Just In
- 1 hr ago ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- 1 hr ago ತಿಂಡಿ ಮಾಡಲು ಬಳಸಿದ ಎಣ್ಣೆಯನ್ನು ಮರು ಬಳಕೆ ಮಾಡುತ್ತೀರಾ? ಆರೋಗ್ಯಕ್ಕಾಗಿ ಈ ಟಿಪ್ಸ್ ಅನುಸರಿಸಿ
- 2 hrs ago ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
- 3 hrs ago ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
Don't Miss
- Automobiles ಭರ್ಜರಿ ಮೈಲೇಜ್ನ ಹೈಬ್ರಿಡ್ ಮಾರುತಿ ಸ್ವಿಫ್ಟ್: ಇವಿ ಕಾರುಗಳನ್ನೂ ಹಿಂದಿಕ್ಕಲಿದೆ ಎಂದ ಭವಿಷ್ಯವಾಣಿ!
- Sports IPL 2024: ಮುಂಬೈ ಇಂಡಿಯನ್ಸ್ಗೆ ಭಾರೀ ಹಿನ್ನಡೆ; ಹಾರ್ಟ್ಬ್ರೇಕ್ ಪೋಸ್ಟ್ ಮಾಡಿದ ಸೂರ್ಯಕುಮಾರ್
- News ಚುನಾವಣೆ ಹೊತ್ತಲ್ಲೇ ಗಡಿ ಭಾಗಗಳಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದೇಕೆ..? ಅವರ ಹಿನ್ನಲೆ ಏನು?
- Movies ಬಾಲಿವುಡ್ ಹಾಟ್ ಕಪಲ್ ರೊಮ್ಯಾನ್ಸ್ ನೋಡಿ ಪೂಜಾ ಹೆಗ್ಡೆಗೆ ಅಸೂಯೆ!; ವಿಡಿಯೋ ವೈರಲ್
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೀವು ಬೇಸರದಲ್ಲಿದ್ದೀರಾ ಹಾಗಿದ್ದರೆ ಈ 16 ಸಲಹೆಗಳನ್ನು ಪಾಲಿಸಿ ನಿರಾಳರಾಗಿ!
ಜೀವನದ ಪ್ರತಿಯೊಂದು ಕ್ಷಣವೂ ವಿಭಿನ್ನತೆಯಿಂದ ಕೂಡಿರುತ್ತವೆ. ಹೊಸ ಹೊಸ ಸವಾಲುಗಳು ಹಾಗೂ ಸಂದರ್ಭಗಳು ನಮ್ಮ ಭಾವನೆಗಳ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಸಂತೋಷದ ಸಂಗತಿಗಳು ಮಾನಸಿಕವಾಗಿ ಸಂತೋಷ ಹಾಗೂ ನಿರಾಳತೆಯನ್ನು ನೀಡುತ್ತವೆ. ಬೇಸರದ ಸಂಗತಿ ಎದುರಾದಾಗ ಮಾನಸಿಕ ಒತ್ತಡ ಮತ್ತು ಬೇಸರ ಉಂಟಾಗುವುದು ಸಹಜ. ಅಂತಹ ಸಂದರ್ಭದಲ್ಲಿ ನಾವು ಪರಿಸ್ಥಿತಿಗಳಿಗೆ ಅನುಗುಣವಾಗಿ ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಬೇಕಾಗುವುದು. ನಮ್ಮ ಮಾನಸಿಕ ಚಿಂತನೆಗಳು ಹಾಗೂ ಸಂವೇದನೆಗಳನ್ನು ನಿಯಂತ್ರಣದಲ್ಲಿರಿಸಿಕೊಂಡು ವರ್ತನೆಯನ್ನು ತೋರಬೇಕಾಗುತ್ತದೆ.
