ಬಿಗ್‌ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಹೇಳಿಕೆ ಬಗ್ಗೆ ಆಕ್ಷೇಪ; ದಾಖಲಾಯ್ತು ಮತ್ತೊಂದು ದೂರು

By Narayana M

ಕಲರ್ಸ್ ಕನ್ನಡ ವಾಹಿನಿ ರಿಯಾಲಿಟಿ ಶೋ ಬಿಗ್‌ಬಾಸ್ ಕಿರುತೆರೆಯಲ್ಲಿ ಮಾತ್ರವಲ್ಲ, ಹೊರಗಡೆ ಕೂಡ ಸಖತ್ ಸದ್ದು ಮಾಡ್ತಿದೆ. ಈ ಬಾರಿ ಸಾಕಷ್ಟು ವಿವಾದಗಳಿಗೆ ಶೋ ಗುರಿಯಾಗಿದೆ. ಸ್ಪರ್ಧಿಗಳ ಪದ ಬಳಕೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ದೂರುಗಳು ದಾಖಲಾಗುತ್ತಿದೆ. ಇದೀಗ ನಟ ಸುದೀಪ್ ವೇದಿಕೆಯಲ್ಲಿ ಬಳಸಿದ ಪದಗಳ ಬಗ್ಗೆ ರಣಹದ್ದು ಸಂರಕ್ಷಣಾ ಟ್ರಸ್ಟ್‌ ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿದೆ.

ಒಂದೂವರೆ ತಿಂಗಳ ಹಿಂದೆ ಬಿಗ್‌ಬಾಸ್ ನಿರೂಪಕ ಸುದೀಪ್ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್.ಪಿ. ಕಚೇರಿಯಲ್ಲಿ ದೂರು ದಾಖಲಾಗಿತ್ತು. ವೀಕೆಂಡ್ ಪಂಚಾಯ್ತಿ ವೇಳೆ ಸ್ಪರ್ಧಿ ರಕ್ಷಿತಾ ಮೇಲೆ ಸುದೀಪ್ ಕೂಗಾಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಈ ಸಂಬಂಧ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಎಂಬುವವರು ದೂರು ನೀಡಿದ್ದರು. ಇದೀಗ ರಣಹದ್ದುಗಳ ಬಗ್ಗೆ ನಟ ಸುದೀಪ್ ನೀಡಿದ ಹೇಳಿಕೆ ಸರಿಯಲ್ಲ ಎನ್ನುವ ಚರ್ಚೆ ಶುರುವಾಗಿದೆ. ವೀಕೆಂಡ್ ಪಂಚಾಯಿತಿ ವೇಳೆ ಹೊಂಚು ಹಾಕಿ ಸಂಚು ಮಾಡಿ ಹಿಡಿಯುವ ರಣಹದ್ದು ಎಂದು ಸುದೀಪ್ ಹೇಳಿದ್ದರು. ಇದರಿಂದ ತಪ್ಪು ಸಂದೇಶ ರವಾನೆ ಆಗುತ್ತದೆ ಎಂದು ರಣಹದ್ದು ಸಂರಕ್ಷಣಾ ಟ್ರಸ್ಟ್‌ ಹೇಳಿದೆ.


Vulture Conservation Trust Files Complaint Against Sudeep Over Statement on Bigg Boss-12 Stage

ಯಾವುದೇ ಜೀವಂತ ಪ್ರಾಣಿಗಳ ತಂಟೆಗೆ ರಣಹದ್ದುಗಳು ಹೋಗಲ್ಲ. ಹಾಗಿರುವಾಗ ಹೊಂಚು ಹಾಕಿ ಸಂಚು ಮಾಡಿ ಹಿಡಿಯುವುದು ಎಂದು ಸುದೀಪ್ ಹೇಳಿದ್ದು ತಪ್ಪು. ಅದನ್ನು ಅವರು ಸರಿಪಡಿಸಿಕೊಂಡು ಸರಿಯಾದ ರೀತಿಯಲ್ಲಿ ಜಾಗೃತಿ ಮೂಡಿಸಬೇಕು. ಮುಂದಿನ ಬಾರಿ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡಿ ಸ್ಪಷ್ಟನೆ ಕೊಡಬೇಕು ಎಂದು ರಣಹದ್ದು ಸಂರಕ್ಷಣಾ ಟ್ರಸ್ಟ್‌ ಮನವಿ ಮಾಡಿದೆ. ಈ ಸಂಬಂಧ ಡಿಎಫ್‌ಓ ರಾಮಕೃಷ್ಣಪ್ಪ ಟಿವಿ9 ವಾಹಿನಿಗೆ ಮಾಹಿತಿ ನೀಡಿದ್ದಾರೆ.

