ ಸುಖ, ದುಃಖಗಳು ಎಂಬ ಅಲೆಯು ತನ್ನ ಚಾಪನ್ನು ಜೀವನದಲ್ಲಿ ಮೂಡಿಸಿರುತ್ತವೆ. ಇಂತಹ ಸುಖ, ದುಃಖ ಗಳೊಂದಿಗೆ ನಮ್ಮೆಲರ ಒಡನಾಡಿಯಾಗಿರುವ ಏಕೈಕ ಬಂಧ ಅದು ಗೆಳೆತನ. ಎಂತಹ ಕಷ್ಟ, ಸುಖಗಳು ನಮ್ಮನ್ನು ಪರೀಕ್ಷಿಸಿದರು ಅದಕ್ಕೆ ಆಭಾರಿಯಾಗಿ ನಿಲ್ಲಬಲ್ಲಂಥವರು ಸ್ನೇಹಿತರು. ಎಷ್ಟೋ ಸಮಯದಲ್ಲಿ ಬೆನ್ನೆಲುಬಾಗಿ ನಿಲ್ಲ ಬಲ್ಲ ಅಮೂಲ್ಯ ವ್ಯಕ್ತಿಗಳು ಸ್ನೇಹಿತರು.

ಅಂಗನವಾಡಿಯಿಂದ ಹಿಡಿದು ಶಾಲೆಗೆ ಹೋಗುವ ವರೆಗೂ ಅದರ ನಂತರವು ಸಿಗುವ ಪಾಠಕ್ಕಿಂತ ಅಮೂಲ್ಯವಾದ ಬಂಧವೆ ಗೆಳೆತನ. ಗೆಳೆತನವೆಂಬ ಬಂಧ ಯಾವ ರೀತಿ, ಯಾವ ಹೊತ್ತಿನಲ್ಲಿ ಶುರುವಾಯಿತು ಎಂದು ಊಹಿಸಲು ಸಾಧ್ಯವಿಲ್ಲ. ಅಷ್ಟು ಶಕ್ತಿ ಇದೆ ಗೆಳೆತನಕ್ಕೆ. ಗೆಳೆತನವು ನಿಜವೇ ಆಗಿದ್ದರೆ ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ.ಅದಕ್ಕಿರುವ ಶಕ್ತಿ ಅಪಾರ ಅನೇಕ ಬಾರಿ ನಾವು ಸಂಕಷ್ಟದಲ್ಲಿ ಸಿಲುಕಿಕೊಂಡಾಗ ತಂದೆ ತಾಯಿಗಿಂತ ಮೊದಲು ನಾವು ಅದನ್ನು ನಮ್ಮ ಗೆಳೆಯರ ಜೊತೆ ಹಂಚಿಕೊಳ್ಳುತೇವೆ. ನಮ್ಮ ಹಿರಿಯರು ಅಷ್ಟೇ ನಮ್ಮೊಂದಿಗೆ ಒಳ್ಳೆಯ ಗೆಳೆಯರು ಇದ್ದರೆಂದರೆ ಅವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

ಅದ್ರಷ್ಟ ಏನೆಂದರೆ ನನಗು ಬಾಲ್ಯದಿಂದ ಹಿಡಿದು ಯೌವನದವರೆಗೂ ಅನೇಕ ಸ್ನೇಹಿತರು ನನ್ನೊಂದಿಗೆ ನನೆಲ್ಲ ಸುಖ, ದುಃಖ ಗಳಲ್ಲಿ ಭಾಗವಹಿಸಿದ್ದಾರೆ. ಅವರಾರು ಸುಖದ ಸಮಯದಲ್ಲಿದ್ದು ಕಷ್ಟದ ಸಮಯದಲ್ಲಿ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದವರಲ್ಲ. ಒಳ್ಳೆಯ ಕೆಲಸ ಮಾಡಲು ಹೊರಟಾಗ ಅಪಹಾಸ್ಯ ಮಾಡಿದವರಲ್ಲ ಬದಲಾಗಿ ಪ್ರೋತ್ಸಾಹಿಸಿದವರು. ನನ್ನ ಬದುಕಿನ ಎಲ್ಲಾ ಸಂತೋಷಗಳಲ್ಲಿ ಬಹು ದೊಡ್ಡ ಪಾತ್ರವಹಿಸಿರುವ ನನ್ನ ಗೆಳೆಯರು ಅನೇಕ ಜೀವನ ಪಾಠದ ಜೊತೆಗೆ ಹಲವಾರು ಹೊಸ ವಿಚಾರಗಳನ್ನು ನನ್ನ ಮಸ್ತಕದಲ್ಲಿ ತುಂಬಿದ್ದಾರೆ.