ಹಾಗೊಮ್ಮೆ ನಾವು ನಮ್ಮ ವರ್ತನೆಯ ಮೇಲೆ ನಿಯಂತ್ರಣ ಹೊಂದಿಲ್ಲ ಎಂದಾದರೆ ಇತರರ ದೃಷ್ಟಿಯಲ್ಲಿ ಋಣಾತ್ಮಕ ವ್ಯಕ್ತಿಯಾಗಿ ಅಥವಾ ಸಾಮರ್ಥ್ಯ ಇಲ್ಲದ ವ್ಯಕ್ತಿಯಾಗಿ ತೋರುವ ಸಾಧ್ಯತೆಗಳೇ ಹೆಚ್ಚು. ಸಂತೋಷ ಎನ್ನುವುದು ವ್ಯಕ್ತಿಯಲ್ಲಿ ಚೈತನ್ಯ ಹಾಗೂ ಉತ್ಸಾಹವನ್ನು ಮೂಡಿಸುವುದು ಸಾಮಾನ್ಯ. ಪದೇ ಪದೇ ಸಂತೋಷವನ್ನು ಅನುಭವಿಸಿದರೆ ಹೆಮ್ಮೆ ಹಾಗೂ ತನ್ನ ಬಗ್ಗೆಯೇ ಸೊಕ್ಕಿನ ಭಾವನೆ ಹೊಂದುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಂತೆಯೇ ಬೇಸರ ಎನ್ನುವುದು ಒಮ್ಮೆ ಅಥವಾ ವಿರಳವಾಗಿ ಅನುಭವಿಸುತ್ತಿದ್ದರೆ ಅದನ್ನು ಸುಲಭವಾಗಿ ಮರೆಯಬಹುದು. ವ್ಯಕ್ತಿ ನೋವನ್ನು ಪದೇ ಪದೇ ಸುದೀರ್ಘವಾಗಿ ಅನುಭವಿಸುತ್ತಿದ್ದರೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ.
ಖಿನ್ನತೆ ಎನ್ನುವುದು ವ್ಯಕ್ತಿಯನ್ನು ಮಾನಸಿಕವಾಗಿ ಗಂಭೀರ ಸಮಸ್ಯೆಗೆ ಒಳಗಾಗುವಂತೆ ಮಾಡಬಹುದು ಅಥವಾ ವ್ಯಕ್ತಿಗೆ ಯಾವುದೇ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರದೆ ಹೋಗಬಹುದು. ಹಾಗಾಗಿ ನೀವು ನಿಮ್ಮ ಭಾವನೆಗಳ ಮೇಲೆ ಸಾಕಷ್ಟು ಹತೋಟಿ ಹಾಗೂ ಬದಲಾವಣೆಯನ್ನು ಕಂಡುಕೊಳ್ಳಬೇಕಾಗುತ್ತದೆ. ಅಂತಹ ಬದಲಾವಣೆಗಳು ಯಾವವು? ನಾವು ಯಾವ ಬಗೆಯ ಮನಃಸ್ಥಿತಿಯನ್ನು ಹೊಂದುವುದರ ಮೂಲಕ ಮಾನಸಿಕ ಒತ್ತಡದಿಂದ ಹೊರಬಹುದು? ಎನ್ನುವುದನ್ನು ಲೇಖನದ ಮುಂದಿನ ಭಾಗದಲ್ಲಿ ಪರಿಶೀಲಿಸಿ.
1. ನಿಮ್ಮ ಪರಿಸರವನ್ನು ಬದಲಾಯಿಸಿ
ನಾವು ಇರುವ ಪರಿಸರವು ಸಹ ನಮ್ಮ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತವೆ. ಅವುಗಳನ್ನು ಮೊದಲು ಬದಲಿಸಿಕೊಳ್ಳಲು ಪ್ರಯತ್ನಿಸಬೇಕು. ನಾವು ಇರುವ ಪರಿಸರವು ನಮ್ಮ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ನಕಾರಾತ್ಮಕ ಸಮಸ್ಯೆಗಳಿಂದ ಕೂಡಿರುವ ಪರಿಸರವು ನಮ್ಮ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತವೆ. ಹಾಗಾಗಿ ನಾವು ನಮ್ಮ ಮಾನಸಿಕ ಚಿಂತನೆಗಳು ಅಥವಾ ಉತ್ತಮ ಮನೋಸ್ಥಿತಿಯನ್ನು ಹೊಂದಲು ಮೊದಲು ನಮ್ಮ ಸುತ್ತಲಿನ ಪರಿಸರವನ್ನು ಬದಲಿಸಿಕೊಳ್ಳಬೇಕು. ಇಲ್ಲವೇ ನಾವೇ ಹೊಸ ಪರಿಸರಕ್ಕೆ ತೆರೆದುಕೊಳ್ಳಬೇಕು. ಆಗ ಮಾತ್ರ ಹೊಸತನವನ್ನು ಪಡೆದುಕೊಳ್ಳಲು ಸಾಧ್ಯ.
