ಏನೇ ಬರಲಿ.. ಮಸಾಲೆ ದೋಸೆ ಇರಲಿ!

By Staff

Save Masala Dose
ಅನ್ಯ ತಿಂಡಿಗಳು ವಾಸನೆಯ ಮೇಲಾಟದಲ್ಲಿ ಅಪ್ಪಟ ಕರ್ನಾಟಕ ಘಮಲಿನ ಮಸಾಲೆ ದೋಸೆ ಯಾಕೋ ಸಪ್ಪೆಯಾಗುತ್ತಿದೆ. ಮಸಾಲೆದೋಸೆ ಉಳಿವಿಗೆ ಹೋರಾಟ ನಡೆಯಲೇಬೇಕು.

ಉಮೇಶ್‌ ಮತ್ತು ಗೆಳೆಯರು, ರಾಜಾಜಿನಗರ, ಬೆಂಗಳೂರು.

ಕನ್ನಡಕ್ಕೆ ಒಬ್ಬರೇ ರಾಜ್‌ಕುಮಾರ್ ಅನ್ನುವ ರೀತಿ ಕರ್ನಾಟಕಕ್ಕೆ ಒಂದೇ ತಿಂಡಿ ಯಾವುದು ಎಂದು ಕೇಳಿದರೆ ಅದಕ್ಕೆ ನನ್ನ ಉತ್ತರ; ಬಿಸಿಬಿಸಿ ಮಸಾಲೆದೋಸೆ! ಮಸಾಲೆದೋಸೆ ತಿಂದು ಬೆಳೆದು ಇನ್ನೂ ಉಳಿದಿರುವ ನಮ್ಮ ವಂಶಕ್ಕೆ ಅದು ಬಿಟ್ಟು ಇನ್ನಾವ ತಿಂಡಿಯೂ ದೊಡ್ಡದಾಗುವುದಕ್ಕೆ ಸಾಧ್ಯವೇಯಿಲ್ಲ.

ಮನೆಯಲ್ಲಿ ಎಷ್ಟೇ ಮೈಬಗ್ಗಿಸಿ ಮಸಾಲೆದೋಸೆ ಮಾಡಿದರೂ, ಹೋಟೆಲ್‌ನಲ್ಲಿ ದೋಸೆ ತಿನ್ನುವ ಮಜಾನೇ ಬೇರೆ. ಆದರೆ ಇತ್ತೀಚೆಗೆ ಹೋಟೆಲುಗಳಲ್ಲಿ ಗಮ್ಮತ್ತಾಗಿರುವ ಘಂ ಎನ್ನುವ ದೋಸೆಗೆ ಆಪತ್ತು ಬಂದೆರಗಿದೆ. ಉತ್ತರ ಭಾರತದವರನ್ನು, ತಮಿಳರನ್ನು, ತೆಲುಗರನ್ನು ಯೂರೋಪಿಯನ್ನರನ್ನು ಓಲೈಸುವ ಸಲುವಾಗಿ ನಮ್ಮ ಕನ್ನಡಿಗ ಹೋಟೆಲ್‌ನವರು ಏನೇನೋ ತಿಂಡಿ ತಯಾರಿಸಿ, ನಮ್ಮ ಅಚ್ಚ ಕನ್ನಡ ತಿಂಡಿಗಳನ್ನು ಗಬ್ಬೆಬ್ಬಿಸುತ್ತಿದ್ದಾರೆ.

ಗಿರಾಕಿಗಳ ಇಷ್ಟಕ್ಕೆ ತಕ್ಕಂತೆ ವ್ಯಾಪಾರ ಮಾಡುವುದು ವ್ಯಾಪಾರದ ಧರ್ಮ, ನಿಜ. ಆದರೆ ಮಸಾಲೆದೋಸೆಯನ್ನು ಮೂಲೆಗುಂಪು ಮಾಡುವ ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲ ಹೋಟೆಲುಗಳ ನಿರ್ಲಕ್ಷ್ಯ ಧೋರಣೆ ಬಗ್ಗೆ ನನಗೆ ತೀವ್ರ ಅಸಮಾಧಾನವಿದೆ. ಆಕ್ರೋಶವೂ ಇದೆ.