ಜೀವನದಲ್ಲಿ ಸೋತು, ಪ್ರೀತಿಯನ್ನು ಕಳೆದುಕೊಂಡು ಜೀವನವೇ ಸಾಕು ಎಂಬವರಿಗೆ ಬುದ್ದಿ ಹೇಳಿ ಸರಿದಾರಿಗೆ ತಂದ ನನ್ನ ಹಲವಾರು ಗೆಳೆಯರನ್ನು ನೋಡಿದ್ದೇನೆ. ಇನ್ನು ಅವರ ಸಂತೋಷಕಿಂತ ನನ್ನ ಸಂತೋಷ ಮಿಗಿಲಾದುದು ಎಂದು ನಾ ಸಂಕಷ್ಟ ದಲ್ಲಿರುವಾಗ ತೆರೆ ಮರೆಯಲ್ಲಿ ನನಗಾಗಿ ಶ್ರಮಿಸಿದ ಎಷ್ಟೋ ಮಂದಿ ಗೆಳೆಯರನ್ನು ನಾ ಕಂಡಿದ್ದೇನೆ. ಹಾಗಾಗಿ ಗೆಳೆಯರು ಎಂದರೆ ನನ್ನ ಪಾಲಿಗೆ ಅಮೂಲ್ಯವಾದ ಸ್ವತ್ತು, ಸ್ವಾರ್ಥವಿಲ್ಲದ ಸಂಬಂಧ.ಇಂತಹ ಗೆಳೆಯರನ್ನು ಪಡೆದಿರುವುದು ನನ್ನ ಪೂರ್ವ ಜನ್ಮದ ಪುಣ್ಯ.

ಗೆಳೆತನ ಎಂಬುವುದು ಜಾತಿ, ಧರ್ಮ, ಪಂಥಗಳನ್ನು ಮೀರಿ ನಿಲ್ಲಬಲ್ಲದoತಹ ಅಪೂರ್ವ ಶಕ್ತಿ. ಬಡವ -ಬಲ್ಲಿದ, ಮೇಲು - ಕೀಳು ಗಳನ್ನು ತೊಡೆದು ಹಾಕಿ ಬದುಕುವ ಏಕೈಕ ಬಂಧ. ನನ್ನoತೆಯೇ ಕಷ್ಟದ ಸಮಯದಲ್ಲಿ ಧೈರ್ಯ ತುಂಬುವ, ಕೆಟ್ಟ ಪರಿಸ್ಥಿತಿಯಲ್ಲಿ ನೈತಿಕ ಸ್ಥೈರ್ಯ ತುಂಬುವ ಗೆಳೆಯರನ್ನು ಹಲವಾರು ಮಂದಿ ಹಾರಿಸಿಕೊಂಡಿರುತ್ತಾರೆ. ಇಂತಹ ಗೆಯರನ್ನು ಸೃಷ್ಟಿಸಿಕೊಳ್ಳುವುದು ಎಲ್ಲರ ಅಗತ್ಯ. ಈ ಸ್ನೇಹಿತರ ದಿನವನ್ನು ಆಗಸ್ಟ್ 04 ಇಂದು ಆಚರಿಸುತ್ತಿರುವುದು ಬಹಳ ಖುಷಿಯ ಸಂದರ್ಭ ನನೆಲ್ಲ ಸ್ನೇಹಿತರಿಗೆ ಸ್ನೇಹಿತರ ದಿನದ ಶುಭಾಶಯಗಳು.
- ಮನೀಶ್ ಶೆಟ್ಟಿ
ಶ್ರೀ. ಧ. ಮ ಕಾಲೇಜು ಉಜಿರೆ

English summary

Friendship Day: Collage Students Expression About Friendship Day

Friendship Day: collage students expression about friendship day and value of friendship read on.
Story first published: Sunday, August 4, 2024, 17:38 [IST]
X
Desktop Bottom Promotion