2. ಸಂತೋಷ ನೀಡುವ ವಿಷಯಗಳ ಬಗ್ಗೆ ನಾಚಿಕೆ ಬೇಡ
ಕೆಲವು ಸಂದರ್ಭದಲ್ಲಿ ನಮಗೆ ಇಷ್ಟ ಇರುವ ಸಂಗತಿಗಳನ್ನು ಪಡೆದುಕೊಳ್ಳಲು ಅಥವಾ ಬಯಸಿದ್ದನ್ನು ಪಡೆಯಲು ಹಿಂದೇಟು ಹಾಕುತ್ತೇವೆ. ಅದಕ್ಕೆ ಕಾರಣ ನಮ್ಮ ನಾಚಿಕೆಯ ಸ್ವಭಾವ ಇರಬಹುದು ಅಥವಾ ಭಯದ ಕಾರಣವಾಗಿರಬಹುದು. ಇತರರಿಗೆ ನೋವುಂಟಾಗುವ ಅಥವಾ ಅಹಿತವನ್ನುಂಟು ಮಾಡುವ ಕೆಲಸವನ್ನು ಮಾಡಬಾರದು. ಹೊರತಾಗಿ ನಿಮಗೆ ಇಷ್ಟವಾಗುವ ಪುಸ್ತಕಗಳನ್ನು ಓದುವುದು, ನಿಮ್ಮ ಹವ್ಯಾಸಕ್ಕೆ ಒಗ್ಗುವ ಸೃಜನಶೀಲ ಕೆಲಸದಲ್ಲಿ ತೊಡಗಿಕೊಳ್ಳುವುದು, ಇತರರೊಂದಿಗೆ ಬೆರೆತು ಮಾತನಾಡುವುದು ನಿಮಗೆ ಸಂತೋಷವನ್ನು ನೀಡುತ್ತದೆ ಎಂದಾದರೆ ಖಂಡಿತವಾಗಿಯೂ ಅದನ್ನು ಮುಂದುವರಿಸಿ. ಆಗ ನೀವು ಬಹುಬೇಗ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು.
3. ವಿಫಲತೆಯನ್ನು ಸಮನಾಗಿ ಸ್ವೀಕರಿಸಿ
ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ವಿಫಲತೆ ಹಾಗೂ ಯಶಸ್ಸು ಎನ್ನುವುದು ಸರಿ ಸಮಾನವಾಗಿರುತ್ತದೆ. ವಿಫಲತೆ ಎದುರಾದ ತಕ್ಷಣ ಬೇಸರಕ್ಕೆ ಅಥವಾ ಮುಂದೆ ನಿಮ್ಮ ಪಾಲಿಗೆ ಹಾದಿಗಳೇ ಇಲ್ಲ ಎನ್ನುವಂತಹ ನಿರಾಸೆಗೆ ಒಳಗಾಗುವ ಅಗತ್ಯವಿಲ್ಲ. ಒಮ್ಮೆ ವಿಫಲತೆ ಅಥವಾ ಸೋಲು ಉಂಟಾದರೂ, ಮುಂದಿನ ದಿನದಲ್ಲಿ ಅಥವಾ ಭವಿಷ್ಯದಲ್ಲಿ ಯಶಸ್ಸು ದೊರೆಯುವುದು ಎನ್ನುವ ಭರವಸೆ ಇರಬೇಕು. ಆಗ ನೀವು ಬಯಸಿದ ಸಂಗತಿಗಳಲ್ಲಿ ಇನ್ನಷ್ಟು ಶ್ರಮವನ್ನು ವಿನಿಯೋಗಿಸಲು ಮುಂದಾಗುವಿರಿ. ನಂತರ ಯಶಸ್ಸು ಸಹ ನಿಮ್ಮನ್ನು ಹಿಂಬಾಲಿಸುವುದು.
