ಗರಮಾಗರಂ ಅವರೆಕಾಳು ನಿಪ್ಪಟ್ಟು

By Super

Avarekalu Nippattu
ಇನ್ನು ಕೆಲವೇ ದಿನಗಳಲ್ಲಿ ದಕ್ಷಿಣಾಯಣ ಮುಗಿದು ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗಲಿದೆ. ಸೂರ್ಯದೇವ ತನ್ನ ರಥವೇರಿ ಬಂದು ಸಂಕ್ರಾಂತಿಗೆ ರೈತರಿಗೆ ಸುಗ್ಗಿ ಮತ್ತು ಹಿಗ್ಗನ್ನೂ ನೀಡಲಿದ್ದಾನೆ. ಚಳಿಗಾಲ ಇನ್ನೇನು ಮುಗಿದು ಬಿಸಿಲಿಗೆ ಮೈಯೊಡ್ಡುವ ಕಾಲ ಸನ್ನಿಹಿತವಾಗುತ್ತಿದೆ.

ಆದರೇನಂತೆ, ಚಳಿಗಾಲ ಮುಗಿಯುವ ಮೊದಲೇ ಬೆಚ್ಚನೆಯ ಸಂಜೆಗಳಿಗಾಗಿ ಅವರೆಕಾಯಿಯಂತೂ ಸಜ್ಜಾಗಿ ನಿಂತಿದೆ. ಬೆಂಗಳೂರಿನಲ್ಲೂ ಜ.7ರಿಂದ 11 ದಿನಗಳ ಕಾಲ ಅವರೆಸಂತೆ ತನ್ನ ಗದ್ದಲವನ್ನು ಎಬ್ಬಿಸಲಿದೆ. ಅವರೆಕಾಳಿನಿಂದ ನಾನಾಬಗೆಯ ತಿಂಡಿಗಳನ್ನು ಮಾಡಬಹುದೆಂದು ಅವರೆಸಂತೆ ಲೇಖನದಲ್ಲಿ ಓದಿಯಾಗಿದೆ. ಇನ್ನೇಕೆ ತಡ ಅವರೆಕಾಳಿನ ನಿಪ್ಪಟ್ಟನ್ನು ತಯಾರಿಸಿಬಿಡೋಣ.

ಈ ಪದಾರ್ಥಗಳನ್ನು ರೆಡಿಯಾಗಿಟ್ಟುಕೊಳ್ಳಿ :

ಸಂತೆಯಿಂದ ತಂದ ಎಳೆ ಅವರೆಕಾಳು 1 ಲೋಟ
ಅಕ್ಕಿಹಿಟ್ಟು 1 ಪಾವು
ಚಿರೋಟಿ ರವೆ 1 ಚಮಚ
ಮೈದಾಹಿಟ್ಟು 1 ಚಮಚ
ಹುರಿದ ಎಳ್ಳು 1 ಚಮಚ
ಚಿಟಿಕೆ ಜೀರಿಗೆ
ಕಾರದ ಪುಡಿ
ಒಣಕೊಬ್ಬರಿ ಅರ್ಧ ಲೋಟ
ಮತ್ತು ಕರಿಯಲು ಖಾದ್ಯತೈಲ

ತಯಾರಿಸುವ ವಿಧಾನ :

ಎಳೆ ಅವರೆಕಾಳುಗಳನ್ನು ಒಂದು ಲೋಟದಷ್ಟು ನೀರಿನಲ್ಲಿ ಬೇಯಿಸಿಟ್ಟುಕೊಳ್ಳಿ. ನಂತರ ಅಕ್ಕಿಹಿಟ್ಟು ಮತ್ತು ಚಿರೋಟಿ ರವೆಯನ್ನು ಮಿಲಾಯಿಸಿ ಅದಕ್ಕೆ ಒಂದೇ ಒಂದು ಚಮಚದಷ್ಟು ಕಾದ ಎಣ್ಣೆ ಸುರಿದು ಹದವಾಗಿ ಕೈಯಾಡಿಸಿಕೊಳ್ಳಿ. ಅದಕ್ಕೆ ಬೇಯಿಸಿದ ಅವರೆಕಾಳು, ಮೈದಾಹಿಟ್ಟು, ಜೀರಿಗೆ, ಕಾರದ ಪುಡಿ, ಎಳ್ಳು ಮತ್ತು ಒಣಕೊಬ್ಬರಿ ಮತ್ತು ಉಪ್ಪನ್ನು ಬೆರೆಸಿ ಒಂದಿಷ್ಟು ನೀರಿನೊಂದಿಗೆ ಚೆನ್ನಾಗಿ ಕಲಿಸಿಟ್ಟುಕೊಳ್ಳಿ. ಇಷ್ಟು ಮಾಡಿಟ್ಟುಕೊಂಡರೆ ಕರಿಯಲು ಅವರೆಕಾಳು ನಿಪ್ಪಟ್ಟಿನ ಹಿಟ್ಟು ರೆಡಿಯಾದಂತೆ.

ಇಷ್ಟಾದನಂತರ ಒಂದು ಬಾಣಲೆಯಲ್ಲಿ ಕರಿಯಲು ಬೇಕಾಗುವಷ್ಟು ಖಾದ್ಯತೈಲವನ್ನು ಸುರುವಿ ಚೆನ್ನಾಗಿ ಕಾಯಿಸಿ. ಪ್ಲಾಸ್ಟಿಕ್ ಹಾಳೆಯ ಮೇಲೋ ಅಥವಾ ಬಾಳೆಎಲೆಯ ಮೇಲೋ ಕಲಿಸಿಟ್ಟುಕೊಂಡ ಹಿಟ್ಟನ್ನು ಕೈಯಿಂದ ತಟ್ಟಿ ಅದನ್ನು ಕಾದ ತೈಲದಲ್ಲಿ ತೇಲಿಬಿಡಿ. ತೂತುತೂತಿನ ಜಾಲರಿಯಿಂದ ಎಣ್ಣೆಯನ್ನು ತೇಲಿಬಿಟ್ಟ ಹಿಟ್ಟಿನ ಮೇಲೆ ಹರಡುತ್ತಿರಿ. ತಟ್ಟಿದ ಹಿಟ್ಟು ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಬಾಣಲೆಯಿಂದ ತೆಗೆದುಬಿಡಿ. ಅಷ್ಟೇ, ಗರಮಾಗರಂ ಅವರೆಕಾಳು ನಿಪ್ಪಟ್ಟು ರೆಡಿ.

ಬೇಕಿದ್ದರೆ ಬಿಸಿಬಿಸಿಯಿರುವಾಗಲೇ ಕಾಫಿ ಅಥವಾ ಚಹಾದೊಡನೆ ಸಂಜೆಯನ್ನು ಸಂತಸದಿಂದ ಕಳೆಯಿರಿ. ಇಲ್ಲದಿದ್ದರೆ, ಒಂದು ಡಬ್ಬದಲ್ಲಿ ಒಂದರ ಮೇಲೊಂದು ಪೇರಿಸಿಟ್ಟುಕೊಂಡರೆ ಹತ್ತುದಿನಗಳವರೆಗೆ ಗರಮಾಗರಂ ಅಲ್ಲದ ಕುರುಕುರು ನಿಪ್ಪಟ್ಟನ್ನು ಯಾವಾಗಬೇಕೆಂದಾಗ ಮೆಲ್ಲಬಹುದು.

X
Desktop Bottom Promotion