DK Shivakumar: ಆಂಧ್ರಪ್ರದೇಶದ ವೈಎಸ್ಆರ್ ನಡೆ ಅನುಸರಿಸಲಿದ್ದಾರೆಯೇ ಡಿಸಿಎಂ ಡಿ.ಕೆ ಶಿವಕುಮಾರ್ ?

By Hitesh Y

DK Shivakumar: ರಾಜ್ಯದಲ್ಲಿ ಘಟಾನುಘಟಿ ರಾಜಕೀಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ಕಳೆದ ಎರಡೂವರೆ ವರ್ಷಗಳಿಂದ ಕೇಳಿ ಬರುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದೆ. ಈಗಾಗಲೇ ದೇಶದ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣ ಗಾಗಿರುವ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅಧಿಕಾರದಲ್ಲಿರುವ ಏಕೈಕ ದೊಡ್ಡ ರಾಜ್ಯವಾದ ಕರ್ನಾಟಕದಲ್ಲೂ ಪ್ರಮುಖ ನಾಯಕರ ನಡುವಿನ ರಾಜಕೀಯ ಗುದ್ದಾಟದಿಂದ ಹೈರಾಣಾಗಿದೆ.

ಈ ರೀತಿ ಇರುವಾಗಲೇ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರ ಹಾದಿಯನ್ನು ಡಿ.ಕೆ ಶಿವಕುಮಾರ್ ಅವರು ತುಳಿಯಲಿದ್ದಾರೆಯೇ ಎನ್ನುವ ಚರ್ಚೆ ಶುರುವಾಗಿದೆ.


YSRCP Model for Karnataka Big Question Before D K Shivakumar

ಅಖಂಡ ಆಂಧ್ರಪ್ರದೇಶ ಹಾಗೂ ವೈ.ಎಸ್ಆರ್ ಅವರ ವಿಚಾರದಲ್ಲಿ ಮತ್ತು ತೆಲಂಗಾಣ ರಾಜ್ಯ ರಚನೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ತೆಗೆದುಕೊಂಡಿರುವ ನಿರ್ಧಾರಗಳು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಭಾರೀ ಸಂಕಷ್ಟವನ್ನು ತೊಂದೊಡ್ಡಿದೆ. ತೆಲಂಗಾಣದಲ್ಲಿ ಈಗಷ್ಟೇ ಕಾಂಗ್ರೆಸ್ ಚೇತರಿಸಿಕೊಳ್ಳುತ್ತಿದೆ. ಆದರೆ ಗ್ಯಾರಂಟಿ ಯೋಜನೆಗಳಲ್ಲಿನ ಅನುಷ್ಠಾನದ ಲೋಪಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ನೆಲಕ್ಕಚ್ಚಿದೆ. ಇನ್ನು ಈ ಭಾಗದಲ್ಲಿ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಸೋಲುವುದಕ್ಕೆ ಹಾಗೂ ಒಂದುಕಾಲದ ಭದ್ರಕೋಟೆಯಾದ ಆಂಧ್ರಪ್ರದೇಶದಲ್ಲಿ ಇನ್ನೂ ತಿಣುಕಾಡುತ್ತಿರುವುದಕ್ಕೆ ಮುಖ್ಯ ಕಾರಣ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರೂ ಸಹ ಒಬ್ಬರು.

ಕಾಂಗ್ರೆಸ್‌ ಪಕ್ಷದಿಂದ ಮುಖ್ಯಮಂತ್ರಿ ಸ್ಥಾನ ಸಿಗದೆ ಇದ್ದಾಗ, ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ವೈಎಸ್‌ಆರ್ ಕಾಂಗ್ರೆಸ್ ಎನ್ನುವ ಪ್ರಾದೇಶಿಕ ಪಕ್ಷವನ್ನು ರಚಿಸಿದರು. ಇದರ ಪರಿಣಾಮ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೂ ಬಂದರೂ. ಆಂಧ್ರಪ್ರದೇಶದ ವಿಧಾನಸಭೆಯ ಒಟ್ಟು ಸೀಟುಗಳ ಸಂಖ್ಯೆ 175 ಅದರಲ್ಲಿ 151 (2019ನೇ ಸಾಲಿನಲ್ಲಿ) ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

ಈ ರೀತಿ ಕಾಂಗ್ರೆಸ್‌ ನಿರ್ಲಕ್ಷ್ಯದಿಂದ ದೇಶದ ವಿವಿಧ ಭಾಗದಲ್ಲಿ ಕಾಂಗ್ರೆಸ್‌ಗೆ ಸಂಕಷ್ಟ ಎದುರಾಗಿದೆ. ಕರ್ನಾಟಕದಲ್ಲೂ ಡಿ.ಕೆ ಶಿವಕುಮಾರ್ ಅವರು ಈ ರೀತಿ ತಿರುಗಿ ಬಿದ್ದು ಹೊಸ ಪಕ್ಷ ರಚನೆ ಮಾಡಿದರೆ ಭಾರೀ ಸವಾಲುಗಳು ಏರ್ಪಡುವ ಸಾಧ್ಯತೆ ಇದೆ.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರೂ ಕಾರಣ. ಅಲ್ಲದೇ ಹಲವು ಕಾಂಗ್ರೆಸ್‌ ನಾಯಕರ ಪರಿಶ್ರಮ ಇದೆಯಾದರೂ, ಈ ಮುಂಚೂಣಿ ನಾಯಕರ ಪರಿಶ್ರಮ ಹೆಚ್ಚಿದೆ. ಒಂದೊಮ್ಮೆ ಡಿ.ಕೆ ಶಿವಕುಮಾರ್ ಅವರು ರೆಬಲ್ ಆಗಿ ಬದಲಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಸವಾಲು ಎದುರಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಕಾಂಗ್ರೆಸ್ ಪಕ್ಷ ಬಿಡುವ ಸಾಧ್ಯತೆ ತೀರ ವಿರಳ: ಇನ್ನು ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುವ ಸಾಧ್ಯತೆ ಅತ್ಯಂತ ಕಡಿಮೆ ಅಂತಲೂ ಮಾತಿದೆ. ಇದಕ್ಕೆ ಮುಖ್ಯ ಕಾರಣ ತೀರ ಸಂಕಷ್ಟದ ಸಮಯದಲ್ಲೂ, ಜೈಲು ಸೇರಿದ ಸಂದರ್ಭದಲ್ಲೂ ಅವರು ರಾಜಿ ಆಗಿಲ್ಲ. ಆದರೆ ಮುಖ್ಯಮಂತ್ರಿ ಹುದ್ದೆಗೆ ಅವರು ಹಲವು ವರ್ಷಗಳಿಂದ ಸೆಣಸಾಟ ನಡೆಸುತ್ತಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಮಾತಿರುವುದರಿಂದ ಈ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

Credit: Oneindia

Story first published: Friday, November 28, 2025, 10:15 [IST]
X
Desktop Bottom Promotion