4. ನಿಧಾನವಾಗಿ ಸಾಗಿ
ಇತರರು ನಮಗಿಂತ ಹೆಚ್ಚು ಸಾಧನೆ ಮಾಡುತ್ತಾರೆ ಅಥವಾ ವೇಗದ ಭವಿಷ್ಯವನ್ನು ಹೊಂದಿದ್ದಾರೆ ಎನ್ನುವ ಚಿಂತನೆಯಲ್ಲಿ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳದಿರಿ. ಇತರರಂತೆ ನಮ್ಮ ಬದುಕು ಇರಬೇಕು ಎಂದು ಬಯಸಿದಾಗ ಮನಸ್ಸಿಗೆ ನೋವು ಉಂಟಾಗುವುದು. ಜೊತೆಗೆ ನಮ್ಮ ಜೀವನದಲ್ಲಿ ಏನನ್ನೂ ಹೊಂದಿಲ್ಲ ಎನ್ನುವ ಖಿನ್ನತೆ ಉಂಟಾಗುವುದು. ಹಾಗಾಗಿ ನೀವು ನಿಮ್ಮ ಭವಿಷ್ಯ ಹಾಗೂ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿರಿಸಿಕೊಳ್ಳಲು ಉತ್ತಮ ವ್ಯಾಯಾಮ, ಧ್ಯಾನ ಮತ್ತು ಯೋಗಗಳ ಮೊರೆ ಹೋಗಿ. ನಿಮ್ಮ ಜೀವನ ನಿಮ್ಮದೇ ಆದ ವಿಶೇಷತೆಯಿಂದ ಕೂಡಿರುವಂತೆ ಮಾಡಿ.
5. ಸಣ್ಣ ಸಾಧನೆಯನ್ನು ಸಂಭ್ರಮಿಸಿ
ನಾವು ನಮ್ಮ ವೈಫಲ್ಯತೆ ಅಥವಾ ಕೊರತೆಯನ್ನು ಪದೇ ಪದೇ ನೆನೆಸಿಕೊಂಡು ಕೊರಗುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ. ಅದರಿಂದ ಮಾನಸಿಕ ಒತ್ತಡ ಹಾಗೂ ಆರೋಗ್ಯ ಸಮಸ್ಯೆ ಉಂಟಾಗುವುದು ಅಷ್ಟೆ. ಹಾಗಾಗಿ ನಾವು ನಮಗೆ ಸಿಕ್ಕ ಸಣ್ಣ ಗೆಲುವು ಅಥವಾ ಯಶಸ್ಸನ್ನು ಸಹ ಸಂಭ್ರಮಿಸಬೇಕು. ಆಗ ಮನಸ್ಸು ತಾನಾಗಿಯೇ ಚೈತನ್ಯವನ್ನು ಪಡೆದುಕೊಳ್ಳುವುದು. ಜೊತೆಗೆ ಇತರ ಸಂಗತಿಗಳಲ್ಲಿ ಹೆಚ್ಚಿನ ಕ್ರಿಯಾಶೀಲತೆ ತೋರಿಸಲು ಮನಸ್ಸು ಮಾಡುವುದು.
6. ಕ್ರಿಯಾಶೀಲರಾಗಿರಿ
ಬಹುತೇಕ ಮಹಿಳೆಯರು ಮನೆಯ ಜವಾಬ್ದಾರಿಯನ್ನು ನಿರ್ವಹಿಸುವಾಗ ಸಾಕಷ್ಟು ಶ್ರಮ ವಹಿಸುತ್ತಾರೆ. ಆ ಸಂದರ್ಭದಲ್ಲಿ ತಮ್ಮ ಹವ್ಯಾಸಗಳನ್ನು ಹಾಗೂ ಆಸಕ್ತಿಯ ವಿಷಯಗಳನ್ನು ಸುಲಭವಾಗಿ ಮರೆತುಬಿಡುತ್ತಾರೆ. ದೀರ್ಘ ಸಮಯದ ನಂತರ ಜೀವನವು ಬೇಸರ ಎಂಬ ಭಾವನೆಯನ್ನು ಹೊಂದುವರು. ಹಾಗಾಗಿ ಎಷ್ಟೇ ಕೆಲಸ ಹಾಗೂ ಒತ್ತಡದಿಂದ ಕೆಲಸವನ್ನು ನಿರ್ವಹಿಸಿದರೂ, ದಿನದಲ್ಲಿ ಹತ್ತು ನಿಮಿಷವನ್ನಾದರೂ ನಿಮ್ಮ ಬಗ್ಗೆ, ನಿಮ್ಮ ಆಸಕ್ತಿ, ಹವ್ಯಾಸಗಳಿಗೆ ಸಮಯವನ್ನು ಕೊಡಿ. ಆಗ ನೀವು ನಿಮಗೆ ಅರಿವಿಲ್ಲದಂತೆಯೇ ಕ್ರಿಯಾತ್ಮಕ ಭಾವನೆ ಹಾಗೂ ಮಾನಸಿಕ ನಿರಾಳತೆಯನ್ನು ಪಡೆದುಕೊಳ್ಳುವಿರಿ.