ದೂರುದಾರ ಮಾತನಾಡಿ "ಹೊಂಚು ಹಾಕಿ ಸಂಚು ಮಾಡಿ ಕರೆಕ್ಟ್‌ ಟೈಮ್‌ಗೆ ಲಬಕ್ ಅಂತ ಹಿಡಿಯುವುದು ಎನ್ನುವ ಮಾತನ್ನು ಸುದೀಪ್ ಅವರು ಹೇಳಿದ್ದಾರೆ. ಪಾಪ ರಣಹದ್ದುಗಳು ಜೀವಂತ ಇರುವ ಯಾವುದೇ ಜೀವಿಯನ್ನು ಬೇಟೆ ಆಡಲ್ಲ. ದೊಡ್ಡ ಪ್ರಾಣಿಗಳ ಶವವನ್ನು ತಿಂದು ಬದುಕುತ್ತವೆ. ರಣಹದ್ದುಗಳ ಉಳಿವೆಗೆ 10 ವರ್ಷಗಳಿಂದ ಹೋರಾಟ ಮಾಡ್ತಿದ್ದೀವಿ. ಆದರೆ ತಿಳುವಳಿಕೆ ಕೊರತೆಯಿಂದ ಆ ಮಾತು ಹೇಳಿರುವುದು ವಿಷಾದಕರ" ಎಂದು ಹೇಳಿದ್ದಾರೆ.

ದೂರಿನ ಸಂಬಂಧ ಡಿಎಫ್‌ಓ ರಾಮಕೃಷ್ಣಪ್ಪ ಪ್ರತಿಕ್ರಿಯಿಸಿದ್ದಾರೆ. "ರಣಹದ್ದು ಜೀವ ಇರುವ ಪ್ರಾಣಿಗಳನ್ನು ಬೇಟೆ ಆಡಲ್ಲ. ಅದು ಪರಿಸರ ಸ್ನೇಹಿ. ಯಾವುದೇ ಸತ್ತ ಪ್ರಾಣಿಗಳ ಶವವನ್ನು ತಿಂದು ಪರಸರವನ್ನು ಶುಚಿಗೊಳಿಸುತ್ತವೆ. ಆದರೆ ಬಿಗ್‌ಬಾಸ್ ವೇದಿಕೆಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ರಣಹದ್ದು ಸಂರಕ್ಷಣಾ ಟ್ರಸ್ಟ್‌ನವರು ಹೇಳಿದ್ದಾರೆ. ಸುದೀಪ್ ಹೇಳಿಕೆಯನ್ನು ಅವರು ಖಂಡಿಸ್ತಿಲ್ಲ. ಬದಲಿಗೆ ಸರಿಯಾದ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ನಾವು ಕಾರ್ಯಕ್ರಮಕ್ಕೆ ಸಂಬಂಧಪಟ್ಟವರಿಗೆ ಈ ವಿಚಾರ ತಲುಪಿಸುವ ಪ್ರಯತ್ನ ಮಾಡುತ್ತೇವೆ" ಎಂದಿದ್ದಾರೆ.

ಬಿಗ್‌ಬಾಸ್ ಸೀಸನ್ -12 ಫಿನಾಲೆ ಹತ್ತಿರವಾಗುತ್ತಿದೆ. ಈ ವೀಕೆಂಡ್ ಯಾರು ವಿನ್ನರ್ ಎನ್ನುವುದು ಗೊತ್ತಾಗಲಿದೆ. ಗಿಲ್ಲಿ ಅಥವಾ ಅಶ್ವಿನಿ ಗೌಡ ಇಬ್ಬರಲ್ಲಿ ಒಬ್ಬರು ಗೆಲ್ಲಬಹುದು ಎನ್ನುವ ಚರ್ಚೆ ಜೋರಾಗಿದೆ. ನಿನ್ನೆ(ಜನವರಿ 12) ರಾಶಿಕಾ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಸದ್ಯ 7 ಮಂದಿ ಮಾತ್ರ ಮನೆ ಒಳಗೆ ಉಳಿದುಕೊಂಡಿದ್ದಾರೆ. ಇನ್ನೊಬ್ಬರು ವಾರದ ಮಧ್ಯೆ ಎಲಿಮಿನೇಟ್ ಆಗಲಿದ್ದು 6 ಮಂದಿ ಫಿನಾಲೆಗೆ ಹೋಗಲಿದ್ದಾರೆ. ಈಗಾಗಲೇ ಎಲಿಮಿನೇಟ್ ಆಗಿ ಹೊರಬಂದಿದ್ದ ಸ್ಪರ್ಧಿಗಳನ್ನು ಮತ್ತೆ ಮನೆ ಒಳಗೆ ಕಳುಹಿಸಲಾಗ್ತಿದೆ. ಮಲ್ಲಮ್ಮ ದೊಡ್ಮನೆ ಒಳಗೆ ಹೋಗಿರುವ ಪ್ರೋಮೊ ವೈರಲ್ ಆಗ್ತಿದೆ.

Credit: Filmibeat

Story first published: Monday, January 12, 2026, 15:07 [IST]
X
Desktop Bottom Promotion