ಕನ್ನಡಿಗರಿಗೆ ಉದ್ಯೋಗ, ಕನ್ನಡ ಭಾಷೆ ನೆಲ ಜಲ ಮತ್ತು ಕನ್ನಡ ಮಣ್ಣಿನ ಸ್ವಾಭಿಮಾನ ಉಳಿಸಿ ಬೆಳೆಸಲು ಹೋರಾಡುತ್ತಿರುವ ಎಲ್ಲ ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳೂ ಇತ್ತ ಗಮನಹರಿಸಬೇಕಾಗಿದೆ. ಕರವೇ ಸಂಘಟನೆಯ ನಾರಾಯಣ ಗೌಡ, ವಾಟಾಳ್‌ ಅವರ ಕನ್ನಡ ಪಕ್ಷ, ರಾಜ್‌ಕುಮಾರ್‌ ಅಭಿಮಾನಿಗಳ ಸಂಘ, ಅವಿರತ, ಈ-ಕವಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂತಾವರೆಲ್ಲರೂ ಕಲೆತು ಮಸಾಲೆದೋಸೆ ಉಳಿಸಿ ಚಳವಳಿಯನ್ನು ಈ ಕೂಡಲೇ ಹಮ್ಮಿಕೊಳ್ಳಬೇಕು. ಈ ಆಂದೋಳನಕ್ಕೆ ಜಾತಿವಾದಿಗಳು, ಜಾತ್ಯಾತೀತರು, ನವ್ಯ, ನವೋದಯ, ಬಂಡಾಯ ಮತ್ತು ಬಂಡಾವಳವೇ ಇಲ್ಲದ ಸಾಹಿತಿಗಳು ಕೈಜೋಡಿಸಬೇಕೆಂದು ವಿನಮ್ರ ಪ್ರಾರ್ಥನೆ.

ಅಥೆನ್‌ಟಿಕ್‌ ಮಸಾಲೆದೋಸೆ ತಯಾರಿಸುವ ಹೋಟೆಲುಗಳು ಇವತ್ತು ನಮ್ಮ ರಾಜ್ಯದಲ್ಲಿ ಎಷ್ಟಿವೆ? ಎಲ್ಲಿವೆ? ನೀವೇ ಹೇಳಿ? ಥಟ್‌ ಅಂತ ಉತ್ತರ ಹೇಳುವುದಕ್ಕೆ ಸ್ವಲ್ಪ ಕಷ್ಟವಾಗುತ್ತದಾ? ಹೌದು. ನಿಮ್ಮ ಗೊಂದಲ ನನಗೆ ಅರ್ಥವಾಗುತ್ತದೆ. ಯಾಕೆಂದರೆ ನನ್ನ ಕನ್‌ಫ್ಯೂಷನ್‌ ನಿಮ್ಮ ಕನ್‌ಫ್ಯೂಷನ್‌ ಥರವೇ ಇದೆ.

ಪಾನಿಪೂರಿ, ಮಸಾಲೆಪೂರಿ, ಶ್ಯಾವಿಗೆ ಉಪ್ಪಿಟ್ಟು, ಗೋಬಿ ಮಂಚೂರಿ, ಅವರಜ್ಜ ಪೀಜ್ಜಾ , ಬರ್ಗರ್‌, ಪಾಸ್ತಾ, ನೂಡಲ್ಸ್‌ , ಚಿಕನ್‌ ದೊಪಿಯಾಜ, ಆಲೂ ಮಟರ್ ಎಂದು ಹೇಳಿಕೊಂಡು ವ್ಯಾಪಾರ ಶುರುವಾಗಿದೆ, ನಮ್ಮ ತಾಯಿನಾಡು ಕರ್ನಾಟಕದೊಳಗೆ. ಗ್ರೀಕ್‌ ಮತ್ತು ಲ್ಯಾಟಿನ್‌ ಹೆಸರಿನ, ರುಚಿ ಸ್ವಾದ ಚೂರೂ ಇಲ್ಲದ ತಿಂಡಿಗಳ ಹಾವಳಿಯಲ್ಲಿ ಮಸಾಲೆದೋಸೆಯ ಹೆಮ್ಮೆ ಅಳಿಯುತ್ತಿದೆ. ಖೇದವಾಗುತ್ತಿದೆ.

ನೆಲ, ಜಲ, ಭಾಷೆ, ಉದ್ಯೋಗ, ಪರಂಪರೆಯ ಉಳಿವಿಗೆ ಹೋರಾಡುವ ಭರಾಟೆಯಲ್ಲಿ ನಮ್ಮ ತಿಂಡಿಗಳನ್ನು, ವಿಶೇಷವಾಗಿ ಮಸಾಲೆದೋಸೆಯನ್ನು ಮರೆಯುವುದು ಸಲ್ಲದು ಎಂದು ಘೋಷಿಸುತ್ತಾ, ಸಂಬಂಧಪಟ್ಟವರು ತಡಮಾ‌‌‌ಡದೆ ಇತ್ತ ಗಮನಹರಿಸುತ್ತಾರೆಂಬ ಆಶಾಭಾವನೆಯಿಂದ ಕಾಯುತ್ತಿತ್ತೇವೆ.

Story first published: Monday, September 10, 2007, 15:23 [IST]
X
Desktop Bottom Promotion