7. ನೀವು ಯಾವ ಸಂಗತಿಗಳನ್ನಾದರೂ ಬದಲಿಸ ಬಲ್ಲಿರಿ
ಬದಲಾವಣೆ ಎನ್ನುವುದು ಎಲ್ಲರಿಗೂ ಅಗತ್ಯವಾದ ಸಂಗತಿ. ನೀವು ಹೊಂದಿರುವ ಕೆಲಸ ಕಾರ್ಯಗಳು ಅಥವಾ ನಿಮ್ಮ ಆಪ್ತರು ಹೊಂದಿರುವ ಸಂಕಷ್ಟದ ಸ್ಥಿತಿಯನ್ನು ಬದಲಾಯಿಸಲು ಮುಂದಾಗುತ್ತೇನೆ ಎನ್ನುವ ಮನೋಭಾವ ಇರಬೇಕು. ಆಗ ನೀವು ಇತರರ ಸಹಾಯಕ್ಕೆ ಮುಂದಾಗುವಿರಿ. ನಿಮ್ಮ ಸಮಸ್ಯೆಗಳು ಇತರರ ಸಮಸ್ಯೆಯ ಮುಂದೆ ಏನೂ ಅಲ್ಲ ಎನ್ನುವ ಮನೋಭಾವ ಹೊಂದುವುದರಿಂದ ನಿಮ್ಮ ಜೀವನವು ಸುಂದರ ಹಾಗೂ ಸುಖದಿಂದ ಕೂಡಿರುತ್ತದೆ. ಅಲ್ಲದೆ ಎಂತಹ ಕಷ್ಟದ ಪರಿಸ್ಥಿತಿ ಎದುರಾದರೂ ಅದನ್ನು ನಿರ್ವಹಿಸುವ ಶಕ್ತಿ ಅಥವಾ ಬದಲಾಯಿಸುವ ಸಾಮರ್ಥ್ಯ ಇದೆ ಎನ್ನುವ ಭಾವನೆ ಹೊಂದಿರಿ.
8. ನಿಮ್ಮ ಸಂಗತಿಯನ್ನು ನೀವು ಮೆಚ್ಚಿ
ನಿಮ್ಮ ಬಳಿ ಇರುವ ವಸ್ತು, ವ್ಯಕ್ತಿ ಅಥವಾ ನೀವು ಪಡೆದುಕೊಂಡ ಅದೃಷ್ಟದ ಬಗ್ಗೆ ನಿಮಗೆ ತೃಪ್ತಿ ಇರಬೇಕು. ಅದೆಲ್ಲವನ್ನೂ ಬಿಟ್ಟು, ಬೇರೆ ವ್ಯಕ್ತಿಗಳ ಬಳಿ ಇರುವುದನ್ನು ನೀವು ಪಡೆದುಕೊಳ್ಳಲು ಬಯಸುವುದು, ನಿಮ್ಮ ಬಗ್ಗೆ ಇತರರು ಶ್ಲಾಘಿಸಲಿ ಎಂದು ಬಯಸುವುದು ಮೂರ್ಖತನ ಎನಿಸಿಕೊಳ್ಳುತ್ತದೆ. ನೀವು ಬಯಸುವ ಸಂಗತಿ ಅಥವಾ ವಿಷಯವು ನಿಮಗೆ ಸಂತೋಷ ಹಾಗೂ ತೃಪ್ತಿಯನ್ನು ತಂದುಕೊಟ್ಟರೆ ಸಾಕು. ಅದರಲ್ಲಿಯೇ ನೀವು ಸಂತೋಷ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳಬಹುದು.
