Latest Updates
-
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು
ಇವರೆ, ಇಲ್ಲಿ ಬಂದಿದೆ ನೋಡಿ ಅವರೆ ಮೇಳ

ಪ್ರತಿವರ್ಷ ಕಾರ್ತೀಕ ಮಾಸದ ಕೊನೆಯ ಸೋಮವಾರ ಬೆಂಗಳೂರಿನ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ ನಡೆಯುವ ಎರಡು ದಿನಗಳ ಕಡಲೆಕಾಯಿ ಪರಿಷೆಯ ಆಕರ್ಷಣೆ ಒಂದು ರೀತಿಯದಾದರೆ ಮರುವರ್ಷ ಮಕರ ಸಂಕ್ರಾಂತಿಗೂ ಮೊದಲು ವಿಶ್ವೇಶ್ವರಪುರದ ಸಜ್ಜನ್ ರಾವ್ ವೃತ್ತದಲ್ಲಿ ನಡೆಯುವ ಅವರೆಕಾಳು ಮೇಳದ ಗಮ್ಮತ್ತೇ ಬೇರೆ.
ಹೇಮಂತ ಇನ್ನೇನು ಹಾಸಿಗೆಯಿಂದೆದ್ದು ಶಿಶಿರನಿಗೆ ಜಾಗ ಮಾಡಿಕೊಡುವ ಸಂಧಿಕಾಲದಲ್ಲಿ ಬರುವ ಅವರೆಕಾಳು ಮೇಳ ತನ್ನದೇ ಆದ ವೈಶಿಷ್ಯ ಹೊಂದಿದೆ. ಪ್ರದರ್ಶನದ ಜೊತೆ ಬಗೆಬಗೆಯ ತಿಂಡಿಗಳನ್ನು ಕೂಡ ಸ್ಥಳದಲ್ಲಿಯೇ ಮಾಡಿಕೊಡಲಾಗುತ್ತದೆ. ಮಾಗಡಿಯಲ್ಲಿ ಹೆಚ್ಚಾಗಿ ಬೆಳೆಯಲಾಗುವ ವಿವಿಧಬಗೆಯ ಅವರೆಕಾಳುಗಳನ್ನು ಮೂಟೆಯಲ್ಲಿ ತುಂಬಿ ರೈತರು ಜನರ ಮುಂದಿಡಲಿದ್ದಾರೆ. ವಾಸವಿ ಕಾಂಡಿಮೆಂಟ್ಸ್ ವತಿಯಿಂದ ನಡೆಸಲಾಗುತ್ತಿರುವ ಮೇಳ ಜನೆವರಿ 7ರಿಂದ 17ರವರೆಗೆ ಬೆಳಿಗ್ಗೆ 11ರಿಂದ ರಾತ್ರಿ 10ರವರೆಗೆ ನಡೆಯಲಿದೆ.
ಕಾರ್ಮಿಕ ಸಚಿವ ಬಿಎನ್ ಬಚ್ಚೇಗೌಡ ಅವರು ಮೇಳದ ರಿಬ್ಬನ್ನ ಕಟ್ ಮಾಡಲಿದ್ದಾರೆ. ಖ್ಯಾತ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್, ಮಾಜಿ ಸಂಸದ ಅಂಬರೀಷ್, ಅವರ ಪತ್ನಿ ಸುಮಲತಾ, ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಅವರು ಮೇಳ ಉದ್ಘಾಟನೆ ಸಂದರ್ಭದಲ್ಲಿ ಹಾಜರಿದ್ದು ಮೇಳದ ಮೆರುಗು ಹೆಚ್ಚಿಸಲಿದ್ದಾರೆ.
ಇವರೆ, ಇಲ್ಲಿವೆ ನೋಡಿ ವಿಧದ ಅವರೆ ತಿಂಡಿ : ಅವರೆಕಾಳುಗಳಿಂದ ಇಷ್ಟೊಂದು ಬಗೆಯ ತಿಂಡಿ ತಿನಿಸುಗಳನ್ನು ಮಾಡಬಹುದಾ ಎಂದು ಮೂಗಿನ ಮೇಲೆ ಬೆರಳಿಡುವಷ್ಟು ಬಗೆಯ ತಿಂಡಿಗಳನ್ನು ತಯಾರಿಸಬಹುದು. ಅವರೆಕಾಳು ನಿಪ್ಪಟ್ಟು, ಅವರೆಕಾಳಿನ ಕೋಡುಬಳೆ, ಅವರೆಕಾಳು ಉಸಲಿ, ಅವರೆಕಾಳು ಹುಳಿ, ಅವರೆಕಾಳು ಬಸ್ಸಾರು, ಇದುಕಿದ ಅವರೆಬೇಳೆ ಸಾರು, ಅವರೆಕಾಳು ಮಸಾಲೆವಡೆ, ಅವರೆಕಾಳು ಉಪ್ಪಿಟ್ಟು.... ಮತ್ತೆ ಉಪ್ಪಿಟ್ಟಾ? ಅಂತ ಮುಖ ಸೊಟ್ಟಗೆ ಮಾಡಬೇಡಿ. ಸರಿಯಾದ ವಿಧಾನದಲ್ಲಿ ತಯಾರಿಸಿದರೆ ಅವರೆಕಾಳು ಉಪ್ಪಿಟ್ಟಿನ ಮುಂದೆ ಇತರ ಬಗೆಯ ತಿಂಡಿಗಳನ್ನು ನಿವಾಳಿಸಿ ಎಸೆಯಬೇಕು, ಹಾಗಿರುತ್ತದೆ.
ಇವಿಷ್ಟೇ ಅಲ್ಲ, ಅವರೆಬೇಳೆಯಿಂದ ಬನ್, ಪಫ್ಸ್, ಹೋಳಿಗೆ, ಪಾಯಸ, ಚಿತ್ರಾನ್ನ... ಅಷ್ಟೇ ಏಕೆ ಅವರೆಕಾಳು ಜಾಮಾನನ್ನೂ ತಯಾರಿಸಬಹುದು ಎನ್ನುತ್ತಾರೆ ಆಯೋಜಕರು. ಬಲ್ಲವರು ಅಥವಾ ಮಾಡಿದವರು ಈ ತಿನಿಸುಗಳನ್ನು ಹೇಗೆ ತಯಾರಿಸುತ್ತಾರೆಂದು ದಟ್ಸ್ ಕನ್ನಡಕ್ಕೂ ತಿಳಿಸಿದರೆ ಜಾಗತಿಕ ಕನ್ನಡಿಗರಿಗೂ ತಿಳಿಸಿದ ಉಪಕಾರವಾಗುತ್ತದೆ.
ಕೊನೆ ಮಾತು : ಅವರೆ ಖಾದ್ಯಗಳು ರುಚಿಕರವಷ್ಟೇ ಅಲ್ಲ ಪೌಷ್ಟಿಕ ಕೂಡ. ಇವಕ್ಕೆ ಮಾಗಿಯ ಚಳಿಯನ್ನು ಒದ್ದೋಡಿಸುವ ತಾಕತ್ತೂ ಇದೆ. ಅವರೆ ಸುಗ್ಗಿ ಬಂದಿದೆ ಅಂತ ಹಿಗ್ಗಾಮುಗ್ಗಾ ಏರಿಸಿದರೆ ನಿಬ್ಬೆರಗಾಗುವಷ್ಟು ಹೊಟ್ಟೆ ಉಬ್ಬರವಾದೀತು ಹುಷಾರ್!



Click it and Unblock the Notifications