9. ನಿಮ್ಮ ಬಳಿ ಇಲ್ಲದಿರುವ ಸಂಗತಿಗೆ ಚಿಂತಿಸದಿರಿ
ಎಲ್ಲರೂ ಎಲ್ಲವನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ. ಇತರರ ಬಳಿ ಇರುವ ಬ್ರ್ಯಾಂಡೆಡ್ ವಸ್ತು ನಿಮ್ಮ ಬಳಿ ಇಲ್ಲವೆಂದು ಅಥವಾ ಇತರರು ಅನುಭವಿಸುವಂತಹ ಸುಖ ನಿಮಗೆ ಸಿಗುತ್ತಿಲ್ಲ ಎಂದು ಚಿಂತಿಸುತ್ತಿದ್ದರೆ ನಮ್ಮ ನೆಮ್ಮದಿ ಹಾಳಾಗುತ್ತದೆ. ನಾವು ಯಾವಾಗಲೂ ನಮಗಿಂತ ಕಡಿಮೆ ಇರುವ ವ್ಯಕ್ತಿಗಳನ್ನು ನೋಡಬೇಕು. ಆಗ ನಾವು ಎಷ್ಟು ಅದೃಷ್ಟ ಶಾಲಿಗಳು ಎನ್ನುವುದು ಅರಿವಾಗುತ್ತದೆ. ನಮ್ಮ ಬಳಿ ಇರುವ ವಸ್ತುಗಳ ಬಗ್ಗೆ ಹೆಚ್ಚು ಸಂತೋಷವನ್ನು ಅನುಭವಿಸಬಹುದು.
10. ಒಂಟಿ ತನವನ್ನು ಮರೆತು ಬಿಡಿ
ನಿಮಗೆ ಅಧಿಕ ಸಂಖ್ಯೆಯ ಸ್ನೇಹಿತರು ಅಥವಾ ಪರಿಚಿತರು ಯಾರೂ ಇಲ್ಲ. ನಿಮ್ಮವರು ಎಂದು ಹೇಳಿಕೊಳ್ಳಲು ಆಪ್ತತೆ ಯಾರೊಂದಿಗೂ ಬೆಳೆದಿಲ್ಲ ಎಂದು ನೀವು ಭಾವಿಸುತ್ತಿದ್ದರೆ ಅದು ನಿಮ್ಮ ತಪ್ಪು ಕಲ್ಪನೆಯಾಗಿರುತ್ತದೆ. ನಿಮ್ಮ ಹವ್ಯಾಸಗಳನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಿ, ಉತ್ತಮ ಪುಸ್ತಕ ಓದುವುದು, ಚಿತ್ರಗಳನ್ನು ವೀಕ್ಷಿಸುವುದು, ಬರೆಯುವುದು ಹೀಗೆ ವಿವಿಧ ಕ್ರಿಯಾಶೀಲತೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡರೆ ಸಂತೋಷ ಎನ್ನುವುದ ತಾನಾಗಿಯೇ ಬರುತ್ತದೆ. ಆಗ ನೀವು ಎಂದಿಗೂ ಒಂಟಿ ಭಾವನೆಯನ್ನು ಹೊಂದುವುದಿಲ್ಲ.
11. ಉತ್ತಮ ಸಂಗತಿಯೆಡೆಗೆ ಕೇಂದ್ರೀಕರಿಸಿ
ನಾವು ನಮ್ಮ ಮಾನಸಿಕ ಚಿಂತನೆಗಳನ್ನು ಧನಾತ್ಮಕವಾಗಿ ಇಟ್ಟುಕೊಳ್ಳಬೇಕು ಎಂದರೆ ನಮ್ಮ ಭಾವನೆಗಳನ್ನು ಮತ್ತು ಆಲೋಚನೆಗಳನ್ನು ಧನಾತ್ಮಕ ವಿಷಯದ ಕಡೆಗೆ ಕೇಂದ್ರೀಕರಿಸಬೇಕು. ಆಗ ನಮ್ಮಲ್ಲಿರುವ ಕೊರತೆ, ಬೇಸರ ಎಲ್ಲವೂ ತಾನಾಗಿಯೇ ಮರೆಯಾಗುತ್ತವೆ. ಉತ್ತಮ ಚಿಂತನೆಗಳು ನಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತವೆ.
12. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ
ನಾವು ಆತ್ಮವಿಶ್ವಾಸ ಹೊಂದಿದ್ದರೆ ಸಾಕಷ್ಟು ಉತ್ತಮ ಫಲಿತಾಂಶವನ್ನು ಪಡೆಯುತ್ತೇವೆ. ಎಂತಹ ಕೆಲಸವನ್ನಾದರೂ ನಿರ್ವಹಿಸಲು ಮುಂದಾಗುತ್ತೇವೆ. ಅಂತಿಮವಾಗಿ ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲವು ದೊರೆಯುವುದು. ಅದೇ ನಮ್ಮ ಆತ್ಮವಿಶ್ವಾಸವು ಗಡಿಯನ್ನು ಮೀರಿದೆ ಅಥವಾ ಅತಿರೇಕವಾಗಿದೆ ಎಂದಾಗ ಅದು ನಮಗೆ ಸೋಲನ್ನು ತಂದುಕೊಡುವುದು. ನಮ್ಮ ತಪ್ಪುಗಳ ಅರಿವು ಆಗದೆ ಸೊಕ್ಕಿನ ಪ್ರವೃತ್ತಿ ತೋರುತ್ತೇವೆ. ಆಗ ಅದರ ಫಲಿತಾಂಶ ಸೋಲು, ಅವಮಾನ ಹಾಗೂ ಒತ್ತಡದಂತಹ ಸ್ಥಿತಿಯನ್ನು ತಂದೊಡ್ಡುವುದು. ಹಾಗಾಗಿ ಅತಿಯಾದ ಆತ್ಮವಿಶ್ವಾಸದಿಂದ ಹೊರ ಬರುವುದು ಉತ್ತಮ.
13. ಸೃಜನ ಶೀಲರಾಗಿರಿ
ಸೃಜನ ಶೀಲತೆ ನಮ್ಮ ನಡತೆ ಅಥವಾ ಬುದ್ಧಿವಂತಿಕೆಯಲ್ಲಿ ಇದೆ ಎಂದಾಗ ಎಲ್ಲಾ ಸಂಗತಿಯೂ ಉತ್ಸಾಹದಿಂದ ಕೂಡಿರುತ್ತದೆ. ಜೊತೆಗೆ ನಾವು ಕೈಗೊಳ್ಳುವ ಕೆಲಸ ಕಾರ್ಯಗಳು ಉತ್ತಮ ಫಲಿತಾಂಶದಿಂದ ಕೂಡಿರುತ್ತದೆ. ಕ್ರಿಯಾಶೀಲತೆ ಎನ್ನುವುದು ನಮ್ಮ ಮಾನಸಿಕ ಚಿಂತನೆಗಳನ್ನು ಸಕ್ರಿಯಗೊಳಿಸಿ, ಉತ್ಸಾಹದಿಂದ ಕೂಡಿರುವಂತೆ ಮಾಡುವುದು. ಹಾಗಾಗಿ ನೀವು ಮಾಡುವ ಕೆಲಸ ಹಾಗೂ ಚಿಂತನೆಯಲ್ಲಿ ಭಿನ್ನತೆ ಹಾಗೂ ಕ್ರಿಯಾಶಿಲತೆ ಇದ್ದರೆ ನೀವು ತೃಪ್ತಿಯ ಭಾವನೆ ಹೊಂದುವಿರಿ.
14. ಎಲ್ಲರಲ್ಲೂ ಕೆಟ್ಟ ಗುಣಗಳಿರುತ್ತವೆ
ನೀವು ಯಾವುದೋ ಒಂದು ಸಂಗತಿಗೆ ಅಥವಾ ಪದೇ ಪದೇ ಇತರರಿಂದ ಕೆಟ್ಟ ವ್ಯಕ್ತಿ, ದಡ್ಡ ಅಥವಾ ಅನುಪಯುಕ್ತ ವ್ಯಕ್ತಿ ಎಂದು ಹೆಳಿಸಿಕೊಳ್ಳುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ. ಹೇಳುವ ವ್ಯಕ್ತಿಗಳಿಗೆ ಮಹತ್ವವನ್ನು ನೀಡದಿರಿ. ಈ ಪ್ರಪಂಚದಲ್ಲಿ ಎಲ್ಲವನ್ನೂ ಬಲ್ಲವರು ಯಾರೂ ಇಲ್ಲ. ಹಾಗೆಯೇ ಎಲ್ಲರೂ ಸಂಪೂರ್ಣವಾಗಿ ಒಳ್ಳೆಯ ವ್ಯಕ್ತಿಗಳಾಗಿರುವುದಿಲ್ಲ. ಪ್ರತಿಯೊಬ್ಬರಲ್ಲೂ ದಡ್ಡತನ, ಕೆಟ್ಟ ಗುಣ ಹಾಗೂ ಅನುಪಯುಕ್ತ ಸಂಗತಿಗಳು ಇರುತ್ತವೆ. ಅದು ಕೆಲವು ಬಾರಿ ತೋರಬಹುದು ಅಥವಾ ತೋರದೇ ಇರಬಹುದು. ಅದಕ್ಕಾಗಿ ಅತಿಯಾದ ಚಿಂತನೆಯ ಅಗತ್ಯವಿಲ್ಲ. ಅದನ್ನು ಆದಷ್ಟು ನಿರ್ಲಕ್ಷಿಸಿದರೆ ನಿಮ್ಮ ಮಾನಸಿಕ ನೆಮ್ಮದಿ ಉಳಿಯುವುದು.
15. ಎಲ್ಲಾ ಸಂಗತಿಗಳಿಗೂ ಉತ್ತರ ತಿಳಿದಿಬೇಕಿಲ್ಲ
ಎಲ್ಲರೂ ಎಲ್ಲಾ ವಿಷಯದಲ್ಲೂ ಪರಿಪೂರ್ಣರಾಗಿರುವುದಿಲ್ಲ. ಅಂತೆಯೇ ಎಲ್ಲಾ ಪ್ರಶ್ನೆಗಳಿಗೆ ಅಥವಾ ಸಮಸ್ಯೆಗಳಿಗೂ ಉತ್ತರ ಮತ್ತು ಪರಿಹಾರ ಇರುವುದಿಲ್ಲ. ಕೆಲವೊಂದನ್ನು ನಾವು ಅನಿರೀಕ್ಷಿತವಾಗಿ ಅಥವಾ ಅಪೇಕ್ಷಿತವಾಗಿ ಸ್ವೀಕರಿಸಲೇಬೇಕು. ನಮ್ಮ ಪಾಲಿಗೆ ಬಂದ ವಿಷಯಗಳನ್ನು ನಾವು ಸ್ವೀಕರಿಸಿದಾಗ ಮಾತ್ರ ಅದರ ಆಗು-ಹೋಗುಗಳನ್ನು ತಿಳಿದುಕೊಳ್ಳಲು ಸಾಧ್ಯ. ಹಾಗಾಗಿ ಯಾವುದೋ ಒಂದು ಸಂಗತಿ ಅಥವಾ ಸಮಸ್ಯೆಗೆ ನಿಮ್ಮ ಬಳಿ ಉತ್ತರವಿಲ್ಲ ಎಂದರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆಪ್ತರೊಂದಿಗೆ ಚರ್ಚಿಸಿ, ಸಮಸ್ಯೆಗಳಿಗೆ ಉತ್ತರ ಪಡೆದುಕೊಳ್ಳಿ.
16. ನೆನಪಿಡಿ
ಮನಸ್ಸು ಎನ್ನುವುದು ಹೇಗಿದೆ? ಎಲ್ಲಿದೆ? ಎಂದು ಯಾರೂ ತಿಳಿದಿಲ್ಲ, ಆದರೆ ಅದರ ಭಾವನೆಗಳನ್ನು ಅನುಭವಿಸುತ್ತೇವೆ. ನಮ್ಮ ಮನಸ್ಸು ಉತ್ತಮ ಚಿಂತನೆ ಹಾಗೂ ಆಸಕ್ತಿಯನ್ನು ಹೊಂದಿದಾಗ ಮಾತ್ರ ಒಳ್ಳೆಯ ಮಾನಸಿಕ ಸ್ಥಿತಿಯನ್ನು ಹೊಂದಲು ಸಾಧ್ಯ. ಪ್ರತಿಯೊಂದು ವಿಷಯದಲ್ಲೂ ಋಣಾತ್ಮಕವಾಗಿ ಚಿಂತಿಸುವುದು ಅಥವಾ ಸ್ವೀಕರಿಸುವುದು ಮಾಡಿದರೆ ಆಗ ನಮ್ಮ ಮನಸ್ಸು ಬಹುಬೇಗ ಒತ್ತಡ ಹಾಗೂ ಖಿನ್ನತೆಗೆ ಒಳಗಾಗುತ್ತದೆ. ಧ್ಯಾನ ಮತ್ತು ಯೋಗಗಳನ್ನು ಮಾಡುವುದರಿಂದ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಅಲ್ಲದೆ ನಾವು ನಮ್ಮಲ್ಲಿ ಅಹಂಕಾರವನ್ನು ಕಿತ್ತೆಸೆದು, ಸಹಕಾರ, ಶಾಂತ, ಸಹನೆ, ಪ್ರೀತಿ-ವಾತ್ಸಲ್ಯಗಳಂತಹ ಭಾವನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ. ಆಗ ನಮಗೆ ಸಿಗುವ ಸಂಗತಿಗಳು ಸಹ ಧನಾತ್ಮಕ ರೂಪದಲ್ಲಿಯೇ ಇರುತ್ತವೆ.